ಬಿಹಾರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡಬೇಕೆಂದು ಒತ್ತಾಯಿಸುವ ನಿರ್ಣಯವನ್ನು ಬಿಹಾರದ ನಿತೀಶ್ ಕುಮಾರ್ ಸಂಪುಟ ಬುಧವಾರ ಅಂಗೀಕರಿಸಿದೆ.
ಸಂಪುಟ ಸಭೆಯಲ್ಲಿ ಬೇಡಿಕೆಯನ್ನು ಅಂಗೀಕರಿಸಲು ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನು ಅಂಗೀಕರಿಸಲಾಗಿದೆ ಎಂದು ಸಾಮಾಜಿಕ ಮಾದ್ಯಮದ ಪೋಸ್ಟ್ನಲ್ಲಿ ಸಿಎಂ ನಿತೀಶ್ ಕುಮಾರ್ ಅವರು ಬಹಿರಂಗಪಡಿಸಿದ್ದಾರೆ.
ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡುವ ನಿರ್ಣಯವನ್ನು ಕ್ಯಾಬಿನೆಟ್ ಅಂಗೀಕರಿಸಿದೆ. ತಮ್ಮ ಸರ್ಕಾರ ನಡೆಸಿದ ಜಾತಿ ಸಮೀಕ್ಷೆಯ ಫಲಿತಾಂಶಗಳಿಂದ ಹೊಸ ಬೇಡಿಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಸಮೀಕ್ಷೆಯ ಪ್ರಕಾರ, ಬಿಹಾರವು 94 ಲಕ್ಷ ಬಡ ಕುಟುಂಬಗಳಿಗೆ ನೆಲೆಯಾಗಿದೆ. ಬಡವರ ಸುಧಾರಣೆಗಾಗಿ ಸರ್ಕಾರವು ಸುಮಾರು 2.50 ಲಕ್ಷ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುವ ಯೋಜನೆಗಳನ್ನು ಪ್ರಾರಂಭಿಸಲು ಯೋಜಿಸಿದೆ. ಈ ಯೋಜನೆಗಳನ್ನು 5 ವರ್ಷಗಳಲ್ಲಿ ಪೂರ್ಣವಾಗಿ ಅನುಷ್ಠಾನಗೊಳಿಸಲು ನಾವು ಉದ್ದೇಶಿಸಿದ್ದೇವೆ. ಏಕೆಂದರೆ ಇದಕ್ಕೆ ಅಗತ್ಯವಿರುವ ಮೊತ್ತವು ದೊಡ್ಡದಾಗಿದೆ. ಕೇಂದ್ರ ಸರಕಾರವು ನಮಗೆ ಸಹಾಯ ಮಾಡಿದರೆ ನಾವು ಈ ಕೆಲಸವನ್ನು ಹೆಚ್ಚು ವೇಗವಾಗಿ ಮಾಡಬಹುದು ಎಂದು ಹೇಳಿದ್ದಾರೆ.
ನಾವು ಕಂತುಗಳಲ್ಲಿ ಬಡ ಕುಟುಂಬದ ಒಬ್ಬ ಸದಸ್ಯರಿಗೆ ಆರ್ಥಿಕ ಚಟುವಟಿಕೆಗಳಿಗೆ ಎರಡು ಲಕ್ಷ ರೂಪಾಯಿಗಳ ಸಹಾಯವನ್ನು ನೀಡಲು ಉದ್ದೇಶಿಸಿದ್ದೇವೆ. ತಮ್ಮ ಸರ್ಕಾರವು ಗುಡಿಸಲುಗಳಲ್ಲಿ ವಾಸಿಸುವ 39 ಲಕ್ಷ ಕುಟುಂಬಗಳಿಗೆ ಮನೆಗಳನ್ನು ನಿರ್ಮಿಸಲು ಬದ್ಧವಾಗಿದೆ ಮತ್ತು ಮನೆ ನಿರ್ಮಾಣಕ್ಕೆ ಪ್ರತಿ ಕುಟುಂಬಕ್ಕೆ 1.20 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ತಮ್ಮ ಸರ್ಕಾರವು ಭೂರಹಿತ ಕುಟುಂಬಗಳಿಗೆ ಭೂಮಿ ಖರೀದಿಸಲು 60,000 ರೂಪಾಯಿಗಳನ್ನು ನೀಡುತ್ತಿದೆ ಆದರೆ ಈಗ ಮೊತ್ತವನ್ನು 1 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಇದು ಸಮೀಕ್ಷೆಯಲ್ಲಿ ಗುರುತಿಸಲಾದ 63,850 ಕುಟುಂಬಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಸುದೀರ್ಘ ಅವಧಿಯಿಂದ ಮುಖ್ಯಮಂತ್ರಿಯಾಗಿರುವ ನಿತೀಶ್ ಕುಮಾರ್ ಅವರು 2010ರಿಂದಲೂ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಮುಂದಿಡುತ್ತಾ ಬಂದಿದ್ದರು.
ಇದನ್ನು ಓದಿ:ಮಹಾರಾಷ್ಟ್ರ: ಆದಿವಾಸಿ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