Homeಮುಖಪುಟಚಿಕ್ಕಬಳ್ಳಾಪುರ ಉಪಚುನಾವಣೆ: ಬಿಜೆಪಿಗೆ ನೆಲೆಯೇ ಇಲ್ಲದ ಕಡೆ ಸುಧಾಕರ್ ತಿಣುಕಾಟ

ಚಿಕ್ಕಬಳ್ಳಾಪುರ ಉಪಚುನಾವಣೆ: ಬಿಜೆಪಿಗೆ ನೆಲೆಯೇ ಇಲ್ಲದ ಕಡೆ ಸುಧಾಕರ್ ತಿಣುಕಾಟ

- Advertisement -
- Advertisement -

ಚಿಕ್ಕಬಳ್ಳಾಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಅಂತಹ ಹೆಚ್ಚಿನ ಕುತೂಹಲವಿರಲಿಲ್ಲ. ಆದರೆ ಅಲ್ಲಿ ಇದ್ದಕ್ಕಿದ್ದಂತೆ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆಯುವ ಲಕ್ಷಣಗಳು ಕಾಣುತ್ತಿವೆ. ಸುಧಾಕರ್ ಅನರ್ಹಗೊಂಡಿದ್ದರಿಂದ ಈ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆಯುತ್ತಿದೆ.. ಕ್ಷೇತ್ರದಲ್ಲಿ ಈಗಾಗಲೇ ಮೂರು ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು ಅಭ್ಯರ್ಥಿಗಳ ಪರ ಮತಕ್ಕಾಗಿ ಬೇಡಿಕೊಳ್ಳುತ್ತಿದ್ದಾರೆ. ಮೂರು ಪಕ್ಷಗಳು ಕೂಡ ಒಕ್ಕಲಿಗ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿವೆ. ಹೀಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಪಡೆಯುವ ಅಭ್ಯರ್ಥಿ ಗೆಲುವು ಖಚಿತ.

ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಂದಿ ಆಂಜಿನಪ್ಪ, ಜೆಡಿಎಸ್ ಪಕ್ಷದಿಂದ ಯುವ ಮುಖಂಡ ರಾಧಾಕೃಷ್ಣ, ಬಿಜೆಪಿ ಪಕ್ಷದಿಂದ ಅನರ್ಹ ಶಾಸಕ ಡಾ.ಕೆ ಸುಧಾಕರ್ ಸ್ಪರ್ಧೆಗಿಳಿದಿದ್ದಾರೆ. ಚಿಕ್ಕಬಳ್ಳಾಪುರ ಕೇಂದ್ರ ಮತ್ತು ಜಿಲ್ಲೆಯಲ್ಲಿ ಹಿಂದಿನಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಾಬಲ್ಯ ಮೆರೆಯುತ್ತಾ ಬಂದಿವೆ. ಈ ಕಾರಣಕ್ಕಾಗಿಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‍ನಿಂದ ಸ್ಪರ್ಧಿಸಿದ್ದ ಡಾ.ಸುಧಾಕರ್ ಗೆಲುವು ಸಾಧಿಸಿದ್ದು. 2013ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪ್ರಭಾವ ಬಳಸಿ ಸುಧಾಕರ್ ಟಿಕೆಟ್ ಗಿಟ್ಟಿಸಿಕೊಂಡಿದ್ದರಲ್ಲದೆ ಗೆದ್ದೂ ಬಂದಿದ್ದರು. 2018ರ ಹೊತ್ತಿಗೆ ಅವರು ಸಿದ್ದರಾಮಯ್ಯ ‘ಆಪ್ತ’ರಾಗಿ ಬದಲಾಗಿದ್ದರು. ಬದಲಾದ ಕಾಲಘಟ್ಟದಲ್ಲಿ ಸುಧಾಕರ್ ಬಿಜೆಪಿಯಿಂದ ಸ್ಪರ್ಧಿಸಿ ಮತ್ತೆ ಮತಭಿಕ್ಷೆಗೆ ಬಂದಿದ್ದಾರೆ. ಸುಧಾಕರ್‍ರ ಕ್ಷಣಕ್ಕೊಂದು ಬಣ್ಣ ಬದಲಿಸುವ ಊಸರವಳ್ಳಿ ನಡವಳಿಕೆಯು ಅವಕಾಶವಾದಿಯೆಂಬುದನ್ನು ಸಾಬೀತುಪಡಿಸಿದೆ. ಆದರೆ, ಕ್ಷೇತ್ರದಲ್ಲೂ ಅದೇ ಅಭಿಪ್ರಾಯ ಇದೆಯೆಂದು ಹೇಳಲಾಗದು. ಈ ಅವಧಿಯಲ್ಲಿ ತನ್ನ ಅಗ್ರೆಸಿವ್ ರಾಜಕಾರಣದಿಂದ ತನ್ನದೇ ಪಡೆಯನ್ನು ಕಟ್ಟಿಕೊಂಡಿದ್ದಾರೆ.

ಸುಧಾಕರ್‌ಗಿರುವ ಪ್ಲಸ್ ಪಾಯಿಂಟ್ಸ್

ಚಿಕ್ಕಬಳ್ಳಾಪುರದಲ್ಲಿ ನಾಲ್ಕು ಹೋಬಳಿಗಳಿವೆ. ಅವುಗಳೆಂದರೆ ನಂದಿ, ಮಂಚೇನಹಳ್ಳಿ, ಮಂಡಿಕಲ್ಲು ಮತ್ತು ಕಸಬಾ. ಈ ನಾಲ್ಕು ಹೋಬಳಿಗಳ ಪೈಕಿ ಸುಧಾಕರ್ ಅವರಿಗೆ ಕಸಬಾ, ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಟೌನ್‍ನಲ್ಲಿ ಲೀಡ್ ಸಿಗುವ ಸಾಧ್ಯತೆ ಇದೆ. ಯಡಿಯೂರಪ್ಪನವರು ಮಂಚೇನಹಳ್ಳಿ ಹೋಬಳಿಯನ್ನು ತಾಲೂಕನ್ನಾಗಿ ಮಾಡುವ ಆದೇಶ ನೀಡಿರುವುದು ಸುಧಾಕರ್‍ಗೆ ಮತ್ತಷ್ಟು ಪ್ಲಸ್ ಪಾಯಿಂಟ್ ಆಗುತ್ತದಾ ಎಂಬುದನ್ನು ನೋಡಬೇಕು. ಜೊತೆಗೆ ಬಿಜೆಪಿ ಮುಖಂಡ ಪಿ.ಸಿ.ಮೋಹನ್ ಸುಧಾಕರ್ ಪರ ಪ್ರಚಾರ ಮಾಡುತ್ತಿರುವುದರಿಂದ ಬಲಜಿಗರ ಮತಗಳು ಇತ್ತ ವಾಲಬಹುದು.

ಸುಧಾಕರ್ ಬೆಂಬಲಿಗ ಕಾಂಗ್ರೆಸ್‍ನ ಪ್ರಕಾಶ್ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ನೀಡಿ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಸೆಳೆಯಲು ನೋಡಿದ್ದರು. ಆದರೆ, ಪ್ರಕಾಶ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವುದು ಅವರ ಕೈಲಿ ಆಗಲಿಲ್ಲ. ಬದಲಿಗೆ ಬಂಡಾಯ ಅಭ್ಯರ್ಥಿ ಚಿನ್ನಿ ಜಿ.ಪಂ ಅಧ್ಯಕ್ಷರಾಗಿಬಿಟ್ಟರು. ಈ ಹಿನ್ನೆಲೆಯಲ್ಲಿ ಪ್ರಕಾಶ್‍ಗೆ ಸ್ಥಾನ ಸಿಕ್ಕರೆ ಸುಧಾಕರ್‍ರನ್ನು ಬಿಡುವ ಸಾಧ್ಯತೆಯಿದ್ದ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿ, ಮರಳುಕುಂಟೆ ಕೃಷ್ಣಮೂರ್ತಿ ಈಗ ಡಾ.ಸುಧಾಕರ್ ಬೆನ್ನಿಗೆ ನಿಂತಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದಾಗ ಸುಧಾಕರ್ 82 ಸಾವಿರ ಮತ ಪಡೆದಿದ್ದರು. ಪ್ರತಿಸ್ಪರ್ಧಿ ಜೆಡಿಎಸ್ ಅಭ್ಯರ್ಥಿ ಕೆ.ಪಿ.ಬಚ್ಚೇಗೌಡ 50 ಸಾವಿರ ಮತ ಗಳಿಸಿದ್ದರು. ಅಂದರೆ ಸುಧಾಕರ್ 30 ಸಾವಿರ ಓಟುಗಳ ಅಂತರದಿಂದ ವಿಜಯ ಸಾಧಿಸಿದ್ದರು. 2014ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಕೇವಲ 5 ಸಾವಿರ ಮತ ಪಡೆಯಲು ಸಾಧ್ಯವಾಗಿತ್ತು. ಆಚೆಗಿನ ಚುನಾವಣೆಯಲ್ಲಿ ಕೇವಲ ಮೂರು ಸಾವಿರ ಮತ ಪಡೆದಿದ್ದರು. ಹೀಗಾಗಿ ಬಿಜೆಪಿಯ ಸಾಂಪ್ರದಾಯಿಕ ಮತಗಳು ಎಂಬುದು ಈ ಕ್ಷೇತ್ರದಲ್ಲಿಲ್ಲ. ಆದ್ದರಿಂದಲೇ ಸುಧಾಕರ್ ತಿಣುಕಾಡುತ್ತಿದ್ದಾರೆ. ಈಗ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಸುದ್ದಿಯೆಂದರೆ ಸುಧಾಕರ್ ತನ್ನ ಸಾಯಿಕೃಷ್ಣ ಟ್ರಸ್ಟ್ ಮೂಲಕ ಮನೆಮನೆಗೂ ಟಿವಿ, ಕುಕ್ಕರ್, ಮಿಕ್ಸಿ, ಮಹಿಳೆಯರಿಗೆ ಸೀರೆ ಕೊಟ್ಟಿರುವುದಲ್ಲದೆ ಜನರಿಗೆ ಸಾಲವನ್ನೂ ಕೊಡಿಸಿದ್ದಾರೆ. ಇವೆಲ್ಲವನ್ನೂ ‘ಸರಿಯಾಗಿ’ ತಲುಪಿಸಲು ಅವರು ಸೂಚಿಸಿರುವ ಆಡಿಯೋ ಎಲ್ಲೆಡೆ ಓಡಾಡುತ್ತಿದೆ.

