Homeಮುಖಪುಟಪ್ರತ್ಯಕ್ಷದರ್ಶಿಯ ರೈತ ಪ್ರತಿಭಟನೆ ವರದಿ, ವಿಶ್ಲೇಷಣೆ; ಒಂದು ಹೆಜ್ಜೆ ಹಿಂದಕ್ಕೆ, ಎರಡು ಹೆಜ್ಜೆ ಮುಂದಕ್ಕೆ

ಪ್ರತ್ಯಕ್ಷದರ್ಶಿಯ ರೈತ ಪ್ರತಿಭಟನೆ ವರದಿ, ವಿಶ್ಲೇಷಣೆ; ಒಂದು ಹೆಜ್ಜೆ ಹಿಂದಕ್ಕೆ, ಎರಡು ಹೆಜ್ಜೆ ಮುಂದಕ್ಕೆ

ಟಿಕ್ರಿ ಗಡಿಯ ಸಮೀಪದ ಗ್ರಾಮದಲ್ಲಿ ನಮ್ಮ ಗೌರಿ ಮೀಡಿಯಾ ತಂಡ ಮತ್ತು ಎರಡು ಇತರ ಮಾಧ್ಯಮ ತಂಡಗಳಿಗೆ ಸ್ಥಳೀಯ ಸಂಘ ಪರಿವಾರದ ಗೂಂಡಾಗಳು ರೈತರ ಪ್ರತಿಭಟನೆಯ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ ಘಟನೆ ನಡೆಯಿತು, ಇಲ್ಲದಿದ್ದರೆ ನಮಗೆ ಏನಾದರೂ ಆಗಬಹುದು ಎಂದು ಎಚ್ಚರಿಸಿತು. ಆ ಪುಂಡರಲ್ಲೊಬ್ಬ ಪತ್ರಕರ್ತರೊಬ್ಬರ ಮುಂದೆ ಪಿಸ್ತೂಲ್ ಅಲ್ಲಾಡಿಸುತ್ತ ಭಯ ಮೂಡಿಸುತ್ತಿದ್ದ.

- Advertisement -
- Advertisement -

ಸಾಮಾಜಿಕ ಚಳವಳಿಗಳು ಎಂದರೆ ಗೊಂದಲ ಸಹಜ. ನಾವು ಬಯಸುವ ಪಥದಲ್ಲಿ ಅವು ಯಾವಾಗಲೂ ಸಾಗಲಾರವು ಮತ್ತು ಅವು ಹಾಗೆ ಸಾಗುವ ಅಗತ್ಯವೂ ಇಲ್ಲ. ಚಳವಳಿಗಳು ಪ್ರತಿಭಟನಾಕಾರರಿಗೆ ಕಲಿಕೆಯ ಸ್ಥಳಗಳಾಗಿದ್ದರೆ, ಚಳವಳಿಯ ಮುಖಂಡರು ಮತ್ತು ದೇಶದ ನಾಯಕರಿಗೂ ಅದು ಅನ್ವಯಿಸುತ್ತದೆ. ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಲು ತಮ್ಮ ಮನೆಯಿಂದ ಹೊರಬಂದವರ ಸಂಕಲ್ಪವನ್ನು ಅದು ಪರೀಕ್ಷಿಸುತ್ತದೆ, ಹಾಗೆಯೇ ಅದು ಒಬ್ಬ ನಾಯಕನಿಗೆ ರಾಷ್ಟ್ರೀಯ ಟಿವಿಯಲ್ಲಿ, ಗಲಭೆಯಲ್ಲಿ ತಮ್ಮ ಪಾತ್ರದ ತಪ್ಪೊಪ್ಪಿಕೊಳ್ಳುವಂತೆ ಮಾಡುತ್ತದೆ.

