Homeಮುಖಪುಟದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

ದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

- Advertisement -
- Advertisement -

ಐದು ತಿಂಗಳವರೆಗೆ ದೇಶದ ರಸ್ತೆಗಳಲ್ಲಿ 3700 ಕಿಲೊಮೀಟರ್ ಅಳೆದು ಈ ಭಾರತ್ ಜೋಡೊ ಯಾತ್ರೆ ಸಾಧಿಸುವುದಾದರೂ ಏನು? 7ನೆಯ ಸೆಪ್ಟೆಂಬರ್‌ನಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾದಾಗ ಈ ಪ್ರಶ್ನೆ ಎಲ್ಲಾ ಯಾತ್ರಿಗಳ ಎದುರಿಗೆ ಕಾಣಿಸಿಕೊಂಡಿತ್ತು. ಆದರೆ ಗಾಂಧೀಜಿಯ ಪುಣ್ಯತಿಥಿಯ ದಿನದಂದು, ಜೋರಾಗಿ ಸುರಿಯುತ್ತಿರುವ ಹಿಮದ ನಡುವೆಯೇ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾದಾಗ ಅದಕ್ಕೆ ಉತ್ತರ ಸ್ಪಷ್ಟವಾಗಿತ್ತು.

ನಮ್ಮ ಪರಂಪರೆಯಲ್ಲಿ ಯಾವುದೇ ಯಾತ್ರೆ ಕೇವಲ ರಸ್ತೆ ಅಳೆಯಲು ಅಥವಾ ಪಿಕ್ನಿಕ್‌ಗಾಗಿ ಅಥವಾ ಕಸರತ್ತು ಮಾಡಲು ಆಗಿರುವುದಿಲ್ಲ. ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯ ತನಕ ಎಲ್ಲಾ ಯಾತ್ರೆಗಳು ಶರೀರವನ್ನು ದಂಡಿಸುವುದಕ್ಕಿಂತ ಹೆಚ್ಚಾಗಿ ವಿಚಾರದ ಹಾಗೂ ಮಾನಸ ಯಾತ್ರೆಗಳಾಗಿವೆ. ಶರೀರದ ಚಲನೆಯು ದೇಶ ಮತ್ತು ಸಮಾಜವನ್ನು ಅಲುಗಾಡಿಸುವ ಮಾಧ್ಯಮವಾಗಿರುತ್ತದೆ. ಭಾರತ ಜೋಡೊ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಇದು ಶಾರೀರಿಕ ತಪಸ್ಸಿನ ಮುಖಾಂತರ ವೈಚಾರಿಕ ಮಂಥನ ಹಾಗೂ ಮನಸ್ಸಿನ ಸಾಧನದ ಯಾತ್ರೆಯಾಗಿದೆ.

