ಕೊರೊನಾ ಸಂದರ್ಭದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಲು ಮನವಿ ಮಾಡಿದರೆ ಶೇಕಡ 20ರಷ್ಟು ಕಮಿಷನ್ ಕೊಡಬೇಕೆಂದು ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ ಬಿ.ಸಿ.ನಾಗೇಶ್ ಕೇಳಿರುವ ಆಡಿಯೋ ವೈರಲ್ ಆಗುತ್ತಿದೆ.
ಆಡಿಯೋದಲ್ಲಿರುವ ಮಾತುಗಳು ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಹೀಗೆ ಮಾತನಾಡಿರುವುದು ಅಕ್ರೋಶಕ್ಕೆ ಕಾರಣವಾಗಿದೆ. ಕೊರೊನ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವಾಗ ಬಿಜೆಪಿ ಕಾರ್ಯಕರ್ತ ಉಮಾಶಂಕರ್ ಎಂಬಾತ ನಮ್ಮ ಊರಿಗೆ ಆಹಾರದ ಕಿಟ್ ಗಳನ್ನು ವಿತರಿಸಬೇಕೆಂದು ಮನವಿ ಮಾಡಿದಾಗ ಆಗುತ್ತೆ ಆಗಲ್ಲ ಎಂದಷ್ಟೇ ಉತ್ತರ ಕೊಡಬಹುದಿತ್ತು. ಆದರೆ ಕಮಿಷನ್ ಕೊಡಬೇಕೆಂದು ತಾಕೀತು ಮಾಡುವುದು ಎಷ್ಟರಮಟ್ಟಿಗೆ ಸರಿ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.
ಆಡಿಯೋ ಕೇಳಿ
ಊರಿಗೆ ಆಹಾರದ ಕಿಟ್ ಕೇಳಿದರೆ 20% ಕಮಿಷನ್ ಕೇಳಿದ ಬಿಜೆಪಿ ಶಾಸಕ
ಊರಿಗೆ ಆಹಾರದ ಕಿಟ್ ಕೇಳಿದರೆ 20% ಕಮಿಷನ್ ಕೇಳಿದ ತಿಪಟೂರು ಕ್ಷೇತ್ರದ ಬಿಜೆಪಿ ಶಾಸಕ: ಆಡಿಯೋ ವೈರಲ್
Posted by Naanu Gauri on Wednesday, April 29, 2020
ವೈರಲ್ ಆಡಿಯೋದ ಸಂಭಾಷಣೆ ಕೆಳಗಿನಂತಿದೆ.
ಕಾರ್ಯಕರ್ತ:’ಅಣ್ಣಾ ನಾನು,
ಶಾಸಕ: ಹೇಳು ಉಮಾಶಂಕರ
ಕಾರ್ಯಕರ್ತ: ಅಣ್ಣಾ ಊಟ ಆಯ್ತ ಅಣ್ಣಾ
ಕಾರ್ಯಕರ್ತ: ನಗುತ್ತ ಅಣ್ಣಾ ಸಮ್ಮೂರಿಗೂ ಏನಾದ್ರು ನೋಡ್ಬೇಕಾಗಿತ್ತಣ್ಣಾ
ಶಾಸಕ :ಏನ್ ನಾ
ಕಾರ್ಯಕರ್ತ: ಅದೇ ಆಹಾರದ ಕಿಟ್ ಏನಾದ್ರೂ…ವಿತರಣೆ ಮಾ.
ಶಾಸಕ: ‘ಒಂದ್ ಕೆಲ್ಸ ಮಾಡು, ನಿಮಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲಾ 20 ಪರ್ಸೆಂಟ್ ದುಡ್ ತಂದ್ಕೊಡಿ ಕೊಡ್ತಿನಿ
ಅಣ್ಣಾ
ನಿಮ್ಗೆಲ್ಲಾ ಕೆಲ್ಸ ಕೊಟ್ಟಿದ್ದೀನಲ್ಲೋ ಅದ್ಕೆಎಲ್ಲಾ ಎಂಎಲ್ಎ ಗಳು 20 ಪರ್ಸೆಂಟ್ ಬಸೂಲಿ ಮಾಡ್ತಾರಲ್ಲ ಹಂಗೆ ನೀವು ತಂಗಂಡ್ ಬಂದ್ ಕೊಡಿ 20 ಪರ್ಷೆಂಟ್ ಕೊಟ್ಬಿಡಿ’
ಕಾರ್ಯಕರ್ತ: ಕೆಲ್ಸ ಎಲ್ಲಣ್ಣ, ಯಾವ್ ಕೆಲ್ಸನಣ್ಣ, ನಗು
ಶಾಸಕ: ಕೆಲ್ಸ ಕೊಟ್ಟಿರೋದೆಲ್ಲ ನೀನ್ ಯಾವ್ದೋ ಒಂದು ಕೆಲ್ಸ ಮಾಡ್ತೀದ್ದೀಯ ನನಗೆ ಗೊತ್ತಿದೆ’
ಕಾರ್ಯಕರ್ತ: ‘ಇಲ್ಲ ಕಣಣ್ಣಾ ನನ್ಗೆ ಯಾವುದು ಕೊಡ್ಸಿಲ್ಲ
ಶಾಸಕ: ಕೊಡ್ಸಿಲ್ಲ, ಅವ್ರು ಕೊಡ್ಸಿರಬೇಕು, ಬೆಸ್ಟ್ ನಿಮಗೆಲ್ಲ ಸಹಾಯ ಮಾಡ್ತೀವಲ್ಲ ಅವಾಗ 30 ಪರ್ಷೆಂಟ್ ಕಮಿಷನ್ ಹೊಡೀಬೇಕು ನಾವು
ಕಾರ್ಯಕರ್ತ: ನನಗೆ ಯಾರು ಕೊಡ್ಸಿಲ್ಲಣ್ಣ ಅವ್ರು
ಶಾಸಕ ‘ಸರಿ ಬಿಡು’.
