Homeಮುಖಪುಟಬಿಜೆಪಿ ನನ್ನನ್ನು ಜೈಲಿಗೆ ಹಾಕಬಹುದು ಆದರೆ ವಯನಾಡ ಜನರನ್ನು ಪ್ರತಿನಿಧಿಸುವುದಕ್ಕೆ ತಡೆಯೊಡ್ಡಲಾಗದು: ರಾಹುಲ್‌

ಬಿಜೆಪಿ ನನ್ನನ್ನು ಜೈಲಿಗೆ ಹಾಕಬಹುದು ಆದರೆ ವಯನಾಡ ಜನರನ್ನು ಪ್ರತಿನಿಧಿಸುವುದಕ್ಕೆ ತಡೆಯೊಡ್ಡಲಾಗದು: ರಾಹುಲ್‌

- Advertisement -
- Advertisement -

ಆಡಳಿತಾರೂಢ  ಬಿಜೆಪಿ ತಮ್ಮನ್ನು ಜೈಲಿಗೆ ಹಾಕಬಹುದು ಆದರೆ ವಯನಾಡಿನ ಜನರನ್ನು ಪ್ರತಿನಿಧಿಸುವುದಕ್ಕೆ ತಡೆಯೊಡ್ಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಹೇಳಿದ್ದಾರೆ.

ಸಂಸತ್ತ ಸದಸ್ಯತ್ವದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರು ಮೊದಲ ಬಾರಿಗೆ ತಾವು ಪ್ರತಿನಿಧಿಸಿದ್ದ ಕೇರಳದ ವಯನಾಡ ಕ್ಷೇತ್ರಕ್ಕೆ ತೆರಳಿದ್ದಾರೆ. ಈ ವೇಳೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ”ಸಂಸದ, ಸಂಸದರು ಎನ್ನುವುದು ಕೇವಲ ಟ್ಯಾಗ್, ಅದೊಂದು ಸ್ಥಾನ, ಅದೊಂದು ಹುದ್ದೆ” ಅಷ್ಟೇ ಹಾಗಾಗಿ ಬಿಜೆಪಿ ಆ ಟ್ಯಾಗ್‌ನ್ನು ತೆಗೆಯಬಹುದು, ಅವರು ಮನೆಯನ್ನು ಕಸಿದುಕೊಳ್ಳಬಹುದು, ಅವರು ನನ್ನನ್ನು ಜೈಲಿಗೆ ಹಾಕಬಹುದು, ಆದರೆ ವಯನಾಡಿನ ಜನರನ್ನು ಪ್ರತಿನಿಧಿಸುವುದನ್ನು ತಡೆಯಲು ಅವರಿಗೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ವಯನಾಡಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸುವುದನ್ನು ನಾನು ಮುಂದುವರಿಸುತ್ತೇನೆ ಎಂದು ರಾಹುಲ್ ಹೇಳಿದರು.

”ನಾನು ಕೆಲವು ವರ್ಷಗಳಿಂದ ಬಿಜೆಪಿ ವಿರುದ್ಧ ಹೋರಾಡುತ್ತಿದ್ದೇನೆ ಮತ್ತು ಇಷ್ಟು ವರ್ಷಗಳಲ್ಲಿ ಅವರ ಈ ನಡೆ ನನಗೆ ಆಶ್ಚರ್ಯವನ್ನುಂಟು ಮಾಡುತ್ತಿದೆ. ಅವರು ತಮ್ಮ ಎದುರಾಳಿಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗಿದ್ದಾರೆ. ತಮ್ಮ ಎದುರಾಳಿಯು ಬೆದರುವುದಿಲ್ಲ ಎಂದು ಅವರಿಗೆ ಅರ್ಥವಾಗುವುದಿಲ್ಲ. ನಾನಿರುವಲ್ಲಿಗೆ ಪೊಲೀಸರನ್ನು ಕಳುಹಿಸಿದರೆ ನಾನು ಹೆದರುತ್ತೇನೆ ಎಂದುಕೊಂಡಿದ್ದಾರೆ, ಆದರೆ ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಈ ಹೋರಾಟವು ಭಾರತದ ಎರಡು ವಿಭಿನ್ನ ದೃಷ್ಟಿಕೋನಗಳ ಹೋರಾಟವಾಗಿದೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಸೂರತ್‌ ಸೆಷನ್ಸ್‌ ನ್ಯಾಯಾಲಯದಿಂದ ರಾಹುಲ್‌ ಗಾಂಧಿಗೆ ಜಾಮೀನು

”ಬಿಜೆಪಿ ಜನರನ್ನು ವಿಭಜಿಸುತ್ತದೆ, ನೀವು ಜನರ ನಡುವೆ ಗಲಾಟೆ ನಡೆಸುತ್ತೀರಿ, ನೀವು ಜನರನ್ನು ಹೆದರಿಸುತ್ತೀರಿ, ನಿಮ್ಮ ವಿರೋಧಿಗಳನ್ನು ಎಷ್ಟು ಬೇಕಾದರೂ ನಿಂದಿಸುತ್ತೀರಿ. ಆದರೆ ನಾನು ಜನರನ್ನು ಒಗ್ಗೂಡಿಸುತ್ತಲೇ ಇರುತ್ತೇನೆ, ಪ್ರತಿಯೊಂದು ಸಮುದಾಯ, ಪ್ರತಿಯೊಂದು ಧರ್ಮ, ಪ್ರತಿಯೊಂದು ವಿಚಾರವನ್ನು ಗೌರವಿಸುತ್ತಲೇ ಇರುತ್ತೇನೆ. ನೀವು ಬಯಸಿದಷ್ಟು ನನ್ನನ್ನು ವಿರೋಧ ಮಾಡಿ, ಆದರೆ ನಾನು ನಿಮಗೆ ಸಾಧ್ಯವಾದಷ್ಟು ದಯೆ ತೋರುತ್ತೇನೆ. ಏಕೆಂದರೆ ಇದು ಭಾರತದ ಎರಡು ದೃಷ್ಟಿಕೋನಗಳ ಹೋರಾಟವಾಗಿದೆ” ಎಂದು ರಾಹುಲ್ ಹೇಳಿದರು.

