Homeಕರ್ನಾಟಕ‘ನಮ್ಮನ್ನು ನೀರಿಗೆ ತಳ್ಳಿದ್ದೇ ಸರ್ಕಾರದ ಸಾಧನೆ!’: ಪ್ರವಾಹದಲ್ಲಿ ನೊಂದ ಕಾರ್ಮಿಕರ ಅಳಲು

‘ನಮ್ಮನ್ನು ನೀರಿಗೆ ತಳ್ಳಿದ್ದೇ ಸರ್ಕಾರದ ಸಾಧನೆ!’: ಪ್ರವಾಹದಲ್ಲಿ ನೊಂದ ಕಾರ್ಮಿಕರ ಅಳಲು

- Advertisement -
- Advertisement -

“ರೋಡಿಗೆ ಬಂದು ಮೂರು ದಿನ ಆಯ್ತು. ಸರ್ಕಾರದವರು ಯಾರು ಕೇಳಲು ಬಂದಿಲ್ಲ. ಇಲ್ಲಿನ ಹೆದ್ದಾರಿ ಬಳಿಗೆ ಸಿಎಂ ಬಂದಿದ್ದರು. ಹೆದ್ದಾರಿಯಿಂದ ಸ್ವಲ್ಪ ಒಳಕ್ಕೆ ಬಂದಿದ್ದರೆ ನಮ್ಮ ಕಷ್ಟ ಅವರಿಗೆ ತಿಳಿಯುತ್ತಿತ್ತು. ರಸ್ತೆ ಬದಿಯ ಕಂಪನಿಗಳ ದೂರು ಕೇಳಿ, ಆನಂತರ ಹೊರಟುಬಿಟ್ಟರು. ಈಗ ನಮಗೆ ಊಟಕ್ಕೂ ದಿಕ್ಕಿಲ್ಲ. ನಮ್ಮನ್ನು ಕೆಲಸಕ್ಕೆ ಕರೆದೊಯ್ಯುತ್ತಿದ್ದ ಓನರ್ ಎರಡು ಹೊತ್ತು ಊಟ ಕೊಡುತ್ತಿದ್ದಾರೆ. ಇಲ್ಲಿ ತುಂಬಿಕೊಂಡಿರುವ ನೀರು ಯಾವತ್ತು ಖಾಲಿಯಾಗುತ್ತೋ ಗೊತ್ತಿಲ್ಲ. ಈಗಲೂ ಸೊಂಟದವರೆಗೆ ನಿಂತಿದೆ. ಇಲ್ಲಿನ ಒಂದೊಂದು ಲೈನ್ ಮನೆಯಲ್ಲೂ ಮೂರ್ನಾಲ್ಕು ಮಂದಿ ವಾಸವಿದ್ದೆವು. ಪುಟ್ಟ ಮಕ್ಕಳಿವೆ. ಏನೋ ಸಾಧನೆ ಮಾಡಿದ್ದೇವೆ ಅಂತ ಸರ್ಕಾರ ಹೇಳಿಕೊಳ್ಳುತ್ತಿದೆ. ಅದೇನು ಸಾಧನೆ ಮಾಡಿದ್ದಾರೋ, ಬಡವರಿಗಾಗಿ ಏನು ಮಾಡಿದ್ದಾರೋ ಗೊತ್ತಿಲ್ಲ” ಎನ್ನುತ್ತಾರೆ ಕಲಬುರಗಿ, ಯಾದಗಿರಿ ಭಾಗದ ವಲಸೆ ಕಾರ್ಮಿಕರಾದ ಸಂಜೀವ್‌ಕುಮಾರ್, ಶರಣಬಸಪ್ಪ, ಚಾಮರಾಜಪ್ಪ.

ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯ ಕಾರಣಕ್ಕೆ, ಅದರಲ್ಲೂ ಬೆಂಗಳೂರಿನ ಪೂರ್ವ ಭಾಗದಲ್ಲಿ ಇರುವ ಜನರು ಹೈರಾಣಾಗಿದ್ದಾರೆ. ತಗ್ಗು ಪ್ರದೇಶದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದೆ. ರಾಜಕಾಲುವೆಗಳ ಅಕ್ಕಪಕ್ಕದಲ್ಲಿ ನೆಲೆಸಿದ್ದ ಬಡವರ ಸ್ಥಿತಿಯಂತೂ ಶೋಚನೀಯವಾಗಿದೆ.