ರೈತ ಟ್ರಾಕ್ಟರ್ ರ್‍ಯಾಲಿ ಮತ್ತು ಸರ್ಕಾರದ ವಿಧ್ವಂಸಕ ಪ್ರಯತ್ನ

ನನ್ನ ಕೊನೆಯ ವರದಿಯು, ನಾಗರಿಕರು ಗಣರಾಜ್ಯವನ್ನು ಅದರ ನಿಜವಾದ ಅರ್ಥದಲ್ಲಿ ಪುನಃ ರೂಪಿಸಿಕೊಳ್ಳುವ ಭರವಸೆಯೊಂದಿಗೆ ಕೊನೆಗೊಂಡಿತು. ಹಲವು ರೀತಿಗಳಲ್ಲಿ ಅದು ಮಹತ್ವದ ಐತಿಹಾಸಿಕ ಘಟನೆ ಕೂಡ ಆಗಿದೆ. ಆ ದಿನವು (ಜ.26) ಲವಲವಿಕೆಯಿಂದ ಪ್ರಾರಂಭವಾಯಿತು ಮತ್ತು ಆಶಾದಾಯಕವಾಗಿತ್ತು. ಆದರೆ ಕೆಂಪು ಕೋಟೆಯ ಘಟನೆಯು ದಿನದ ಸಂತೋಷದ ಕ್ಷಣಗಳನ್ನು ಕೊಂಚ ಹಾಳು ಮಾಡಿತಾದರೂ, ಆ ದಿನ ನಿಜವಾಗಿಯೂ ಸುಂದರವಾಗಿತ್ತು ಮತ್ತು ದೇಶದ ದುಡಿಯುವ ಜನಸಮೂಹದ ಸೌಂದರ್ಯವನ್ನು ಪ್ರದರ್ಶಿಸಿತು. ನಾವು ಟ್ರಾಕ್ಟರುಗಳು ಮತ್ತು ಟ್ರಾಲಿಗಳಲ್ಲಿ ಹಾರಿ ಕುಳಿತು ರೈತರಿಗೆ ಜೊತೆಯಾಗಿ ಹೋದೆವು, ನಿಜವಾದ ಗಣರಾಜ್ಯೋತ್ಸವ ಎಂದರೆ ಇದೇ ಎಂಬ ಸಾಕ್ಷಾತ್ಕಾರಕ್ಕಾಗಿ!

ಧ್ವಜಾರೋಹಣದ ಘಟನೆ, ಹಾಗೆಯೇ ಆ ಸಮಯದಲ್ಲಿ ಪೊಲೀಸ್ ನಿಷ್ಕ್ರಿಯತೆಗೆ ನಾವು ಸಾಕ್ಷಿಯಾದೆವು. ಲಾಠಿ ಪ್ರಯೋಗಿಸಲು ಹೆಸರುವಾಸಿಯಾದ ದೆಹಲಿ ಪೊಲೀಸರು ಸುಮ್ಮನೆ ನಿಂತು ಆ ’ಶೋ’ ವೀಕ್ಷಿಸಿದ್ದು, ಪ್ರಭುತ್ವವು ಈ ಕೃತ್ಯಕ್ಕೆ ಸಹಕರಿಸಿದೆ ಎಂಬುದಕ್ಕೆ ಮೊದಲ ಸಾಕ್ಷಿಯಾಗಿದೆ. ಕೃತ್ಯ ಎಸಗಿದ ಸಂಚುಕೋರ ದೀಪ್ ಸಿಧು ಓಡಿಹೋದ ಕೂಡಲೇ ಪೊಲೀಸರು ಕಾರ್ಯಪ್ರವೃತ್ತರಾದರು. ಕೆಂಪು ಕೋಟೆಗೆ ಕರೆದೊಯ್ಯಲ್ಪಟ್ಟ ಕೆಲವು ಜನರು ನಿಶಾನ್ ಸಾಹಿಬ್ ಧ್ವಜ ಮತ್ತು ರೈತರ ಧ್ವಜವನ್ನು ಹಾರಿಸಿದ್ದು, ಚಳವಳಿಯನ್ನು ಕೆಡಿಸುವ ಸರ್ಕಾರದ ಪಿತೂರಿ ಎಂದು ಬಹಳ ಬೇಗನೆ ಬಹಿರಂಗವಾಯಿತು. ಅದರ ಭಾಗವಾಗಿದ್ದವರು ಅದನ್ನು ಕ್ಯಾಮೆರಾದ ಎದುರು ಒಪ್ಪಿಕೊಂಡಿದ್ದರೂ, ಆ ಜನರನ್ನು ಬಂಧಿಸಲಾಗಿಲ್ಲ. ಆದರೆ ಪ್ರತಿಭಟನೆಗಾಗಿ ಹೋಗಿದ್ದ 100 ಕ್ಕೂ ಹೆಚ್ಚು ರೈತರು ಜನವರಿ 26ರಿಂದ ಕಾಣೆಯಾಗಿದ್ದಾರೆ.

