Homeಮುಖಪುಟಕೇರಳದ 3 ರಾಜಕೀಯ ಕೊಲೆಗಳ ಸ್ಟೋರಿ...

ಕೇರಳದ 3 ರಾಜಕೀಯ ಕೊಲೆಗಳ ಸ್ಟೋರಿ…

- Advertisement -
- Advertisement -

ಕೇರಳದ ಅಲಪ್ಪುಝದಲ್ಲಿ ಡಿಸೆಂಬರ್ 18, 2021ರ ರಾತ್ರಿ ಎಸ್‌ಡಿಪಿಐ ರಾಜ್ಯ ಪದಾಧಿಕಾರಿಯಾಗಿದ್ದ ಕೆಎಸ್ ಶಾನ್ ಅವರನ್ನು ಆರೆಸ್ಸೆಸ್‌ ಕಾರ್ಯಕರ್ತರು ಕೊಲೆ ಮಾಡಿದ್ದರು. ಶಾನ್ ಹತ್ಯೆಯ 7 ಗಂಟೆಯ ಒಳಗಡೆ ಬಿಜೆಪಿಯ ಹಿರಿಯ ನಾಯಕ ರಂಜಿತ್ ಶ್ರೀನಿವಾಸನ್ ಹತ್ಯೆ ನಡೆದಿತ್ತು. ಕೊಲೆಗೀಡಾದ ಇಬ್ಬರೂ ಕೂಡ ವಕೀಲರಾಗಿದ್ದು, ಒಂದೇ ಜಿಲ್ಲೆಯಲ್ಲಿ ಕೊಲೆಗಳು ನಡೆದಿವೆ. ಎರಡು ಪ್ರಕರಣವನ್ನು ರಾಜಕೀಯ ಸೇಡಿನ ಕೃತ್ಯವೆಂದು ಪರಿಗಣಿಸಲಾಗಿತ್ತು. ರಂಜಿತ್ ಹತ್ಯೆಗೆ ಸಂಬಂಧಿಸಿ ಇತ್ತೀಚೆಗೆ ಕೇರಳದ ನ್ಯಾಯಾಲಯವು 14 ಮಂದಿ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಇದು ಕೇರಳದ ಇತಿಹಾಸದಲ್ಲೇ ಅತಿ ಹೆಚ್ಚು ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಿರುವುದಾಗಿದೆ. ಆದರೆ ಶಾನ್‌ ಪ್ರಕರಣದಲ್ಲಿ ಇನ್ನೂ ವಿಚಾರಣೆ ಆರಂಭವಾಗಿಲ್ಲ.

2021ರ ಫೆಬ್ರವರಿಯಲ್ಲಿ ಇದೇ ಜಿಲ್ಲೆಯಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ನಂದು ಆರ್ ಕೃಷ್ಣ ಅವರ ಹತ್ಯೆಗೆ ಪ್ರತೀಕಾರವಾಗಿ ಶಾನ್ ಹತ್ಯೆ ನಡೆದಿದೆ ಎಂಬ ಆರೋಪಗಳಿವೆ. ಪ್ರಕರಣದ ಆರೋಪಪಟ್ಟಿಯನ್ನು ಫೆಬ್ರವರಿ 2022ರಲ್ಲಿ ಸಲ್ಲಿಸಲಾಗಿದ್ದು, ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ. ಹಾಗಾದರೆ ಧರ್ಮ ಮತ್ತು ರಾಜಕೀಯ ಹೆಣೆದುಕೊಂಡಿರುವ ಮೂರು ಪ್ರಕರಣಗಳು ಹೇಗೆ ಮುಂದುವರೆದವು ಮತ್ತು ಒಂದು ಇತರವುಗಳಿಗಿಂತ ಹೆಚ್ಚು ವೇಗದಲ್ಲಿ ಏಕೆ ಸಾಗಿತು? ತನಿಖೆ ಅಥವಾ ಕಾನೂನು ಕ್ರಮದ ಸಮಯದಲ್ಲಿ ವಿಳಂಬಗಳು ಉಂಟಾಗಿವೆಯೇ ಅಥವಾ ಅದರ ಹಿಂದೆ ಬೇರೆ ಕಾರಣವಿದೆಯೇ? ಕೇರಳದ ಮೂರು ರಾಜಕೀಯ ಕೊಲೆಗಳ ಪ್ರಕರಣದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದವು.