ಭಾನುವಾರ ರಾತ್ರಿ ಸುಮಾರು 140 ಮಿ.ಮೀ. ಮಳೆ ಸುರದಿತ್ತು. ಬೆಂಗಳೂರು ಪೂರ್ವ ಭಾಗದ ರಸ್ತೆಗಳು, ಬಡಾವಣೆಗಳು, ಕೆರೆಗಳು, ರಾಜಕಾಲುವೆಗಳು ಉಕ್ಕಿ ಹರಿದವು. ಮಹದೇವಪುರ ಭಾಗದ ಮಾರತಹಳ್ಳಿ, ಬೆಳ್ಳಂದೂರು, ಯಮಲೂರು, ಸರ್ಜಾಪುರ, ಎಚ್‌ಎಸ್.ಆರ್. ಲೇಔಟ್ ಸುತ್ತಮುತ್ತಲಿನ ಪ್ರದೇಶಗಳ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮಳೆ ಎಂದರೆ ಸಾಕು, ಸಾಕಪ್ಪ ಎನ್ನುತ್ತಿದ್ದಾರೆ. ಇದರ ಜೊತೆಗೆ ಬಂಡವಾಳಶಾಹಿ ಕಂಪನಿಗಳು ಬೆಂಗಳೂರು ತೊರೆಯುವ ಮಾತನಾಡುತ್ತಿವೆ. ಯದ್ವಾತದ್ವಾ ಬೆಳೆದ ನಗರದ ಸಮಸ್ಯೆಗಳಿಗೆ ಈ ಕಂಪನಿಗಳ ಕೊಡುಗೆಯೆಷ್ಟು ಎಂಬುದು ಮತ್ತೊಂದು ಗಂಭೀರವಾದ ಸಂಗತಿ. ಶ್ರೀಮಂತರಿಗೆ ಬಂದೊದಗುವ ಕಷ್ಟಗಳಿಗೆ ಪ್ರಭುತ್ವದ ಸ್ಪಂದನೆಯಂತೂ ಇರುತ್ತದೆ. ಸರ್ಕಾರಗಳು ಕಂಪನಿಗಳ ಬೇಡಿಕೆಯನ್ನು ಈಡೇರಿಸುವ ಮಾತುಗಳನ್ನಾಡುತ್ತವೆ. ಆದರೆ ಈ ಭೀಕರ ಪ್ರಹಾದಲ್ಲಿ ನಲುಗಿ ಹೋಗಿರುವ ಬಡಪಾಯಿಗಳ ಕೂಗು ಕೇಳುವವರು ಯಾರು?

ತಾರಾಬಾಯಿ

ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಮಾಡುತ್ತಲೋ, ಕೂಲಿ ಕೆಲಸದಲ್ಲಿ ತೊಡಗಿಸಿಕೊಂಡೋ, ಯಾವುದೋ ಕಂಪನಿಯಲ್ಲಿ ಸೆಕ್ಯುರಿಟಿಯಾಗಿಯೋ, ಹೌಸ್‌ಕೀಪಿಂಗ್ ಮಾಡುತ್ತಲೋ ಬೆಂಗಳೂರು ನಗರದ ಅಲ್ಲಲ್ಲಿ ಸಾವಿರಾರು ವಲಸೆ ಕಾರ್ಮಿಕರು ವಾಸವಿದ್ದಾರೆ. ತೂಬರಹಳ್ಳಿ, ಮುನ್ನೇಕೊಳಲು, ಬೆಳ್ಳಂದೂರು ಮೊದಲಾದ ಕಡೆ ಸಾವಿರಾರು ಕುಟುಂಬಗಳು ರಾಜಕಾಲುವೆಗಳ ಸಮೀಪದಲ್ಲಿ ಜೀವಿಸುತ್ತಿವೆ. ವಲಸೆ ಬಂದ ಕಾರ್ಮಿಕರನ್ನು ಕೊಳಚೆ ಪ್ರದೇಶಗಳಿಗೆ ದೂಡಿ, ಕಡಿಮೆ ಸಂಬಳಕ್ಕೆ ದುಡಿಸಿಕೊಳ್ಳುವ ಬಲಾಢ್ಯರ ಜಾಲ ಒಂದು ಕಡೆಯಾದರೆ, ಪ್ರಕೃತಿ ವಿಕೋಪದಿಂದ ಎದುರಾದ ದುರಂತ ಮತ್ತೊಂದು ಕಡೆ.