ಶೇ. 31ರ ಸರ್ಕಾರ ಶೇ 0.1 ದಾರಿ ತಪ್ಪಿದ ಪ್ರತಿಭಟನಾಕಾರರ ಬಗ್ಗೆ ಕಿರುಚುತ್ತಿದೆ!

ರೈತರ ಮೆರವಣಿಗೆ ದೆಹಲಿಯಲ್ಲಿ ಮಾತ್ರವಲ್ಲ, ಇತರ ರಾಜ್ಯಗಳು, ಜಿಲ್ಲೆ ಮತ್ತು ತಾಲೂಕುಗಳಲ್ಲೂ ನಡೆಯಿತು. ಆದರೆ ಸರ್ಕಾರಿ ವೇತನಪಟ್ಟಿಯ ಮೇಲೆ ಬದುಕುವ ಗೋದಿ ಮಾಧ್ಯಮವು ಪ್ರಧಾನಧಾರೆ ಕಿಸಾನ್ ಮೆರವಣಿಗೆಯನ್ನು ಎಲ್ಲಿಯೂ ಕವರ್ ಮಾಡಲಿಲ್ಲ ಮತ್ತು ಅಲ್ಲಿ ಇಡೀ ದಿನ ಅದೇ ಸಂಭವಿಸಿತು ಎಂಬಂತೆ ಕೆಂಪು ಕೋಟೆ ಘಟನೆಗೆ ಕೆಂಪು ಬಣ್ಣವನ್ನು ಹಚ್ಚಿ ತೋರಿಸಲಾರಂಭಿಸಿತು. ಇದರ ನಂತರ ಯೋಗೇಂದ್ರ ಯಾದವ್, ದರ್ಶನ್ ಪಾಲ್ ಮತ್ತು ರಾಕೇಶ್ ಟಿಕಾಯತ್ ಸೇರಿದಂತೆ ಸಂಯುಕ್ತ್ ಕಿಸಾನ್ ಮೋರ್ಚಾ ನಾಯಕರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.

ಈ ಉದ್ವಿಗ್ನತೆಯ ಮಧ್ಯೆ, ಬಹುಶಃ ರಾಕೇಶ್ ಟಿಕಾಯತ್ ಅವರು, ರೈತರೊಂದಿಗೆ ಇರಬೇಕೋ ಅಥವಾ ಹಿಂದೂ ವೋಟ್‌ಬ್ಯಾಂಕ್ ಅಪ್ಪಿಕೊಂಡಿರುವ ಬಿಜೆಪಿ ಮತ್ತು ಅದರ ವಿಧ್ವಂಸಕ ಶಕ್ತಿಗಳ ಜೊತೆ ಇರಬೇಕೊ ಎಂಬುದನ್ನು ನಿರ್ಧರಿಸಿದರು ಎಂದು ಕಾಣುತ್ತದೆ. ಅವರ ಕಣ್ಣೀರು ಹರಿಯುವಾಗ ಮತ್ತು ಭಾವನಾತ್ಮಕ ಮನವಿಯು ಹೊಸ ಪಲ್ಲಟ ಸೃಷ್ಟಿಸುವಾಗ, ಗಾಝಿಪುರ ಗಡಿಯು ರೈತರಿಂದ ತುಂಬಿ ಹೋಯಿತು. ಅವರೆಲ್ಲ ಮೋದಿ ಮುರ್ದಾಬಾದ್ ಮತ್ತು ಕಿಸಾನ್ ಜಿಂದಾಬಾದ್ ಘೋಷಣೆಗಳನ್ನು ಜಪಿಸುತ್ತಾ ಇಂದಿಗೂ ಅಲ್ಲಿಯೇ ಇದ್ದಾರೆ.

