Homeಮುಖಪುಟಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಇದುವರೆಗೂ ಬಂಡಾಯವೆದ್ದ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ

ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಇದುವರೆಗೂ ಬಂಡಾಯವೆದ್ದ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ

- Advertisement -
- Advertisement -

ಬಿಜೆಪಿ ಪಕ್ಷವು ಹಲವು ಕಸರತ್ತುಗಳ ನಡುವೆ ಅಳೆದು ತೂಗಿ ಕೊನೆಗೂ 212 ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿದೆ. 16 ಹಾಲಿ ಶಾಸಕರಿಗೆ ಕೋಕ್ ನೀಡಿದ್ದು, ಈ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಇದುವರೆಗೂ ಡಜನ್‌ಗೂ ಹೆಚ್ಚಿನ ಟಿಕೆಟ್ ಆಕಾಂಕ್ಷಿಗಳು ಬಂಡಾಯವೆದ್ದಿದ್ದಾರೆ. ಅವರ ಪಟ್ಟಿ ಇಲ್ಲಿದೆ.

ಲಕ್ಷ್ಮಣ್ ಸವದಿ – ಅಥಣಿ

ಅಥಣಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಅಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಿದೆ.

ಗೂಳಿಹಟ್ಟಿ ಶೇಖರ್ – ಹೊಸದುರ್ಗ

ಬಿಜೆಪಿಯ ಮೊದಲ ಪಟ್ಟಿಯಲ್ಲಿ ಹೊಸದುರ್ಗದ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬಿಜೆಪಿ ತೊರೆದು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದ್ದಾರೆ.

ಗೂಳಿಹಟ್ಟಿ ಶೇಖರ್ ಹೊಸದುರ್ಗದಲ್ಲಿ 2008 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಕಂಡರೆ 2013 ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು. 2018 ರಲ್ಲಿ ಬಿಜೆಪಿ ಸೇರಿ ಕಾಂಗ್ರೆಸ್‌ನ ಬಿ.ಜಿ ಗೋವಿಂದಪ್ಪನವರ ಎದುರು 25,992 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈಗ ಅವರ ಬದಲಿಗೆ ಎಸ್.ಲಿಂಗಮೂರ್ತಿಯವರಿಗೆ ಬಿಜೆಪಿ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಬಿ.ಜಿ ಗೋವಿಂದಪ್ಪನವರಿಗೆ ಮತ್ತೆ ಟಿಕೆಟ್ ನೀಡಿದೆ.

ಎಂ.ಪಿ ಕುಮಾರಸ್ವಾಮಿ – ಮೂಡಿಗೆರೆ

ಮೂಡಿಗೆರೆ ಬಿಜೆಪಿ ಕೈ ತಪ್ಪಿದ್ದಕ್ಕೆ ಸಿ.ಟಿ ರವಿ ವಿರುದ್ಧ ಕಿಡಿಕಾರಿರುವ ಶಾಸಕ ಎಂ.ಪಿ ಕುಮಾರಸ್ವಾಮಿಯವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ.  1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂ.ಪಿ ಕುಮಾರಸ್ವಾಮಿಯವರು ಕಾಂಗ್ರೆಸ್‌ನ ಮೋಟಮ್ಮನವರ ಎದುರು ಸೋತಿದ್ದರು. ಆನಂತರ 2004 ಮತ್ತು 2008ರಲ್ಲಿ ಮೋಟಮ್ಮ ಮತ್ತು ಚಂದ್ರಪ್ಪನವರ ಎದುರು ಗೆಲುವು ಸಾಧಿಸಿದ್ದರು. 2013ರಲ್ಲಿ ಜೆಡಿಎಸ್‌ನ ಬಿ.ಬಿ ನಿಂಗಯ್ಯನವರು ಎದುರು ಸೋಲು ಕಂಡಿದ್ದರು. ಕಳೆದ 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮೋಟಮ್ಮನವರು ಎದುರು 12,328 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಮೂಡಿಗೆರೆಯ ಬಿಜೆಪಿ ಟಿಕೆಟ್ ದೀಪಕ್‌ ದೊಡ್ಡಯ್ಯನವರಿಗೆ ಸಿಕ್ಕಿದೆ. ಹಾಗಾಗಿ ಎಂ.ಪಿ ಕುಮಾರಸ್ವಾಮಿಯವರು ಜೆಡಿಎಸ್ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಆರ್ ಶಂಕರ್ – ರಾಣೇಬೆನ್ನೂರು