ಆದರೆ ಕ್ಷೇತ್ರದಲ್ಲಿ ಸುತ್ತಾಡಿ ಜನರನ್ನು ಮಾತನಾಡಿಸಿದರೆ ಸುಧಾಕರ್ ಬಗ್ಗೆ ಅಷ್ಟೊಂದು ಒಲವು ವ್ಯಕ್ತಪಡಿಸುತ್ತಿಲ್ಲ. ಸುಧಾಕರ್ ಅಭಿವೃದ್ಧಿ ಕೆಲಸಗಳು ಮಾಡಿರುವ ಕುರಿತು ಪರ-ವಿರೋಧದ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿವೆ. ಜೊತೆಗೆ ಸುಧಾಕರ್ ಸಮಯಸಾಧಕ. ವಿಶ್ವಾಸಕ್ಕೆ ಅರ್ಹನಲ್ಲದ ವ್ಯಕ್ತಿ. ಗಿಮಿಕ್ ಮಾಡುವುದರಲ್ಲಿ ಎತ್ತಿದ ಕೈ. ಸುಧಾಕರ್ ಶಾಸಕರಾಗಿದ್ದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಪ್ರಯತ್ನಪಟ್ಟಿಲ್ಲ. ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡು 7 ವರ್ಷವಾಯಿತು. ಇದುವರೆಗೂ ಜಿಲ್ಲೆಗೆ ನೀರು ತರಲು ಸಾಧ್ಯವಾಗಿಲ್ಲ. ನೀರಾವರಿಗೆ ಸೌಲಭ್ಯ ಕಲ್ಪಿಸಿಲ್ಲ. ಒಂದೇ ಒಂದು ಇಂಡಸ್ಟ್ರಿ ತಂದಿಲ್ಲ. ಎಚ್.ಎನ್. ವ್ಯಾಲಿ ಮೂಲಕ ಕುಡಿಯುವ ನೀರು ತರುವ ಭರವಸೆ ನೀಡಿದ ಸುಧಾಕರ್ ಅದನ್ನು ಕೊಡಲು ಸಾಧ್ಯವಾಗಿಲ್ಲ ಎಂಬುದು ಜೆಡಿಎಸ್ ಸ್ಥಳೀಯ ಮುಖಂಡರ ಆರೋಪ.

ಸದ್ಯಕ್ಕೆ ಜೆಡಿಎಸ್ ನಿಂದ ಕೆ.ಪಿ.ಬಚ್ಚೇಗೌಡ ಮತ್ತು ಯುವ ಮುಖಂಡ ರಾಧಾಕೃಷ್ಣ ನಾಮಪತ್ರ ಸಲ್ಲಿಸಿದ್ದಾರೆ. ರಾಧಾಕೃಷ್ಣ ಹಣವಿರುವ ಕುಳ. ಎಷ್ಟು ಬೇಕಾದರೂ ಖರ್ಚು ಮಾಡಬಲ್ಲ ಸಾಮಥ್ರ್ಯವಿರುವ ವ್ಯಕ್ತಿ. ಆದರೆ ಕಣದಲ್ಲಿ ಯಾರು ಉಳಿಯುತ್ತಾರೆಂಬುದರ ಮೇಲೆ ಮತಗಳು ಬೀಳಲಿವೆ. ಇನ್ನು ಕಾಂಗ್ರೆಸ್ ನಂದಿ ಅಂಜನಪ್ಪ ಅವರನ್ನು ಕಣಕ್ಕಿಳಿಸಿದೆ. ಮೂವರು ಅಭ್ಯರ್ಥಿಗಳು ಒಕ್ಕಲಿಗರಾಗಿರುವುದರಿಂದ ಒಕ್ಕಲಿಗ ಸಮುದಾಯದ ಮತಗಳು ಹಂಚಿಕೆಯಾಗಲಿವೆ. ಕಾಂಗ್ರೆಸ್ ತನ್ನ ಸಾಂಪ್ರದಾಯಕ ಮತಗಳನ್ನು ನೆಚ್ಚಿಕೊಂಡಿದೆ. ಕುರುಬರ ಮತಗಳು ಕಾಂಗ್ರೆಸ್‍ಗೆ ಬೀಳಲಿವೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮುಸ್ಲಿಂ ಮತಗಳು ಯಾರಿಗೆ ಬೀಳಲಿವೆ ಎಂಬುದರ ಮೇಲೆ ಫಲಿತಾಂಶ ನಿಶ್ಚಯವಾಗಲಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...