ಪಶ್ಚಿಮ ಯುಪಿಯ ತನ್ನ ’ಕಟ್ಟರ್ ಹಿಂದೂ’ ನೆಲೆಯ ಬೆಂಬಲ ಕೈ ಜಾರುತ್ತಿರುವುದನ್ನು ಗ್ರಹಿಸಿದ ಬಿಜೆಪಿ, ಗೋದಿ ಮಾಧ್ಯಮಗಳ ಮೂಲಕ ಸುಳ್ಳು ಕಥಾನಕವನ್ನು ಮುನ್ನೆಲೆಗೆ ತಂದಿತು. ’ರೈತರು ಭಯಭೀತರಾಗಿದ್ದಾರೆ ಮತ್ತು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ’ ಎಂಬ ಪರಮಸುಳ್ಳನ್ನು ತೇಲಿ ಬಿಡಲಾಯಿತು. ಟಿಕಾಯತ್ ಅವರ ಮನವಿಯಿಂದ ಸೇರಿದ ಬೃಹತ್ ಪ್ರತಿಭಟನಾಕಾರರ ವಿಡಿಯೋ/ಫೋಟೊಗಳು ನೆಲದ ವಾಸ್ತವವನ್ನು ತೆರೆದಿಟ್ಟವು. ಮತ್ತೆ ಗೋದಿ ಮೀಡಿಯಾ ಬಕ್ಕಬಾರಲು ಮಲಗಿತು.

ಪತ್ರಕರ್ತರ ಮೇಲೆ ದಾಳಿ ಮತ್ತು ಬಂಧನ

ಬಿಜೆಪಿ ಮತ್ತು ಮೋದಿ ಮ್ಯಾಜಿಕ್ ಎಂದರೆ ಗೋಚರಿಸಿದ್ದನ್ನು ಅಗೋಚರ ಮಾಡುವುದು, ಮಹತ್ವದ್ದನ್ನು ಸ್ಪಷ್ಟವಾಗಿ ನಿರ್ಲಕ್ಷಿಸುವುದು ಮತ್ತು ತನ್ನ ಸಣ್ಣ ವಾಕ್ಚಾತುರ್ಯವನ್ನು ತನ್ನ ಲ್ಯಾಪ್‌ಡಾಗ್ ಮಾಧ್ಯಮ ಮತ್ತು ಐಟಿ ಸೆಲ್ ಮೂಲಕ ವರ್ಧಿಸುವುದು. ಆದರೆ ನಾಟಕಕ್ಕೆ ಪರದೆ ಬಿದ್ದಿದೆ. ಈಗ ಅದು ಶಕ್ತಿಯ ಬೆತ್ತಲೆ ಪ್ರದರ್ಶನವಾಗಿದೆ ಮತ್ತು ಅವರು ಇನ್ನು ಮುಂದೆ ನಟನೆಯನ್ನು ಮಾಡಲಾರರು.

ಜನವರಿ 30 ರಂದು, ರೈತರ ಪ್ರತಿಭಟನೆಯನ್ನು ಸಮರ್ಪಕವಾಗಿ ಅನುಸರಿಸುತ್ತಿರುವ ಮತ್ತು ಹಲವಾರು ಸುದ್ದಿ ವೆಬ್‌ಸೈಟ್‌ಗಳೊಂದಿಗೆ ಕೆಲಸ ಮಾಡಿದ ಮತ್ತು ಪ್ರಸ್ತುತ ಕಾರವಾನ್‌ಗಾಗಿ ಕೆಲಸ ಮಾಡುತ್ತಿರುವ ಪತ್ರಕರ್ತ ಮಂದೀಪ್ ಪುನಿಯಾ ಅವರು ವರದಿ ಮಾಡುವಾಗ ಸಿಂಘು ಗಡಿ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಅವರನ್ನು ಹಿಡಿದುಕೊಂಡು ಬಂಧಿಸಿದರು. ನ್ಯೂಸ್‌ಇಂಡಿಯಾ ಆನ್‌ಲೈನ್‌ಗಾಗಿ ಕೆಲಸ ಮಾಡುವ ಮತ್ತೊಬ್ಬ ಪತ್ರಕರ್ತ ಧರ್ಮ್‌ವೀರ್‌ರನ್ನೂ ಬಂಧಿಸಿ, ಮರುದಿನ ಅವರನ್ನು ಬಿಡುಗಡೆ ಮಾಡಲಾಗಿತು. ಅದೇ ಹೊತ್ತಿನಲ್ಲಿ ಪೊಲೀಸ್ ಅಧಿಕಾರಿಯನ್ನು ಹೊಡೆದ ಆರೋಪವನ್ನು ಮಂದೀಪ್ ಅವರ ಮೇಲೆ ಹೊರಿಸಲಾಯಿತು. ಆತನ ಬಂಧನದ ಬಗ್ಗೆ ಸಾಕಷ್ಟು ಗದ್ದಲ ಎದ್ದ ನಂತರ ಅವರು ಫೆಬ್ರವರಿ 2 ರಂದು ಜಾಮೀನು ಪಡೆದರು.