ರಾಣೇಬೆನ್ನೂರು ಕ್ಷೇತ್ರದಿಂದ ಶಾಸಕ ಅರುಣ್ ಕುಮಾರ್​ ಅವರಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಇದರಿಂದ ಅಸಮಾಧಾನಗೊಂಡಿರುವ ವಿಧಾನ ಪರಿಷತ್ ಸದಸ್ಯ ಆರ್‌ ಶಂಕರ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಸೊಗಡು ಶಿವಣ್ಣ – ತುಮಕೂರು ನಗರ 

ತುಮಕೂರು ನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರು ಕಳೆದ ಒಂದು ತಿಂಗಳಿನಿಂದಲೇ ಜೋಳಿಗೆ ಹಿಡಿದು ಪ್ರಚಾರ ಆರಂಭಿಸಿದ್ದರು. ಆದರೆ ಅವರ ಬದಲು ಸಂಸದ ಬಸವರಾಜುರವರ ಪುತ್ರ, ಹಾಲಿ ಶಾಸಕ ಜ್ಯೋತಿಗಣೇಶ್‌ಗೆ ಬಿಜೆಪಿ ಮಣೆ ಹಾಕಿದೆ. ಇದರಿಂದ ಬಂಡಾಯವೆದ್ದಿರುವ ಸೊಗಡು ಶಿವಣ್ಣ ಬಿಜೆಪಿ ತೊರೆಯುವುದಾಗಿ ಘೋಷಿಸಿದ್ದಾರೆ.

ಸಂಘಪರಿವಾರದ ಹಿನ್ನಲೆಯ ಬಿಜೆಪಿ ಅಭ್ಯರ್ಥಿ ಸೊಗಡು ಶಿವಣ್ಣ 1994ರಲ್ಲಿ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ನಂತರ 1999 ಮತ್ತು 2004ರಲ್ಲಿಯೂ ಸಹ ಕಾಂಗ್ರೆಸ್‌ನ ಎಸ್.ಶಫಿ ಅಹಮದ್‌ರ ಎದುರು ಗೆದ್ದು ಹ್ಯಾಟ್ರಿಕ್ ಸಾಧಿಸಿದರು. 2007ರಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ತೋಟಗಾರಿಕೆ ಇಲಾಖೆ ಸಚಿವರಾಗಿದ್ದರು. ಅಲ್ಲದೆ 2008ರಲ್ಲಿ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ವಿರುದ್ಧ ಕೇವಲ 1,949 ಮತಗಳ ಅಂತರದಿಂದ ಗೆದ್ದು ಸತತ ನಾಲ್ಕನೇ ಬಾರಿಗೆ ಶಾಸಕರೆನಿಸಿಕೊಂಡರು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪರಿಸರ ಖಾತೆ ಸಚಿವರಾಗಿದ್ದರು. 2013ರ ಚುನಾವಣೆ ವೇಳೆಗೆ ಬಿಜೆಪಿ ಇಬ್ಭಾಗವಾಗಿತ್ತು. ಬಿಜೆಪಿಯಿಂದ ಸೊಗಡು ಶಿವಣ್ಣ ಸ್ಪರ್ಧಿಸಿದರೆ, ಯಡಿಯೂರಪ್ಪನವರ ಕೆಜೆಪಿಯಿಂದ ಇಂಜಿನಿಯರ್ ಜಿ.ಬಿ.ಜ್ಯೋತಿ ಗಣೇಶ್ ಕಣಕ್ಕಿಳಿದಿದ್ದರು. ಇವರಿಬ್ಬರ ನಡುವಿನ ಮತ ವಿಭಜನೆಯ ಲಾಭ ಪಡೆದ ಕಾಂಗ್ರೆಸ್‌ನ ಡಾ. ರಫಿಕ್ ಅಹ್ಮದ್ ಕೇವಲ 3,608 ಮತಗಳಿಂದ ಗೆದ್ದು ಬಿಜೆಪಿ ನಾಗಾಲೋಟಕ್ಕೆ ಬ್ರೇಕ್ ಹಾಕಿದ್ದರು. 2018ರ ವೇಳೆಗೆ ಬಿಜೆಪಿಯೊಂದಿಗೆ ಕೆಜೆಪಿ ವಿಲೀನಗೊಂಡಿತ್ತು. ಆಗ ಸೊಗಡು ಶಿವಣ್ಣನವರಿಗೆ ಟಿಕೆಟ್ ನಿರಾಕರಿಸಿದ್ದರಿಂದ ಯಡಿಯೂರಪ್ಪ ಬಣದ ಜಿ.ಬಿ.ಜ್ಯೋತಿಗಣೇಶ್ ಬಿಜೆಪಿ ಅಭ್ಯರ್ಥಿಯಾದರು.

