ಪಶ್ಚಿಮ ಬಂಗಾಳದ ಶಾಲಿಮಾರ್ ನಿಲ್ದಾಣದಿಂದ ತಮಿಳುನಾಡಿನ ಚೆನ್ನೈಗೆ ತೆರಳುವ ಕೋರಮಂಡಲ್ ಎಕ್ಸ್ಪ್ರೆಸ್ ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಹೀಗಾಗಿ ಕನಿಷ್ಠ 179 ಜನರು ಗಾಯಗೊಂಡಿದ್ದಾರೆ ಎಂದು ಸದ್ಯದ ವರದಿಗಳು ಹೇಳುತ್ತಿವೆ.
ಬಾಲಸೋರ್ ಜಿಲ್ಲೆಯ ಬಹನಾಗಾ ರೈಲು ನಿಲ್ದಾಣದ ಬಳಿ ಅಪಘಾತ ಸಂಭವಿಸಿದ್ದು, ಸೂಪರ್ಫಾಸ್ಟ್ ರೈಲಿನ ಪಲ್ಟಿಯಾದ ಕೋಚ್ಗಳಲ್ಲಿ ಹೆಚ್ಚಿನವರು ಸಿಕ್ಕಿಹಾಕಿಕೊಂಡಿದ್ದಾರೆ. ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿದ್ದ ಹಲವಾರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ‘ಹಿಂದೂಸ್ಥಾನ್ ಟೈಮ್ಸ್’ ಸುದ್ದಿಜಾಲತಾಣವು ರಾತ್ರಿ 9.20ಕ್ಕೆ ಅಪ್ಡೇಟ್ ಮಾಡಿರುವ ಮಾಹಿತಿಯ ಪ್ರಕಾರ ‘30 ಮಂದಿ ಕೊನೆಯುಸಿರೆಳೆದಿದ್ದಾರೆ’.
#WATCH | Odisha: Several feared injured after Coromandel Express derails near Bahanaga station in Balasore. pic.twitter.com/GQmuIyApug
— ANI (@ANI) June 2, 2023
ಕೋಲ್ಕತ್ತಾ ಬಳಿಯ ಶಾಲಿಮಾರ್ ನಿಲ್ದಾಣದಿಂದ ಚೆನ್ನೈ ಸೆಂಟ್ರಲ್ ನಿಲ್ದಾಣಕ್ಕೆ ಈ ರೈಲು ತೆರಳುತ್ತಿದ್ದಾಗ ಬಹನಾಗಾ ಬಜಾರ್ ನಿಲ್ದಾಣದ ಬಳಿ ರಾತ್ರಿ 7.20ರ ಸುಮಾರಿಗೆ ಅಪಘಾತ ಸಂಭವಿಸಿದೆ.
ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಎಕ್ಸ್ಪ್ರೆಸ್ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಗಾಯಗೊಂಡ ಪ್ರಯಾಣಿಕರನ್ನು ಬಾಲಸೋರ್ ವೈದ್ಯಕೀಯ ಕಾಲೇಜು, ಸೊರೊದಲ್ಲಿನ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಗೋಪಾಲಪುರ, ಖಾಂತಪಾದದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದೊಯ್ಯಲಾಗುತ್ತಿದೆ.
ವಿಶೇಷ ಪರಿಹಾರ ಆಯುಕ್ತರ (ಎಸ್ಆರ್ಸಿ) ಕಚೇರಿಯು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಅಪಘಾತದ ಸ್ಥಳಕ್ಕೆ ತಂಡಗಳನ್ನು ಕಳುಹಿಸಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ ಅಗ್ನಿಶಾಮಕ ದಳವನ್ನು ನಿಯೋಜಿಸಿದ್ದಾರೆ. ಎಸ್ಆರ್ಸಿಯ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ.
