ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್)ಯು ಸೋಮವಾರ ತನ್ನ ಎಲ್ಲಾ ರಾಜ್ಯಸಭಾ ಸಂಸದರಿಗೆ ಸದನದಲ್ಲಿ ಹಾಜರಾಗುವಂತೆ ಮತ್ತು ದೆಹಲಿ ಸೇವೆಗಳ ಸುಗ್ರೀವಾಜ್ಞೆ ಮಸೂದೆಯ ವಿರುದ್ಧ ಮತ ಚಲಾಯಿಸುವಂತೆ ವಿಪ್ ಜಾರಿಗೊಳಿಸಿದೆ.
”ಬಿಆರ್ಎಸ್ (ರಾಜ್ಯಸಭೆ)ನ ಎಲ್ಲಾ ಸಂಸದರು ದೆಹಲಿ ಸೇವೆಗಳ ಸುಗ್ರೀವಾಜ್ಞೆ ಮಸೂದೆಯನ್ನು ಸದನದ ಮುಂದೆ ಯಾವುದೇ ಸಮಯದಲ್ಲಿ ತರಬಹುದು ಹಾಗಾಗಿ ಪಕ್ಷದ ಎಲ್ಲ ಸದಸ್ಯರು ಅದರ ವಿರುದ್ಧ ಮತ ಚಲಾಯಿಸಲು ವಿನಂತಿಸಲಾಗಿದೆ” ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ಮೇಲ್ಮನೆಯಲ್ಲಿ ಬಿಆರ್ಎಸ್ ಏಳು ಸಂಸದರನ್ನು ಹೊಂದಿದೆ. ”ಜುಲೈ 31ರಿಂದ ಆಗಸ್ಟ್ 4ರವರೆಗೆ ಮತ್ತು ಮಸೂದೆಯ ಮೇಲಿನ ಮತದಾನ ಮುಗಿಯುವವರೆಗೆ ಅವರೆಲ್ಲರೂ ಸದನದಲ್ಲಿ ಹಾಜರಿರಬೇಕು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೆಹಲಿಯ NCT ಸರ್ಕಾರ (ತಿದ್ದುಪಡಿ) ಸುಗ್ರೀವಾಜ್ಞೆಯು ದೆಹಲಿ ಸರ್ಕಾರದಿಂದ ಸೇವೆಗಳ ಮೇಲಿನ ನಿಯಂತ್ರಣವನ್ನು ತೆಗೆದುಹಾಕುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: INDIAದ ನಿಯೋಗವು ಮಣಿಪುರ ಜನರ ಕಣ್ಣೀರು ಒರೆಸಿ ಬಂದಿದೆ: ರಾಘವ್ ಚಡ್ಡಾ
ಮಸೂದೆ ವಿಚಾರಕ್ಕೆ ಕೇಂದ್ರದ ವಿರುದ್ಧ ಎಎಪಿ ಸಂಸದ ಕಿಡಿ
ಸುಗ್ರೀವಾಜ್ಞೆಯನ್ನು ಪ್ರಜಾಸತ್ತಾತ್ಮಕವಲ್ಲ ಎಂದು ಕರೆದ ಎಎಪಿ ಸಂಸದ ರಾಘವ್ ಚಡ್ಡಾ, ರಾಷ್ಟ್ರ ರಾಜಧಾನಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರ್ಕಾರವನ್ನು ನಾಶಮಾಡಲು ಇದು ಬಿಜೆಪಿಯ ತಂತ್ರವಾಗಿದೆ ಎಂದು ಹೇಳಿದರು.
”ಈ ಮಸೂದೆ ಕೇವಲ ದೇಶದ ಸಂವಿಧಾನದ ವಿರುದ್ಧ ಮಾತ್ರವಲ್ಲದೆ ದೆಹಲಿಯ 2 ಕೋಟಿ ಜನರ ವಿರುದ್ಧವೂ ಆಗಿದೆ. ದೆಹಲಿಯ ಜನರು ಅವರನ್ನು ಧಿಕ್ಕರಿಸಿ, ಎಎಪಿಗೆ ಬೆಂಬಲಿಸಿದ್ದಾರೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಇದೀಗ ದೆಹಲಿ ಸರ್ಕಾರವನ್ನು ನಾಶಮಾಡಲು ನಿರ್ಧಾರವನ್ನು ತೆಗೆದುಕೊಂಡಿದೆ” ಎಂದು ಅವರು ಹೇಳಿದರು.
ಆಗಸ್ಟ್ 4ರವರೆಗೆ ಸದನದಲ್ಲಿ ಹಾಜರಿರಲು ರಾಜ್ಯಸಭೆಯಲ್ಲಿ ತನ್ನ ಎಲ್ಲಾ ಸಂಸದರಿಗೆ ಎಎಪಿ ಮೂರು ಸಾಲಿನ ವಿಪ್ ನೀಡಿದೆ. ಈ ಮಸೂದೆಯು ದೆಹಲಿ ಸರ್ಕಾರಕ್ಕೆ ವರ್ಗಾವಣೆ ಮತ್ತು ಪೋಸ್ಟಿಂಗ್ ಅಧಿಕಾರವನ್ನು ನೀಡುವ ಸುಪ್ರೀಂ ಕೋರ್ಟ್ ಆದೇಶವನ್ನು ನಿರಾಕರಿಸುವ ಸುಗ್ರೀವಾಜ್ಞೆಯನ್ನು ಬದಲಿಸಲು ಪ್ರಯತ್ನಿಸುತ್ತದೆ.
ಕೇಂದ್ರ ಸರ್ಕಾರವು ಉಭಯ ಸದನಗಳಲ್ಲಿ ಸಾಕಷ್ಟು ಸಂಖ್ಯಾಬಲ ಹೊಂದಿದ್ದರೂ ಮಸೂದೆ ಅಂಗೀಕಾರವನ್ನು ವಿರೋಧಿಸುವುದಾಗಿ I.N.D.I.A ಗುಂಪು ಈ ಹಿಂದೆ ಹೇಳಿತ್ತು.