ನುಹ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಸ್ವಯಂಘೋಷಿತ ಗೋರಕ್ಷಕ ಬಿಟ್ಟು ಬಜರಂಗಿಗೆ ಬಂಧನಕ್ಕೊಳಗಾದ ಕೆಲವೇ ದಿನಗಳಲ್ಲಿ ನೂಹ್ ನ್ಯಾಯಾಲಯವು ಜಾಮೀನು ನೀಡಿದೆ.
ಆಗಸ್ಟ್ 15ರಂದು ಬಿಟ್ಟು ಬಜರಂಗಿಯನ್ನು ಬಂಧಿಸಲಾಗಿತ್ತು. ನಿನ್ನೆ ನುಹ್ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಸಂದೀಪ್ ಕುಮಾರ್ ದುಗ್ಗಲ್ ಅವರು ಬಿಟ್ಟು ಬಜರಂಗಿಗೆ ಜಾಮೀನು ಮಂಜೂರು ಮಾಡಿದ್ದಾರೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಂದೀಪ್ ಕುಮಾರ್ ದುಗ್ಗಲ್ ಜಾಮೀನು ನೀಡುವಾಗ ಬಿಟ್ಟು ಬಜರಂಗಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. ಬಿಟ್ಟು ಬಜರಂಗಿ ಪೊಲೀಸ್ ವರಿಷ್ಠಾಧಿಕಾರಿಯಿಂದ ಪೂರ್ವಾನುಮತಿ ಪಡೆಯದೆ ನುಹ್ ಜಿಲ್ಲೆಗೆ ಭೇಟಿ ನೀಡಬಾರದು. ಸಾರ್ವಜನಿಕ ಹೇಳಿಕೆಗಳನ್ನು ನೀಡಬಾರದು. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಹೇಳಿಕೆ ನೀಡಬಾರದು ಎಂದು ಷರತ್ತು ವಿಧಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಬೆ ಸಿಂಗ್, ಬಿಟ್ಟು ಬಜರಂಗಿಯನ್ನು ಫರೀದಾಬಾದ್ ನ ನೀಮ್ಕಾ ಕಾರಾಗೃಹದಲ್ಲಿಡಲಾಗಿದ್ದು ಜಾಮೀನು ದೊರೆತ ಹಿನ್ನೆಲೆ ಆತನನ್ನು ಬುಧವಾರ ಸಂಜೆ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಜಲ ಅಭಿಷೇಕ ಯಾತ್ರೆಗೆ ಒಂದು ದಿನ ಮುಂಚಿತವಾಗಿ ಪ್ರಚೋದನಕಾರಿ ವಿಡಿಯೋವನ್ನು ಬಿಡುಗಡೆ ಮಾಡಿದ್ದ ಬಿಟ್ಟು ಬಜರಂಗಿ, ಜುಲೈ 31 ರಂದು ಹಿಂಸಾಚಾರ ಭುಗಿಲೆದ್ದಾಗ ರ್ಯಾಲಿಯಲ್ಲಿ ಶಸ್ತ್ರಾಸ್ತ್ರಗಳನ್ನು ಝಳಪಿಸಿದ್ದ. ಪೊಲೀಸ್ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ, ಪೊಲೀಸರು ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಕ್ಕಾಗಿ ಬಜರಂಗಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ನೂಹ್ನಲ್ಲಿ ಯಾತ್ರೆ ವೇಳೆ ಭುಗಿಲೆದ್ದ ಹಿಂಸಾಚಾರ ಬಳಿಕ ಇತರ ಭಾಗಗಳಿಗೆ ವ್ಯಾಪಿಸಿತ್ತು. ಎರಡು ದಿನಗಳಲ್ಲಿ ಹಿಂಸಾಚಾರಕ್ಕೆ ಆರು ಜನರು ಬಲಿಯಾಗಿದ್ದು, 88ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನು ಓದಿ: ಕೇವಲ ಎರಡೇ ಸಭೆಗೆ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಇದು INDIA ಮೈತ್ರಿಯ ತಾಕತ್ತು: ಮಮತಾ ಬ್ಯಾನರ್ಜಿ