ಸಿಂಘು ಗಡಿಯಲ್ಲಿರುವ ಡೇರೆಗಳಲ್ಲಿ ಕಲ್ಲು ತೂರಾಟ ಮತ್ತು ಪೆಟ್ರೋಲ್ ಬಾಂಬ್‌ಗಳನ್ನು ಎಸೆಯುವಲ್ಲಿ ಭಾಗಿಯಾಗಿರುವ ಸಂಘ ಪರಿವಾರದ ಬೆಂಬಲಿಗರ ವಿಡಿಯೋ ಮತ್ತು ಫೋಟೋಗಳನ್ನು ಮಂದೀಪ್ ಹಂಚಿಕೊಂಡಿದ್ದರು. ನಾಗರಿಕ ಉಡುಪಿನ ಜನರೊಂದಿಗೆ ಸೇರಿಕೊಂಡು, ಸಿಖ್ ವ್ಯಕ್ತಿಯೊಬ್ಬನನ್ನು ಪೊಲೀಸರು ಕ್ರೂರವಾಗಿ ಹಲ್ಲೆ ಮಾಡಿದ ದೃಶ್ಯವೂ ಮಂದೀಪ್ ಅವರ ಬಳಿ ಇತ್ತು. ಇದು ಪೊಲೀಸ್-ಸಂಘ ಪರಿವಾರದ ಸಂಬಂಧವನ್ನು ಬಹಳ ಸ್ಪಷ್ಟವಾಗಿ ಬಹಿರಂಗಪಡಿಸುತ್ತದೆ. ಮಂದೀಪ್ ಅವರ ಬಂಧನವು ಇತರ ಪತ್ರಕರ್ತರಿಗೆ, ಗೋದಿ ಮಾಧ್ಯಮಗಳ ಸಾಲಿಗೆ ಸೇರಬೇಕೋ ಅಥವಾ ಇದೇ ರೀತಿಯ (ಮಂದೀಪ್ ಎದುರಿಸಿದ) ಹಣೆಬರಹಕ್ಕೆ ಸಿದ್ಧರಾಗಿರಬೇಕೋ ಎಂಬ ಸಂದೇಶವನ್ನು ನೀಡುತ್ತದೆ.

ಟಿಕ್ರಿ ಗಡಿಯ ಸಮೀಪದ ಗ್ರಾಮದಲ್ಲಿ ನಮ್ಮ ಗೌರಿ ಮೀಡಿಯಾ ತಂಡ ಮತ್ತು ಎರಡು ಇತರ ಮಾಧ್ಯಮ ತಂಡಗಳಿಗೆ ಸ್ಥಳೀಯ ಸಂಘ ಪರಿವಾರದ ಗೂಂಡಾಗಳು ರೈತರ ಪ್ರತಿಭಟನೆಯ ಬಗ್ಗೆ ವರದಿ ಮಾಡುವುದನ್ನು ನಿಲ್ಲಿಸುವಂತೆ ಬೆದರಿಕೆ ಹಾಕಿದ ಘಟನೆ ನಡೆಯಿತು, ಇಲ್ಲದಿದ್ದರೆ ನಮಗೆ ಏನಾದರೂ ಆಗಬಹುದು ಎಂದು ಎಚ್ಚರಿಸಿತು. ಆ ಪುಂಡರಲ್ಲೊಬ್ಬ ಪತ್ರಕರ್ತರೊಬ್ಬರ ಮುಂದೆ ಪಿಸ್ತೂಲ್ ಅಲ್ಲಾಡಿಸುತ್ತ ಭಯ ಮೂಡಿಸುತ್ತಿದ್ದ. ಅದೃಷ್ಟವಶಾತ್ ನೆರೆಹೊರೆಯವರು ಆ ಪತ್ರಕರ್ತನನ್ನು ಬಿಡಿಸಿದರು ಮತ್ತು ಪರಿಸ್ಥಿತಿ ಶಾಂತವಾಯಿತು, ಆದರೆ ಇದು ಉಗ್ರ ರಾಷ್ಟ್ರವಾದಿ ಗೂಂಡಾಗಿರಿಯ ಮೊದಲ ಅನುಭವವನ್ನು ನಮಗೆ ನೀಡಿತು.

