Homeಕರೋನಾ ತಲ್ಲಣಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

ಬೀದಿಗೆ ಬಿದ್ದ ಲೋಹದ ಮೇಲೆ ಚಿತ್ತಾರ ಮೂಡಿಸುವ ಒನಿಪೆಂಟಾದ ಕಲಾವಿದರ ಬದುಕು

- Advertisement -
- Advertisement -

ಒನಿಪೆಂಟಾ ಆಂಧ್ರಪ್ರದೇಶದ ಒಂದು ಚಿಕ್ಕ ಹಳ್ಳಿ. ಹಿತ್ತಾಳೆ, ಕಂಚಿನ ಮೇಲೆ ಕುಸುರಿ ಕಲೆಗಾಗಿ ಜಗತ್‌ಪ್ರಸಿದ್ದವಾಗಿದ್ದ ಊರು. ದೇಶದ ಮೂಲೆ ಮೂಲೆಯಿಂದ, ಜಗತ್ತಿನ ನಾನಾ ದೇಶಗಳಿಂದ ಬರುವ ಪ್ರವಾಸಿಗಳಿಂದ ಒನಿಪೆಂಟಾ ಹಳ್ಳಿ ಒಂದು ಕಾಲದಲ್ಲಿ ತುಂಬಿರುತ್ತಿತ್ತು. ಬೇರೆ ಬೇರೆ ಭಾಷೆಯ ಜನರ ಮಾತಿನ ಕಲರವ ಕೇಳುತ್ತಿತ್ತು.  ಚೌಕಾಸಿಯ ವ್ಯಾಪಾರಗಳು ನಡೆಯುತ್ತಿತ್ತು. ಇಂದು ಒನಿಪೆಂಟಾದಲ್ಲಿ ಹೇಳಲಿಕ್ಕೆ ಏನೂ ಇಲ್ಲ. ಪ್ರವಾಸಿಗಳಿಲ್ಲ. ಕಲಾವಿದರೂ ಊರು ಬಿಡುವ ಹಂತಕ್ಕೆ ತಲುಪಿದ್ದಾರೆ. ಕೊರೋನಾ ಸಾಂಕ್ರಾಮಿಕದ ಆರ್ಥಿಕ ಹೊಡೆತಕ್ಕೆ ದೇಶದಲ್ಲಿ ನೂರಾರು ಕಸುಬುಗಳು ನಾಶವಾಗಿವೆ. ಅದರೆ ನಡುವೆ ಒನಿಪೆಂಟಾದ ಹಿತ್ತಾಳೆಯ ಕಲಾವಿದರ ಬದುಕು ಇನ್ನಷ್ಟು ದುಸ್ತರವಾಗಿದೆ.

ಕಳೆದ 15 ತಿಂಗಳುಗಳಿಂದ ಹಿತ್ತಾಳೆಯ ಕಲೆಯನ್ನೇ ನಂಬಿ, ಲೋಹದಲ್ಲಿ ಜೀವ ಹಿಡಿದು ಬದುಕುತ್ತಿದ್ದ ಒನಿಪೆಂಟಾ ಕಲಾವಿದರು ಕೆಲಸವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ದೇವಸ್ಥಾನಗಳು, ಶಾಲೆ – ಕಾಲೇಜುಗಳು, ಮಾರುಕಟ್ಟೆಗಳು ಕೊರೋನಾ ಕಾರಣಕ್ಕೆ ಬಂದ್‌ ಆಗಿರುವುದರಿಂದ ಹಿತ್ತಾಳೆ ಕಂಚುಗಳ ಮೇಲೆ ಚಿತ್ತಾರ ಮೂಡಿಸುತ್ತಿದ್ದ ಕಲಾವಿದರು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ.

