ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಬಗ್ಗೆ ಹಲವಾರು ದೇಶಗಳು ಮಾನವೀಯ ಆಧಾರದ ಮೇಲೆ ಕಳವಳ ವ್ಯಕ್ತಪಡಿಸುವುದರ ಜೊತೆಗೆ ಇಸ್ರೇಲ್ ಜೊತೆಗಿನ ತಮ್ಮ ರಾಜತಾಂತ್ರಿ ಸಂಬಂಧವನ್ನು ಕಡಿತಗೊಳಿಸಲು ಮುಂದಾಗಿದೆ.
ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಜರ್ಮನಿ ಯುಕೆ ಮತ್ತು ಭಾರತದಂತಹ ಪ್ರಭಾವಶಾಲಿ ರಾಷ್ಟ್ರಗಳು ಇಸ್ರೇಲ್ನೊಂದಿಗೆ ನಿಂತಿದೆ ಮತ್ತು ಈ ದೇಶಗಳು ಹಮಾಸ್ನ ದಾಳಿಯನ್ನು ಭಯೋತ್ಪಾದನಾ ದಾಳಿ ಎಂದು ಕರೆದು ಇಸ್ರೇಲ್ ದಾಳಿಯನ್ನು ಬೆಂಬಲಿಸಿದೆ.
ಆದರೆ ಯುಎನ್ ಮತ್ತು ಅಮ್ನೆಸ್ಟಿ ಇಂಟರ್ನ್ಯಾಶನಲ್, UNRWA (ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ), OHCHR (ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ) ಇಸ್ರೇಲ್ನಿಂದ ನಡೆದ ನರಮೇದ ಮತ್ತು ನಾಗರಿಕರ ಮೇಲಿನ ದಾಳಿ ಮತ್ತು ಮಾನವೀಯ ನೆರವಿನ ತಡೆ ಬಗ್ಗೆ ಗಮನಿಸಿದೆ.
ಬೊಲಿವಿಯಾವು ಇಸ್ರೇಲ್ನಲ್ಲಿರುವ ತನ್ನ ರಾಯಭಾರ ಕಚೇರಿಯನ್ನು ಮುಚ್ಚಿದ ಮೊದಲ ದೇಶವಾಗಿದ್ದು, ಅ.31ರಂದು ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಕಡಿತಗೊಳಿಸುವುದಾಗಿ ಸಂದೇಶವನ್ನು ಕಳುಹಿಸಿದೆ.
ಗಾಝಾ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್ ಮಿಲಿಟರಿ ಆಕ್ರಮಣವನ್ನು ಖಂಡಿಸಿ ಬೊಲಿವಿಯಾ ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಗಳನ್ನು ಮುರಿಯಲು ನಿರ್ಧರಿಸಿದೆ ಎಂದು ಉಪ ವಿದೇಶಾಂಗ ಸಚಿವ ಫ್ರೆಡ್ಡಿ ಮಾಮಾನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಬೊಲಿವಿಯಾ ಸಚಿವೆ ಮಾರಿಯಾ ನೆಲಾ ಪ್ರದಾ ಅವರು, ಗಾಝಾಕ್ಕೆ ಮಾನವೀಯ ನೆರವು ಕಳುಹಿಸುವುದಾಗಿ ಘೋಷಿಸಿದ್ದಾರೆ. ಗಾಝಾ ಪಟ್ಟಿಯಲ್ಲಿ ಇದುವರೆಗೆ ಸಾವಿರಾರು ನಾಗರಿಕರ ಸಾವುಗಳು ಮತ್ತು ಪ್ಯಾಲೆಸ್ತೀನ್ ಜನರ ಬಲವಂತದ ಸ್ಥಳಾಂತರಕ್ಕೆ ಕಾರಣವಾದ ದಾಳಿಗಳನ್ನು ಕೊನೆಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ನೆರೆಯ ಕೊಲಂಬಿಯಾ ಮತ್ತು ಚಿಲಿ ಕೂಡ ಗಾಜಾದಲ್ಲಿ ನಾಗರಿಕರ ಸಾವುಗಳನ್ನು ಖಂಡಿಸಿದೆ ಮತ್ತು ಕದನ ವಿರಾಮಕ್ಕೆ ಕರೆ ನೀಡಿ ತಮ್ಮ ರಾಯಭಾರಿಗಳನ್ನು ಇಸ್ರೇಲ್ನಿಂದ ವಾಪಾಸ್ಸು ಕರೆಸಿಕೊಂಡಿದೆ. ಲ್ಯಾಟಿನ್ ಅಮೆರಿಕದ ಎಡ-ಒಲವುಳ್ಳ ದೇಶಗಳು ಪ್ಯಾಲೆಸ್ತೀನ್ ಬಗ್ಗೆ ಸಹಾನುಭೂತಿ ಹೊಂದಿದೆ.
