ಕಳೆದ ವರ್ಷ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಭಯೋತ್ಪಾದಕ ಆದಿತ್ಯ ರಾವ್ ಅಪರಾಧ ಸಾಬೀತಾಗಿದ್ದು, ಸ್ಥಳೀಯ ನ್ಯಾಯಾಲಯವು ಬುಧವಾರ ಆತನಿಗೆ ಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಮೆಕ್ಯಾನಿಕಲ್ ಇಂಜಿನಿಯರ್ ಕೂಡಾ ಆಗಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಇಟ್ಟಿದ್ದನು. ಈ ಆರೋಪ ಸಾಬೀತಾಗಿದ್ದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪಲ್ಲವಿ ಬಿ.ಆರ್. ಅವರು ಆದಿತ್ಯ ರಾವ್ನನ್ನು ಅಪರಾಧಿ ಎಂದು ಪರಿಗಣಿಸಿ 20 ವರ್ಷಗಳ ಜೈಲು ಶಿಕ್ಷೆಯ ಜೊತೆಗೆ 10,000 ರೂ. ದಂಡವನ್ನೂ ವಿಧಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಕಾಯ್ದೆಯಿಂದ ರಾಜ್ಯ ಧರ್ಮಾಂಧತೆಯ ಕೇಂದ್ರವಾಗಿದೆ: ಆದಿತ್ಯನಾಥ್ಗೆ 104 ಮಾಜಿ IAS ಅಧಿಕಾರಿಗಳ ಪತ್ರ
ಸ್ಫೋಟಕ ವಸ್ತುಗಳ ಕಾಯಿದೆ-1908 ರ ಸೆಕ್ಷನ್ 4 ರ ಅಡಿಯಲ್ಲಿ ಅಪರಾಧಗಳಿಗಾಗಿ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ-ತಡೆಗಟ್ಟುವಿಕೆ-ಕಾಯಿದೆ-1967 (ಯುಎಪಿಎ) ರ ಸೆಕ್ಷನ್ 16 ರ ಅಡಿಯಲ್ಲಿ ಅಪರಾಧಗಳಿಗಾಗಿ 20 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಲಾಯಿತು. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ ಆರು ತಿಂಗಳ ಸರಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಆದಿತ್ಯ ರಾವ್ ಏರ್ಪೋರ್ಟ್ನಲ್ಲಿ ಇಟ್ಟು ಹೋಗಿದ್ದ ಪೆಟ್ಟಿಗೆಯಲ್ಲಿ ಅಮೋನಿಯಂ ನೈಟ್ರೇಟ್, ಸಲ್ಫರ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಚಾಕೋರ್ಟ್ನಿಂದ ತಯಾರಿಸಿದ್ದ ಸ್ಪೋಟಕ ಇತ್ತು. ಅದನ್ನು ಬ್ಯಾಗ್ನಲ್ಲಿ ಸುತ್ತಿ ಏರ್ಪೋರ್ಟ್ನ ಡಿಪಾರ್ಚರ್ ಗೇಟ್ನ ಟಿಕೆಟ್ ಕೌಂಟರ್ ಬಳಿ ಇಡಲಾಗಿತ್ತು.
ಎಂಬಿಎ ಪದವಿ ಪಡೆದಿರುವ ಆದಿತ್ಯ ರಾವ್ ಘಟನೆಯ ನಂತರ ಬೆಂಗಳೂರಿನಲ್ಲಿ ಪೊಲೀಸರಿಗೆ ಶರಣಾಗಿದ್ದನು. ಬಾಂಬ್ ತಯಾರಿಸುವುದನ್ನು ಆನ್ಲೈನ್ ವಿಡಿಯೊದಲ್ಲಿ ನೋಡಿ ಕಲಿತಿದ್ದಾಗಿ ಆತ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
2018 ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆಯ ಕರೆ ಮಾಡಿ ಹಲವು ವಿಮಾನಗಳ ವೇಳಾಪಟ್ಟಿಯನ್ನು ಅಡ್ಡಿಪಡಿಸಿದ್ದಕ್ಕಾಗಿ ಬೆಂಗಳೂರು ಪೊಲೀಸರು ಆದಿತ್ಯನನ್ನು ಬಂಧಿಸಿದ್ದರು. ಕೆಐಎಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ನಿರಾಕರಿಸಲ್ಪಟ್ಟಿದ್ದಕ್ಕೆ ತಾನು ಈ ಕೃತ್ಯ ಎಸಗಿದ್ದಾಗಿ ಆದಿತ್ಯ ಹೇಳಿದ್ದಾನೆ ಎಂದು ವರದಿಯಾಗಿದೆ. ಅಲ್ಲದೆ, ಬೆಂಗಳೂರಿನ ರೈಲ್ವೇ ನಿಲ್ದಾಣಕ್ಕೆ ಕರೆ ಮಾಡಿ ಬೆದರಿಸಿದ್ದಕ್ಕಾಗಿ ಆತನನ್ನು ಹಿಂದೊಮ್ಮೆ ಬಂಧಿಸಲಾಗಿತ್ತು ಎಂದು ವರದಿಯಾಗಿದೆ.
ಇದನ್ನೂ ಓದಿ: ಮಂಗಳೂರು ಬಾಂಬ್ ಇಟ್ಟ ಆರೋಪಿ ಆದಿತ್ಯ ರಾವ್ ಬೆಂಗಳೂರಿನಲ್ಲಿ ಶರಣು