ನೂರಕ್ಕು ಹೆಚ್ಚು ಕಲಾವಿದರು ಲೋಹದ ಕುಸುರಿ ಕಲೆಗಾರಿಕೆಯಲ್ಲಿಯೇ ತೊಡಗಿಕೊಂಡಿದ್ದಾರೆ. ಹಿತ್ತಾಳೆಯ ಕಲಾಕೃತಿಗಳ ತಯಾರಿಕೆಯಲ್ಲಿಯೇ ಜೀವನ ಆಧರಿಸಿದ್ದಾರೆ. ಅವರಿಗೆ ಸದ್ಯದಲ್ಲಿ ಯಾವ ಆದಾಯವೂ ಇಲ್ಲವಾಗಿದೆ ಎಂದು ಒನಪೆಂಟಾ ಲೋಹ ಕಲಾವಿದರ ಸಹಕಾರಿ ಸಂಘದ ಅಧ್ಯಕ್ಷ ಎಫ್.ಎಮ್‌ ಇಸ್ಮಾಯಿಲ್‌ ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ಆರಂಭವಾದಾಗಿನಿಂದ ವ್ಯಾಪರ ನೆಲ ಕಚ್ಚಿದೆ. ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಿಲ್ಲ. ಸರ್ಕಾರ ಸಾಂಪ್ರದಾಯಿಕ ಕಲೆಯಲ್ಲಿ ತೊಡಗಿರುವ ಕಲಾವಿದರ ಸಹಾಯಕ್ಕೆ ನಿಲ್ಲಬೇಕಿದೆ. ಒಂದಷ್ಟು ಪರಿಹಾರದ ರೀತಿಯಲ್ಲಿ ಸಹಾಯವನ್ನು, ಸಬ್ಸಿಡಿಯನ್ನು ನೀಡಬೇಕು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ : ರಾಜ್ಯಕ್ಕೆ ಹೆಚ್ಚಿನ ಲಸಿಕೆ ನೀಡುವಂತೆ ಆಗ್ರಹಿಸಿ ಪ್ರಧಾನಿ ಭೇಟಿಗೆ ಸಜ್ಜಾದ ತಮಿಳುನಾಡು ಸಿಎಂ ಸ್ಟಾಲಿನ್

ಕಳೆದ ಅನೇಕ ಶತಮಾನಗಳಿಂದ ತಲೆ ಮಾರುಗಳಿಂದ ತಲೆ ಮಾರುಗಳಿಗೆ ಈ ಕಂಚಿನ, ಹಿತ್ತಾಳೆಯ ಮೇಲೆ ಚಿತ್ತಾರ ಮೂಡಿಸುವ ಕಲೆ ಹರಿದು ಬಂದಿದೆ. ಇಷ್ಟು ವರ್ಷದಲ್ಲಿ ಹಿಂದೆ ಎಂದೂ ಇಂತಹ ವಿಪತ್ತುಗಳು ಬಂದಿರಲಿಲ್ಲ. ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್‌ ದೂರವಿರುವ ಒನಿಪೆಂಟಾ ಹಳ್ಳಿಯಲ್ಲಿ ಇಂದು ವಿಶೇಷವಾದ ಲೋಹದ ಕಲೆ ಅಳಿವಿನ ಅಂಚಿಗೆ ಬಂದು ತಲುಪಿದೆ. 13 ನೇ ಶತಮಾನದ ಜನಮೇಜಯಡು ಎಂಬ ರಾಜನ ಕಾಲದಿಂದ ಆರಂಭವಾದ ಲೋಹದ ಚಿತ್ತಾರ ಕಲೆ ಆ ಕಾಲದಲ್ಲಿ ಪೋಥುಲುರಿ ವೀರ ಬ್ರಹ್ಮೇಂದ್ರ ಸ್ವಾಮಿ ಎಂಬ ಕಲಾವಿದನಿಂದ ವಿಶ್ವಪ್ರಸಿದ್ಧವಾಯಿತು.

