ಪಶ್ಚಿಮ ಬೆಂಗಳೂರಿನ ನಾಯಂಡಹಳ್ಳಿ ಬಳಿ ಖಾಸಗಿ ಶಾಲಾ ಬಸ್ಸಿನ ಚಾಲಕ ತನ್ನ ವಾಹನದೊಳಗೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಮಂಗಳವಾರ ನಡೆದಿದೆ.
ಆರೋಪಿ, ನಾಯಂಡಹಳ್ಳಿ ನಿವಾಸಿ ಶಿವಕುಮಾರ್ (40) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ನಾಗರಭಾವಿಯಲ್ಲಿ ವಾಸವಾಗಿರುವ ಅತ್ಯಾಚಾರ ಸಂತ್ರಸ್ತೆ, ಖಾಸಗಿ ಶಾಲೆಯೊಂದರಲ್ಲಿ ಆಯಾ (ಪ್ಯೂನ್) ಆಗಿ ಕೆಲಸ ಮಾಡುತ್ತಿದ್ದಾರೆ.
ಕೆಲಸ ಮುಗಿಸಿ ನಾಯಂಡಹಳ್ಳಿ ಜಂಕ್ಷನ್ ಬಳಿ ಬಸ್ಗಾಗಿ ಮಹಿಳೆ ಕಾಯುತ್ತಿದ್ದಾಗ ಶಿವಕುಮಾರ್ ಬಸ್ ಚಲಾಯಿಸಿಕೊಂಡು ಆ ಮಹಿಳೆ ಇರುವತ್ತ ಬಂದಿದ್ದನು. ಮಹಿಳೆ ಡ್ರಾಪ್ ಗಾಗಿ ಬಸ್ಸಿನತ್ತ ಕೈಬೀಸಿದ್ದರು. ಶಿವಕುಮಾರ್ ಬಸ್ ನಿಲ್ಲಿಸಿ, “ನಾನೂ ನಾಗರಭಾವಿ ಕಡೆಗೆ ಹೋಗುತ್ತಿದ್ದೇನೆ” ಎಂದು ಹೇಳಿ ಮಹಿಳೆಯನ್ನು ಬಸ್ನಲ್ಲಿ ಕೂರಿಸಿಕೊಂಡಿದ್ದನು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಸಂಜೆ 5.30ರ ಸುಮಾರಿಗೆ ಮಹಿಳೆ ವಾಹನವನ್ನು ಹತ್ತಿದ ಕೂಡಲೇ ಶಿವಕುಮಾರ್ ನಾಯಂಡಹಳ್ಳಿ ಜಂಕ್ಷನ್ನಿಂದ ಮೂರು ಕಿ.ಮೀ ಆಸುಪಾಸಿನಲ್ಲಿರುವ ಕೈಲಾಸಗಿರಿಯ ಮಲೆ ಮಹದೇಶ್ವರ ದೇವಸ್ಥಾನದ ಕಡೆಗೆ ಹೋಗಿ ಬಸ್ಸನ್ನು ರಸ್ತೆಬದಿಯಲ್ಲಿ ನಿಲ್ಲಿಸಿದ್ದನು. ಮಹಿಳೆಯ ಮೇಲೆ ಹಲ್ಲೆ ನಡೆಸಿ, ಬೆದರಿಸಿ ಬಸ್ಸಿನೊಳಗೆ ಅತ್ಯಾಚಾರ ಎಸಗಿದ್ದಾನೆ. “ಪೊಲೀಸರನ್ನು ಸಂಪರ್ಕಿಸಬೇಡ ಅಥವಾ ಘಟನೆಯ ಬಗ್ಗೆ ಯಾರಿಗೂ ಹೇಳಬೇಡ” ಎಂದು ಬೆದರಿಸಿದ ನಂತರ ಆತ ಸಂಜೆ 7 ಗಂಟೆ ಸುಮಾರಿಗೆ ಮಹಿಳೆಯನ್ನು ಡ್ರಾಪ್ ಮಾಡಿದ್ದಾನೆ.
