ಮಹಾರಾಷ್ಟ್ರದ ಥಾಣೆ ನಗರದಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಾರ್ಥನಾ ಮಂದಿರವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಥಾಣೆ ನಗರದ ತುಳಸಿಧಾಮ್ ಪ್ರದೇಶದಲ್ಲಿ ಕ್ರಿಶ್ಚಿಯನ್ ಸಮುದಾಯದವರ ಪ್ರಾರ್ಥನಾ ಮಂದಿರದಲ್ಲಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಬೆಳಗ್ಗೆ ಪ್ರಾರ್ಥನಾ ಮಂದಿರಕ್ಕೆ ಹೋದಾಗ ಪ್ರಾರ್ಥನಾ ಮಂದಿರದ ಆವರಣದ ಪ್ರವೇಶ ಹಲಗೆಗೆ ಮಣ್ಣು ಹಾಕಿರುವುದು ಕಂಡು ಬಂದಿದ್ದು, ಶಿಲುಬೆಯನ್ನು ಕೂಡ ವಿರೂಪಗೊಳಿಸಿರುವುದು ಕಂಡು ಬಂದಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಪ್ರಾರ್ಥನಾ ಮಂದಿರದ ಕೆಲವು ಕಿಟಕಿ ಗಾಜುಗಳನ್ನು ಒಡೆದು ಹಾಕಲಾಗಿದೆ ಮತ್ತು ಹವಾನಿಯಂತ್ರಣ ಮತ್ತು ಎಲೆಕ್ಟ್ರಿಕ್ ಮೀಟರ್ಗಳ ತಂತಿಗಳಿಗೆ ಹಾನಿ ಮಾಡಲಾಗಿದೆ. ಪ್ರಾರ್ಥನಾ ಮಂದಿರದ ಆವರಣದ ಬಾಗಿಲಿನ ಮೇಲೆ ಆಕ್ಷೇಪಾರ್ಹ ಪದಗಳ ಬ್ಯಾನರನ್ನು ಹಾಕಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ಸೆಕ್ಷನ್ 295A ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಅಪರಾಧ ಪ್ರಕರಣವನ್ನು ದಾಖಲಿಸಲಾಗಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಸಂಬಂಧ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ವರದಿಯಾಗಿದೆ.
ಇದನ್ನು ಓದಿ: 2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು