Homeಮುಖಪುಟಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ...

ಬೀದರ್ ಮಕ್ಕಳ ನಾಟಕ ಪ್ರಕರಣ: ಜನರೆದುರು ಮತ್ತಷ್ಟು ಬೆತ್ತಲಾದ ಸರ್ಕಾರ…

ಕರ್ನಾಟಕದ ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ

- Advertisement -
- Advertisement -

ಪ್ರಭುತ್ವದ ತಪ್ಪುಗಳ ಬಗ್ಗೆ ಮಾತನಾಡುವವರನ್ನು ಅಮಾನವೀಯವಾಗಿ ದಮನಿಸುವುದು ಹಿಂದಿನಿಂದಲೂ ನಡೆದುಬಂದಿರುವ ಪದ್ದತಿ. ಆ ಪ್ರಭುತ್ವಕ್ಕೆ ಇದರಿಂದ ತಾನೆಷ್ಟು ಬೆತ್ತಲಾಗುತ್ತೇನೆ ಎಂಬ ಅರಿವು ಸಹ ಇಲ್ಲದೇ ಅದು ಕ್ರೂರವಾಗಿ ವರ್ತಿಸುತ್ತದೆ. ಮೈಸೂರಿನ ಫ್ರಿ ಕಾಶ್ಮೀರ್ ವಿವಾದ, ಕೊಪ್ಪಳದ ಸಿರಾಜ್‌ರವರ ಕವನದ ಮೇಲೆ ಕೇಸು ಮತ್ತು ಬೀದರ್‌ನ ಶಾಹಿನ್ ಅನುದಾನಿತ ಶಾಲೆಯ ಸಿಎಎ ವಿರುದ್ಧದ ನಾಟಕಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ಪ್ರಭುತ್ವದ ದಮನಕ್ಕೆ ಹಿಡಿದ ಕನ್ನಡಿಗಳಾಗಿವೆ.

ಒಂದು ಪ್ಲೆಕಾರ್ಡ್, ಒಂದು ಕವನ, ಒಂದು ನಾಟಕಕ್ಕೆ ಬಲಪಂಥೀಯ ಸರ್ಕಾರ ಎಷ್ಟು ಬೆದರುತ್ತದೆ ಎಂಬುದನ್ನು ನಾವಿಲ್ಲಿ ನೋಡಬಹುದಾಗಿದೆ. ತನ್ನ ಹುಳುಕುಗಳನ್ನು ಮುಚ್ಚಿಕೊಳ್ಳಲು ಅದು ಎಂತಹ ಹೀನ ಕೆಲಸಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ.

ಬೀದರ್‌ನ ಘಟನೆ ಕೇಳಿದರಂತೂ ನಮ್ಮನ್ನು ಒಂದು ಕ್ಷಣ ಅವಾಕ್ಕಾಗಿಸುತ್ತದೆ. ಸಿಎಎ ವಿರುದ್ಧದ ನಾಟಕದಲ್ಲಿ 5ನೇ ತರಗತಿಯ ಮಗುವೊಬ್ಬಳು ಆಕ್ಷೆಪಾರ್ಯ ಸಂಭಾಷಣೆ ಬಳಸಿದ್ದನ್ನೇ ನೆಪವಾಗಿಟ್ಟುಕೊಂಡು ಆಕೆಯ ತಾಯಿಯನ್ನು ಮತ್ತು ಆ ಶಾಲೆಯ ಮುಖ್ಯೋಪಾಧ್ಯಾಯಿನಿಯನ್ನು ಪೊಲೀಸರು ಒಂದು ವಾರದಿಂದ ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ತಂದೆಯಿಲ್ಲದ, ಕೇವಲ ತಾಯಿಯನ್ನೇ ನೆಚ್ಚಿಕೊಂಡಿದ್ದ 11 ವರ್ಷದ ಆ ಮಗು ಈ ಪ್ರಭುತ್ವದ ಕಣ್ಣಿಗೆ ದೇಶದ್ರೋಹಿಯಾಗಿ ಕಾಣುತ್ತದೆಯೆಂದರೆ ಅದರ ಸಿದ್ಧಾಂತ ಎಷ್ಟು ಟೊಳ್ಳು ಅಲ್ಲವೇ?

ನಡೆದಿದ್ದೇನು?

