ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ’ಪರಿವರ್ತನಾ’ ರಥಯಾತ್ರೆಯನ್ನು ಪಕ್ಷದ ಮುಖ್ಯಸ್ಥ ಜೆ.ಪಿ.ನಡ್ಡಾ ಶನಿವಾರ(ನಾಳೆ) ಉದ್ಘಾಟನೆ ಮಾಡಲಿದ್ದಾರೆ. ಆದರೆ ಬಿಜೆಪಿ ರಥಯಾತ್ರೆ ಪ್ರಾರಂಭಿಸುವ ನಾಡಿಯಾ ಜಿಲ್ಲೆಯಲ್ಲೇ ತೃಣಮೂಲ ಯುವ ಕಾಂಗ್ರೆಸ್ ಎರಡು ದಿನಗಳ ’ಜನಸಮಾರ್ಥನ್ ಯಾತ್ರೆ’ಯನ್ನು ಅಂದೆ ಪ್ರಾರಂಭಿಸುವುದಾಗಿ ಘೋಷಿಸಿದೆ. ಯಾತ್ರೆಯಲ್ಲಿ ಸಾವಿರಾರು ಬೈಕುಗಳ ಮೂಲಕ ರ್ಯಾಲಿ ನಡೆಸಲಾಗುತ್ತದೆ.
“ನಮ್ಮ ಪರಿವರ್ತನ ಯಾತ್ರೆಯು ಟಿಎಂಸಿಯ ’ಅಂತಿಮ ಯಾತ್ರೆ’ ಆಗಿದೆ. ಕಳೆದ ಬಾರಿ ನಾವು ಅನುಮತಿಗಾಗಿ ನ್ಯಾಯಾಲಯಕ್ಕೆ ಹೋಗಿದ್ದೆವು. ಈ ಬಾರಿ ಟಿಎಂಸಿಯೆ ಮೊದಲು ನ್ಯಾಯಾಲಯಕ್ಕೆ ಹೋಗಿದೆ. ನಾವು ಹಿಂದೆ ‘ಪ್ರಜಾಪ್ರಭುತ್ವವನ್ನು ಉಳಿಸಲು’ ಪ್ರಯತ್ನಿಸಿದ್ದೆವು ಆದರೆ ಅವರು ನಮ್ಮನ್ನು ತಡೆದರು. ಈ ಬಾರಿ ಏನಾಗುತ್ತದೆ ಎಂದು ನೋಡೋಣ” ಎಂದು ಪಶ್ಚಿಮ ಬಂಗಾಳ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ಹೇಳಿದ್ದಾರೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಓವೈಸಿ ಬಿಜೆಪಿಗೆ ನೆರವಾಗಲಿದ್ದಾರೆ: ಸ್ಪೋಟಕ ಹೇಳಿಕೆ ನೀಡಿದ ಸಾಕ್ಷಿ ಮಹರಾಜ್
ಆದರೆ ಬಿಜೆಪಿಯ ಆರೋಪವನ್ನು ಆಡಳಿತರೂಢ ಟಿಎಂಸಿ ನಿರಾಕರಿಸಿದೆ. “ಬಿಜೆಪಿಯ ಬಂಗಾಳ ಘಟಕ ಪ್ರತಿಪಾದಿಸಿದಂತೆ ರಾಜ್ಯ ಸರ್ಕಾರವು ಯಾವುದೇ ಯಾತ್ರೆಗೆ ಅನುಮತಿಯನ್ನು ನಿರಾಕರಿಸಿಲ್ಲ. ಬಿಜೆಪಿಯು ದುರುದ್ದೇಶಪೂರಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ. ತಮ್ಮ ಯಾತ್ರೆಗೆ ಅನುಮತಿಯನ್ನು ರಾಜ್ಯ ಸರ್ಕಾರ ನಿರಾಕರಿಸಿದೆ ಎಂಬ ಯಾವುದಾದರೂ ಪುರಾವೆಯನ್ನು ತೋರಿಸಬೇಕು. ಇದು ತಾನು ಬಲಿಪಶು ಎಂದು ಹೇಳಿಕೊಳ್ಳುವ ಬಿಜೆಪಿಯ ಪ್ರಯತ್ನ” ತೃಣಮೂಲ ಕಾಂಗ್ರೆಸ್ ಟ್ವೀಟ್ ಮಾಡಿದೆ.