ಪಂಜರ ನಿರ್ಮಿಸುವ ಮತ್ತು ಪ್ರತ್ಯೇಕಿಸುವ ಪ್ರಯತ್ನಗಳು

ಈಗಾಗಲೇ ರಸ್ತೆಗಳ ಪ್ರವೇಶವನ್ನು ಪೊಲೀಸರು ಬಂದ್ ಮಾಡಿದ ಪರಿಣಾಮ ಪ್ರತಿ ಗಡಿಗೆ ಹೋಗುವುದು ಮತ್ತು ಬರುವುದು ಕಷ್ಟವಾಗಿದೆ. ಈಗ ಅವರು ಪ್ರತಿಭಟನಾ ಸ್ಥಳಗಳಿಗೆ ಹೋಗುವ ಸಣ್ಣ ರಸ್ತೆಗಳನ್ನೂ ನಿರ್ಬಂಧಿಸಿದ್ದಾರೆ. 4 ದಿನಗಳ ಹಿಂದೆ ಸಿಂಘು ಗಡಿಯಿಂದ ಹೊರಟಾಗ ನಾವು ಆಟೋ ಹಿಡಿಯಲು 5 ಕಿ.ಮೀ ನಡೆದವು. ಈ ದಾರಿಯಲ್ಲಿ ವ್ಯಕ್ತಿಯೊಬ್ಬರಿಗೆ ನಾವು ಮಾರ್ಗವನ್ನು ಕೇಳಿದೆವು, ಆ ವ್ಯಕ್ತಿ ಹೇಳಿದರು: ನೀವು ನರೇಲಾಗೆ (ಮುಂದಿನ ಕಾಲೋನಿ) ಹೋಗಲು ಯಾವುದೇ ವಾಹನವಿಲ್ಲ. ಈ ಪ್ರದೇಶವು ಹೆಚ್ಚಾಗಿ ಖಾಲಿ ಮತ್ತು ಕೈಗಾರಿಕಾ ಪ್ರದೇಶವಾಗಿದೆ. ನಂತರ ಅವರು, ’ಈ ಎಲ್ಲಾ ಪ್ರತಿಭಟನಾ ಸ್ಥಳಗಳನ್ನು ಇಂದು ತೆಗೆದು ಹಾಕಲಿದ್ದಾರೆ… ನನ್ನಲ್ಲಿ ಮಾಹಿತಿ ಇದೆ… ನಾನು ಕೃಷಿ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

ರೈತರಿಗೆ ಬೆಂಬಲ: ಹರಿಯಾಣದ ಪ್ರತಿ ಹಳ್ಳಿಗೂ ಹರಡಿದ ಮಹಾಪಂಚಾಯತ್ - ಗ್ರೌಂಡ್ ರಿಪೋರ್ಟ್
PC: Indian Express

ನಾವು ಹಿಂದಕ್ಕೆ ತಿರುಗಿ, ತಲೆ ಅಲ್ಲಾಡಿಸಿ ಒಬ್ಬರಿಗೊಬ್ಬರು ಹೇಳಿದೆವು … ’ಇಲ್ಲ, ಪೊಲೀಸರು ಈ ರೈತರ ಶಕ್ತಿ ಮತ್ತು ಸಂಕಲ್ಪಕ್ಕೆ ಸಾಟಿಯೇ ಅಲ್ಲ ಎಂದು.