ಜನವರಿ 21ರಂದು ಬೀದರ್‌ನ ಅನುದಾನಿತ ಶಾಹಿನ್ ಶಾಲೆಯಲ್ಲಿ “ಸಿಎಎ ವಿರುದ್ಧ ಮಕ್ಕಳ ನಾಟಕವೊಂದು” ನಡೆದಿದೆ. ನಾಟಕದಲ್ಲಿ “ದಾಖಲೆ ಕೇಳುವವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು” ಎಂಬ ಮಾತುಗಳನ್ನು 5ನೇ ತರಗತಿಯ ಮಗು ಹೇಳಿದೆ. ಅಷ್ಟಕ್ಕೆ ಅದನ್ನು ಕೇಳಿದ ಎಬಿವಿಪಿ ಕಾರ್ಯಕರ್ತನಿಗೆ ದೇಶವೇ ಕುಸಿದುಹೋಯಿತು ಅನ್ನಿಸಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಕೊಟ್ಟಿದ್ದಾನೆ. ಅದಕ್ಕಾಗಿಯೇ ಕಾಯುತ್ತಿದ್ದರೋ ಎನ್ನುವ ರೀತಿಯಲ್ಲಿ ಪೊಲೀಸರು ದಿಢೀರ್ ಶಾಲೆಗೆ ನುಗ್ಗಿದ್ದಲ್ಲದೇ, ಎಳೆಯ ಮಕ್ಕಳನ್ನು ಕೂರಿಸಿಕೊಂಡು ತಾಸುಗಟ್ಟಲೇ ವಿಚಾರಣೆ ನಡೆಸಿದ್ದಾರೆ. ಅದರಲ್ಲಿ ಅವರು ಕೇಳಿದ ಪ್ರಶ್ನೆಗಳೆಂದರೆ ಆ ಡೈಲಾಗ್ ಅನ್ನು ಯಾರು ಹೇಳಿಕೊಟ್ಟರು? ನಾಟಕದ ಸ್ಕ್ರಿಪ್ಟ್ ಬರೆದುಕೊಟ್ಟ ಶಿಕ್ಷಕರು ಯಾರು?.. ಇಷ್ಟಕ್ಕೆ ಆ ಮಕ್ಕಳು ನಡುಗಿಹೋಗಿದ್ದಾರೆ.

ಪೊಲೀಸರ ಈ ದುರ್ವತನೆಯ ಫೋಟೊಗಳು ವೈರಲ್ ಆಗಿ ಸಾವಿರಾರು ಜನ ಈ ಕೃತ್ಯವನ್ನು ಖಂಡಿಸಿದ್ದಾರೆ. ಆದರೆ ತಪ್ಪಿನ ಮೇಲೆ ತಪ್ಪು ಮಾಡಿದ ಪೊಲೀಸರು ಜನವರಿ 30ರಂದು 5ನೇ ತರಗತಿಯ ಮಗುವಿನ ತಾಯಿ ನಾಜುಬುನ್ನೀಸ ಮತ್ತು ಶಾಲೆಯ ಮುಖ್ಯೋಪಾಧ್ಯಯಿನಿ ಫರಿದಾ ಬೇಗಂರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಿದ್ದಾರೆ. ವಾರ ಕಳೆದರೂ ಅವರಿಬ್ಬರಿಗೂ ಬೇಲ್ ಸಿಕ್ಕಿಲ್ಲ. ಏಕೆಂದರೆ ಜಡ್ಜ್ ರಜೆಯಲ್ಲಿದ್ದಾರೆ.. ಕಾಕತಾಳಿಯವೆಂದರೆ ದೇಶದ ನ್ಯಾಯವೂ ಕೂಡ ರಜೆಯಲ್ಲಿದೆ..!