May be an image of 3 people and body of water

ರಾಜಕಾಲುವೆಯ ನೀರು ಹೆದ್ದಾರಿಗೂ ನುಗ್ಗಿ, ಸಂಚಾರ ಅಸ್ತವ್ಯಸ್ತವಾಗಿದೆ. ದುರ್ವಾಸನೆ ಬರುತ್ತಿರುವ ನೀರಿನಲ್ಲಿಯೇ ವಾಹನಗಳು ಸಾಗಿ ಬೆಳ್ಳಂದೂರು ದಾಟಬೇಕಿದೆ. ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಗಳು ಕಿತ್ತುಹೋಗಿವೆ. ಹೆದ್ದಾರಿಯ ಇಕ್ಕೆಲಗಳಲ್ಲಿ ದೊಡ್ಡದೊಡ್ಡ ಕಂಪನಿಗಳಿವೆ. ತಗ್ಗು ಪ್ರದೇಶಗಳಲ್ಲಿ ನೀರು ಈ ಕಂಪನಿಗಳ ಒಳಗೂ ನುಗ್ಗಿದೆ. ಪಂಪ್‌ಸೆಟ್ ಬಳಸಿ ನೀರನ್ನು ಹೊರಹಾಕುವ ಕೆಲಸ ನಿರಂತರವಾಗಿ ಸಾಗಿದೆ. ದಿನದ ಇಪ್ಪತ್ತನಾಲ್ಕು ಗಂಟೆಯೂ ಪಂಪ್‌ಸೆಟ್ ಸದ್ದು ಮಾಡುತ್ತಲೇ ಇವೆ. ಆದರೆ ಅದೇ ಕಂಪನಿಗಳ ಹಿಂದೆ ಜೋಪಡಿಗಳಲ್ಲಿ ವಾಸವಿದ್ದವರ ಕಷ್ಟ ಕೇಳುವವರು ಯಾರು? ಸೊಂಟಮಟ್ಟದ ನೀರನ್ನು ಖಾಲಿಮಾಡಲು ಇವರ ಬಳಿ ಯಾವ ಪಂಪ್‌ಸೆಟ್ ಇದೆ?

ಬೆಳ್ಳಂದೂರಿನ ಮುಳುಗಡೆ ಪ್ರದೇಶಕ್ಕೆ ಭೇಟಿ ನೀಡಿದಾಗ ಕಂಡ ಸತ್ಯಗಳು ಅನೇಕ. ಯಾರಾದರೂ ನೆರವಿಗೆ ಧಾವಿಸುತ್ತಾರೋ, ಏನಾದರೂ ಪರಿಹಾರ ನೀಡುತ್ತಾರೋ ಎಂಬ ನಿರೀಕ್ಷೆಯಲ್ಲಿ ಕಾದಿದ್ದಾರೆ ಇಲ್ಲಿನ ಕಾರ್ಮಿಕರು. ರಾಯಚೂರು, ಕಲಬುರಗಿ, ಯಾದಗಿರಿ ಸೇರಿದಂತೆ ಪಶ್ಚಿಮ ಬಂಗಾಳದಿಂದ ಬಂದು ನೆಲೆಸಿರುವ ಹಲವಾರು ವಲಸೆ ಕುಟುಂಬಗಳು ಇಲ್ಲ್ಲಿವೆ. ಹರಿಯಾಣ ಗ್ರೂಪ್ ಅಪಾರ್ಟ್‌ಮೆಂಟ್ ಎದುರಿಗಿನ ರಾಜಕಾಲುವೆ ಬದಿಯಲ್ಲಿ ಸುಮಾರು 150 ಜೋಪಡಿಗಳಿದ್ದು, ಎಲ್ಲವೂ ಜಲಾವೃತವಾಗಿವೆ. ಕೈಗೆ ಸಿಕ್ಕಷ್ಟು ಬಟ್ಟೆ, ಪಾತ್ರೆ ಪಗಡೆಗಳನ್ನು ಜೋಪಡಿಯಿಂದ ಹೊರಗೆಳೆದುಕೊಂಡು ಬದುಕುಳಿದಿದ್ದಾರೆ ಕಾರ್ಮಿಕರು.

