ರಾಜ್ಯಸಭಾ ಚುನಾವಣೆಗೆ ಮಹಾರಾಷ್ಟ್ರದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಮೂವರು ಅಭ್ಯರ್ಥಿಗಳನ್ನು ಘೋಷಿಸಿದೆ. ಮೇಲ್ಮನೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಲು ಮಾಜಿ ಸಿಎಂ ಅಶೋಕ್ ಚವ್ಹಾಣ್ ಮತ್ತು ಕೊತ್ರೂಡ್ ಮಾಜಿ ಶಾಸಕಿ ಮೇಧಾ ಕುಲಕರ್ಣಿ ಜೊತೆಗೆ ಡಾ.ಅಜಿತ್ ಗೋಪ್ಚಾಡೆ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
भारतीय जनता पार्टी की केन्द्रीय चुनाव समिति ने गुजरात एवं महाराष्ट्र में होने वाले आगामी राज्यसभा के द्विवार्षिक चुनाव हेतु निम्नलिखित नामों पर अपनी स्वीकृति प्रदान की है। pic.twitter.com/YAEnO8RNis
— BJP (@BJP4India) February 14, 2024
ಗೋಪ್ಚಾಡೆ ಅವರ ನಾಮ ನಿರ್ದೇಶನದ ನಂತರ, ಅವರ ಹಳೆಯ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಲು ಪ್ರಾರಂಭಿಸಿವೆ. 1992ರಲ್ಲಿ ರಾಮ ಜನ್ಮಭೂಮಿ ಆಂದೋಲನದ ಭಾಗವಾಗಿ ಅಯೋಧ್ಯೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಕಾರ್ಯದಲ್ಲಿ ಈ ಅಜಿತ್ ಗೋಪ್ಚಾಡೆ ಭಾಗವಹಿಸಿದ್ದರು. ಬಾಬರಿ ಮಸೀದಿಯ ಗುಂಬಝಿನ ಮೇಲೆ ಹತ್ತಿ ನಿಂತಿದ್ದವರ ಗುಂಪಿನಲ್ಲಿದ್ದ ಗೋಪ್ಚಾಡೆಯವರ ಫೋಟೋ ಅಂದು ವೈರಲ್ ಆಗಿತ್ತು. ಈಗ ಗೋಪ್ಚಾಡೆ ರಾಜ್ಯಸಭೆಗೆ ನಾಮ ನಿರ್ದೇಶನವಾಗುತ್ತಿದ್ದಂತೆ, ಆ ಹಳೆಯ ಫೋಟೋ ಮತ್ತೊಮ್ಮೆ ಮುನ್ನಲೆಗೆ ಬಂದಿದೆ.
BJP nominates Karsevak Ajeet Gopchade for Rajya Sabha from Maharashtra. He was part of kar seva when Babri Masjid was demolished. pic.twitter.com/RVBo0kOwKW
— ParanjoyGuhaThakurta (@paranjoygt) February 14, 2024
ಅಜಿತ್ ಗೋಪ್ಚಾಡೆ ಯಾರು?
ಡಾ. ಅಜಿತ್ ಗೋಪ್ಚಾಡೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್)ದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಸಂಘಟನೆಯ ಮೇಲಿನ ನಿಷ್ಠೆಗೆ ಅವರು ಹೆಸರುವಾಸಿಯಾಗಿದ್ದಾರೆ. ಈ ಹಿಂದೆ ಮಹಾರಾಷ್ಟ್ರ ಬಿಜೆಪಿಯ ಉಪಾಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿತ್ತು. ನಾಂದೇಡ್ ಲೋಕಸಭಾ ಕ್ಷೇತ್ರ, ನಾಂದೇಡ್ ಮತ್ತು ನೈಗಾಂವ್ ವಿಧಾನಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅವರ ಹೆಸರು ಆಗಾಗ ಚರ್ಚೆಯಾಗುತ್ತಿರುತ್ತದೆ. ಸಾಮಾಜಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳಲ್ಲಿ ಕೂಡ ಅವರು ಗುರುತಿಸಿಕೊಂಡಿದ್ದಾರೆ.