ನೋವಿನ ಕಥೆ

ಬಂಧನದಲ್ಲಿರುವ ನಾಜುಬುನ್ನೀಸ ಎಂಬ ಮಹಿಳೆಯ ಗಂಡ ತೀರಿಕೊಂಡಿದ್ದಾನೆ. ಚಿಕ್ಕಮಗುವಿನೊಂದಿಗೆ ಬೀದರ್ ಜಿಲ್ಲೆಯ ಹಳ್ಳಿಯಲ್ಲಿ ವಾಸವಿದ್ದ ಆಕೆ, ಇದ್ದ ತುಂಡು ಭೂಮಿಯನ್ನು ಗೇಣಿಗೆ ಕೊಟ್ಟು ತನ್ನ ಮಗಳು ಚೆನ್ನಾಗಿ ಓದಬೇಕೆಂಬ ಅದಮ್ಯ ಆಸೆಯಿಂದ ಎರಡು ತಿಂಗಳ ಹಿಂದೆ ತಾನೇ ಬೀದರ್ ನಗರಕ್ಕೆ ವಲಸೆ ಬಂದಿದ್ದಾಳೆ. ಆದರೆ ತನ್ನದಲ್ಲದ ತಪ್ಪಿಗೆ ಆಕೆ ದುರಂತ ಸ್ಥಿತಿಯಲ್ಲಿ ಜೈಲಿನಲ್ಲಿದ್ದರೆ, ಆಕೆಯ ಮಗಳು ತಾನು ಬಾಡಿಗೆಗೆ ಇದ್ದ ಮನೆಯ ಯಜಮಾನರ ಮನೆಯಲ್ಲಿ ಆಶ್ರಯ ಪಡೆದಿದ್ದು, ತನ್ನ ತಾಯಿಯ ಆಗಮನಕ್ಕಾಗಿ ಕಣ್ಣು ಬಿಟ್ಟಿಕೊಂಡು ಕಾಯುತ್ತಿದ್ದಾಳೆ..

ಆಕೆಯ ತಾಯಿ ಈಗಾಗಲೇ ಮಾಧ್ಯಮಗಳ ಎದುರು ತನ್ನ ಮಗಳು ಆಡಿದ ಮಾತುಗಳು ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಅವಲತ್ತುಕೊಂಡಿದ್ದಾಳೆ. ಆದರೆ ಪೊಲೀಸರು ಮಾತ್ರ ನಾಟಕದ ಡೈಲಾಗ್‌ಗಳು ಸಿಎಎ, ಎನ್‌ಆರ್‌ಸಿ ವಿರುದ್ಧ ಸುಳ್ಳು ಹರಡುತ್ತಿವೆ ಮತ್ತು ಪ್ರಧಾನಿ ನರೆಂದ್ರ ಮೋದಿಯವರಿಗೆ ಅವಮಾನಿಸುವಂತಿವೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ಅಷ್ಟು ಮಾತ್ರವಲ್ಲ ದೂರು ದಾಖಲಾದ ನಂತರ ಇದುವರೆಗೂ ನಾಲ್ಕು ಬಾರಿ ಶಾಹಿನ್ ಶಾಲೆಗೆ ಭೇಟಿ ಕೊಟ್ಟಿದ್ದಲ್ಲದೇ ಪದೇ ಪದೇ ವಿಚಾರಣೆ ನೆಪದಲ್ಲಿ ವಿದ್ಯಾರ್ಥಿಗಳಿಗೆ ಕಿರುಕುಳಕೊಟ್ಟಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ದೂರಿದೆ. ಪೊಲೀಸರ ಭಯಕ್ಕೆ ಹಲವು ವಿದ್ಯಾರ್ಥಿಗಳು ಶಾಲೆಗೆ ಬರುವುದನ್ನೇ ಬಿಟ್ಟಿದ್ದಾರೆ.

ನ್ಯಾಯ ಎಲ್ಲಿದೆ?

