ಹನಿಟ್ರ್ಯಾಪ್ ಹೆಸರಿನಲ್ಲಿ ಮಾಜಿ ಸಚಿವ ಎನ್. ಮುನಿರತ್ನ ಅವರು ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂದು ಮಾಜಿ ಕಾರ್ಪೋರೇಟರ್ ವೇಲು ನಾಯ್ಕರ್ ಅವರು ಗಂಭೀರ ಆರೋಪ ಮಾಡಿದ್ದಾರೆ.
”ಈ ಹಿಂದೆ ಮುನಿರತ್ನ ಅವರು ಅಧಿಕಾರಿಗಳ ಮೇಲೆ ಹನಿಟ್ರ್ಯಾಪ್ ಮಾಡಿದ್ದರು. ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಒಂದೊಮ್ಮೆ ಗೊತ್ತಾದರೆ ಅವರ ಪರ ನಿಲ್ಲುತ್ತೇನೆ” ಎಂದು ವೇಲು ನಾಯ್ಕರ್ ಹೇಳಿದ್ದಾರೆ.
”ಈ ಹಿಂದೆ ಮುನಿರತ್ನ ಅವರು ಎಫ್ಎಸ್ಎಲ್ ಅಧಿಕಾರಿ ಮೇಲೆ ಹನಿಟ್ರ್ಯಾಪ್ ಮಾಡಿಸಿದ್ದರು. ಸದ್ಯ ಮುಖಗವಸು ಹಾಕಿಕೊಂಡು ಮುನಿರತ್ನ ವಿರುದ್ಧ ಆರೋಪ ಮಾಡಿದ ಸಂತ್ರಸ್ಥೆ ಯಾರೆಂದು ಗೊತ್ತಿಲ್ಲ. ಅವರ ಸ್ವರ ಕೇಳಿದ ರೀತಿ ಅನಿಸುತ್ತಿದೆ. ಅವರು ಮುಖಗವಸು ಇಲ್ಲದೆ ಮುಂದೆ ಬಂದರೆ ಯಾರಂತ ಗೊತ್ತಾಗಲಿದೆ. ಅವರು ನನ್ನ ಬಳಿ ಬಂದು ಸಹಾಯ ಕೇಳಿದರೆ ಅವರ ಬೆಂಬಲಕ್ಕೆ ನಿಲ್ಲುತ್ತೇವೆ” ಎಂದರು.
”ಯಾರೇ ಸಂತ್ರಸ್ಥರು ಬಂದು ನನ್ನ ಬೆಂಬಲ ಕೇಳಿದರು ನೆರವಿಗೆ ದಾವಿಸುತ್ತೇನೆ. ಮುನಿರತ್ನ ಅವರು, ತಾವು ಅಕ್ರಮ ಎಸಗಿಲ್ಲ ಎನ್ನುತ್ತಾರೆ, ಡಿಕೆ ಶಿವಕುಮಾರ್, ಡಿಕೆ ಸುರೇಶ್ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ.. ಆರ್ ಆರ್ ನಗರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೇಳುತ್ತಾರೆ. ಆದರೆ 9 ವಾರ್ಡ್ಗೆ ಅನುದಾನ ತಡೆ ಹಿಡಿದಿರುವುದು ಸ್ವತಃ ಮುನಿರತ್ನ ಅವರೇ.. ಹಾಗಾಗಿ ಈ ಕುರಿತು ತನಿಖೆ ನಡೆಯುತ್ತಿದೆ” ಎಂದು ತಿಳಿಸಿದರು.
”ಮಾಜಿ ಸಚಿವರಾಗಿರುವ ಮುನಿರತ್ನ ಸಣ್ಣ ಮರಿ. ಬಿಜೆಪಿ ನಾಯಕರಾಗಿ ನೀವು ಏನು ಮಾಡುತ್ತಿದ್ದೀರಿ? ಕುಮಾರಸ್ವಾಮಿಯವರನ್ನು ವೆಲ್ ಕಮ್ ಮಾಡಲು ನೀನು ಯಾಕೆ ಹೋದೆ? ಮುನಿರತ್ನ ಎಲ್ಲಿ ಕಾಲಿಟ್ಟಿದ್ದಾರೋ ಅಲ್ಲಿ ಸರ್ವ ನಾಶವಾಗಿದೆ. ಬಿಜೆಪಿ ಸೇರಿದರು, ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿತು.. ಪಕ್ಷ ಸೋತು ಸುಣ್ಣವಾಯಿತು. ನಿಖಿಲ್ ಕುಮಾರಸ್ವಾಮಿ ರಾಜಕೀಯವಾಗಿ ಬೆಳೆಯಬೇಕು ಆದರೆ ಮುನಿರತ್ನ ಅವರದ್ದು ಐರನ್ ಲೆಗ್, ಅವರ ಜೊತೆ ಇರಬೇಡಿ” ಎಂದು ವೇಲು ನಾಯ್ಕರ್ ಮನವಿ ಮಾಡಿದರು.
ಇದನ್ನೂ ಓದಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