ಆರಂಭದಲ್ಲಿ ಈ ಊರನ್ನು ಕಾಮಸಲಿವನಿಪೆಂಟಾ ಎಂದು ಕರೆಯಲಾಗುತ್ತಿತ್ತು. ಕ್ರಮೇಣ ಊರಿನ ಹೆಸರು ಒನಿಪೆಂಟಾ ಎಂದಾಯಿತು. ಈ ಊರಿನಲ್ಲಿ ಸಧ್ಯ 500 ಕ್ಕೂ ಹೆಚ್ಚು ಕುಟುಂಬಗಳು ಹಿತ್ತಾಳೆಯ ಕರ ಕುಶಲ ವಸ್ತುಗಳ ತಯಾರಿಕೆಯಲ್ಲಿ ತೊಡಗಿದ್ದಾರೆ. ಭಿನ್ನ ಭಿನ್ನ ಶೈಲಿಯ ದೀಪಗಳು, ಚಿತ್ತಾರದ ಪಾತ್ರೆಗಳು, ವಿಭಿನ್ನ ಕಲಾಕೃತಿಗಳು ಒನಿಪೆಂಟಾ ಕಲಾವಿದರ ಕೈಯಲ್ಲಿ ತಯಾರಾಗಿ ಬಾಂಬೆ, ಹೈದ್ರಾಬಾದ್‌, ಬೆಂಗಳೂರು, ಚೆನ್ನೈಗೆ ಹೋಗುತ್ತಿದ್ದವು. ಹಾಗೇ ಕಚ್ಚಾ ಲೋಹಗಳು ಹೈದ್ರಾಬಾದ್‌, ಬೆಂಗಳೂರು, ಚೆನ್ನೈ, ಹೈದ್ರಾಬಾದ್‌ ನಗರಗಳಿಂದ ಒನಿಪೆಂಟಾ ಊರಿಗೆ ಬರುತ್ತವೆ. ಹಿತ್ತಾಳೆಯನ್ನು ಬಳಸಿಕೊಂಡು ಒನಿಪೆಂಟಾದ ಕಲಾವಿದರು, ಅಡಿಗೆ ಮನೆ ಪಾತ್ರೆ, ಪಗಡೆಗಳು, ಚಿತ್ರಗಳು, ದೇವ – ದೇವತೆಯ ವಿಗ್ರಹಗಳು, ಹಂಡೆಗಳು, ಸುಂದರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಒನಿಪೆಂಟಾದ ವಿಶೇಷ ಶೈಲಿಯ ಕುಸುರಿಯಿಂದ ಅಲಂಕೃತವಾದ ಯಾವುದೇ ಲೋಹವಿರಲಿ ಅದು ಮನೆಗೆ ಮೆರಗು ಕೊಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