ಈ ಯಾತ್ರೆಯ ಶಾರೀರಿಕ ತಪಸ್ಸಿನ ಬಗೆ ಅರ್ಥಮಾಡಿಕೊಳ್ಳಲು ದೇಶಕ್ಕೆ ಇನ್ನೂ ಸಮಯ ಹಿಡಿಯಲಿದೆ. ಜನತೆಗೆ ರಾಹುಲ್ ಗಾಂಧಿಯ ಟಿ-ಶರ್ಟ್ ಅಂತೂ ಕಾಣಿಸಿತು, ಆದರೆ ಈ ಸಂಪೂರ್ಣ ಪರಿಶ್ರಮದ ಹಿಂದೆ ಲಕ್ಷಾಂತರ ಜನರ ತಪಸ್ಸು ಇನ್ನೂ ಕಣ್ಣಿಗೆ ಬಿದ್ದಿಲ್ಲ. ಪ್ರತಿ ದಿನ ಸುಮಾರು 20ರಿಂದ 25 ಕಿಲೋಮೀಟರ್ ಕಾಲ್ನಡಿಗೆ, ಎಲ್ಲಾ ರೀತಿಯ ಹವಾಮಾನವನ್ನು ಎದುರಿಸುವುದು ಹಾಗೂ ಎಲ್ಲಾ ರೀತಿಯ ಮನಸ್ಥಿತಿ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವೆಲ್ಲವೂ ಸಣ್ಣ ವಿಷಯಗಳೇನಲ್ಲ. ಈ ಯಾತ್ರೆಯು ದೇಶದ ಎಲ್ಲಾ ರೀತಿಯ ಪ್ರದೇಶಗಳನ್ನು ಹಾಗೂ ಎಲ್ಲಾ ರೀತಿಯ ಹವಾಮಾನಗಳನ್ನು ನೋಡಿದೆ. ಸುಡು ಬಿಸಿಲು, ಮೈಕೊರೆಯುವ ಚಳಿ, ಧಾರಾಕಾರ ಮಳೆ ಹಾಗೂ ಜೋರಾದ ಹಿಮಪಾತ. ಈ ಯಾತ್ರೆಯ ಒಬ್ಬ ಸಹಯಾತ್ರಿಯಾಗಿ, ಪ್ರತಿಯೊಬ್ಬ ಯಾತ್ರಿಯ ಪಾದಗಳಲ್ಲಿ ಗುಳ್ಳೆಗಳು, ಎಲ್ಲಾ ರೀತಿಯ ರೋಗಗಳು, ಎಲುಬು ಕೊರೆಯುವ ಚಳಿಯ ನಡುವೆ ಉರುಳಿಹೋದ ಟೆಂಟ್‌ಗಳು- ಇವೆಲ್ಲವಕ್ಕೂ ನಾನು ಖುದ್ದು ಸಾಕ್ಷಿಯಾಗಿದ್ದೇನೆ. ಈ ದೈಹಿಕ ತಪಸ್ಸು, ಯಾತ್ರೆಯ ಸಂದೇಶವನ್ನು ಪ್ರಾಮಾಣಿಕವಾಗಿಸಿದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸದೇ ಇರುವ ಶ್ರದ್ಧೆಯನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿದೆ. ಪ್ರತಿದಿನ ಕಷ್ಟ ಸಹಿಸುವ ರೂಢಿಯು ಸ್ವತಃ ಯಾತ್ರಿಗಳನ್ನೂ ಒಳಗಿನಿಂದ ಬದಲಿಸಿದೆ, ಅವರನ್ನು ನಿಜವಾದ ಅರ್ಥದಲ್ಲಿ ಭಾರತ್ ಜೋಡೊದ ಸಂದೇಶವಾಹಕರನ್ನಾಗಿಸಿದೆ.