ಒಡಿಶಾ ಸರ್ಕಾರವು ಕಾರ್ಯಾಚರಣೆಗೆ ಸಹಾಯ ಮಾಡಲು ಅಪಘಾತ ಸ್ಥಳದಲ್ಲಿ ಜನರೇಟರ್ ಮತ್ತು ಲೈಟ್ ವ್ಯವಸ್ಥೆ ಮಾಡಿದೆ.
ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಐದು ಆಂಬ್ಯುಲೆನ್ಸ್ಗಳನ್ನು ಕಳುಹಿಸಲಾಗಿದೆ ಎಂದು ಒಡಿಶಾ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಒಡಿಶಾ ರಾಜ್ಯ ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಹೆಚ್ಚುವರಿ ನಿರ್ದೇಶನಾಲಯ ಕೂಡ 15 ಆಂಬ್ಯುಲೆನ್ಸ್ಗಳನ್ನು ಸ್ಥಳಕ್ಕೆ ಕಳುಹಿಸಿದೆ.
ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲು, ಅಪಘಾತ ಸ್ಥಳಕ್ಕೆ ತುರ್ತಾಗಿ ಭೇಟಿ ನೀಡಲು ಮತ್ತು ರಾಜ್ಯ ಮಟ್ಟದಿಂದ ಯಾವುದೇ ಹೆಚ್ಚುವರಿ ಸಹಾಯದ ಅಗತ್ಯವಿದ್ದರೆ ಎಸ್ಆರ್ಸಿಗೆ ತಿಳಿಸಲು ಬಾಲಸೋರ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸೂಚಿಸಲಾಗಿದೆ.
ಕೋರಮಂಡಲ್ ಎಕ್ಸ್ಪ್ರೆಸ್ ಎಂಜಿನ್, ಗೂಡ್ಸ್ ರೈಲಿನ ಮೇಲೆ ಹತ್ತಿರುವುದನ್ನು ಘಟನೆಯ ದೃಶ್ಯಾವಳಿಗಳು ತೋರಿಸಿವೆ. ಪ್ರಾಥಮಿಕ ಮಾಹಿತಿ ಪ್ರಕಾರ ಎರಡೂ ರೈಲುಗಳು ಒಂದೇ ರೈಲು ಹಳಿಯಲ್ಲಿದ್ದವು. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದೆ.
ಸಹಾಯವಾಣಿ ಸಂಖ್ಯೆ 06782262286 ತೆರೆಯಲಾಗಿದ್ದು, ತುರ್ತು ಸೇವೆ ಒದಗಿಸಲಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಪ್ರತಿಕ್ರಿಯಿಸಿದ್ದು, “ಘಟನೆ ತಿಳಿದು ಆಘಾತವಾಗಿದೆ. ಪಶ್ಚಿಮ ಬಂಗಾಳದಿಂದ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಶಾಲಿಮಾರ್-ಕೊರಮಂಡಲ್ ಎಕ್ಸ್ಪ್ರೆಸ್ ಇಂದು ಸಂಜೆ ಬಾಲಸೋರ್ ಬಳಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಜನರು ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದು ಆಘಾತವಾಯಿತು” ಎಂದಿದ್ದಾರೆ.
“ನಮ್ಮ ಜನರ ಸಲುವಾಗಿ ನಾವು ಒಡಿಶಾ ಸರ್ಕಾರ ಮತ್ತು ಆಗ್ನೇಯ ರೈಲ್ವೆಯೊಂದಿಗೆ ಸಂಪರ್ಕದಲ್ಲಿದ್ದೇವೆ. ನಮ್ಮ ತುರ್ತು ನಿಯಂತ್ರಣ ಕೊಠಡಿಯನ್ನು (033- 22143526/ 22535185) ಸಕ್ರಿಯಗೊಳಿಸಲಾಗಿದೆ. ಒಡಿಶಾ ಸರ್ಕಾರ ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಸಹಕರಿಸಲು, ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಲು ನಾವು 5- 6 ಸದಸ್ಯರ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ” ಎಂದು ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.