ಚಿಲಿಯ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಸಾಮಾಜಿಕ ಮಾಧ್ಯಮ ಸೈಟ್ X ನಲ್ಲಿ ಬರೆಯುತ್ತಾ, ಇಸ್ರೇಲ್ ಅಂತರಾಷ್ಟ್ರೀಯ ಮಾನವೀಯ ಕಾನೂನಿನ ಉಲ್ಲಂಘನೆ ಮಾಡಿದೆ. ಗಾಝಾದ ಜನರಿಗೆ ಸಾಮೂಹಿಕ ಶಿಕ್ಷೆ ನೀಡಲಾಗುತ್ತಿದೆ. ಇದರಿಂದಾಗಿ ತಮ್ಮ ರಾಯಭಾರಿ ಜಾರ್ಜ್ ಕಾರ್ವಾಜಾಲ್ ಅವರನ್ನು ಇಸ್ರೇಲ್ನಿಂದ ದೇಶಕ್ಕೆ ವಾಪಾಸ್ಸು ಕರೆಸಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಜೋರ್ಡಾನ್ ದೇಶವು ಕೂಡ ಇದೇ ರೀತಿಯ ನಿಲುವನ್ನು ಹೊಂದಿದೆ. ಜೋರ್ಡನ್ ಈ ಮೊದಲು ಯುಎನ್ ಜನರಲ್ ಅಸೆಂಬ್ಲಿಯಲ್ಲಿ ಗಾಝಾ ಕುರಿತು ನಿರ್ಣಯವನ್ನು ಮಂಡಿಸಿತ್ತು.
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರು ಇಸ್ರೇಲ್ನಲ್ಲಿರುವ ಕೊಲಂಬಿಯಾದ ರಾಯಭಾರಿಯನ್ನು ಮರಳಿ ಕರೆದಿದ್ದಾರೆ. ಅವರು ಗಾಝಾದಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅವರು ಇಸ್ರೇಲ್ ದಾಳಿಯನ್ನು ಪ್ಯಾಲೆಸ್ತೀನ್ ಜನರ ಹತ್ಯಾಕಾಂಡ ಎಂದು ಕರೆದಿದ್ದಾರೆ.
ಇಸ್ರೇಲ್ ಮಿಲಿಟರಿ ಪಡೆಗಳು ಗಾಝಾ ಮೇಲೆ ನಡೆಸಿದ ದಾಳಿಯನ್ನು ಕೊಲಂಬಿಯಾ ಖಂಡಿಸಿದೆ ಮತ್ತು ಕದನ ವಿರಾಮದ ತುರ್ತು ಮತ್ತು ಇಸ್ರೇಲ್ನ ಭದ್ರತಾ ಪಡೆಗಳು ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಪಾಲಿಸಬೇಕಾದ ಬಾಧ್ಯತೆಯನ್ನು ಪುನರುಚ್ಚರಿಸಿದೆ.
ಇದನ್ನು ಓದಿ: ಕೇರಳ: ಸಿಎಂ ಪಿಣರಾಯ್ ವಿಜಯನ್ಗೆ ಬೆದರಿಕೆ ಕರೆ