ಹರಿಯಾಣದ ಬಿಜೆಪಿ ಹಾಗೂ ಐಎನ್ಎಲ್ಡಿಯ ಮೂವರು ಬಂಡಾಯ ನಾಯಕರು ಕಾಂಗ್ರೆಸ್ಗೆ ಸೇರಿದ್ದಾರೆ.
ಪವನ್ ಬೆನಿವಾಲ್, ಕೈಗಾರಿಕೋದ್ಯಮಿ ಅಶೋಕ್ ಗೋಯಲ್ (ಹಿಸಾರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತರಾದವರು), ಮಾಜಿ ಸಂಸದ ತಾರ ಸಿಂಗ್ ಅವರ ಪುತ್ರ ಕಲ್ವಲ್ಜಿತ್ ಸಿಂಗ್ ಕಾಂಗ್ರೆಸ್ ಸೇರಿದ್ದಾರೆ.
ನವದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಕಾರ್ಯಕ್ರಮ ನಡೆದಿದೆ. ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕುಮಾರಿ ಸೆಲ್ಜಾ, ಪಕ್ಷದ ಉಸ್ತುವಾರಿ ವಿವೇಕ್ ಬನ್ಸಾಲ್ ಹಾಜರಿದ್ದರು.
2014ರಲ್ಲಿ ಬೆನಿವಾಲ್ ಅವರು ಐಎನ್ಎಲ್ಡಿ ತ್ಯಜಿಸಿ ಬಿಜೆಪಿ ಸೇರಿದ್ದರು. 2014 ಮತ್ತು 2019ರಲ್ಲಿ ಎಲಿನಾಬಾದ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಐಎನ್ಎಲ್ಡಿಯ ಅಭಯ್ ಚೌಟಾಲಾ ವಿರುದ್ಧ ಸ್ಪರ್ಧಿಸಿದ್ದರು. ಎರಡು ಅವಧಿಯಲ್ಲೂ ಸೋಲು ಕಂಡಿದ್ದರು. ರೈತ ಹೋರಾಟಕ್ಕೆ ಬೆಂಬಲ ನೀಡುವ ಮೂಲಕ ಅಭಯ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂಬರುವ ತಿಂಗಳುಗಳಲ್ಲಿ ಉಪಚುನಾವಣೆ ನಡೆಯಲಿದೆ.
ಸೋಲು ಕಂಡಿದ್ದ ಬೆನಿವಾಲ್ ಅವರನ್ನು 2016ರಿಂದ 2019ರ ಅವಧಿಯವರೆಗೆ ಬಿಜೆಪಿಯು ಹರಿಯಾಣ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿತ್ತು. ರೈತ ಹೋರಾಟಕ್ಕೆ ಬೆಂಬಲ ಸೂಚಿಸಿ ಬೆನಿವಾಲ್ ಅವರೂ ಬಿಜೆಪಿಯನ್ನು ಏಪ್ರಿಲ್ ತಿಂಗಳಲ್ಲಿ ತ್ಯಜಿಸಿದ್ದರು. ಎಲಿನಾಬಾದ್ ಕ್ಷೇತ್ರದ ಉಪಚುನಾವಣೆಗೆ ಬೆನಿವಾಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.