May be an image of 1 person, standing and body of water

ಸಾಂಕ್ರಾಮಿಕ ರೋಗಗಳ ಭೀತಿ ಆವರಿಸಿದೆ. ದಾನಿಗಳು ತಂದುಕೊಡುವ ಊಟ ಸೇವಿಸಿ ಜೀವನ ತಳ್ಳುತ್ತಿದ್ದಾರೆ. ಕೆಲಸ ಹುಡುಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದ್ದಬದ್ದ ದಾಖಲೆಗಳೆಲ್ಲ ನೀರು ಪಾಲಾಗಿವೆ. ರೇಷನ್ ಕಾರ್ಡ್, ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್- ಯಾವೊಂದು ಈಗಿಲ್ಲ!

ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗುಲ್ಬರ್ಗದ ತಾರಾಬಾಯಿ ತಮ್ಮ ಸಂಕಟ ವ್ಯಕ್ತಪಡಿಸುತ್ತಾ, “ಡಾಕ್ಯುಮೆಂಟು ಹೋದ್ವು, ಮನೆಯಲ್ಲಿಟ್ಟಿದ್ದ ದುಡ್ಡು ಹೋದ್ವು, ಎಲ್ಲಿಯಾದರೂ ಹೋಗಿ ಜೀವ ಕೊಡೋದು ಬಾಕಿ ಉಳಿದಿದೆ ಅಷ್ಟೇ. ಊಟ ಮಾಡಲು ಒಂದು ಬೋಗುಣಿ ಇಲ್ಲ, ತಂಬಿಗೆ ಇಲ್ಲ. ಹಾಸಿಕೊಳ್ಳಲು ಒಂದು ಬೆಡ್‌ಶೀಟ್ ಇಲ್ಲ. ನಿಮ್ಮಂಥವರಿಗೆ ಸಾಲ ವಾಪಸ್ ಕೊಡಬೇಕಿತ್ತು. ಹೊಟ್ಟೆಬಟ್ಟೆ ಕಟ್ಟಿ ದುಡ್ಡು ಇಟ್ಟಿದ್ವಿ. ಆ ದುಡ್ಡು ಹರಿದುಕೊಂಡು ಹೋಯ್ತು. ಕಿವಿಯೋಲೆ, ಕೊರಳ ಸರ, ಸಾಲ ತೀರಿಸಲು ಇಟ್ಟಿದ್ದ ಹಣ, ಡಾಕ್ಯುಮೆಂಟು ಎಲ್ಲಾ ಹೋದ್ವು. ಎಲ್ಲಾದರೂ ಕೆಲಸ ಕೇಳಲು ಹೋದರೆ ನಿಮ್ಮ ಡಾಕ್ಯುಮೆಂಟು ಎಲ್ಲಿವೆ ಅಂತ ಕೇಳ್ತಾರೆ. ನಾವು ಏನಂತ ಹೇಳಬೇಕು? ಒಂದ್ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್‌ಬುಕ್- ಏನಂದ್ರೆ ಏನೂ ಇಲ್ಲ. ಬದುಕೋದು ಹೇಗೆ ಅಂತ ಯೋಚನೆ ಮಾಡುತ್ತಿದ್ದೇವೆ” ಎಂದರು.