ಕಳೆದ ರಾತ್ರಿ (ಸೋಮವಾರ ರಾತ್ರಿ) ಕಬ್ಬಿಣದ ಮೊಳೆಗಳು, ಸಿಮೆಂಟ್ ಬ್ಲಾಕ್‌ಗಳು, ಕಾಂಕ್ರೀಟ್ ಬಂಡೆಗಳು ಮತ್ತು ಕಾಂಕ್ರೀಟ್ ಗೋಡೆಗಳನ್ನು ಮೂರು ಗಡಿಗಳಲ್ಲಿ ಪೊಲೀಸರು ಇರಿಸುತ್ತಿರುವ ದೃಶ್ಯಗಳನ್ನು ನಾವು ನೋಡಿದೆವು. ಇಂಥದ್ದು ತುಂಬಾ ತುಂಬಾ ನಡೆಯುತ್ತಿದೆ… ಅವುಗಳಲ್ಲಿ ಹಲವನ್ನು ಪ್ರತ್ಯಕ್ಷವಾಗಿ ನೋಡಿದೆವು, ಮುಂದಿನದನ್ನು ನೋಡಲು ಇಲ್ಲೇ ಇರಲಿದ್ದೇವೆ. ಆದರೆ ಸ್ವಚ್ಛ್ ಭಾರತ್ ಅಭಿಯಾನದಂತೆ ಕೊಳೆಯನ್ನು ಮರೆಮಾಚಬೇಕು … ಅಂತೆಯೇ ಪ್ರಭುತ್ವದ ವ್ಯವಸ್ಥೆ ಮತ್ತು ಪೊಲೀಸರ ಕೊಳಕುಗಳನ್ನು ಮರೆಮಾಚಲಾಗುತ್ತಿದೆ.

ಈ ಎಲ್ಲದರ ಜೊತೆಗೆ ರೈತರ ಸಂಕಲ್ಪ ಅಚಲವಾಗಿದೆ. ಸರ್ಕಾರದ ಜನವಿರೋಧಿ ಕ್ರಮಗಳಿಂದ ಅವರು ನೊಂದುಕೊಂಡಿದ್ದರೂ ಮತ್ತು ನಿರಾಶೆಗೊಂಡಿದ್ದರೂ ಅವರಿಗೆ ಹೇಳಲು ಒಂದೇ ಒಂದು ವಿಷಯವಿದೆ: ’ಮರ್ ಜಾಯೆಂಗೆ ಲೇಕಿನ್, ಕಾನೂನ್ ವಾಪಿಸ್ ಕಿಯೆ ಬಗೈರ್ ನಹಿ ಜಾಯೆಂಗೆ (ನಾವು ಸಾಯುತ್ತೇವೆ, ಆದರೆ ಈ ಮೂರು ಕಾನೂನುಗಳನ್ನು ಹಿಂದಕ್ಕೆ ತೆಗೆದುಕೊಳ್ಳುವವರೆಗೂ ನಾವು ಹಿಂತಿರುಗುವುದಿಲ್ಲ).

ಡಾ. ಸ್ವಾತಿ ಶುಕ್ಲಾ

ಡಾ. ಸ್ವಾತಿ ಶುಕ್ಲಾ
ಜರ್ಮನಿಯಲ್ಲಿ ‘ರೋಗ ನಿರೋಧಕ ಶಾಸ್ತ್ರದಲ್ಲಿ ಪಿಎಚ್‌ಡಿಯನ್ನು ಮುಗಿಸಿದ್ದಾರೆ. ಸ್ವೀಡನ್‌ನಲ್ಲಿ ಪೋಸ್ಟ್ ಡಾಕ್ಟೋರಲ್ ಸಂಶೋಧನೆಯನ್ನೂ ಮುಗಿಸಿ ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಪ್ರಸ್ತುತ ಗೌರಿಲಂಕೇಶ್‌ನ್ಯೂಸ್.ಕಾಮ್‌ನ ಸಹ ಸಂಪಾದಕರಾಗಿದ್ದಾರೆ


ಇದನ್ನೂ ಓದಿ: ’ಮೋದಿ-ಶಾ ನೇರ ಮಾತುಕತೆಗೆ ಬರಲಿ’- ಜಿಂದ್ ಮಹಾಪಂಚಾಯತ್‌ನ ಮಹಾ ನಿರ್ಣಯ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...