ಶಾನ್ ಕೊಲೆ

ಡಿ.18, 2021ರ ಸಂಜೆ ಶಾನ್‌ ಅವರು ಪತ್ನಿ ಫನ್ಸಿಲಾ ಅವರಿಗೆ ಕರೆ ಮಾಡಿದ್ದರು. ಎಸ್‌ಡಿಪಿಐನ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಉದ್ಯಮಿಯಾಗಿದ್ದ ಶಾನ್‌, ಕೆಲಸಗಾರರೊಬ್ಬರು ಬರದ ಕಾರಣ ಮನೆಗೆ ಬರುವಾಗ ತಡವಾಗುತ್ತದೆ ಎಂದು ಹೇಳಿದ್ದರು. ಇದು ಶಾನ್‌ ತನ್ನ ಪತ್ನಿಗೆ ಮಾಡಿದ್ದ ಕೊನೆಯ ಕರೆಯಾಗಿತ್ತು.

ಇದಾದ ಒಂದು ಗಂಟೆಯ ನಂತರ, ಅಪರಿಚಿತ ಪೊಲೀಸರು ಆಕೆಗೆ ಕರೆ ಮಾಡಿ ಶಾನ್‌ಗೆ ಅಪಘಾತವಾಗಿರುವುದಾಗಿ ತಿಳಿಸಿದ್ದರು. ಅಲಪ್ಪುಝದ ಮನ್ನಂಚೇರಿಯಲ್ಲಿ ಆರೆಸ್ಸೆಸ್‌ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಶಾನ್‌ಗೆ ಅಪಘಾತ ನಡೆಸಿ ಬಳಿಕ ಕೊಲೆ ಮಾಡಿದ್ದರು. ಘಟನೆಯ ದೃಶ್ಯ ಹತ್ತಿರದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.  ಶಾನ್‌ ಅವರನ್ನು ಎರ್ನಾಕುಲಂನ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿ ಅವರು ರಾತ್ರಿ 11.30 ರ ಸುಮಾರಿಗೆ ನಿಧನರಾಗಿದ್ದರು. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ 40 ಗಾಯಗಳು ದೇಹದ ಮೇಲೆ ಪತ್ತೆಯಾಗಿದ್ದವು.

ಕೊಲೆಯಾದ ಶಾನ್‌ಗೆ 36 ವರ್ಷ ವಯಸ್ಸಾಗಿತ್ತು ಮತ್ತು ಅವರಿಗೆ 11 ವರ್ಷದ ಇಬಾ ಫಾತಿಮಾ ಮತ್ತು 5 ವರ್ಷದ ಲಿಯಾ ಫಾತಿಮಾ ಎಂಬ ಇಬ್ಬರು ಮಕ್ಕಳಿದ್ದರು. ಅವರು ತಮ್ಮ ಮನೆಯ ಸಮೀಪವಿರುವ ಮನ್ನಂಚೇರಿಯಲ್ಲಿ ಕರ್ಟನ್ ಅಂಗಡಿಯನ್ನು ಹೊಂದಿದ್ದರು ಮತ್ತು ಅವರು ತರಬೇತಿ ಪಡೆದ ವಕೀಲರಾಗಿದ್ದರೂ ಅವರು ಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡುತ್ತಿರಲಿಲ್ಲ. ಶಾನ್‌ ಸಾವಿನ ಎರಡು ಗಂಟೆಗಳ ನಂತರ, ಶಾನ್ ಸಂಬಂಧಿ ಶಾಜಿ ಮನ್ನಂಚೇರಿ ಪೊಲೀಸರಿಗೆ ದೂರು ನೀಡಿದ್ದರು. ಮರುದಿನವೇ ಜಿಲ್ಲಾ ಪೊಲೀಸ್ ಮುಖ್ಯಸ್ಥರು ಪ್ರಕರಣದ ತನಿಖೆಗೆ 34 ಸದಸ್ಯರ ಪೊಲೀಸ್ ಪಡೆಯನ್ನು ನೇಮಿಸಿದರು. ಘಟನೆ ನಡೆದ 86 ದಿನಗಳಲ್ಲಿ ಮಾರ್ಚ್ 16, 2022ರಂದು ಡಿವೈಎಸ್ಪಿ ಕೆವಿ ಬೆನ್ನಿ ಅವರು ಈ ಕುರಿತು ಆರೋಪಪಟ್ಟಿ ಸಲ್ಲಿಸಿದ್ದರು.

