Homeಮುಖಪುಟದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

ದೈಹಿಕ ತಪಸ್ಸು, ಮನದ ಸಾಧನೆ ಹಾಗೂ ವೈಚಾರಿಕ ಮಂಥನದ ಯಾತ್ರೆ

- Advertisement -
- Advertisement -

ಐದು ತಿಂಗಳವರೆಗೆ ದೇಶದ ರಸ್ತೆಗಳಲ್ಲಿ 3700 ಕಿಲೊಮೀಟರ್ ಅಳೆದು ಈ ಭಾರತ್ ಜೋಡೊ ಯಾತ್ರೆ ಸಾಧಿಸುವುದಾದರೂ ಏನು? 7ನೆಯ ಸೆಪ್ಟೆಂಬರ್‌ನಂದು ಕನ್ಯಾಕುಮಾರಿಯಿಂದ ಈ ಯಾತ್ರೆ ಶುರುವಾದಾಗ ಈ ಪ್ರಶ್ನೆ ಎಲ್ಲಾ ಯಾತ್ರಿಗಳ ಎದುರಿಗೆ ಕಾಣಿಸಿಕೊಂಡಿತ್ತು. ಆದರೆ ಗಾಂಧೀಜಿಯ ಪುಣ್ಯತಿಥಿಯ ದಿನದಂದು, ಜೋರಾಗಿ ಸುರಿಯುತ್ತಿರುವ ಹಿಮದ ನಡುವೆಯೇ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯವಾದಾಗ ಅದಕ್ಕೆ ಉತ್ತರ ಸ್ಪಷ್ಟವಾಗಿತ್ತು.

ನಮ್ಮ ಪರಂಪರೆಯಲ್ಲಿ ಯಾವುದೇ ಯಾತ್ರೆ ಕೇವಲ ರಸ್ತೆ ಅಳೆಯಲು ಅಥವಾ ಪಿಕ್ನಿಕ್‌ಗಾಗಿ ಅಥವಾ ಕಸರತ್ತು ಮಾಡಲು ಆಗಿರುವುದಿಲ್ಲ. ಗೌತಮ ಬುದ್ಧನಿಂದ ಹಿಡಿದು ಮಹಾತ್ಮ ಗಾಂಧಿಯ ತನಕ ಎಲ್ಲಾ ಯಾತ್ರೆಗಳು ಶರೀರವನ್ನು ದಂಡಿಸುವುದಕ್ಕಿಂತ ಹೆಚ್ಚಾಗಿ ವಿಚಾರದ ಹಾಗೂ ಮಾನಸ ಯಾತ್ರೆಗಳಾಗಿವೆ. ಶರೀರದ ಚಲನೆಯು ದೇಶ ಮತ್ತು ಸಮಾಜವನ್ನು ಅಲುಗಾಡಿಸುವ ಮಾಧ್ಯಮವಾಗಿರುತ್ತದೆ. ಭಾರತ ಜೋಡೊ ಯಾತ್ರೆಯ ಉದ್ದೇಶವೂ ಇದೇ ಆಗಿತ್ತು. ಇದು ಶಾರೀರಿಕ ತಪಸ್ಸಿನ ಮುಖಾಂತರ ವೈಚಾರಿಕ ಮಂಥನ ಹಾಗೂ ಮನಸ್ಸಿನ ಸಾಧನದ ಯಾತ್ರೆಯಾಗಿದೆ.

