ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಶ್ರೀರಾಮ ಸೇನೆಯ ಕಾರ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮಿ ವಿರುದ್ಧ ಶಹಾಪುರ ಠಾಣೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಿದ್ದಲಿಂಗ ಸ್ವಾಮಿ, ಶಿವಮೊಗ್ಗದಲ್ಲಿ ನಡೆದ ಈದ್ ಮಿಲಾದ್ ಮೆರವಣಿಗೆಯಲ್ಲಿ ಮುಸ್ಲಿಮರು ಹಿಂಸಾಚಾರ ನಡೆಸಿದ್ದಾರೆ. ನಾವು ಮುಸ್ಲಿಮರ ಮೇಲೆ ದಾಳಿ ಮಾಡುತ್ತೇವೆ. ಕರ್ನಾಟಕದಲ್ಲಿ ಮತ್ತೊಂದು ಗೋಧ್ರಾ ಘಟನೆ ಸಂಭವಿಸುತ್ತದೆ ಎಂದು ಪ್ರಚೋದನಾಕಾರಿಯಾಗಿ ಹೇಳಿದ್ದರು.
ಅವರ ಭಾಷಣದ ವಿಡಿಯೋವನ್ನು ಆಧರಿಸಿ ಶಹಾಪುರ ಪೊಲೀಸರು ಸಿದ್ದಲಿಂಗ ಸ್ವಾಮಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295ಎ (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಮತ್ತು 153ಎ (ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ ಕೂಡ ಇದೇ ರೀತಿಯಲ್ಲಿ ಹಲವಾರು ಭಾರಿ ಸಿದ್ದಲಿಂಗ ಸ್ವಾಮಿ ಪ್ರಚೋದನಾಕಾರಿ ಮತ್ತು ದ್ವೇಷದ ಭಾಷಣ ಮಾಡಿದ್ದರು. ದೇವಸ್ಥಾನದ ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶಕ್ಕೆ ವಿರೋಧಿಸಿದ್ದರು. ಹಲಾಲ್ ಮಾಡಿದ ಮಾಂಸವನ್ನು ಖರೀದಿಸಬಾರದು ಎಂದು ಹೇಳಿದ್ದರು.
ಇದನ್ನು ಓದಿ: ಜಾತಿಗಣತಿ ವರದಿ ನವೆಂಬರ್ನಲ್ಲಿ ಸಲ್ಲಿಸುವ ನಿರೀಕ್ಷೆ ಇದೆ: ಸಿಎಂ ಸಿದ್ದರಾಮಯ್ಯ