ಸರ್ಕಾರ ಒಂದು ಕಡೆ ಎನ್‌ಸಿಆರ್ ಮಾಡುವುದಿಲ್ಲ ಎನ್ನುತ್ತಿದೆ. ಈ ಬಗ್ಗೆ ಪ್ರಧಾನಿ ಒಂದು ಹೇಳಿದರೆ, ಗೃಹಸಚಿವ ಅಮಿತ್ ಶಾ ಮತ್ತೊಂದು ಹೇಳುತ್ತಿದ್ದಾರೆ. ಎನ್‌ಪಿಆರ್‌ಗೂ ಎನ್‌ಆರ್‌ಸಿಗೂ ಸಂಬಂಧವಿದೆಯೆಂದು ಒಮ್ಮೆ, ಇಲ್ಲ ಎಂದು ಇನ್ನೊಮ್ಮೆ ಹೇಳುತ್ತಿದ್ದಾರೆ. ದಾಖಲೆ ತೋರಿಸಬೇಕಿಲ್ಲ ಎಂದು ಒಮ್ಮೆ, ತೋರಿಸಬೇಕೆಂದು ಒಮ್ಮೆ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಸಿಎಎ ಮತ್ತು ಎನ್‌ಆರ್‌ಸಿ ಕುರಿತು ಸುಳ್ಳು ಸುದ್ದಿ ಹರಡಿ ದಿಕ್ಕುತಪ್ಪಿಸುತ್ತಿರುವುದು ಸರ್ಕಾರವೇ ಆಗಿದೆ. ಇವರಿಗೆ ಯಾವ ಶಿಕ್ಷೆ ಕೊಡಬೇಕು? ದಾಖಲೆ ಕೇಳಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂಬುದು ದೇಶದ್ರೋಹವೇ? ಅದಕ್ಕೂ ಪ್ರಧಾನಿಗೂ ಏನು ಸಂಬಂಧ? ಒಟ್ಟಿನಲ್ಲಿ ಕರ್ನಾಟಕ ಪೊಲೀಸರು ಸಂಘಪರಿವಾರದ ಅಣತಿಯಂತೆ ನಡೆದುಕೊಳ್ಳುತ್ತಿರುವುದು ಕರ್ನಾಟಕದ ಜನರಿಗೆ ಮಾಡಿದ ಅವಮಾನವಾಗಿದೆ.

NRC or No NRC- – Who is Lying, Modi or Shah- – CAA-NRC Protests – The Wire

NRC or No NRC- – Who is Lying, Modi or Shah- – CAA-NRC Protests – The Wire

Posted by PEclub on Wednesday, December 25, 2019

ಬಿಜೆಪಿ ಮುಖಂಡರು ರಾಜ್ಯದಲ್ಲಿ ಮತ್ತು ದೇಶದಲ್ಲಿ ದಿನಕ್ಕೊಂದು ಕೋಮುಪ್ರಚೋದಿತ, ಶಾಂತಿ -ಸಾಮರಸ್ಯ ಹಾಳುಮಾಡುವ ಹೇಳಿಕೆ ಕೊಡುತ್ತಿದ್ದಾರೆ. ಸಿಎಎ ವಿರೋಧಿಸುವವರನ್ನು ಸೆದೆಬಡಿಯುತ್ತೇವೆ ಎಂದೂ, ಮಹಾತ್ಮ ಗಾಂಧಿ ಸ್ವಾತಂತ್ರ್ಯ ಹೋರಾಟ ಮಾಡದೇ ಹೆಸರು ಪಡೆಯುತ್ತಿದ್ದಾರೆ ಎಂದು ಬಹಿರಂಗವಾಗಿ ಕರ್ನಾಟಕದ ಸಂಸದ ಅನಂತ್‌ಕುಮಾರ್‌ಹೆಗಡೆ ಹೇಳಿದ್ದಾರೆ. ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಮುಸ್ಲಿಮರನ್ನು ಕೊಚ್ಚಿ ಹಾಕುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಚಿವ ಸಿ.ಟಿ ರವಿ ಕನ್ನಡಪರ ಸಂಘಟನೆಗಳನ್ನು ತುಕಡೆ ತುಕಡೆ ಗ್ಯಾಂಗ್ ಅನ್ನುತ್ತಾರೆ. ಗೋಧ್ರಾದಲ್ಲಿ ಮುಸ್ಲಿಮರಿಗೆ ಆದ ಗತಿಯೇ ನಿಮಗೂ ಆಗುತ್ತದೆ ಎಂದು ಬೆದರಿಕೆ ಹಾಕುತ್ತಾರೆ. ದೆಹಲಿಯಲ್ಲಿ ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎನ್ನುತ್ತಾರೆ. ಆದರೆ ಇವರ‍್ಯಾರ ಮೇಲೂ ಸಹ ಯಾವುದೇ ದೂರು ದಾಖಲಾಗುವುದಿಲ್ಲ.. ಪೊಲೀಸರು ಬಿಜೆಪಿಯವರ ಎದುರು ಇಲಿಗಳಂತೆಯೂ ಬಡ ಜನರ ಎದುರು ಹುಲಿಗಳಂತೆಯೂ ವರ್ತಿಸುತ್ತಿದ್ದಾರೆ.

ಶಾಹಿನ್ ಶಾಲೆಯ ಮೇಲೇಕೆ ಕೋಪ?