May be an image of 1 person, body of water and tree

ಮುಂದುವರಿದು, “ಹನ್ನೆರಡು ವರ್ಷದ ಮೇಲಾಯಿತು. ಇಲ್ಲೇ ಇದ್ದೇವೆ. ಇಷ್ಟು ವರ್ಷದಲ್ಲಿ ಏನೂ ಆಗಿರಲಿಲ್ಲ. ನಮ್ ತಕ್ಲೀಫ್ ಯಾರ್ ನೋಡ್ತಾರೋ? ರೇಷನ್ನಾ, ಪೀಷನ್ನಾ ಎಲ್ಲಾ ಹಳ್ಳಕ್ಕೆ ಹರಿದುಕೊಂಡು ಹೋಯ್ತು. ಇತ್ತ ಮಕ್ಕಳನ್ನು ಹೊತ್ತುಕೊಂಡು ಬರೋದ್ರೊಳಗೆ ಅತ್ತ ಎಲ್ಲ ಹರಿದುಕೊಂಡು ಹೋಯ್ತು. ಮಕ್ಕಳನ್ನು ಹಿಡ್ಕೋಬೇಕಾ? ರೇಷನ್ ಹಿಡ್ಕೋಬೇಕಾ? ನಮ್ಮ ಮನೆಗೆ ರಾತ್ರಿ ಹತ್ತು ಗಂಟೆ ವೇಳೆಗೆ ನೀರು ಬಂತು. ಏನೋ ಸ್ವಲ್ಪ ಬರುತ್ತದೆ ಅಂತ ಸುಮ್ಮನಾದೆವು. ಆದರ ಬರುಬರುತ್ತಾ ಹೆಚ್ಚಾಯ್ತು. ಮೊದಲು ಮಕ್ಕಳನ್ನು ಎತ್ತಿಕೊಂಡು ಬನ್ನಿ ಎಂದೆ. ಮತ್ತೆ ಹುಟ್ಟೋಕೆ ಮಕ್ಕಳೇನು ಹುಲ್ಲು ಬೀಜನಾ? ಜೀವ ಬದುಕಿದರೆ ಸಾಕು ಅನಿಸಿತು” ಎಂದು ಆ ಹಿರಿಜೀವ ಮರುಗಿತು.

ಹನುಮಂತ

ಇದೇ ಭಾಗದಲ್ಲಿ ಕಳೆದ ಏಳು ವರ್ಷಗಳಿಂದ ವಾಸವಿರುವ, ಸೈಬರ್ ಕೆಫೆಯೊಂದನ್ನು ನಡೆಸುತ್ತಿರುವ ಪಶ್ಚಿಮ ಬಂಗಾಳದ ನೂರ್ ಇಸ್ಲಾಂ ಮಾತನಾಡಿ, “ಇದೇ ಮೊದಲ ಬಾರಿಗೆ ಈ ರೀತಿಯ ಅವಘಡ ನೋಡುತ್ತಿದ್ದೇನೆ. ಸಣ್ಣ ಸೈಬರ್ ಕೆಫೆ ನಡೆಸಿಕೊಂಡು ಇಲ್ಲಿ ಜೀವನ ನಡೆಸುತ್ತಿದ್ದೆ. ನಾವು ಇರುವ ಜಾಗಕ್ಕೂ ನೀರು ನುಗ್ಗಿದೆ. ಇಲ್ಲಿನ ಕಾರ್ಮಿಕರು ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈಗ ದಿಕ್ಕು ತೋಚದಾಗಿದ್ದಾರೆ. ಸರ್ಕಾರದಿಂದ ಯಾವುದೇ ಸಹಕಾರ ದೊರೆತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ನಮ್ಮ ಪರವಾಗಿ ಯಾವ ಬೊಮ್ಮಾಯೂ ಕೆಲಸ ಮಾಡಲ್ಲ, ಸಿಮ್ಮಾಯಿಯೂ ಮಾಡಲ್ಲ” ಎಂದು ಬೇಸರದಿಂದ ಮಾತನಾಡುತ್ತಾರೆ ಮತ್ತೊಬ್ಬ ಯಾದಗಿರಿ ಕಾರ್ಮಿಕ ಬಸವನಗೌಡ.

“ಇಲ್ಲಿಗೆ ಬಂದು ಹತ್ತು ವರ್ಷವಾಯಿತು. ಎಲ್ಲ ದಾಖಲೆಗಳು ನೀರುಪಾಲಾದವು. ಊರಿಗೆ ಹೋಗಲು ಮನಸ್ಸಿಲ್ಲ. ಇಲ್ಲಿ ಇದ್ದರೆ ಒಂದು ಹೊತ್ತು ಊಟನಾದರೂ ಕೊಡುತ್ತಾರೆ. ಊರಿಗೆ ವಾಪಸ್ ಹೋಗಿ ಏನ್ ಮಾಡಲಿ” ಎಂದು ಪ್ರಶ್ನಿಸುತ್ತಾರೆ ಅವರು.