ಮುದ್ದಹನುಮೇಗೌಡ – ಕುಣಿಗಲ್

ಕುಣಿಗಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎಸ್‌ಪಿ ಮುದ್ದಹನುಮೇಗೌಡ  ಅವರಿಗೆ ಈ ಬಾರಿಯೂ ಟಿಕೆಟ್ ನೀಡದಿದ್ದಕ್ಕೆ ಬೇಸರಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ನಡೆಸಲು ನಿರ್ಧರಿಸಿದ್ದಾರೆ. 1994 ಮತ್ತು 1999ರಲ್ಲಿ ಕಾಂಗ್ರೆಸ್‌ನಿಂದ ಸತತ ಎರಡು ಬಾರಿ ಚುನಾಯಿತರಾದ ಎಸ್‌ಪಿ ಮುದ್ದಹನುಮೇಗೌಡ 2004ರಲ್ಲಿ ಪರಾಭವಗೊಂಡರು. 2014ರ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆದ್ದ ಎಸ್‌ಪಿ ಮುದ್ದಹನುಮೇಗೌಡ, ಇತ್ತೀಚೆಗೆ ಬಿಜೆಪಿ ಸೇರಿದ್ದರು. ಆದರೆ ಕುಣಿಗಲ್‌ನಲ್ಲಿ ಬಿಜೆಪಿ ಡಿ ಕೃಷ್ಣಕುಮಾರ್‌ಗೆ ಟಿಕೆಟ್ ನೀಡಿದೆ.

ದೊಡ್ಡಪ್ಪಗೌಡ ಪಾಟೀಲ್ – ಜೇವರ್ಗಿ

ಜೇವರ್ಗಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳರವರು ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಗ್ರಾಮಾಂತರ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿರವರಿಗೆ ಜೇವರ್ಗಿ ಬಿಜೆಪಿ ಟಿಕೆಟ್ ಘೋಷಣೆಯಾಗಿದ್ದ ದೊಡ್ಡಪ್ಪಗೌಡ ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. 2008 ರ ಚುನಾವಣೆಯಲ್ಲಿ ಮಾಜಿ ಸಿಎಂ ಧರ್ಮಸಿಂಗ್‌ರವರನ್ನು ಮಣಿಸಿದ್ದ ದೊಡ್ಡಪ್ಪಗೌಡ ಪಾಟೀಲರು ನಂತರ ಎರಡು ಚುನಾವಣೆಗಳಲ್ಲಿ ಅವರ ಪುತ್ರ ಅಜಯ್ ಸಿಂಗ್ ವಿರುದ್ಧ ಸೋಲು ಕಂಡಿದ್ದರು.

ಹೂಡಿ ವಿಜಯ್ ಕುಮಾರ್ – ಮಾಲೂರು

ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಮಾಲೂರು ಟಿಕೆಟ್ ಕೈತಪ್ಪಿರುವುದರಿಂದ ಬಂಡಾಯವೆದ್ದಿರುವ ಹೂಡಿ ವಿಜಯ್ ಕುಮಾರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಜೆಡಿಎಸ್‌ನಲ್ಲಿದ್ದ ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ್ ಗೌಡರು ಇತ್ತೀಚೆಗೆ ಬಿಜೆಪಿ ಸೇರಿ ಟಿಕೆಟ್ ಪಡೆದಿದ್ದಾರೆ.

