ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ, ಬಿಜೆಪಿ ಚಂಡೀಗಢ ಅಧ್ಯಕ್ಷ ಅರುಣ್ ಸೂದ್ ವಿರುದ್ಧ ಕರ್ನಾಟಕದ ಮಾಹಿತಿ ತಂತ್ರಜ್ಞಾನ ಮತ್ತು ಬಯೋಟೆಕ್ನಾಲಜಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಪ್ರೀಯಾಂಕ್ ಖರ್ಗೆ ಅವರು ಸೋಮವಾರ ದೂರು ನೀಡಿದ ಬಳಿಕ ಮಾತನಾಡಿರುವ ವಿಡಿಯೋ ಹಂಚಿಕೊಂಡಿರುವ ಜೈರಾಮ್ ರಮೇಶ್ ಅವರು, ”ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಐಟಿ ಸೆಲ್ ಹೊಸ ದಾಳಿ ನಡೆಸಿರುವುದನ್ನು ನೋಡಿದರೆ, ಅವರು ಈಗ ಹತಾಶೆ ಮತ್ತು ಬೂಟಾಟಿಕೆಗಳ ಎಲ್ಲಾ ಮಿತಿಗಳನ್ನು ದಾಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅದರಲ್ಲಿ ಭಾಗಿಯಾಗಿರುವ ಎಲ್ಲರ ವಿರುದ್ಧ INC ಕ್ರಿಮಿನಲ್ ದೂರನ್ನು ದಾಖಲಿಸಿದೆ. ಕಾನೂನಿನ ಎಲ್ಲಾ ಪ್ರಕ್ರಿಯೆಗಳನ್ನು ಅನುಸರಿಸುವ ಕ್ರಮಕ್ಕೆ ನಾವು ಮುಂದಾಗಿದ್ದೇವೆ. ಅವರು ಎಷ್ಟೇ ದೊಡ್ಡವರು ಅಥವಾ “ಪ್ರಭಾವಿ” ಎಂದು ಭಾವಿಸಿದರೂ, ಅವರು ಹರಡುವ ಸುಳ್ಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
कांग्रेस और राहुल गांधी के ख़िलाफ़ बीजेपी IT सेल के नए हमलों से साफ़ है कि उन्होंने अब हताशा और कपटता की सभी सीमाओं को पार कर दिया है। INC ने शामिल सभी व्यक्तियों के ख़िलाफ़ एक आपराधिक शिकायत दर्ज़ की है और पूरी तरह से कानूनी प्रक्रिया का पालन करते हुए हम इसे अंजाम तक ले जाएंगे।… https://t.co/b8khtg7Pzg
— Jairam Ramesh (@Jairam_Ramesh) June 19, 2023
ಬಿಜೆಪಿ ನಾಯಕರ ವಿರುದ್ಧ ದೂರು ನೀಡಿದ ಬಳಿಕ ಮಾತನಾಡಿದ ಪ್ರಿಯಾಂಕ್ ಖರ್ಗೆ ಅವರು, ”ದೀರ್ಘಕಾಲದಿಂದ ಬಿಜೆಪಿಯ ಐಟಿ ಹ್ಯಾಂಡಲ್ಗಳು ಕೋಮು ಸೌಹಾರ್ದತೆ ಹಾಳುಮಾಡುವ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಆದ್ದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ, ಬಿಜೆಪಿ ಚಂಡೀಗಢ ಅಧ್ಯಕ್ಷ ಅರುಣ್ ಸೂದ್ ವಿರುದ್ಧ ದೂರು ನೀಡಿದ್ದೇವೆ. ಮುಂದೆ ಅವರ ವಿರುದ್ಧ ನಾವು ಕ್ರಮ ಕೈಗೊಳ್ಳಲಿದ್ದೇವೆ. ಇಂದು ನಾವು ದೂರು ದಾಖಲಿಸಿದ್ದೇನೆ, ಅದನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡಿಗರ ಮೇಲೆ ಯಾಕಿಷ್ಟು ದ್ವೇಷ? ನಾವೇನು ಪುಕ್ಸಟ್ಟೆಯಾಗಿ ಅಕ್ಕಿ ಕೇಳಿದ್ವಾ?: ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಏನಿದು ದೂರು?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ದುರುದ್ದೇಶಪೂರಿತ ಪೋಸ್ಟ್ಗಳು, ವಿಶೇಷವಾಗಿ ಕಾಂಗ್ರೆಸ್ ನಾಯಕರ ಭಾಷಣಗಳನ್ನು ತಿರುಚಿದ ಆನಿಮೇಟೆಡ್ ವೀಡಿಯೊಗಳನ್ನು ಪ್ರಸಾರ ಮಾಡುತ್ತಿರುವುದರ ವಿರುದ್ಧ ಪ್ರಿಯಾಂಕ್ ಖರ್ಗೆ ದೂರ ದಾಖಲಿಸಿದ್ದಾರೆ.
ಬಿಜೆಪಿಯ ಐಟಿ ಸೆಲ್ನ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಶೇರ್ ಮಾಡಿರುವ ವಿಡಿಯೋದಲ್ಲಿ, ಫೇಕ್ 3ಡಿ ಅನಿಮೇಟೆಡ್ ವಿಡಿಯೋ ಇದ್ದು, ಅದರಲ್ಲಿ ರಾಹುಲ್ ಗಾಂಧಿ ಅವರನ್ನು ದುರುದ್ದೇಶ ಪೂರಿತವಾಗಿ ಟಾರ್ಗೆಟ್ ಮಾಡಲಾಗಿದೆ. ಈ ವಿಡಿಯೋವನ್ನು ಬಿಜೆಪಿಯ ಪ್ರಮುಖ ನಾಯಕರಾದ ಜೆ.ಪಿ.ನಡ್ಡಾ ಮತ್ತು ಅರುಣ್ ಸೂದ್ ಅನುಮೋದಿಸಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
”ಈ ವಿಡಿಯೋವನ್ನು 2023ರ ಜೂನ್ 17ರಂದು ಅಮಿತ್ ಮಾಳವೀಯ ಅವರ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಷ್ಠೆಗೆ ಕಳಂಕ ತರುವ ಸ್ಪಷ್ಟ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಇದನ್ನು ಪ್ರಸಾರ ಮಾಡಲಾಗಿದೆ. ಕೋಮು ವೈಷಮ್ಯವನ್ನು ಪ್ರಚೋದಿಸಲು ಮತ್ತು ಪಕ್ಷ, ಅದರ ನಾಯಕರ ವ್ಯಕ್ತಿತ್ವವನ್ನು ತಪ್ಪಾಗಿ ನಿರೂಪಿಸುವ ಉದ್ದೇಶವೂ ಇದರಲ್ಲಿ ಅಡಗಿದೆ” ಎಂದು ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
”ಈ ವಿಡಿಯೋದಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ದೇಶವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ ಭಾಷಣದ ಸುಳ್ಳು ನಿರೂಪಣೆಗಳನ್ನು ಪ್ರಚಾರ ಮಾಡಲಾಗಿದೆ” ಎಂದು ಸಚಿವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
”ವೀಡಿಯೊದ ಆತಂಕಕಾರಿ ಅಂಶವೆಂದರೆ, ಇಸ್ಲಾಮಿಕ್ ನಂಬಿಕೆಯ ಜನರೊಂದಿಗೆ ರಾಹುಲ್ ಗಾಂಧಿಯವರು ಮಾತನಾಡುತ್ತಿರುವುದನ್ನು ತಪ್ಪಾಗಿ ನಿರೂಪಿಸಲಾಗಿದೆ. ಇದು ನಿಸ್ಸಂದೇಹವಾಗಿ ವಿವಿಧ ಧರ್ಮಗಳ ಜನರ ನಡುವೆ ದ್ವೇಷವನ್ನು ಉಂಟುಮಾಡುತ್ತದೆ. ಕೋಮು ವೈಷಮ್ಯವನ್ನು ಪ್ರಚಾರ ಮಾಡುತ್ತದೆ” ಎಂದು ಸಚಿವರು ಹೇಳಿದರು.
ಮಾಳವಿಯಾ ಅವರು ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ವೀಡಿಯೊವನ್ನು ಜೂನ್ 17ರಂದು ಹಂಚಿಕೊಂಡಿದ್ದು, ”ರಾಹುಲ್ ಗಾಂಧಿ ಅಪಾಯಕಾರಿ ಮತ್ತು ಕಪಟ ನಾಟಕ ಮಾಡುತ್ತಿದ್ದಾರೆ..” ಎಂಬ ಬರೆದಿದ್ದಾರೆ. ಮಾಳವಿಯಾ ಅವರು ಮಾರನೇ ದಿನ ಅದೇ ವೀಡಿಯೊವನ್ನು ಹಿಂದಿ ಉಪಶೀರ್ಷಿಕೆಗಳೊಂದಿಗೆ ರೀಪೋಸ್ಟ್ ಮಾಡಿದ್ದಾರೆ.
ಕಾಂಗ್ರೆಸ್ ಸಂವಹನ ವಿಭಾಗದ ಕರ್ನಾಟಕ ಘಟಕದ ಮುಖ್ಯಸ್ಥರೂ ಆಗಿರುವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ”ಈ ಮೂವರು ನಾಯಕರು, ಎರಡು ಕೋಮುಳ ನಡುವೆ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ. ಸಮಾಜದಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.