May be an image of 3 people and body of water

ಮತ್ತೊಬ್ಬ ಕಾರ್ಮಿಕ ಹನುಮಂತ ಅವರು ವಿಷಾದ ಹಾಗೂ ವ್ಯಂಗ್ಯದಿಂದ ಮಾತನಾಡಿದರು. “ನಮ್ಮನ್ನು ಒಳ್ಳೆಯ ಜಾಗಕ್ಕೆ ತಂದು ಕೂರಿಸಿದ್ದಾರೆ. ಒಳ್ಳೆಯ ಸರ್ಕಾರವಿದು. ಇನ್ನು ಹತ್ತು ವರ್ಷ ಇವರೇ ಅಧಿಕಾರದಲ್ಲಿ ಇರಬೇಕು. ಇಲ್ಲಿ ಆರಾಮವಾಗಿ ಇದ್ದೇವೆ. ಒಂದು ತೊಟ್ಟು ವಿಷ ತಂದುಕೊಟ್ಟುಬಿಡಿ. ಇಲ್ಲೇ ಸತ್ತು ಹೋಗಿಬಿಡುತ್ತೇವೆ. ಬದುಕಬೇಕೋ ಸಾಯಬೇಕೋ ಅನಿಸಿಬಿಟ್ಟಿದೆ” ಎಂದು ಹೇಳಿದರು.

May be an image of 3 people and body of water

ಬೊಮ್ಮಾಯಿ ಸರ್ಕಾರ ’ಜನೋತ್ಸವ’ ಎಂದು ಮಾತನಾಡುತ್ತಿದೆ. ಏನೋ ಸಾಧನೆ ಮಾಡಿರುವುದಾಗಿ ಬಿಂಬಿಸಿಕೊಳ್ಳುತ್ತಿದೆ. ಇದರ ಕುರಿತು ಕಾರ್ಮಿಕ ಹನುಮಂತ ಅವರ ಬಳಿ ಕೇಳಿದರೆ, “ನೀವು ಆ ಭವ್ಯ ದೃಶ್ಯವನ್ನು ನೋಡಬಹುದು. ಇದಕ್ಕಿಂತ ಒಳ್ಳೆಯ ಕೆಲಸವನ್ನು ಇನ್ಯಾರು ಮಾಡಲು ಸಾಧ್ಯ? ಮನೆಯಲ್ಲೆಲ್ಲ ನೀರು ನಿಂತಿದೆ. ಮಕ್ಕಳು ಮರಿಯೆಲ್ಲ ರೋಡಿಗೆ ಬಂದು ಕುಳಿತ್ತಿದ್ದೇವೆ. ಇಷ್ಟು ಸಾಕು” ಎಂದು ಅಸಹಾಯಕ ನಗೆ ಬೀರಿದರು.

ಕಾರ್ಮಿಕ ಸಂಜೀವ್‌ಕುಮಾರ್ ಮಾತು ಮುಂದುವದರು. “ಮೇನ್ ರೋಡ್ ಕ್ಲಿಯರ್ ಮಾಡಿಬಿಟ್ಟು ಮುಖ್ಯಮಂತ್ರಿ ಹೋದರು. ದೊಡ್ಡವರಿಗೆ ಸಪೋರ್ಟ್ ಮಾಡುತ್ತಾರೆ. ದೊಡ್ಡೋರು ಕಂಪ್ಲೇಟ್ ಮಾಡಿದರು. ಭಯಪಟ್ಟು ಇಲ್ಲಿಗೆ ಬಂದರು. ನಮ್ಮಲ್ಲಿಗೆ ಯಾರು ತಾನೇ ಬರುತ್ತಾರೆ?” ಎಂದು ಪ್ರಶ್ನಿಸಿದರು. “ಬೇರೆ ಎಲ್ಲಿಯಾದರೂ ಉಳಿದುಕೊಳ್ಳೋಣ, ಬಾಡಿಗೆ ಮನೆಯನ್ನು ಹುಡುಕೋಣವೆಂದು ಹೋದರೆ, ಒಂದೊಂದು ಮನೆಗೆ ಹತ್ತರಿಂದ ಹದಿನೈದು ಸಾವಿರ ತಿಂಗಳ ಬಾಡಿಗೆ ಕೇಳುತ್ತಾರೆ. ಅಡ್ವಾನ್ಸ್ ಐವತ್ತು ಸಾವಿರ ಕೊಡಿ ಎನ್ನುತ್ತಾರೆ. ನನಗೆ ಹದಿನಾಲ್ಕು ಸಾವಿರ ಸಂಬಳ ಬರುತ್ತದೆ. ಹತ್ತು ಸಾವಿರ ಕೊಟ್ಟು ಜೀವನ ನಡೆಸಲು ಸಾಧ್ಯವಾ? ಇನ್ನು ಕೆಲವರ ಸಂಬಳ ಹತ್ತು, ಹನ್ನೆರಡು ಸಾವಿರ ಇದೆ. ಅಷ್ಟಾದರೂ ಐವತ್ತು ಸಾವಿರ ಅಡ್ವಾನ್ಸ್ ಎಲ್ಲಿ ತರಲಿ?” ಎಂದು ಕೇಳುತ್ತಾರೆ ಬೀದಿಗೆ ಬಿದ್ದ ಕಾರ್ಮಿಕ ಸಂಜೀವ್‌ಕುಮಾರ್.