ಚಿಕ್ಕನಗೌಡ್ರು -ಕುಂದಗೋಳ

ಕುಂದಗೋಳ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಎಸ್‌.ಐ ಚಿಕ್ಕನಗೌಡ್ರುರವರಿಗೆ ಟಿಕೆಟ್ ಕೈ ತಪ್ಪಿದೆ. ಹಾಗಾಗಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದು ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಅಲ್ಲಿ ಬಿಜೆಪಿಯು ಎಂ.ಆರ್ ಪಾಟೀಲರವರಿಗೆ ಟಿಕೆಟ್ ನೀಡಿದೆ. ಚಿಕ್ಕನಗೌಡ್ರು 2008ರಲ್ಲಿ ಗೆದ್ದು ಆನಂತರ 2013, 2018 ಮತ್ತು 2019ರ ಉಪ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಎನ್.ಆರ್ ಸಂತೋಷ್ – ಅರಸೀಕೆರೆ

ಬಿಜೆಪಿ ಟಿಕೆಟ್‌ಗಾಗಿ ಎನ್.ಆರ್ ಸಂತೋಷ್ ಯತ್ನಿಸಿದ್ದರು. ಆದರೆ ಬಿಜೆಪಿ ಜಿ.ವಿ ಬಸವರಾಜುರವರಿಗೆ ಮಣೆ ಹಾಕಿದೆ. ಇದರಿಂದ ನೊಂದ ಸಂತೋಷ್ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ ಎನ್ನಲಾಗಿದೆ.

ನೆಹರೂ ಓಲೇಕಾರ್‌ – ಹಾವೇರಿ

ಹಾವೇರಿಯಲ್ಲಿ ಈ ಬಾರಿಯ ಬಿಜೆಪಿ ಟಿಕೆಟ್ ನೆಹರೂ ಓಲೇಕಾರ್‌ರವರಿಗೆ ಸಿಕ್ಕಿಲ್ಲ. ಅವರ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್‌ ನವರಿಗೆ ಬಿಜೆಪಿ ಟಿಕೆಟ್ ಒಲಿದಿದೆ. ಹಾಗಾಗಿ ನೆಹರೂ ಓಲೇಕಾರ್ ಅಸಮಾಧಾನಗೊಂಡಿದ್ದಾರೆ.

ನಿತಿನ್ ಗುತ್ತೇದಾರ – ಅಫಜಲಪುರ

ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಮಾಲೀಕಯ್ಯ ಗುತ್ತೇದಾರರಿಗೆ ಸಿಕ್ಕಿದೆ. ಇದರಿಂದ  ಅಸಮಾಧಾನಗೊಂಡಿರುವ ಅವರ ಸಹೋದರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಶಹಾಪುರ – ಗುರು ಪಾಟೀಲ ಶಿರವಾಳ

ಶಹಾಪುರದ ಮಾಜಿ ಶಾಸಕ ಗುರು ಪಾಟೀಲ ಶಿರವಾಳರವರು ಬಿಜೆಪಿ ಟಿಕೆಟ್ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಜಗದೀಶ್ ಶೆಟ್ಟರ್ – ಹುಬ್ಬಳ್ಳಿ ಕೇಂದ್ರ

ಹುಬ್ಬಳ್ಳಿ ಕೇಂದ್ರ ಕ್ಷೇತ್ರದ ಬಿಜೆಪಿ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಆದರೆ ಪಕ್ಷದ ವರಿಷ್ಠರು ಹೊಸಬರಿಗೆ ಅವಕಾಶ ನೀಡಲು ತಮಗೆ ಟಿಕೆಟ್ ನೀಡುತ್ತಿಲ್ಲ ಎಂದು ತಿಳಿಸಿದ್ದರಿಂದ ಶೆಟ್ಟರ್ ಗರಂ ಆಗಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಎಸ್.ಅಂಗಾರ -ಸುಳ್ಯ

ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರಿಗೆ ಟಿಕೆಟ್ ಸಿಗದಿರುವ ಕಾರಣಕ್ಕೆ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಈಗ ಅವರ ಬದಲಿಗೆ ಭಾಗೀರಥಿ ಮುರುಲ್ಯ ಎಂಬುವವರಿಗೆ ಬಿಜೆಪಿ ಟಿಕೆಟ್ ಘೋಷಿಸಿದೆ. ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪನವರಾಗಿದ್ದಾರೆ.