ಈ ಯಾತ್ರೆಯ ಶಾರೀರಿಕ ತಪಸ್ಸಿನ ಬಗೆ ಅರ್ಥಮಾಡಿಕೊಳ್ಳಲು ದೇಶಕ್ಕೆ ಇನ್ನೂ ಸಮಯ ಹಿಡಿಯಲಿದೆ. ಜನತೆಗೆ ರಾಹುಲ್ ಗಾಂಧಿಯ ಟಿ-ಶರ್ಟ್ ಅಂತೂ ಕಾಣಿಸಿತು, ಆದರೆ ಈ ಸಂಪೂರ್ಣ ಪರಿಶ್ರಮದ ಹಿಂದೆ ಲಕ್ಷಾಂತರ ಜನರ ತಪಸ್ಸು ಇನ್ನೂ ಕಣ್ಣಿಗೆ ಬಿದ್ದಿಲ್ಲ. ಪ್ರತಿ ದಿನ ಸುಮಾರು 20ರಿಂದ 25 ಕಿಲೋಮೀಟರ್ ಕಾಲ್ನಡಿಗೆ, ಎಲ್ಲಾ ರೀತಿಯ ಹವಾಮಾನವನ್ನು ಎದುರಿಸುವುದು ಹಾಗೂ ಎಲ್ಲಾ ರೀತಿಯ ಮನಸ್ಥಿತಿ ಮತ್ತು ಸನ್ನಿವೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು, ಇವೆಲ್ಲವೂ ಸಣ್ಣ ವಿಷಯಗಳೇನಲ್ಲ. ಈ ಯಾತ್ರೆಯು ದೇಶದ ಎಲ್ಲಾ ರೀತಿಯ ಪ್ರದೇಶಗಳನ್ನು ಹಾಗೂ ಎಲ್ಲಾ ರೀತಿಯ ಹವಾಮಾನಗಳನ್ನು ನೋಡಿದೆ. ಸುಡು ಬಿಸಿಲು, ಮೈಕೊರೆಯುವ ಚಳಿ, ಧಾರಾಕಾರ ಮಳೆ ಹಾಗೂ ಜೋರಾದ ಹಿಮಪಾತ. ಈ ಯಾತ್ರೆಯ ಒಬ್ಬ ಸಹಯಾತ್ರಿಯಾಗಿ, ಪ್ರತಿಯೊಬ್ಬ ಯಾತ್ರಿಯ ಪಾದಗಳಲ್ಲಿ ಗುಳ್ಳೆಗಳು, ಎಲ್ಲಾ ರೀತಿಯ ರೋಗಗಳು, ಎಲುಬು ಕೊರೆಯುವ ಚಳಿಯ ನಡುವೆ ಉರುಳಿಹೋದ ಟೆಂಟ್‌ಗಳು- ಇವೆಲ್ಲವಕ್ಕೂ ನಾನು ಖುದ್ದು ಸಾಕ್ಷಿಯಾಗಿದ್ದೇನೆ. ಈ ದೈಹಿಕ ತಪಸ್ಸು, ಯಾತ್ರೆಯ ಸಂದೇಶವನ್ನು ಪ್ರಾಮಾಣಿಕವಾಗಿಸಿದೆ, ರಾಜಕೀಯ ಕಾರ್ಯಕ್ರಮಗಳಲ್ಲಿ ಕಾಣಿಸದೇ ಇರುವ ಶ್ರದ್ಧೆಯನ್ನು ಸಾಮಾನ್ಯ ಜನರ ಮನಸ್ಸಿನಲ್ಲಿ ತುಂಬಿದೆ. ಪ್ರತಿದಿನ ಕಷ್ಟ ಸಹಿಸುವ ರೂಢಿಯು ಸ್ವತಃ ಯಾತ್ರಿಗಳನ್ನೂ ಒಳಗಿನಿಂದ ಬದಲಿಸಿದೆ, ಅವರನ್ನು ನಿಜವಾದ ಅರ್ಥದಲ್ಲಿ ಭಾರತ್ ಜೋಡೊದ ಸಂದೇಶವಾಹಕರನ್ನಾಗಿಸಿದೆ.