ಕಾಲೇಜಿನಲ್ಲಿದ್ದಾಗಲೇ ವಿವಿಧ ವಿದ್ಯಾರ್ಥಿ ಚಳವಳಿಗಳನ್ನು ಸಂಘಟಿಸುವಲ್ಲಿ ಮುಂದಾಳತ್ವ ವಹಿಸಿದ್ದ ಅಜಿತ್ ಅವರು, ಬಿಜೆಪಿ ನಾಯಕರಾದ ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ ಮತ್ತು ನಿತಿನ್ ಗಡ್ಕರಿ ಅವರೊಂದಿಗಿನ ಒಡನಾಟದ ಮೂಲಕ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ದರು. ಆರೋಗ್ಯ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಅವರ ಕೆಲಸವೂ ಗಮನಾರ್ಹವಾಗಿದೆ. ಎಂಬಿಬಿಎಸ್ ಮತ್ತು ಎಂಡಿ ಪದವಿ ಪಡೆದಿರುವ ಡಾ. ಅಜಿತ್ ಗೋಪ್ಚಾಡೆ ಅವರು ಮಕ್ಕಳ ಕಾಯಿಲೆಗಳ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ.
ಮಹಾರಾಷ್ಟ್ರ ಬಿಜೆಪಿ ವೈದ್ಯರ ಘಟಕದ ಮುಖ್ಯಸ್ಥರಾಗಿರುವ ಗೋಪ್ಚಾಡೆ, ಜಿ-20 ಶೃಂಗಸಭೆ ಕಾರ್ಯಕ್ರಮದ ಸಮಿತಿಯಲ್ಲೂ ಇದ್ದರು. ಬಿಜೆಪಿಯು 2020ರ ಮೇನಲ್ಲಿ ಮಹಾರಾಷ್ಟ್ರ ರಾಜ್ಯ ವಿಧಾನ ಪರಿಷತ್ತಿನ ಚುನಾವಣೆಗೆ ಗೋಪ್ಚಾಡೆ ಅವರನ್ನು ನಾಮನಿರ್ದೇಶನ ಮಾಡಿತ್ತು. ಗೋಪ್ಚಾಡೆ ಅವರು ನಾಮಪತ್ರ ಸಲ್ಲಿಸಿದ್ದರು. ಆದರೆ, ಇದಾಗಿ ಕೆಲವೇ ಗಂಟೆಗಳಲ್ಲಿ ಪಕ್ಷ ತನ್ನ ನಿರ್ಧಾರ ಬದಲಾಯಿಸಿತ್ತು. ಗೋಪ್ಚಾಡೆ ಬದಲಿಗೆ ದಿವಂಗತ ಗೋಪಿನಾಥ್ ಮುಂಡೆ ಮತ್ತು ಅವರ ಪುತ್ರಿ ಪಂಕಜಾ ಮುಂಡೆ ಅವರ ನಿಕಟವರ್ತಿ ರಮೇಶ್ ಕರಾಡ್ಗೆ ಅವಕಾಶ ನೀಡಿತ್ತು.
ರಾಜ್ಯಸಭೆಗೆ ನಾಮನಿರ್ದೇಶನ ಗೋಪ್ಚಾಡೆ ಹೇಳಿದ್ದೇನು?
ತನ್ನನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವ ಪಕ್ಷದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಅಜಿತ್ ಗೋಪ್ಚಾಡೆ, “ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ತಮ್ಮ ಸಮಿತಿಯ ಮೂಲಕ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಪಕ್ಷದ ಸಂಘಟನೆಯನ್ನು ಹೆಚ್ಚಿಸುವುದು ನನ್ನ ಜವಬ್ದಾರಿ” ಎಂದು ಹೇಳಿದ್ದಾರೆ.
ಇದನ್ನೂ ಓದಿ : ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್; ಕರ್ನಾಟಕದಿಂದ ಮಾಕೇನ್ಗೆ ಟಿಕೆಟ್