ರಘುಪತಿ ಭಟ್ – ಉಡುಪಿ

ಉಡುಪಿ ಟಿಕೆಟ್ ಸಿಗದ ರಘುಪತಿ ಭಟ್ ಕಣ್ಣೀರು ಹಾಕಿದ್ದಾರೆ. ತನಗೆ ಒಂದು ಮಾತು ತಿಳಿಸಲಿಲ್ಲ ಎಂದು ಪಕ್ಷದ ನಡೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಯಶ್‌ಪಾಲ್ ಸುವರ್ಣ ಎಂಬುವವರಿಗೆ ಟಿಕೆಟ್ ನೀಡಿದೆ. ಅವರು ಹಿಜಾಬ್ ವಿರೋಧಿ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಪ್ರಸಾದರಾಜ್ ಕಂಚನ್‌ರವರು ಇಲ್ಲಿಯ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

ಕೆ.ಎಸ್ ಈಶ್ವರಪ್ಪ – ಶಿವಮೊಗ್ಗ ನಗರ

ಈಶ್ವರಪ್ಪ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಅವರ ಬದಲಿಗೆ ಅವರ ಪುತ್ರ ಕಾಂತೇಶ್‌ರವರಿಗೆ ಬಿಜೆಪಿ ಟಿಕೆಟ್ ಕೇಳಿದ್ದಾರೆ.

ಜಿ.ಎನ್ ಬೆಟ್ಟಸ್ವಾಮಿ – ಗುಬ್ಬಿ

ಗುಬ್ಬಿ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಎನ್ ಬೆಟ್ಟಸ್ವಾಮಿಯವರಿಗೆ ಟಿಕೆಟ್ ಸಿಕ್ಕಿಲ್ಲ. ಬದಲಿಗೆ ದಿಲೀಪ್ ಕುಮಾರ್ ಬಿಜೆಪಿ ಟಿಕೆಟ್ ಗಿಟ್ಟಿಸಿದ್ದಾರೆ. ಇದರಿಂದ ಆಘಾತಕ್ಕೊಳಗಾಗಿರುವ ಜಿ.ಎನ್ ಬೆಟ್ಟಸ್ವಾಮಿಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ ಉತ್ತರ – ಅನಿಲ್ ಬೆನಕೆ

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಅನಿಲ್ ಬೆನಕೆ ಬೆಂಬಲಿಗರು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2018 ರಲ್ಲಿ ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಅನಿಲ್ ಎಸ್ ಬೆನಕೆ ಕಾಂಗ್ರೆಸ್‌ನ ಫೈರೋಜ್ ನೂರುದ್ದೀನ್ ಸೇಠ್‌ರವರನ್ನು 17,267 ಮತಗಳ ಅಂತರದಲ್ಲಿ ಸೋಲಿಸಿದ್ದರು. ಆದರೆ ಈ ಬಾರಿ ಅವರ ಬದಲಿಗೆ ಬಿಜೆಪಿ ಡಾ.ರವಿ ಪಾಟೀಲ್‌ಗೆ ಟಿಕೆಟ್ ನೀಡಿದೆ. ಕಾಂಗ್ರೆಸ್ ಇನ್ನೂ ಅಭ್ಯರ್ಥಿ ಅಂತಿಮಗೊಳಿಸಿಲ್ಲ.