ಕಾಲ್ನಡಿಗೆಯ ಈ ಯಾತ್ರೆಯ ಜೊತೆಜೊತೆಗೇ ಒಂದು ವಿಚಾರದ ಯಾತ್ರೆಯೂ ನಡೆಯುತ್ತಲಿತ್ತು. ಸ್ವತಃ ರಾಹುಲ್ ಗಾಂಧಿ ಈ ವೈಚಾರಿಕ ಮಂಥನದ ಪ್ರಮುಖ ವಾಹಕ ಹಾಗೂ ಉದ್ಘೋಷಕರಾದರು. “ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯಲು ಬಂದಿದ್ದೇನೆ”- ಈ ಮಾತಂತೂ ಒಂದು ಸಿನೆಮಾ ಡಯಲಾಗ್‌ನಷ್ಟು ಜನಪ್ರಿಯವಾಗಿದೆ. ಶ್ರೀನಗರದಲ್ಲಿ ಅವರ ಸಮಾರೋಪ ಮಾತುಗಳು ಈ ಡಯಲಾಗ್‌ನ ತಾತ್ವಿಕತೆಯನ್ನು ಬಹಿರಂಗಪಡಿಸುತ್ತದೆ. ಇದನ್ನು ಗಂಗಾ-ಜಮುನಾ ಶಿಷ್ಟಾಚಾರ ಅಂದುಕೊಳ್ಳಿ ಅಥವಾ ಕಶ್ಮೀರಿಯತ್ ಅನ್ನಿ. ಬೇಕಾದರೆ ಸಂತರ ಪರಂಪರೆಯಿಂದ ನೋಡಿ ಕಲಿತುಕೊಳ್ಳಿ ಅಥವಾ ಮಹಾತ್ಮಾ ಗಾಂಧಿಯ ಪರಂಪರೆಯಿಂದಾಗಲೂ- ನಮ್ಮ ಸಾಂಸ್ಕೃತಿಕ ಪರಂಪರೆ ಜೋಡಿಸುವುದಾಗಿದೆಯೇ ಹೊರತು ಒಡೆಯುವುದಲ್ಲ. ನಮ್ಮ ಸಂವಿಧಾನದ ಪ್ರಸ್ತಾವನೆಯ ’ಬಂಧುತ್ವ’ವು ಇದೇ ತತ್ವವನ್ನು ಬರಹರೂಪದಲ್ಲಿ ಇಳಿಸಿದೆ. ತನ್ನ ಅಜ್ಜಿ ಮತ್ತು ತಂದೆಯ ಹತ್ಯೆ ಆದಾಗ ಬಂದ ದೂರವಾಣಿ ಕರೆಗಳನ್ನು ಉಲ್ಲೇಖಿಸುತ್ತ ರಾಹುಲ್ ಗಾಂಧಿ ಮಾರ್ಮಿಕವಾಗಿ ಈ ಯಾತ್ರೆಯ ಉದ್ದೇಶವನ್ನು ತಿಳಿಸಿದ್ದಾರೆ: ಇನ್ನು ಮುಂದೆ ಯಾವುದೇ ಮಗುವಿಗೆ ಇಂತಹ ದೂರವಾಣಿ ಕರೆಗಳು ಬರದೇ ಇರಲಿ ಎಂಬುದಕ್ಕೇ ಈ ಯಾತ್ರೆ. ದ್ವೇಷ, ಹಿಂಸೆ ಹಾಗೂ ಆತಂಕದ ರಾಜಕೀಯದ ವಿರುದ್ಧದ ಆಳವಾದ ಹೇಳಿಕೆ ಇದಾಗಿದೆ.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆಯಿಂದ ಕಾಂಗ್ರೆಸ್‌ಗೆ ಲಾಭವಾಗಲಿದೆಯೇ?: ಪಾದಯಾತ್ರೆಗಳ ಇತಿಹಾಸ ಏನು ಹೇಳುತ್ತದೆ?