ಪೊಲೀಸರು ಪದೇ ಪದೇ ವಿಚಾರಣೆಯ ನೆಪದಲ್ಲಿ ಶಾಹಿನ್ ಶಾಲೆಗೆ ಭೇಟಿಕೊಡುವ ಮೂಲಕ ಆ ಶಾಲೆಯ ಬಗ್ಗೆ ಜನಸಾಮಾನ್ಯರಲ್ಲಿ ತಪ್ಪು ಅಭಿಪ್ರಾಯ ಬರುವಂತೆ ನಡೆದುಕೊಳ್ಳುತ್ತಿದ್ದಾರೆ. 9-10 ವರ್ಷದ ಮಕ್ಕಳಿಗೆ ಹಲವು ಪ್ರಶ್ನೆಗಳನ್ನು ಕೇಳಿ ಅವರಿಗು, ಅವರ ಪೋಷಕರಿಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಶಾಹಿನ್ ಸಂಸ್ಥೆಯು ಕಳೆದ 31 ವರ್ಷಗಳಿಂದ ದೇಶದ 8 ರಾಜ್ಯಗಳಲ್ಲಿ ಕೆಲಸ ಮಾಡುತ್ತಿದೆ. ಎಲ್ಲಾ ಧರ್ಮದ ಸುಮಾರು 16000 ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದು, ಕಳೆದ ವರ್ಷವೊಂದರಲ್ಲಿಯೇ 327 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಪಾಸಾಗಿ ವೈದ್ಯಕೀಯ ಸೀಟುಗಳನ್ನು ಪಡೆದಿದ್ದಾರೆ. ಬಡವರ ಪರವಾಗಿ ಇರುವ ಇಂತಹ ಸಂಸ್ಥೆಯ ಮೇಲೆ ಕಣ್ಣುಬಿದ್ದಿರುವ ದುರುಳರ ಪರವಾಗಿ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಆಡಳಿತ ಮಂಡಳಿ ದೂರಿದೆ.

ಒಟ್ಟಿನಲ್ಲಿ ಮುಂದಾಲೋಚನೆಯಿಲ್ಲದೇ ಸಿಎಎ ಕಾನೂನನ್ನು ತಂದ ಸರ್ಕಾರ, ಅದನ್ನು ಸಮರ್ಥಿಸಿಕೊಳ್ಳಲು ಕಂಡ ಕಂಡವರ ಮೇಲೆ ದೂರು ದಾಖಲಿಸಿ ಹೆದರಿಸುವ ನೀಚತನಕ್ಕೆ ಇಳಿದಿದೆ. ಅದಕ್ಕಾಗಿಯೇ ಅದು ಭಿತ್ತಿಪತ್ರಕ್ಕೆ, ಕವನಕ್ಕೆ, ನಾಟಕಕ್ಕೆ ಹೆದರುತ್ತಿದೆ. ಮೈಸೂರಿನಲ್ಲಿಯೂ ಸಹ ಫ್ರಿ ಕಾಶ್ಮೀರ್ ಭಿತ್ತಿಫಲಕ ಹಿಡಿದ ವಿದ್ಯಾರ್ಥಿನಿಯದು ತಪ್ಪಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಾಡಲಾಗಿದೆ. ಹಾಗಾಗಿ ಆಕೆಗೆ ಜಾಮೀನು ದೊರೆತಿದೆ. ಅದೇ ರೀತಿ ಇಲ್ಲಿಯೂ ಸಹ ನ್ಯಾಯಾಲಯದಲ್ಲಿ ಈ ಕೇಸುಗಳು ನಿಲ್ಲುವುದಿಲ್ಲ. ಆದರೆ ಈ ಮೂಲಕ ಜನರಲ್ಲಿ ಭಯ ಉಂಟುಮಾಡಲು ಹೋಗಿ ಪ್ರಭುತ್ವ ಮತ್ತಷ್ಟು ಬೆತ್ತಲಾಗುತ್ತಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಮಾನ್ಯೆರೆ,
    ಹಲವಾರು ಹಿಂದಿ, ಕನ್ನಡ, ಇತರ ಭಾಷೆಗಳ ಚಲನ ಚಿತ್ರಗಳಲ್ಲಿ ಐತಿಹಾಸಿಕ ಕಥೆಗಳ ಸಿನೆಮಾಗಳಲ್ಲಿ ದೇಶ ಮತ್ತು ವಿದೇಶಿಗರ ಪಾತ್ರ ನಮ್ಮ ದೇಶ ಕಲಾವಿಧರು ಮಾಡುತ್ತಾರೆ. ಅಂಥಹವರಲ್ಲಿ ಕೆಲವರು ದೇಶ ಭಕ್ತಿಯ ಪಾತ್ರ ವಹಿಸುತ್ತಾರೆ ಕೆಲವರು ದೇಶ ದ್ರೋಹಿಗಳ ಪಾತ್ರ ವಹಿಸುತ್ತಾರೆ. ದೇಶ ಭಕ್ತರ ಪಾತ್ರ ವಹಿಸಿದವರು ಜೈಕಾರ ಹಾಕುತ್ತಾರೆ, ಭಾರತ ಕೀ ಜೈ ಹೋ ಅಂತಾರೆ, ದೇಶ ದ್ರೋಹಿಗಳ ಪಾತ್ರ ವಹಿಸಿದವರು ನಮ್ಮ ವೈರಿ ದೇಶಗಳ ಜೈಕಾರ ಹಾಕುತ್ತಾರೆ.
    ಇಂತಹ ವಿಷಯಗಳಲ್ಲಿ ಬೀದರ ಪೊಲೀಸರಿಗೆ ನನ್ನ ಸವಾಲು, ಆಗ ಸಿನೆಮಾಗಳಲ್ಲಿ ದೇಶ ದ್ರೋಹ ಪಾತ್ರ ವಹಿಸಿದ ಎಷ್ಟು ಜನರ ಮೇಲೆ ಕೇಸ ಹಾಕಿ ಜೇಲಿಗೆ ಕಳಹಿಸಿದಿರಿ ಉತ್ತರ ಕೊಡಿ?
    ನೀವು ಯಾವ ಶಾಲೆಯಲ್ಲಿ ಕಾನೂನು ಕಲಿರುವಿರಿ? ಜನರ ಬಗ್ಗೆ, ಕಾನೂನಿನ ಬಗ್ಗೆ ಕಾಳಜಿಯಿಂದ ವರ್ತಿಸಿ
    ಯಿಂದ:-
    ಸಯದ ಸಜ್ಜಾದ ಅಲಿ ಇನಾಮದಾರ
    ಮಾಜಿ ಉಪ ಮಹಾ ಪೌರರು ಕಲಬುರಗಿ

