ಭಾರತೀಯ ಜನತಾ ಪಕ್ಷ ಕರೆಪ್ಟ್ ಪೊಲಿಟಿಕಲ್ ಮತ್ತು ಲಜ್ಜೆಗಟ್ಟ ಪಕ್ಷ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮಂಡ್ಯದಲ್ಲಿ ಏರ್ಪಡಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಮಿತ್ ಶಾ, ನರೇಂದ್ರ ಮೋದಿ ಮತ್ತು ಬಂಡವಾಳಗಾರರಿಗೆ ಮಣಿದು ಭೂಸುದಾರಣೆ ಕಾಯ್ದೆಯನ್ನು ತಿದ್ದುಪಡಿ ಮಾಡಿದೆ. ಕಾರ್ಪೊರೇಟ್ ಕುಳಗಳ ಒತ್ತಡಕ್ಕೆ ಮಣಿದಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ರಾಜ್ಯ ಸರ್ಕಾರಕ್ಕೆ ಮನುಷ್ಯತ್ವ ಇದೆಯಾ?; ಕುಮಾರಸ್ವಾಮಿ ಆಕ್ರೋಶ
ನಾನು ರಾಜಕೀಯಕ್ಕಾಗಿ ಹೇಳುತ್ತಿಲ್ಲ. ಸತ್ಯವನ್ನು ಹೇಳುತ್ತಿದ್ದೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅಶೋಕ ಲಂಚ ತೆಗೆದುಕೊಂಡು ತಿದ್ದುಪಡಿ ಮಾಡಿದ್ದಾರೆ. ರಿಯಲ್ ಎಸ್ಟೇಟ್ ಕುಳಗಳು ಒತ್ತಡದಿಂದ ಬಿಜೆಪಿ ಸರ್ಕಾರ ಈ ಕೆಲಸ ಮಾಡಿದೆ ಎಂದು ದೂರಿದರು.
ಶ್ರೀಮಂತರು, ಬಂಡವಾಳಗಾರರು ಭೂಮಿ ಖರೀದಿಸಲು ಇದ್ದ ಅಡೆತಡೆಗಳನ್ನು ಈ ಸರ್ಕಾರ ಸಡಿಲಗೊಳಿಸಿದೆ. ಗೇಣಿದಾರರು, ರೈತರಿಂದ ಯಾರು ಬೇಕಾದರೂ ಭೂಮಿ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಭೂಮಿ ಖರೀದಿ ಸಂಬಂಧ 13,814 ಪ್ರಕರಣಗಳು ಬಾಕಿ ಇದ್ದವು. ಇವುಗಳನ್ನು ಮುಚ್ಚಿ ಹಾಕಲು ಬಿಜೆಪಿ ಹೊರಟಿದೆ ಎಂದು ಟೀಕಾಪ್ರಹಾರ ನಡೆಸಿದರು.
ರಾಜ್ಯದಲ್ಲಿ ನಮ್ಮ ಸರ್ಕಾರ ಮತ್ತೆ ಸರ್ಕಾರ ರಚನೆ ಮಾಡಿಯೇ ತೀರುತ್ತದೆ. ಇದು ನೂರರಷ್ಟು ಖಚಿತ. ಇದರಲ್ಲಿ ಅನುಮಾನವೇ ಇಲ್ಲ. ನಮ್ಮ ಸರ್ಕಾರ ಬಂದರೆ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂದಿನಂತೆಯೇ ಬಲಾಯಿಸುತ್ತೇವೆ. ಅಗತ್ಯವಸ್ತುಗಳ ತಿದ್ದುಪಡಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರೈತರಿಗೆ ಅನುಕೂಲವಾಗುವಂತೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ‘ರೈತರ ಆದಾಯ ಡಬಲ್ ಆಗಲಿಲ್ಲ. ಬದಲಿಗೆ ರೈತರ ಉತ್ಪಾದನಾ ವೆಚ್ಚ ಮಾತ್ರ ಡಬಲ್ ಆಗಿದೆ’
ಕೊರೊನದಿಂದ ಜನ ಸಾಯುತ್ತಿದ್ದಾರೆ. ಈ ಬಿಜೆಪಿ ಸರ್ಕಾರ ಹೆಣಗಳಲ್ಲಿ ಹಣ ಮಾಡುತ್ತಿದೆ. ಕೊರೊನಕ್ಕಾಗಿ 4800 ಕೋಟಿ ವೆಚ್ಚ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. 2 ಸಾವಿರ ಕೋಟ ಲೂಟಿ ಮಾಡಿದ್ದಾರೆ. ಪಿಪಿಇ ಕಿಟ್, ವೆಂಟಿಲೇಟರ್ ಖರೀದಿಯಲ್ಲಿ ಹಣವನ್ನು ಕೊಳ್ಳೆಹೊಡೆದಿದ್ದಾರೆ. 10 ಪರ್ಸೆಂಟ್, 20 ಪರ್ಷೆಂಟ್ ಲಂಚ ಪಡೆದಿದ್ದಾರೆಯೇ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದರು. ಮಗ ಆರ್ಟಿಜಿಎಸ್ ಮೂಲಕ ಹಣ ಪಡೆದಿದ್ದಾರೆ. ಇಂತಹ ಕೆಟ್ಟ ಸರ್ಕಾರವನ್ನು ಹಿಂದೆಂದೂ ಕಂಡಿಲ್ಲ. ಇದೊಂದು ರೈತ ವಿರೋಧಿ ಸರ್ಕಾರ. ಎಂದು ಟೀಕಿಸಿದರು.
ನಮ್ಮ ಪಕ್ಷ ಮತ್ತು ಸರ್ಕಾರ ರೈತಪರವಾಗಿ ಇರುತ್ತದೆ. ಹಿಂದೆಯೂ ಇದೆ. ಮುಂದೆಯೂ ಇರುತ್ತದೆ. ರೈತರ ಸಮಸ್ಯೆಗಳನ್ನು ಆಲಿಸಿದ್ದೇನೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತದ ರೈತರಿಗೆ ತಿಳಿದಿರುವ ಸತ್ಯ ಅರ್ಥಶಾಸ್ತ್ರಜ್ಞರಿಗೆ ಗೊತ್ತಾಗುತ್ತಿಲ್ಲ: ಯೋಗೇಂದ್ರ ಯಾದವ್