ಸ್ನೇಹದ ಈ ಭಾವನೆಯ ಜೊತೆಜೊತೆಗೆ ಭಾರತ ಜೋಡೊ ಯಾತ್ರೆಯು ಸಮಾನತೆಯ ತತ್ವವನ್ನೂ ಪದೇ ಪದೇ ಸ್ಪಷ್ಟಪಡಿಸಿದೆ. ದೀರ್ಘ ಸಮಯದ ನಂತರ ದೇಶದಲ್ಲಿ ಹೆಚ್ಚುತ್ತಿರುವ ವಿಷಮತೆಯ ಬಗ್ಗೆ ರಾಜಕೀಯ ಮುಖ್ಯವಾಹಿನಿಯಲ್ಲಿ ಕಾಳಜಿ ವ್ಯಕ್ತಪಡಿಸಲಾಗಿದೆ. ಬಹುಶಃ ಮೊದಲ ಬಾರಿ ಒಂದು ದೊಡ್ಡ ಪಕ್ಷದ ನಾಯಕನೊಬ್ಬ ಅದಾನಿ ಹಾಗೂ ಅಂಬಾನಿಯ ಹೆಸರನ್ನು ಎತ್ತುವ ಧೈರ್ಯ ತೋರಿಸಿದ್ದಾರೆ. ದಲಿತ, ಆದಿವಾಸಿ ಹಾಗೂ ಹಿಂದುಳಿದ ಸಮುದಾಯಗಳಿಗೆ ನ್ಯಾಯ ಒದಗಿಸುವ ಕಾಳಜಿಯು ತೋರಿಕೆಯ ಮಾತು ಅಥವಾ ಜುಮ್ಲೆಬಾಜಿಯನ್ನು ಮೀರಿ ಕೆಲವು ಗಟ್ಟಿಯಾದ ಕಾಂಕ್ರೀಟ್ ಪ್ರಸ್ತಾಪಗಳಲ್ಲಿ ವ್ಯಕ್ತಗೊಂಡಿದೆ. ಮಹಿಳೆಯರ ಮತ್ತು ಲೈಂಗಿಕ ಭೇದಭಾವದ ಬಲಿಪಶುಗಳಾದ ಎಲ್ಲಾ ವರ್ಗಗಳ ನೋವು ಪ್ರತಿಯೊಂದು ಹೆಜ್ಜೆಯಲ್ಲಿ ದಾಖಲಿಸಲಾಗಿದೆ. ನೋವಿನಿಂದ ನೋವಿನ ಸಂಬಂಧ ಬೆಸೆದ ಈ ವಿಚಾರ ಯಾತ್ರೆಯು ಒಂದು ವೈಚಾರಿಕ ದಿಕ್ಕು ನೀಡುವ ಕೆಲಸವನ್ನು ಮಾಡಿದೆ. ಈ ದಿಕ್ಕು ಅತ್ಯಂತ ಹೊಸದು ಅಥವಾ ವಿಶಿಷ್ಟ ಅಂತೇನೂ ಅಲ್ಲ. ಇದು ನಮ್ಮ ಸಂವಿಧಾನದಲ್ಲಿ ಅಂತರ್ಗತವಾದ ಸ್ವಧರ್ಮಕ್ಕೆ ಒಂದು ಹೊಸ ಸಂದರ್ಭ ತೋರಿಸಿದೆ.

ದೇಹ ಮತ್ತು ವಿಚಾರದ ಯಾತ್ರೆಯಿಂದಲೂ ಮುಂದೆ ಹೋಗಿ ಭಾರತ ಜೋಡೊ ಯಾತ್ರೆಯು ಆಧ್ಯಾತ್ಮಿಕ ಯಾತ್ರೆಯೂ ಆಗಿತ್ತು. ಪಾದಯಾತ್ರೆಯು ಮನಸ್ಸಿನ ಸಾಧನೆಯ ಅತ್ಯುತ್ತಮ ಸಹಜ ಮಾರ್ಗವಾಗಿದೆ. ಈ ಯಾತ್ರೆಯು ದೇಶದಲ್ಲಿ ಆವರಿಸಿದ ನಿರಾಸೆ, ಅಸಹಾಯಕತೆ ಮತ್ತು ಒಬ್ಬಂಟಿತನದ ಭಾವನೆಯನ್ನು ಒಡೆದುಹಾಕಿದೆ. ಸುಳ್ಳು ಮತ್ತು ದ್ವೇಷದ ವಿರುದ್ಧ ಶಸ್ತ್ರತ್ಯಾಗ ಮಾಡಿದ ನಾಗರಿಕರಿಗೆ ಇನ್ನೊಮ್ಮೆ ಧೈರ್ಯ ತುಂಬಿದೆ. “ಹೆದರಬೇಡಿ” ಎಂಬ ಸರಳ ಮಂತ್ರವು ಕೋಟ್ಯಂತರ ಭಾರತೀಯರ ಮನದಲ್ಲಿ ಶಕ್ತಿ ತುಂಬಿದೆ. ಕಾಶ್ಮೀರ ಕಣಿವೆಯಲ್ಲಿ ಸಿಕ್ಕ ಅಪಾರ ಸ್ನೇಹವು, ಈ ದೇಶದಲ್ಲಿ ಹೊಸ ಭರವಸೆಯ ಸಂಚಲನವನ್ನು ಸಾಧ್ಯವಾಗಿಸಿತು ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಇದು ಕೇವಲ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಪಕ್ಷಕ್ಕಲ್ಲದೇ ಭಾರತಕ್ಕೂ ಒಂದು ಒಳ್ಳೆಯ ಸುದ್ದಿ. ನಂಬಿಕೆ, ನಿರೀಕ್ಷೆಯ ಮೇಲೆಯೇ ಈ ಜಗತ್ತು ಉಳಿದುಕೊಂಡಿದೆ ಎನ್ನಲಾಗುತ್ತದೆ; ಯಾವುದೇ ಸಮಾಜಕ್ಕೆ ಈ ನಂಬಿಕೆ ಎಲ್ಲಕ್ಕಿಂತ ದೊಡ್ಡ ಬಂಡವಾಳ.