A BJP functionary had sought permission from Chief Secy, whose office directed them to local authorities. Meanwhile, a PIL was also filed regarding the same in the High Court & the matter is now sub judice.
We thereby clarify that AITC has nothing to do with this issue. (2/2)
— All India Trinamool Congress (@AITCofficial) February 5, 2021
ಬಿಜೆಪಿ ಕಾರ್ಯಕರ್ತರೊಬ್ಬರು ಮುಖ್ಯ ಕಾರ್ಯದರ್ಶಿಯಿಂದ ಅನುಮತಿ ಕೋರಿದ್ದರು, ಅವರ ಕಚೇರಿ ಅವರನ್ನು ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶಿಸಿತು. ಈ ಮಧ್ಯೆ ಯಾತ್ರೆಗೆ ಅವಕಾಶ ನೀಡಬಾರದು ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಪ್ರಸ್ತುತ ವಿಷಯವು ಈಗ ನ್ಯಾಯಾಲಯದಲ್ಲಿದೆ. ಈ ಮೂಲಕ ತೃಣಮೂಲ ಕಾಂಗ್ರೆಸ್ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಪಕ್ಷ ಹೇಳಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ʼಬಿಜೆಪಿಗೆ ಮತ ನೀಡಬೇಡಿʼ ಅಭಿಯಾನ ಆರಂಭ
ನಾಡಿಯಾ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಕೂಡಾ ಬಿಜೆಪಿಯ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿಲ್ಲ, ಆದರೆ “ಝೆಡ್” ವರ್ಗದ ರಕ್ಷಣೆ ಹೊಂದಿರುವ ಜೆ.ಪಿ ನಡ್ಡಾ ಅವರು ಈ ಕಾರ್ಯಕ್ರಮಕ್ಕೆ ಬರುವುದರಿಂದ ಅದರ ವ್ಯವಸ್ಥೆಗಳ ಬಗ್ಗೆ ವಿವರಗಳನ್ನು ಕೋರಿ ಪಕ್ಷಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.
ರಥಯಾತ್ರೆಯ ಸಮಾರೋಪ, ಮಾರ್ಗ, ರಾತ್ರಿಯ ನಿಲುಗಡೆ, ವಸತಿ ವ್ಯವಸ್ಥೆಗಳ ವಿವರಗಳನ್ನೂ ಪೊಲೀಸರು ಬಯಸಿದ್ದು, ಕಾರ್ಯಕ್ರಮದಲ್ಲಿ ಕೊರೊನಾ ಸುರಕ್ಷತಾ ನಿಯಮಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಬಿಜೆಪಿಯನ್ನು ಕೇಳಿದ್ದಾರೆ.
ಈ ನಡುವೆ ತೃಣಮೂಲ ಕಾಂಗ್ರೆಸ್ ಶನಿವಾರ ನಾಡಿಯಾ ಜಿಲ್ಲೆಯಲ್ಲಿ ಬೈಕ್ ರ್ಯಾಲಿ ನಡೆಸಲಿದ್ದು, ಬಿಜೆಪಿಯ ರಥಯಾತ್ರೆಯ ಸಮಯದಲ್ಲೇ ಜಿಲ್ಲೆಯಾದ್ಯಂತ ಸಾವಿರಾರು ಬೈಕ್ಗಳಲ್ಲಿ ರ್ಯಾಲಿ ನಡೆಯಲಿದೆ. ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ಭಾರಿ ಜಿದ್ದಾ ಜಿದ್ದಿನ ಹೋರಾಟ ಪ್ರಾರಂಭವಾಗಿದೆ.
ಇದನ್ನೂ ಓದಿ: ಪಶ್ಚಿಮ ಬಂಗಾಳ: ಎಡಪಕ್ಷಗಳೊಂದಿಗೆ ‘ಕೈ’ ಜೋಡಿಸಲು ಒಪ್ಪಿಗೆ – ಅಧೀರ್ ಚೌಧರಿ