ಸಂಜೀವ್ ಕುಮಾರ್

ಇಲ್ಲಿನ ಜನರ ಆರೋಗ್ಯ ಬಿಗಡಾಯಿಸಿದ್ದು, ಆರೋಗ್ಯ ಕಾರ್ಯಕರ್ತೆಯರನ್ನು ಕಳುಹಿಸಿ ಔಷಧಿ ವಿತರಣೆ ಮಾಡುತ್ತಿರುವ ದೃಶ್ಯಗಳು ಕಂಡುಬಂದವು. ರಾಜಕಾಲುವೆಗೆ ಅಂಟಿದ ದೊಡ್ಡದೊಡ್ಡ ಅಪಾರ್ಟ್‌ಮೆಂಟ್‌ಗಳಿವೆ. ಹರಿವ ನೀರಿಗೆ ಅಡ್ಡಲಾಗಿ ನಿಂತಿರುವ ಭಾರೀ ಜೊಂಡುಗಳನ್ನು ಬದಿಗೆ ಸರಿಸಲು ಕೆಲವು ಬುಲ್ಡೋಜರ್‌ಗಳನ್ನು ಸರ್ಕಾರ ಕಳಹಿಸಿದೆ. ಮಳೆ ನಿಂತರೂ ರಾಜಕಾಲುವೆಗಳಲ್ಲಿ ನೀರಿನ ಭೀಕರ ಹರಿವು ಕಡಿಮೆಯಾಗುವ ಸೂಚನೆ ಇಲ್ಲ. ಸುಸಜ್ಜಿತ ಮನೆಗಳನ್ನು ತೊರೆದು ಕೆಲವರು ಜಾಗ ಖಾಲಿ ಮಾಡುತ್ತಿದ್ದಾರೆ.

ಪ್ರವಾಹಕ್ಕೆ ತುತ್ತಾಗಿರುವ ಪ್ರದೇಶಗಳ ಪರಿಸ್ಥಿತಿ ನೋಡಿದರೆ ಆತಂಕವಾಗುತ್ತದೆ. ಸಿಎಂ ಬೊಮ್ಮಾಯಿಯವರೇನೋ ಮುನ್ನೂರು ಕೋಟಿ ಪರಿಹಾರ ಬಿಡುಗಡೆ ಮಾಡುವ ಮಾತನಾಡಿದ್ದಾರೆ. ನಿಜದ ಸಂತ್ರಸ್ತರಿಗೆ ಪರಿಹಾರ ದೊರಕುತ್ತದೆಯೋ ಅಥವಾ ಈ ಹಿಂದೆ ಆದಂತೆಯೇ ಪ್ರವಾಹದ ಹೆಸರಲ್ಲಿ ಪ್ರಭಾವಿಗಳು ’ಗುಳುಂ’ ಮಾಡುತ್ತಾರೋ ನೋಡಬೇಕಿದೆ.


ಇದನ್ನೂ ಓದಿ: ಬೆಂಗಳೂರು ವಿ.ವಿ ಕ್ಯಾಂಪಸ್‌ನೊಳಗೆ ದೇವಸ್ಥಾನ ನಿರ್ಮಾಣದ ವಿರುದ್ಧ ಭಾರಿ ಪ್ರತಿಭಟನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...