LEAVE A REPLY

Please enter your comment!
Please enter your name here

- Advertisment -

‘ಬಾಲ ಕಾರ್ಮಿಕ’ ಶಂಕೆಯ ಮೇಲೆ 155 ಮುಸ್ಲಿಂ ವಿದ್ಯಾರ್ಥಿಗಳ ಬಂಧನ: ಧಾರ್ಮಿಕ ಗುರುತಿನ ಕಾರಣಕ್ಕೆ ಬಂಧಿಸಿರುವುದಾಗಿ ಪೋಷಕರ ಆರೋಪ

ಮಧ್ಯಪ್ರದೇಶದ ಕಟ್ನಿಯಲ್ಲಿ ಸರ್ಕಾರಿ ರೈಲ್ವೆ ಪೊಲೀಸರು (GRP) 155 ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಎಂಟು ಶಿಕ್ಷಕರನ್ನು "ಬಾಲ ಕಾರ್ಮಿಕ" ಶಂಕೆಯ ಮೇಲೆ ಬಂಧಿಸಿದ ನಂತರ, ಪೋಷಕರು ಮುಸ್ಲಿಂ ವಿರೋಧಿ ಪಕ್ಷಪಾತವನ್ನು ಹೊಂದಿದ್ದಾರೆಂದು ಆರೋಪಿಸಿದ್ದಾರೆ....

ಜನಿವಾರದ ಹಿಂದೆ ಬಿದ್ದಿರುವ ವಿರೋಧ ಪಕ್ಷ ಮತ್ತು ಮಾಧ್ಯಮಗಳು

ಏಪ್ರಿಲ್ 23, 2026 ರಂದು ನಡೆದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ವೇಳೆ ಬೆಂಗಳೂರಿನ ಕೋರಮಂಗಲದಲ್ಲಿರುವ ಕೃಪಾನಿಧಿ ಪಿಯು ಕಾಲೇಜಿನಲ್ಲಿ ಐವರು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರವನ್ನು ಬಲವಂತವಾಗಿ ತೆಗೆಸಿದ ಘಟನೆ ರಾಜಕೀಯ...