ಹೀಗೆ ಇಬ್ಬರ ನಡುವೆ ಸಂಭಾಷಣೆ ನಡೆದು ಆಡಿಯೋ ಮುಕ್ತಾಯವಾಗುತ್ತದೆ. ಕೇವಲ 47 ಸೆಕೆಂಡ್ ಇರುವ ಆಡಿಯೋದಲ್ಲಿ ಕಾರ್ಯಕರ್ತರಿಗೆ ಕೆಲಸ ಕೊಡಿಸಿರುವ ವಿಷಯ, 20 ಪರ್ಸೆಂಟ್ ಕಮಿಷನ್ ಕೊಡಬೇಕೆಂಬುದು ಮತ್ತು ಬೇರೆ ಶಾಸಕರು 30 ಪರ್ಸೆಂಟ್ ಕಮಿಷನ್ ಹೊಡಿತಾರೆ ಎಂಬ ವಿಷಯ ಪ್ರಸ್ತಾಪವಾಗಿದೆ. ಇದು ಬೇರೆಯವರು ಲೂಟಿ ಮಾಡುತ್ತಿದ್ದಾರೆ. ತನಗೇನೂ ಸಿಗುತ್ತಿಲ್ಲ ಎಂಬ ಬೇಸರ ನೋವು ಹತಾಶೆಯನ್ನು ಹೊರಹಾಕಿದಂತೆ ನಾಗೇಶ್ ಮಾತುಗಳು ಇವೆ. ಕೊರೊನ ಸಂಕಟ ಸಮಯದಲ್ಲಿ ಶಾಸಕರು ಕಮಿಷನ್ ಹೊಡಿಯುತ್ತಿದ್ದಾರೆ ಆರೋಪ ಕೇಳಿಬಂದಿರುವ ನಡುವೆಯೇ ಆಹಾರದ ಕಿಟ್ ಗಳನ್ನು ವಿತರಿಸುವಲ್ಲಿ ಬಾರಿ ಪ್ರಮಾಣದ ಗೋಲ್ ಮಾಲ್ ನಡೆಯುತ್ತಿದೆ ಎಂಬುದಕ್ಕೆ ಆಡಿಯೋ ಸಾಕ್ಷ್ಯ ನೀಡುತ್ತದೆ.
ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಜೆಪಿ ಶಾಸಕರು ತಮ್ಮ ಪೋಟೋಗಳನ್ನು ಆಹಾರದ ಕಿಟ್ಗಳ ಮೇಲೆ ಹಾಕಿಕೊಂಡು ವಿತರಿಸಿದರು. ಶಾಸಕ ಬಿ.ಸಿ.ನಾಗೇಶ್ ಮಾತುಗಳಲ್ಲಿ ವ್ಯಕ್ತವಾಗುವ ಅಂಶವೆಂದರೆ ಶಾಸಕರ ಬಳಿ ಸಹಾಯ ಮತ್ತು ಕೆಲಸ ಪಡೆದಿರುವ ವ್ಯಕ್ತಿಗಳು ಆಹಾರದ ಕಿಟ್ ಗಳಿಗೆ ಹಣ ತೆತ್ತಿದ್ದಾರೆ. ಗುತ್ತಿಗೆದಾರರಿಂದ ಹಣವೂ ಬಂದಿದೆ. ಆಹಾರದ ಕಿಟ್ ಗಳು ಲಭ್ಯವಾಗಿವೆ. ಇದರಿಂದ ಬಿಜೆಪಿಯ ಬಹುತೇಕ ಶಾಸಕರು ಜನರಿಗೆ ಆಹಾರದ ಕಿಟ್ ಗಳನ್ನು ವಿತರಿಸಲು ಸಾಧ್ಯವಾಗಿದೆ ಎಂಬುದರತ್ತ ನಾಗೇಶ ಮಾತುಗಳು ಬೊಟ್ಟುಮಾಡಿ ತೋರಿಸುತ್ತವೆ.
ದೇಶಭಕ್ತಿ, ಸೇವೆ ಎಂದೆಲ್ಲಾ ಹೇಳಿಕೊಳ್ಳುವ ಬಿಜೆಪಿ ಮುಖಂಡರ ಪೊಳ್ಳುತನವನ್ನು ಆಡಿಯೋ ಬಹಿರಂಗಗೊಳಿಸಿದೆ. ಕೊರೊನ ಸಂಕಷ್ಟದಲ್ಲೂ ಹಣ ಮಾಡುವುದರಲ್ಲಿ ಶಾಸಕರು ನಿರತರಾಗಿದ್ದಾರೆ. ಜನ ಸೇವೆ, ಜನರ ಕೆಲಸ ದೇವರ ಕೆಲಸ ಇವೆಲ್ಲ ಕೇವಲ ಬಾಯಿಯಲ್ಲಿ ಹೇಳುವುದಕ್ಕೆ ಮಾತ್ರ. ಗಾದೆ ಹೇಳೋಕಾಯ್ತು ಬಾನ ಉಣ್ಣೋಕಾಯ್ತು ಎಂಬಂತಿದೆ.
ಇದನ್ನೂ ಓದಿ: ಯುಪಿ ಸಾಧುಗಳ ಹತ್ಯೆಯನ್ನು ಕೋಮುವಾದೀಕರಿಸಬೇಡಿ: ಯೋಗಿಗೆ ಉದ್ಧವ್ ಪಾಠ