ಯಮಕನಮರಡಿ – ಮಾರುತಿ ಅಷ್ಟಗಿ

ಯಮಕನಮರಡಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾರುತಿ ಅಷ್ಟಗಿಯವರಿಗೆ ಟಿಕೆಟ್ ಕೈ ತಪ್ಪಿದೆ. ಅವರು ಬದಲು ಬಸವರಾಜ ಹುಂದ್ರಿಯವರಿಗೆ ಟಿಕೆಟ್ ಸಿಕ್ಕಿದೆ. ಇದರಿಂದ ಕುಪಿತಗೊಂಡಿರುವ ಮಾರುತಿ ಅಷ್ಟಗಿಯವರು ಬಂಡಾಯ ಸಾರಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಅಥಣಿ – ಲಕ್ಷ್ಮಣ ಸವದಿ

ಅಥಣಿ ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ್ ಸವದಿ ಬಿಜೆಪಿ ತೊರೆದಿದ್ದಾರೆ. ಅಲ್ಲಿ ಕಾಂಗ್ರೆಸ್‌ನಿಂದ ಪಕ್ಷಾಂತರ ಮಾಡಿದ ಮಹೇಶ್ ಕುಮಟಳ್ಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಹಾಗಾಗಿ ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರುವ ಯೋಚನೆಯಲ್ಲಿದ್ದಾರೆ.

ರಾಮದುರ್ಗ – ಮಹಾದೇವಪ್ಪ ಯಾದವಾಡ

ರಾಮದುರ್ಗ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಶಾಸಕ ಮಹದೇವಪ್ಪ ಯಾದವಾಡ ಬೆಂಬಲಿಗರು ಬುಧವಾರ ರಾತ್ರಿ ಮತ್ತು ಇಂದು ಬೆಳಿಗ್ಗೆ ಪ್ರತಿಭಟನೆ ನಡೆಸಿದ್ದಾರೆ. ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಬುಧವಾರ ರಾತ್ರಿಯೇ ಮಹಾದೇವಪ್ಪ ಯಾದವಾಡ ಬೆಂಗಳೂರಿಗೆ ತೆರಳಿದ್ದಾರೆ.

ಮಹದೇವಪ್ಪ ಯಾದವಾಡರವರು ರಾಮದುರ್ಗದಲ್ಲಿ 1999 ರಲ್ಲಿ ಸೋಲು ಕಂಡಿದ್ದರು. ಆನಂತರ 2004 ಮತ್ತು 2018 ರಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನ ಅಶೋಕ್ ಮಹದೇವಪ್ಪ ಪಟ್ಟಣ್ ವಿರುದ್ಧ 2,875 ಮತಗಳ ಅಂತರದಲ್ಲಿ ಜಯ ಕಂಡಿದ್ದರು. ಈಗ ಅವರ ಬದಲಿಗೆ ಬಿಜೆಪಿಯು ಚಿಕ್ಕರೇವಣ್ಣನವರಿಗೆ ಟಿಕೆಟ್ ನೀಡಿದೆ. ಕಾಂಗ್ರೆಸ್‌ ಸೋತ ಅಭ್ಯರ್ಥಿ ಮಾಜಿ ಶಾಸಕ ಅಶೋಕ್ ಮಹದೇವಪ್ಪ ಪಟ್ಟಣ್ ರವರಿಗೆ ಟಿಕೆಟ್ ನೀಡಿದೆ.

ಬೆಳಗಾವಿ ಗ್ರಾಮೀಣ – ಸಂಜಯ ಪಾಟೀಲ

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡದೇ ಹೊಸಬರಾಗಿರುವ ನಾಗೇಶ ಮನ್ನೋಳಕರಗೆ ಟಿಕೆಟ್ ಘೋಷಿಸಿದ್ದನ್ನು ಖಂಡಿಸಿ ಬಿಜೆಪಿಯ ಜಿಲ್ಲಾ ಹಾಗೂ ಗ್ರಾಮೀಣ ಮಂಡಳದ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳು ಬುಧವಾರ ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಆಕ್ರೋಶ ಹೊರ ಹಾಕಿದರು. ಮಾಜಿ ಶಾಸಕ ಸಂಜಯ ಪಾಟೀಲರವರಿಗೆ ಇಲ್ಲಿ ಟಿಕೆಟ್ ನಿರಾಕರಿಸಲಾಗಿದೆ.