ಕಾಲ್ನಡಿಗೆಯ ಈ ಯಾತ್ರೆಯ ಜೊತೆಜೊತೆಗೇ ಒಂದು ವಿಚಾರದ ಯಾತ್ರೆಯೂ ನಡೆಯುತ್ತಲಿತ್ತು. ಸ್ವತಃ ರಾಹುಲ್ ಗಾಂಧಿ ಈ ವೈಚಾರಿಕ ಮಂಥನದ ಪ್ರಮುಖ ವಾಹಕ ಹಾಗೂ ಉದ್ಘೋಷಕರಾದರು. “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ”- ಈ ಮಾತಂತೂ ಒಂದು ಸಿನೆಮಾ ಡಯಲಾಗ್‌ನಷ್ಟು ಜನಪ್ರಿಯವಾಗಿದೆ. ಶ್ರೀನಗರದಲ್ಲಿ ಅವರ ಸಮಾರೋಪ ಮಾತುಗಳು ಈ ಡಯಲಾಗ್‌ನ ತಾತ್ವಿಕತೆಯನ್ನು ಬಹಿರಂಗಪಡಿಸುತ್ತದೆ. ಇದನ್ನು ಗಂಗಾ-ಜಮುನಾ ಶಿಷ್ಟಾಚಾರ ಅಂದುಕೊಳ್ಳಿ ಅಥವಾ ಕಶ್ಮೀರಿಯತ್ ಅನ್ನಿ. ಬೇಕಾದರೆ ಸಂತರ ಪರಂಪರೆಯಿಂದ ನೋಡಿ ಕಲಿತುಕೊಳ್ಳಿ ಅಥವಾ ಮಹಾತ್ಮಾ ಗಾಂಧಿಯ ಪರಂಪರೆಯಿಂದಾಗಲೂ- ನಮ್ಮ ಸಾಂಸ್ಕೃತಿಕ ಪರಂಪರೆ ಜೋಡಿಸುವುದಾಗಿದೆಯೇ ಹೊರತು ಒಡೆಯುವುದಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯ ’ಬಂಧುತ್ವ’ವು ಇದೇ ತತ್ವವನ್ನು ಬರಹರೂಪದಲ್ಲಿ ಇಳಿಸಿದೆ. ತನ್ನ ಅಜ್ಜಿ ಮತ್ತು ತಂದೆಯ ಹತ್ಯೆ ಆದಾಗ ಬಂದ ದೂರವಾಣಿ ಕರೆಗಳನ್ನು ಉಲ್ಲೇಖಿಸುತ್ತ ರಾಹುಲ್ ಗಾಂಧಿ ಮಾರ್ಮಿಕವಾಗಿ ಈ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ: ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ದೂರವಾಣಿ ಕರೆಗಳು ಬರದೇ ಇರಲಿ ಎಂಬುದಕ್ಕೇ ಈ ಯಾತ್ರೆ. ದ್ವೇಷ, ಹಿಂಸೆ ಹಾಗೂ ಆತಂಕದ ರಾಜಕೀಯದ ವಿರುದ್ಧದ ಆಳವಾದ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸ್ನೇಹದ ಈ ಭಾವನೆಯ ಜೊತೆಜೊತೆಗೆ ಭಾರತ ಜೋಡೊ ಯಾತ್ರೆಯು ಸಮಾನತೆಯ ತತ್ವವನ್ನೂ ಪದೇ ಪದೇ ಸ್ಪಷ್ಟಪಡಿಸಿದೆ. ದೀರ್ಘ ಸಮಯದ ನಂತರ ದೇಶದಲ್ಲಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದೆ. ಬಹುಶಃ ಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕನೊಬ್ಬ ಅದಾನಿ ಹಾಗೂ ಅಂಬಾನಿಯ ಹೆಸರನ್ನು ಎತ್ತುವ ಧೈರ್ಯ ತೋರಿಸಿದ್ದಾರೆ. ದಲಿತ, ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಯು ತೋರಿಕೆಯ ಮಾತು ಅಥವಾ ಜುಮ್ಲೆಬಾಜಿಯನ್ನು ಮೀರಿ ಕೆಲವು ಗಟ್ಟಿಯಾದ ಕಾಂಕ್ರೀಟ್ ಪ್ರಸ್ತಾಪಗಳಲ್ಲಿ ವ್ಯಕ್ತಗೊಂಡಿದೆ. ಮಹಿಳೆಯರ ಮತ್ತು ಲೈಂಗಿಕ ಭೇದಭಾವದ ಬಲಿಪಶುಗಳಾದ ಎಲ್ಲಾ ವರ್ಗಗಳ ನೋವು ಪ್ರತಿಯೊಂದು ಹೆಜ್ಜೆಯಲ್ಲಿ ದಾಖಲಿಸಲಾಗಿದೆ. ನೋವಿನಿಂದ ನೋವಿನ ಸಂಬಂಧ ಬೆಸೆದ ಈ ವಿಚಾರ ಯಾತ್ರೆಯು ಒಂದು ವೈಚಾರಿಕ ದಿಕ್ಕು ನೀಡುವ ಕೆಲಸವನ್ನು ಮಾಡಿದೆ. ಈ ದಿಕ್ಕು ಅತ್ಯಂತ ಹೊಸದು ಅಥವಾ ವಿಶಿಷ್ಟ ಅಂತೇನೂ ಅಲ್ಲ. ಇದು ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಧರ್ಮಕ್ಕೆ ಒಂದು ಹೊಸ ಸಂದರ್ಭ ತೋರಿಸಿದೆ.

ದೇಹ ಮತ್ತು ವಿಚಾರದ ಯಾತ್ರೆಯಿಂದಲೂ ಮುಂದೆ ಹೋಗಿ ಭಾರತ ಜೋಡೊ ಯಾತ್ರೆಯು ಆಧ್ಯಾತ್ಮಿಕ ಯಾತ್ರೆಯೂ ಆಗಿತ್ತು. ಪಾದಯಾತ್ರೆಯು ಮನಸ್ಸಿನ ಸಾಧನೆಯ ಅತ್ಯುತ್ತಮ ಸಹಜ ಮಾರ್ಗವಾಗಿದೆ. ಈ ಯಾತ್ರೆಯು ದೇಶದಲ್ಲಿ ಆವರಿಸಿದ ನಿರಾಸೆ, ಅಸಹಾಯಕತೆ ಮತ್ತು ಒಬ್ಬಂಟಿತನದ ಭಾವನೆಯನ್ನು ಒಡೆದುಹಾಕಿದೆ. ಸುಳ್ಳು ಮತ್ತು ದ್ವೇಷದ ವಿರುದ್ಧ ಶಸ್ತ್ರತ್ಯಾಗ ಮಾಡಿದ ನಾಗರಿಕರಿಗೆ ಇನ್ನೊಮ್ಮೆ ಧೈರ್ಯ ತುಂಬಿದೆ. “ಹೆದರಬೇಡಿ” ಎಂಬ ಸರಳ ಮಂತ್ರವು ಕೋಟ್ಯಂತರ ಭಾರತೀಯರ ಮನದಲ್ಲಿ ಶಕ್ತಿ ತುಂಬಿದೆ. ಕಾಶ್ಮೀರ ಕಣಿವೆಯಲ್ಲಿ ಸಿಕ್ಕ ಅಪಾರ ಸ್ನೇಹವು, ಈ ದೇಶದಲ್ಲಿ ಹೊಸ ಭರವಸೆಯ ಸಂಚಲನವನ್ನು ಸಾಧ್ಯವಾಗಿಸಿತು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕಲ್ಲದೇ ಭಾರತಕ್ಕೂ ಒಂದು ಒಳ್ಳೆಯ ಸುದ್ದಿ. ನಂಬಿಕೆ, ನಿರೀಕ್ಷೆಯ ಮೇಲೆಯೇ ಈ ಜಗತ್ತು ಉಳಿದುಕೊಂಡಿದೆ ಎನ್ನಲಾಗುತ್ತದೆ; ಯಾವುದೇ ಸಮಾಜಕ್ಕೆ ಈ ನಂಬಿಕೆ ಎಲ್ಲಕ್ಕಿಂತ ದೊಡ್ಡ ಬಂಡವಾಳ.

ನಂಬಿಕೆಯ/ಆಸೆಯ ದೀಪ ಬೆಳಗಿಸುವುದು ದೊಡ್ಡ ಕೆಲಸವೇ ಸರಿ. ಆದರೆ ಅದಕ್ಕಿಂತ ದೊಡ್ಡ ಕೆಲಸ ಆ ನಂಬಿಕೆಯನ್ನು ಜೀವಂತವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತ ಜೋಡೊದ ಈ ಅಭೂತಪೂರ್ವ ಯಶಸ್ಸು ಈ ಯಾತ್ರೆಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ಭಾರತೀಯರ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಿದೆ. ಈ ಯಾತ್ರೆಯು ಬಂಜರು ಭೂಮಿಯಲ್ಲಿ ನೇಗಿಲನ್ನು ಎಳೆದಿದೆ; ಆದರೆ ಈಗ ಜವಾಬ್ದಾರಿ ಇರುವುದು ಇದರಲ್ಲಿ ಬೀಜ ಬಿತ್ತುವುದು ಹಾಗೂ ನೀರು ಗೊಬ್ಬರ ಎರೆಯುವುದು. ದೇಶದ ಪ್ರತಿಯೊಂದು ಬಾಗಿಲ ಮೇಲೆ ಈ ವಿಚಾರ ತಟ್ಟುವವರೆಗೆ, ದೇಶದ ಪ್ರತಿಯೊಂದು ಹೃದಯವನ್ನು ಮುಟ್ಟುವ ತನಕ ಈ ಯಾತ್ರೆಯ ಉದ್ದೇಶ ಸಫಲವಾಗುವುದಿಲ್ಲ. ಯಾವತ್ತು ಪ್ರತಿಯೊಬ್ಬ ಭಾರತೀಯ ಸುಳ್ಳನ್ನು ಸುಳ್ಳು ಎಂದು ಹೇಳಲು ಕಲಿಯುವಳೋ/ನೋ ಹಾಗೂ ದ್ವೇಷವನ್ನು ತಿರಸ್ಕರಿಸುತ್ತಾಳೋ/ನೋ ಅಂದು ಭಾರತ ಜೋಡೊ ಯಾತ್ರೆ ಸಫಲವಾಗುವುದು. ಈ ನಿಟ್ಟಿನಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಭಾರತವನ್ನು ತನ್ನ ಸ್ವಧರ್ಮದೊಂದಿಗೆ ಪುನಃ ಜೋಡಿಸುವ ಯಾತ್ರೆಯನ್ನು ಪ್ರಾರಂಭಿಸಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...