ರಂಜಿತ್ ಹತ್ಯೆ 

ಡಿಸೆಂಬರ್ 19, 2021ರಂದು ಬೆಳಿಗ್ಗೆ 6.30ರ ಸುಮಾರಿಗೆ ಅಲಪ್ಪುಝದಲ್ಲಿರುವ ರಂಜಿತ್ ಶ್ರೀನಿವಾಸನ್ ಅವರ ಮನೆಗೆ ನುಗ್ಗಿ ಅವರನ್ನು ಹತ್ಯೆ ಮಾಡಲಾಗಿತ್ತು. 12 ಮಂದಿಯ ತಂಡ 6 ದ್ವಿಚಕ್ರ ವಾಹನಗಳಲ್ಲಿ ರಂಜಿತ್ ಮನೆಗೆ ಆಗಮಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಮೂರು ದಿನಗಳ ನಂತರ ಡಿಸೆಂಬರ್ 22ರಂದು, ಆಲಪ್ಪುಝ ಡಿವೈಎಸ್ಪಿ ಎನ್ಆರ್ ಜಯರಾಜ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸಲಾಗಿತ್ತು. 86 ದಿನಗಳ ನಂತರ ಮಾರ್ಚ್ 18, 2022 ರಂದು, ಪೊಲೀಸರು ಆರೋಪಪಟ್ಟಿ ಸಲ್ಲಿಸಿದರು ಮತ್ತು ಕೊಲೆಯ ಎಲ್ಲಾ 15 ಆರೋಪಿಗಳನ್ನು ಬಂಧಿಸಲಾಗಿತ್ತು.

2022ರಲ್ಲಿ ಎರಡೂ ಪ್ರಕರಣಗಳಿಗೆ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳನ್ನು ನಿಯೋಜಿಸಲಾಯಿತು. ಕೊಟ್ಟಾಯಂ ಮೂಲದ ವಕೀಲ ಅಜಯನ್ ಅವರನ್ನು ಶಾನ್ ಮತ್ತು ಕಾಯಂಕುಲಂ ಮೂಲದ ಪ್ರತಾಪ್ ಜಿ ಪಡಿಕಲ್ ರಂಜಿತ್ ಪರ ನೇಮಿಸಲಾಯಿತು.