ಬೈಲಹೊಂಗಲ – ಡಾ. ವಿಶ್ವನಾಥ ಪಾಟೀಲ್

ಡಾ. ವಿಶ್ವನಾಥ ಪಾಟೀಲ್ ಅವರು ಬೈಲಹೊಂಗಲ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜಗದೀಶ್ ಮೆಟಗುಡ್ಡ ಕೂಡ ಆಕಾಂಕ್ಷಿಯಾಗಿದ್ದರು. ಹೀಗಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಮತದಾನ ನಡೆಸಲಾಗಿತ್ತು. ವೀಕ್ಷಕರ ಸಮ್ಮುಖದಲ್ಲೇ ಈ ಮತದಾನ ನಡೆದಿತ್ತು. ಈ ವೇಳೆ 109 ಮತಗಳ ಪೈಕಿ 98 ಮತ ಡಾ. ವಿಶ್ವನಾಥ ಪಾಟೀಲ್ ರವರನ್ನು ಬಿಟ್ಟು ಜಗದೀಶ್‌ ಚನ್ನಪ್ಪ ಮೆಟಗುಡ್ಡರವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಇದನ್ನು ವಿರೋಧಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 600ಕ್ಕೂ ಹೆಚ್ಚುಕಾರ್ಯಕರ್ತರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಖಾನಾಪುರ – ಡಾ.ಸೋನಾಲಿ ಸರನೋಬತ್‌

ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂಬ ಭರವಸೆಯಲ್ಲಿದ್ದ ನನಗೆ ತುಂಬ ಆಘಾತವಾಗಿದೆ. ನನ್ನೊಂದಿಗೆ ಇಷ್ಟು ದಿನ ಇದ್ದ ಕಾರ್ಯಕರ್ತರೊಂದಿಗೆ ಚರ್ಚಿಸಿದ ಬಳಿಕ ಮುಂದಿನ ಹೆಜ್ಜೆ ಇಡುತ್ತೇನೆ’ ಎಂದು ಬಿಜೆಪಿ ನಾಯಕಿ ಡಾ.ಸೋನಾಲಿ ಸರನೋಬತ್‌ ಹೇಳಿದರು. ಅದೇ ರೀತಿ ಮತ್ತೋರ್ವ ಟಿಕೆಟ್ ಆಕಾಂಕ್ಷಿತಯಾಗಿದ್ದ ಅರವಿಂದ್ ಪಾಟೀಲ್ ಪಕ್ಷೇತರರಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇಲ್ಲಿ ವಿಠ್ಠಲ್ ಹಲಗೇಕಾರ್‌ರವರಿಗೆ ಬಿಜೆಪಿ ಟಿಕೆಟ್ ನೀಡಿದೆ.

ಸವದತ್ತಿ ಎಲ್ಲಮ್ಮ – ಬಸವರಾಜ ಪಟ್ಟಣಶೆಟ್ಟಿ

ಟಿಕೆಟ್ ವಂಚಿತ ಬಸವರಾಜ ಪಟ್ಟಣಶೆಟ್ಟಿಯವರು ಸಹ ಪಕ್ಷೇತರರಾಗಿ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಇಲ್ಲಿ ರತ್ನ ವಿಶ್ವನಾಥ್ ಮಾಮನಿಯವರಿಗೆ ಟಿಕೆಟ್ ಸಿಕ್ಕಿದೆ.

ಇದಿಷ್ಟು ಸದ್ಯದ ವರದಿಯಾಗಿದ್ದು, ಇನ್ನು ಹಲವರು ಬಿಜೆಪಿ ತೊರೆಯುವ ದಾರಿಯಲ್ಲಿದ್ದಾರೆ. ಆದನ್ನು ಅಪ್‌ಡೇಟ್ ಮಾಡಲಾಗುವುದು.

ಇದನ್ನೂ ಓದಿ: ಬಿಜೆಪಿ 2ನೇ ಪಟ್ಟಿಯಲ್ಲಿ ಆರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಣೆ: ಪಟ್ಟಿ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...