ವಿದೇಶಿಯರಿಗೆ ಜನಿಸಿದ ವ್ಯಕ್ತಿಯು ದೇಶಭಕ್ತನಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಹೆಸರಿಸದೆ ಅವಹೇಳನಕಾರಿಯಾಗಿ ಟೀಕಿಸಿದ್ದಾರೆ.
ಭೋಪಾಲ್ನ ಬಿಜೆಪಿ ಸಂಸದೆ ರಾಹುಲ್ ಗಾಂಧಿ ಮತ್ತು ಅವರ ತಾಯಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ದೇಶಪ್ರೇಮವನ್ನು ಪ್ರಶ್ನಿಸಿ ವಿವಾದವೆಬ್ಬಿಸಿದ್ದಾರೆ.
“ಚಾಣಕ್ಯ ಅವರು ಮಣ್ಣಿನ ಮಗನಿಂದ ಮಾತ್ರ ದೇಶವನ್ನು ರಕ್ಷಿಸಲು ಸಾಧ್ಯ ಎಂದು ಹೇಳಿದ್ದರು. ವಿದೇಶಿ ಮಹಿಳೆಗೆ ಜನಿಸಿದ ವ್ಯಕ್ತಿಯು ದೇಶಭಕ್ತನಾಗಲು ಸಾಧ್ಯವಿಲ್ಲ” ಎಂದು ಪ್ರಜ್ಞಾ ಠಾಕೂರ್ ಹೇಳಿದ್ದಾರೆ.
ನೀವು ಎರಡು ದೇಶಗಳ ಪೌರತ್ವವನ್ನು ಹೊಂದಿದ್ದರೆ, ನೀವು ದೇಶಭಕ್ತಿಯ ಯಾವುದೇ ಭಾವನೆಗಳನ್ನು ಹೇಗೆ ಹೊಂದಬಹುದು” ಎಂದು ರಾಹುಲ್ ಗಾಂಧಿಯನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷವು ನೈತಿಕತೆ, ನೀತಿ ಮತ್ತು ದೇಶಭಕ್ತಿಯಿಂದ ದೂರವಿದೆ ಎಂದು ಅವರು ಹೇಳಿದ್ದಾರೆ.
ಲಡಾಖ್ ಗಡಿ ವಿವಾದದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಪ್ರಗ್ಯಾರವರ ಟೀಕೆಗಳು, ಅವಹೇಳನಗಳು ಹೊರಬಂದಿವೆ.
“ಪ್ರಗ್ಯಾ ಠಾಕೂರ್ ಸಂಸದ ಸ್ಥಾನಕ್ಕೆ ಅವಮಾನವೆಸಗಿದ್ದಾರೆ. ಆಕೆ ಭಯೋತ್ಪಾದನೆ ಪ್ರಕರಣದಲ್ಲೂ ಭಾಗಿಯಾಗಿದ್ದಳು. ಈಗ ಆಕೆ ತನ್ನ ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಂಡಿರುವಂತೆ ತೋರುತ್ತಿದೆ. ಬಿಜೆಪಿ ಅವಳಿಗೆ ಚಿಕಿತ್ಸೆ ಕೊಡಿಸಬೇಕು” ಎಂದು ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ಜೆಪಿ ಧನೋಪಿಯಾ ಹೇಳಿದ್ದಾರೆ.
ಶುಕ್ರವಾರ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ “ಪ್ರಧಾನಿಗಳೆ, ನೀವು ಸತ್ಯವನ್ನು ಮಾತನಾಡಬೇಕು. ನೀವು ದೇಶಕ್ಕೆ ಸತ್ಯವನ್ನು ಹೇಳಬೇಕು. ಹಿಂಜರಿಯದಿರಿ. ಯಾರೂ ‘ಯಾವುದೇ ಭೂಮಿಯನ್ನು ತೆಗೆದುಕೊಳ್ಳಲಾಗಿಲ್ಲ’ ಎಂದು ನೀವು ಹೇಳಿದರೆ, ಅದು ಚೀನಾಕ್ಕೆ ಪ್ರಯೋಜನವನ್ನು ನೀಡುತ್ತದೆ. ನಾವು ಅವರೊಂದಿಗೆ ಒಟ್ಟಾಗಿ ಹೋರಾಡಬೇಕು ಮತ್ತು ಅವರನ್ನು ಹೊರಹಾಕಬೇಕು. ಆದ್ದರಿಂದ ನೀವು ಭಯಪಡದೆ ಸತ್ಯವನ್ನು ಮಾತನಾಡಬೇಕು. ‘ಹೌದು, ಚೀನಾ ನಮ್ಮ ಭೂಮಿಯನ್ನು ತೆಗೆದುಕೊಂಡಿದೆ ಮತ್ತು ನಾವು ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಹೇಳಿ. ಇಡೀ ದೇಶ ನಿಮ್ಮೊಂದಿಗೆ ನಿಂತಿದೆ.” ಎಂದು ಹೇಳಿದ್ದರು.
ದೇಶಭಕ್ತಿಯ ಪಾಟವನ್ನು ಭಯೋತ್ಪಾದಕರಿಂದ ಕಲಿಯುವ ಅಗತ್ಯ ಇಲ್ಲ.