ರಂಜಿತ್‌ನ ಹತ್ಯೆಯು ಅಲಪ್ಪುಝ ಬಾರ್ ಕೌನ್ಸಿಲ್‌ನ ವಕೀಲರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು, ಅವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೃತ್ಯ ಖಂಡಿಸಿ ಡಿಸೆಂಬರ್ 20, 2021ರಂದು ಪ್ರತಿಭಟನೆಗಳನ್ನು ಕೂಡ ಬಾರ್‌ ಕೌನ್ಸಿಲ್‌ ಪರವಾಗಿ ನಡೆಸಲಾಗಿತ್ತು. ಇದಲ್ಲದೆ ಆರೋಪಿಗಳ ಪರವಾಗಿ ಯಾರೂ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದರು. ಇದರಿಂದಾಗಿ 15 ಆರೋಪಿಗಳು ಕೇರಳ ಹೈಕೋರ್ಟ್‌ನ್ನು ಸಂಪರ್ಕಿಸಿ ಪ್ರಕರಣವನ್ನು ಬೇರೆ ಜಿಲ್ಲೆಗೆ ವರ್ಗಾಯಿಸುವಂತೆ ಕೇಳಿದ್ದರು. ಹೈಕೋರ್ಟ್ ಇದಕ್ಕೆ ನಿರಾಕರಿಸಿತು ಆದರೆ ಪ್ರಕರಣವನ್ನು ಅಲಪ್ಪುಝ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಮಾವೇಲಿಕರ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ -1ಗೆ ವರ್ಗಾಯಿಸಿತು. ಇದು ಅದೇ ಜಿಲ್ಲೆಯಲ್ಲಿದೆ ಆದರೆ 44 ಕಿಮೀ ದೂರದಲ್ಲಿದೆ. ಮಾವೇಲಿಕ್ಕರ ಇನ್ನೊಂದು ವಕೀಲರ ಸಂಘವನ್ನು ಹೊಂದಿದೆ.

ಶಾನ್ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ (ಪಿಪಿ) ಅಜಯನ್ ಅವರು ನೇಮಕಗೊಂಡ ಒಂದು ತಿಂಗಳೊಳಗೆ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರಾಜೀನಾಮೆ ನೀಡಿದ್ದರು. ಎರಡನೇ ಪಬ್ಲಿಕ್ ಪ್ರಾಸಿಕ್ಯೂಟರ್‌ ಸುರೇಶ್ ಬಾಬು ಥಾಮಸ್ ಅವರನ್ನು ನಿಯೋಜಿಸಲಾಗಿತ್ತು. ಆದರೆ ರಂಜಿತ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಕೂಡ ಇವರೇ ಪ್ರತಿನಿಧಿಸುವುದರಿಂದ ಪೊಲೀಸರು ಸಹಕಾರಕ್ಕೆ ನಿರಾಕರಿಸಿದ್ದರು.

2024ರ ಜನವರಿಯಲ್ಲಿ ರಂಜಿತ್ ಪ್ರಕರಣದ ವಿಚಾರಣೆ ಬಹುತೇಕ ಅಂತ್ಯವನ್ನು ತಲುಪಿದಾಗ ಶಾನ್ ಪ್ರಕರಣದಲ್ಲಿ ಹೊಸ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಗಿ ತ್ರಿಶೂರ್‌ ಮೂಲದ ವಕೀಲ ಪಿಪಿ ಹ್ಯಾರಿಸ್ ಅವರನ್ನು ನೇಮಿಸಲಾಗಿದೆ. ರಂಜಿತ್ ಕೊಲೆ ಪ್ರಕರಣದ ಆರೋಪಿಗಳ ಪರವಾಗಿ ಹ್ಯಾರಿಸ್ ಕೂಡ ವಕಾಲತ್ತು ವಹಿಸಿದ್ದರು. ಆದರೆ ಈ ಬಾರಿ ಪೊಲೀಸರು ಅವರಿಗೆ ಅಭ್ಯಂತರವನ್ನು ಹೇಳಲಿಲ್ಲ ಎನ್ನುವುದು ಗಮನಾರ್ಹ.

ರಂಜಿತ್ ಪ್ರಕರಣದ ವಿಚಾರಣೆ ಪೂರ್ಣಗೊಂಡಿತು ಮತ್ತು ಜನವರಿ 20, 2023 ರಂದು ನ್ಯಾಯಾಲಯವು ಅಪರಾಧಿಗಳನ್ನು ತಪ್ಪಿತಸ್ಥರೆಂದು ಘೋಷಿಸಿದೆ.