ರಾಹುಲ್ ಗಾಂಧಿ ಕೇರಳದ ವಯನಾಡ ಕ್ಷೇತ್ರದ ಸಂಸದರಾಗಿದ್ದರು ಆದರೆ ಮಾರ್ಚ್ 23ರಂದು ಸೂರತ್ ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 (ಮಾನನಷ್ಟ) ಮತ್ತು 500 (ಮಾನನಷ್ಟಕ್ಕೆ ಶಿಕ್ಷೆ) ಅಡಿಯಲ್ಲಿ ಗಾಂಧಿಯನ್ನು ದೋಷಿ ಎಂದು ಘೋಷಿಸಿತು. ಈ ಪ್ರಕರಣದಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಶಿಕ್ಷೆ ಪ್ರಕಟವಾದ ಮರುದಿನವೇ ಅವರನ್ನು ಸಂಸತ್ತ ಸ್ಥಾನದಿಂದ ಅನರ್ಹಗೊಳಿಸಲಾಯಿತು. ನಂತರ ಅವರಿಗೆ ಲೋಕಸಭಾ ಸಂಸದರಾಗಿ ಮಂಜೂರು ಮಾಡಿದ ಮನೆಯನ್ನು ಖಾಲಿ ಮಾಡುವಂತೆಯೂ ನೋಟಿಸ್ ಕಳುಹಿಸಲಾಯಿತು. ಏಪ್ರಿಲ್ 3 ರಂದು, ಅವರಿಗೆ ನ್ಯಾಯಾಲಯ ಜಾಮೀನು ನೀಡಲಾಯಿತು.

1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಅಡಿಯಲ್ಲಿ ರಾಹುಲ್‌ ಅವರನ್ನು ಲೋಕಸಭಾ ಸಂಸದರಾಗಿ ಅನರ್ಹಗೊಳಿಸಲಾಯಿತು. ಕಾನೂನಿನ ಸೆಕ್ಷನ್ 8(3)ರ ಪ್ರಕಾರ, ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಜೈಲು ಶಿಕ್ಷೆಗೆ ಗುರಿಯಾದ ಶಾಸಕನನ್ನು ಅಪರಾಧ ನಿರ್ಣಯದ ದಿನಾಂಕದಿಂದ ಆರು ವರ್ಷಗಳವರೆಗೆ ಅನರ್ಹಗೊಳಿಸಲಾಗುತ್ತದೆ. ಒಂದು ವೇಳೆ ಉನ್ನತ ನ್ಯಾಯಾಲಯವು ಅವರ ಅಪರಾಧವನ್ನು ತಡೆಹಿಡಿದರೆ ರಾಹುಲ್‌ ಗಾಂಧಿಯವರ ಲೋಕಸಭೆಗೆ ಅನರ್ಹಗೊಳಿಸುವಿಕೆಯನ್ನು ರದ್ದುಗೊಳಿಸಲಾಗುತ್ತದೆ.

ಪ್ರಕರಣದ ಹಿನ್ನೆಲೆ

2019ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಕೋಲಾರದಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ರಾಹುಲ್‌, ”ನೀರವ್ ಮೋದಿ, ಲಲಿತ್ ಮೋದಿ ಅಥವಾ ನರೇಂದ್ರ ಮೋದಿ ಆಗಿರಲಿ, ಎಲ್ಲ ಕಳ್ಳರು ತಮ್ಮ ಹೆಸರಿನಲ್ಲಿ ಮೋದಿ ಹೊಂದಿದ್ದಾರೆಯೇ?” ಎಂದು ಪ್ರಶ್ನಿಸಿದ್ದರು.

ರಾಹುಲ್‌ ಅವರು ತಮ್ಮ ಹೇಳಿಕೆ ಮೂಲಕ ”ಮೋದಿ ಸರ್‌ನೇಮ್‌” ಹೊಂದಿರುವವರನ್ನೆಲ್ಲಾ ಹೀಯಾಳಿಸಿದ್ದಾರೆ ಎಂದು ಆರೋಪಿಸಿದ್ದ ಗುಜರಾತ್‌ನ ಬಿಜೆಪಿ ಶಾಸಕ ಪೂರ್ಣೇಶ್‌ ಮೋದಿ ಅವರು ಕಾಂಗ್ರೆಸ್‌ ಸಂಸದನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಆರೋಪಿಯಾಗಿದ್ದು ದೇಶ ಬಿಟ್ಟು ಓಡಿಹೋಗಿರುವ ಉದ್ಯಮಿಯಾಗಿದ್ದಾರೆ. ಇನ್ನು ಲಲಿತ್ ಮೋದಿ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮಾಜಿ ಮುಖ್ಯಸ್ಥರಾಗಿದ್ದು, ಕ್ರಿಕೆಟ್ ಆಡಳಿತ ಮಂಡಳಿಯಿಂದ ಆಜೀವ ನಿಷೇಧಕ್ಕೊಳಗಾಗಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read