ಇಂಟರ್ನೆಟ್ ಸೇವೆಗಳು ಸಂವಿಧಾನದ ವಾಕ್ ಸ್ವಾತಂತ್ರ್ಯದ ಒಂದು ಭಾಗವಾಗಿದೆ ಎಂದು ಮಣಿಪುರ ಹೈಕೋರ್ಟ್ ಶುಕ್ರವಾರ ಹೇಳಿದ್ದು, ಇಡೀ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಮೇಲಿನ ನಿಷೇಧವನ್ನು ಮಣಿಪುರ ಸರ್ಕಾರ ಮುಂದುವರಿಸುವಂತಿಲ್ಲ ಎಂದು ಒತ್ತಿ ಹೇಳಿದೆ.
ಹಿಂಸಾಚಾರ ಬಾಧಿತವಲ್ಲದ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಮರುಸ್ಥಾಪಿಸದ ಸರ್ಕಾರವನ್ನು ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ನ್ಯಾಯಮೂರ್ತಿ ಗೊಲ್ಮೆಯ್ ಗೈಫುಲ್ಶಿಲು ಕಬುಯಿ ಅವರ ವಿಭಾಗೀಯ ಪೀಠವು ತರಾಟೆಗೆ ತೆಗೆದುಕೊಂಡಿತು.
ರಾಷ್ಟ್ರೀಯ ಭದ್ರತೆಗೆ ಅಪಾಯವಿರುವ ಪ್ರದೇಶಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ ಬಗ್ಗೆ ನಮಗೆ ಅರ್ಥವಾಗಿದೆ. ಆದರೆ, ಇತರ ಪ್ರದೇಶಗಳಲ್ಲಿ ಯಾಕೆ ಇಂಟರ್ನೆಟ್ ಪುನರಾರಂಭಿಸಿಲ್ಲ ಎಂದು ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿದೆ. ಅಲ್ಲಿನ ಜನರ ಹಕ್ಕುಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಇಂಟರ್ನೆಟ್ ಸೇವೆಗಳು ವಾಕ್ ಸ್ವಾತಂತ್ರ್ಯದ ಒಂದು ಭಾಗವಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ ಎಂದು ನ್ಯಾಯಾಲಯ ಪುರುಚ್ಚರಿಸಿದೆ. ಇಂಟರ್ನೆಟ್ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ಚೀಮಾರಿ ಹಾಕಿದೆ.
ಇದನ್ನೂ ಓದಿ : ನೌಕಾಪಡೆ ವಿಮಾನ ನಿಲ್ದಾಣದಲ್ಲಿ ಇಳಿಯಲು ರಾಹುಲ್ಗೆ ಅನುಮತಿ ನಿರಾಕರಣೆ