ನ್ಯಾಯದಲ್ಲಿ ವಿಳಂಬ ಮತ್ತು ಜಾಮೀನು ನಿರಾಕರಣೆ ಆರೋಪಗಳು

ರಂಜಿತ್ ಹತ್ಯೆ ಪ್ರಕರಣದ ಆರೋಪಿಗಳ ಹಲವು ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಆದರೆ ಶಾನ್ ಕೊಲೆ ಪ್ರಕರಣದ ಆರೋಪಿಗಳು ಬಂಧನಕ್ಕೊಳಗಾದ 8 ತಿಂಗಳ ನಂತರ ಜಾಮೀನು ಪಡೆಯಲು ಸಾಧ್ಯವಾಯಿತು. ಇದು ವಿಚಾರಣೆಯ ಪ್ರಕ್ರಿಯೆಯಲ್ಲಿ ದ್ವಿಮುಖ ನೀತಿಯ ನಿದರ್ಶನವಾಗಿದೆ ಎಂದು SDPI ಆರೋಪಿಸಿದೆ.

ಡಿಸೆಂಬರ್ 2022ರಲ್ಲಿ ಶಾನ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳು ಜಾಮೀನು ಕೋರಿದಾಗ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅರ್ಜಿಯನ್ನು ವಿರೋಧಿಸಲಿಲ್ಲ. ವಿಚಾರಣೆ ವಿಳಂಬವೂ ಜಾಮೀನಿಗೆ ಕಾರಣ ಎಂದು ಹೇಳಲಾಗಿತ್ತು. ಮೊದಲಿನಿಂದಲೂ ತಮಗೆ ಅನ್ಯಾಯವಾಗುತ್ತಿದೆ ಎಂದು ಶಾನ್ ಕುಟುಂಬ ಆರೋಪಿಸಿದೆ. ರಂಜಿತ್ ಹತ್ಯೆ ಪ್ರಕರಣದ ಯಾವುದೇ ಆರೋಪಿಗಳಿಗೆ ಜಾಮೀನು ನೀಡಲಾಗಿಲ್ಲ, ಆದರೆ ಈ ಪ್ರಕರಣದ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಇದು ತುಂಬಾ ಅನ್ಯಾಯವಾಗಿದೆ ಎಂದು ನಾನು ಭಾವಿಸಿದೆ ಎಂದು  ಶಾನ್‌ ಪತ್ನಿ ಫನ್ಸಿಲಾ ಹೇಳಿದ್ದರು.

ನಂದು ಆರ್ ಕೃಷ್ಣ ಕೊಲೆ:

ಆಲಪ್ಪುಝದ ವಯಲಾರ್ ಮೂಲದ ನಂದು ಆರ್ ಕೃಷ್ಣ ಅವರನ್ನು ಫೆಬ್ರವರಿ 24, 2021ರಂದು ಪಿಎಫ್‌ಐ ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಶಾನ್‌ ಹತ್ಯೆಗೆ ಪ್ರಚೋದಿಸಿದೆ ಎಂದು ಕೂಡ ಹೇಳಲಾಗಿತ್ತು. ಈ ಪ್ರಕರಣದಲ್ಲಿ ನಂದು ಕೃಷ್ಣನ ವಿಚಾರಣೆಯೂ ಮುಂದುವರಿಯಲಿಲ್ಲ ಮತ್ತು ಪ್ರಕರಣದ ಆರೋಪಪಟ್ಟಿಯನ್ನು ಮಾತ್ರ ಸಲ್ಲಿಸಲಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಕೂಡ ವಿಳಂಬವಾಗಿದೆ.

ಇದನ್ನು ಓದಿ: ಇಸ್ರೇಲ್‌-ಪ್ಯಾಲೆಸ್ತೀನ್‌ ಯುದ್ಧ: ಅತಿಭಯಾನಕ ‘100 ದಿನಗಳು’..

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...