ಒಡಿಶಾ| ಸಾವಿನ ದಾಖಲೆ ಕೇಳಿದ ಬ್ಯಾಂಕ್‌ ಸಿಬ್ಬಂದಿ; ಸಮಾದಿ ಅಗೆದು ಸಹೋದರಿಯ ಅಸ್ಥಿಪಂಜರ ತಂದ ಬುಡಕಟ್ಟು ವ್ಯಕ್ತಿ

ಒಡಿಶಾದ ಕಿಯೋಂಜಾರ್ ಜಿಲ್ಲೆಯಲ್ಲಿ, ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಮೃತ ಸಹೋದರಿಯ ಅಸ್ಥಿಪಂಜರವನ್ನು ಅಗೆದು ಗ್ರಾಮೀಣ ಬ್ಯಾಂಕ್‌ಗೆ ತೆಗೆದುಕೊಂಡು ಹೋಗಿದ್ದಾನೆ. ಆಕೆಯ ಸಾವನ್ನು ಸಾಬೀತುಪಡಿಸುವ ಮೂಲಕ ಆಕೆಯ ಖಾತೆಯಲ್ಲಿ ಜಮಾ ಮಾಡಿದ ಹಣವನ್ನು ಪಡೆಯಲು...

ಜಾತಿ ಕಿರುಕುಳಕ್ಕೆ ದಲಿತ ವಿದ್ಯಾರ್ಥಿ ಸಾವು ಪ್ರಕರಣ: ಇಂದು ಸಂಜೆ 6 ರವರೆಗೆ ಕೇರಳ ಬಂದ್

ಜಾತಿ ಆಧಾರಿತ ಕಿರುಕುಳದಿಂದ ಮನನೊಂದಿದ್ದ ಕೇರಳದ ಅಂಚರಕಂಡಿಯ ಕಣ್ಣೂರು ದಂತ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವಿದ್ಯಾರ್ಥಿ ಆರ್.ಎಲ್. ನಿತಿನ್ ರಾಜ್ ಆತ್ಮಹತ್ಯೆಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕಾಲೇಜು ಕಟ್ಟಡದಿಂದ ಹಾರಿ ಆತ್ಮಹತ್ಯೆ...

‘ಹೊತ್ತಿ ಉರಿಯುತ್ತಿರುವ ಮಣಿಪುರ’: ಶತಮಾನದ ಬೆಂಕಿಗೆ ತುಪ್ಪ ಸುರಿದ ಬಿಜೆಪಿಯ ಕೋಮುರಾಜಕಾರಣ

ಭಾರತದ ಈಶಾನ್ಯ ರಾಜ್ಯ ಮಣಿಪುರ ಅಕ್ಷರಶಃ ಹೊತ್ತಿ ಉರಿಯುತ್ತಿದೆ. ಶತಮಾನಗಳಿಂದ ಹೊಗೆಯಾಡುತ್ತಿದ್ದ ಹಗೆತನಕ್ಕೆ ಕೋಮುರಾಜಕಾರಣದ ಬಣ್ಣ ಬಳಿದ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಮಣಿಪುರದ ಜನರತ್ತ ತಿರುಗಿಯೂ ನೋಡುತ್ತಿಲ್ಲ. 2023ರಲ್ಲಿ ಭುಗಿಲೆದ್ದ ಉದ್ವಿಗ್ನತೆ...

ಮಧ್ಯಪ್ರದೇಶ| ದಲಿತ ದಂಪತಿಗೆ ಹನುಮಾನ್ ದೇಗುಲ ಪ್ರವೇಶ ನಿರಾಕರಣೆ; ಸಾಮಾಜಿಕ ಬಹಿಷ್ಕಾರ

ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಹನುಮಾನ್ ದೇವಸ್ಥಾನಕ್ಕೆ ನವವಿವಾಹಿತ ದಲಿತ ದಂಪತಿಗೆ ಪ್ರವೇಶ ನಿರಾಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಗ್ರಾಮದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿದೆ. ಈ ಘಟನೆಯು ಜಾತಿ ಆಧಾರಿತ ತಾರತಮ್ಯದ ಕುರಿತು ಕಳವಳ...

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...