Woman raped inside a private bus by the driver in Bengaluru, incident took place yesterday when the victim boarded a private bus as a lone passenger . Accused shivkumar drove into a secluded area & sexually assaulted her. He's been arrested. pic.twitter.com/EKNUWtm6vI
— Deepak Bopanna (@dpkBopanna) November 30, 2022
ಬಸ್ನಿಂದ ಇಳಿದ ನಂತರ ಸಂತ್ರಸ್ತ ಮಹಿಳೆಯು ನೋಂದಣಿ ಸಂಖ್ಯೆಯೊಂದಿಗೆ ವಾಹನದ ಚಿತ್ರವನ್ನು ಕ್ಲಿಕ್ ಮಾಡಿಕೊಂಡರು. ಅದನ್ನು ತನ್ನ 20 ವರ್ಷದ ಮಗನಿಗೆ ತಲುಪಿಸಿದರು. ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಮಗನಿಗೆ ತಿಳಿಸಿದರು.
ನಾಯಂಡಹಳ್ಳಿಯಲ್ಲಿ ವಾಹನ ಮತ್ತು ಚಾಲಕನನ್ನು ಕೆಲವು ಬಾರಿ ನೋಡಿರುವುದಾಗಿ ತಾಯಿ ತಿಳಿಸಿದ್ದರಿಂದ, ಸಂತ್ರಸ್ತೆಯ ಮಗ ತನ್ನ ಸ್ನೇಹಿತರ ಜೊತೆಗೂಡಿ ಬಸ್ ಹುಡುಕಲು ಹೊರಟನು.
ಇದನ್ನೂ ಓದಿರಿ: ಬೆಂಗಳೂರು ಸುತ್ತಮುತ್ತ ಚಿರತೆಗಳ ಪ್ರತ್ಯಕ್ಷ; ಮುಂಜಾಗ್ರತೆ ವಹಿಸಲು ಸೂಚನೆ
ರಾತ್ರಿ 8.30ರ ಸುಮಾರಿಗೆ ನಾಯಂಡಹಳ್ಳಿಯಲ್ಲಿ ಬಸ್ ಪತ್ತೆ ಹಚ್ಚಲಾಯಿತು. ಆ ವೇಳೆಗೆ ಚಾಲಕ ಕಂಠಪೂರ್ತಿ ಕುಡಿದಿದ್ದ. ಸಂತ್ರಸ್ತೆಯ ಮಗ ಮತ್ತು ಆತನ ಸ್ನೇಹಿತರು ಚಾಲಕನನ್ನು ಬಸ್ನಿಂದ ಹೊರಕ್ಕೆ ಎಳೆದುಕೊಂಡು ಬಂದು ಜಗಳವಾಡಿದರು. ಇವರಿಬ್ಬರ ಜಗಳ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಚಾಲಕ ಏನು ಮಾಡಿದ್ದಾನೆಂದು ಜನರಿಗೆ ತಿಳಿದಿರಲಿಲ್ಲ. ಅತ್ಯಾಚಾರ ನಡೆದಿರುವ ಕುರಿತು ಚಂದ್ರಾ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಲಾಯಿತು.
“ನಾವು ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೇವೆ. ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡವು ಬಸ್ನಿಂದ ಮತ್ತು ಸಂತ್ರಸ್ತೆಯಿಂದ ಸಾಕ್ಷ್ಯವನ್ನು ಸಂಗ್ರಹಿಸಿದೆ. ಅತ್ಯಾಚಾರ, ಕೊಲೆ ಯತ್ನ ಇತರ ಸಂಬಂಧಿತ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದೇವೆ” ಎಂದು ಉಪ ಪೊಲೀಸ್ ಆಯುಕ್ತ (ಪಶ್ಚಿಮ) ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.
“ಶಿವಕುಮಾರ್ ಪ್ರತಿನಿತ್ಯ ಇದೇ ರಸ್ತೆಯಲ್ಲಿ ಹೋಗುತ್ತಿದ್ದರಿಂದ ಕೆಲವು ಬಾರಿ ಆತನನ್ನು ನೋಡಿದ್ದೆ, ಆದರೆ ನಾವು ಪರಿಚಯಸ್ಥರಲ್ಲ” ಎಂದು ಮಹಿಳೆ ಪೊಲೀಸರಿಗೆ ಹೇಳಿದ್ದಾರೆ.