ಮದುವೆಗಳಲ್ಲಿ ವಧುವಿಗೆ ಹಿತ್ತಾಳೆಯ ಪಾತ್ರೆ ಪಗಡೆಗಳನ್ನು ಕೊಟ್ಟು ಕಳುಹಿಸುವ ಸಂಪ್ರದಾಯವಿದೆ. ಹಾಗೇ ದೇವಸ್ಥಾನಗಳ ಧ್ವಜಸ್ಥಂಭ, ದೇವರ ವಿಗ್ರಹಗಳು, ಹಿತ್ತಾಳೆ ದೀಪಗಳು, ಗೋಪುರದ ಕಳಶ, ಗೋಡೆಗಳಿಗೆ ಲೇಪನ ಹೀಗೆ ವರ್ಷವಿಡಿ ಒಂದಿಲ್ಲೊಂದು ದೇವಸ್ಥಾನಗಳಲ್ಲಿ ಇಲ್ಲಿನ ಕಲಾವಿದರಿಗೆ ಕೆಲಸವಿರುತ್ತಿತ್ತು. ಆದರೆ ಕೊರೋನಾ ಕಾರಣದಿಂದ ಎಲ್ಲಿಂದಲೂ ಈ ಕಲಾವಿದರಿಗೆ ಕೆಲಸ ಬರುತ್ತಿಲ್ಲ. ಹಾಗಾಗಿ ಹಿತ್ತಾಳೆ ಮತ್ತು ಲೋಹದ ಕೆಲಸ ಮಾಡುತ್ತಿದ್ದ 500 ಕುಟುಂಬಗಳಲ್ಲಿ ಈಗ ಕೇವಲ 222 ಕುಟುಂಬಗಳು ಮಾತ್ರ ತಮ್ಮ ಸಾಂಪ್ರದಾಯಿಕ ಕಸುಬಿನಲ್ಲಿ ಉಳಿದಿವೆ. 100 ಕುಟುಂಬಗಳು ಚೆನ್ನೈ, ಹೈದ್ರಾಬಾದ್‌, ಬೆಂಗಳೂರಿನಂತಹ  ನಗರಗಳಿಗೆ ಬದುಕು ಅರಸಿ ವಲಸೆ ಹೋಗಿವೆ. ಉಳಿದ ಕೆಲವೇ ಕೆಲವರು ಇರುವ ಕೆಲಸವನ್ನೇ ನಂಬಿ ಜೀವ ಸಾಗಿಸುತ್ತಿದ್ದಾರೆ.

ನಮಗೆ ಬೇರೆ ಕೆಲಸ ಗೊತ್ತಿಲ್ಲ. ನಾವು ಹಿತ್ತಾಳೆಯ ಕುಸುರಿ ವೃತ್ತಿಯನ್ನು ಬಿಟ್ಟು ಬಿಡಲು ಸಾದ್ಯವಿಲ್ಲ. ನಮ್ಮ ತಲತಲಾಂತರದಿಂದ ನಡೆಸಿಕೋಂಡು ಬಂದಿದ್ದೇವೆ. ಈ ಕಾಲ ಸರಿದು ಮುಂದೆ ನಮಗೂ ಒಳ್ಳೆಯ ದಿನಗಳು ಬರಬಹುದು.‌ ಹಿತ್ತಾಳೆಯೂ ಹೊಳೆಯಬಹುದು ಎನ್ನುತ್ತಾರೆ ಮೋರ್ ವಿರೋಜಿ ಮತ್ತು ಮುಕ್ತಿಯಾ ಭಾಷಾ ಎಂಬ ಒನಿಪೆಂಟಾದ ಕಲಾವಿದರು.

ಕೊರೋನಾ ಸಾಂಕ್ರಾಮಿಕ ಕಳೆದು ಒನಿಪೆಂಟಾ ಕಲಾವಿದರಿಗೆ ಒಂದಷ್ಟು ನೆಮ್ಮದಿಯ ಉಸಿರಾಡುವ ಕಾಲ ಬರಲಿ. ತಲ ತಲಾಂತರದಿಂದ ಕಾಪಾಡಿಕೊಂಡು ಬಂದಿರುವ ಒನಿಪೆಂಟಾದ ದೇಸೀ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಲು ಸರ್ಕಾರಗಳೂ ಒಂದಷ್ಟು ಪ್ರಯತ್ನ ಪಡಬೇಕು. ಒನಿಪೆಂಟಾದ ಕಲಾವಿದರಿಗೆ  ಸರ್ಕಾರಗಳು ಆರ್ಥಿಕವಾಗಿ ಸಹಾಯ ಮಾಡಿ ಅವರನ್ನು ಮೇಲೆತ್ತಬೇಕು.


ಇದನ್ನೂ ಓದಿ :ಗೋಹತ್ಯೆ ತಡೆ ಕಾನೂನಿನ ದುರ್ಬಳಕೆ: ಪೊಲೀಸರ ವಿರುದ್ಧ ಅಲಹಾಬಾದ್ ಹೈಕೋರ್ಟ್ ಗರಂ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...