ನಂಬಿಕೆಯ/ಆಸೆಯ ದೀಪ ಬೆಳಗಿಸುವುದು ದೊಡ್ಡ ಕೆಲಸವೇ ಸರಿ. ಆದರೆ ಅದಕ್ಕಿಂತ ದೊಡ್ಡ ಕೆಲಸ ಆ ನಂಬಿಕೆಯನ್ನು ಜೀವಂತವಾಗಿಟ್ಟುಕೊಳ್ಳುವುದು. ಈ ನಿಟ್ಟಿನಲ್ಲಿ ಭಾರತ ಜೋಡೊದ ಈ ಅಭೂತಪೂರ್ವ ಯಶಸ್ಸು ಈ ಯಾತ್ರೆಯೊಂದಿಗೆ ಸಂಬಂಧಿಸಿದ ಪ್ರತಿಯೊಬ್ಬ ಭಾರತೀಯರ ಹೆಗಲಿನ ಮೇಲೆ ದೊಡ್ಡ ಜವಾಬ್ದಾರಿಯನ್ನು ಹಾಕಿದೆ. ಈ ಯಾತ್ರೆಯು ಬಂಜರು ಭೂಮಿಯಲ್ಲಿ ನೇಗಿಲನ್ನು ಎಳೆದಿದೆ; ಆದರೆ ಈಗ ಜವಾಬ್ದಾರಿ ಇರುವುದು ಇದರಲ್ಲಿ ಬೀಜ ಬಿತ್ತುವುದು ಹಾಗೂ ನೀರು ಗೊಬ್ಬರ ಎರೆಯುವುದು. ದೇಶದ ಪ್ರತಿಯೊಂದು ಬಾಗಿಲ ಮೇಲೆ ಈ ವಿಚಾರ ತಟ್ಟುವವರೆಗೆ, ದೇಶದ ಪ್ರತಿಯೊಂದು ಹೃದಯವನ್ನು ಮುಟ್ಟುವ ತನಕ ಈ ಯಾತ್ರೆಯ ಉದ್ದೇಶ ಸಫಲವಾಗುವುದಿಲ್ಲ. ಯಾವತ್ತು ಪ್ರತಿಯೊಬ್ಬ ಭಾರತೀಯ ಸುಳ್ಳನ್ನು ಸುಳ್ಳು ಎಂದು ಹೇಳಲು ಕಲಿಯುವಳೋ/ನೋ ಹಾಗೂ ದ್ವೇಷವನ್ನು ತಿರಸ್ಕರಿಸುತ್ತಾಳೋ/ನೋ ಅಂದು ಭಾರತ ಜೋಡೊ ಯಾತ್ರೆ ಸಫಲವಾಗುವುದು. ಈ ನಿಟ್ಟಿನಲ್ಲಿ ಶ್ರೀನಗರದಲ್ಲಿ ಈ ಯಾತ್ರೆ ಮುಕ್ತಾಯಗೊಂಡಿಲ್ಲ, ಬದಲಿಗೆ ನಿಜವಾದ ಅರ್ಥದಲ್ಲಿ ಭಾರತವನ್ನು ತನ್ನ ಸ್ವಧರ್ಮದೊಂದಿಗೆ ಪುನಃ ಜೋಡಿಸುವ ಯಾತ್ರೆಯನ್ನು ಪ್ರಾರಂಭಿಸಿದೆ.

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು. ಸ್ವರಾಜ್ ಇಂಡಿಯಾದ ಸಂಸ್ಥಾಪಕರು. ಪ್ರಸ್ತುತ ರಾಜಕೀಯ ಸಂಗತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...