ಮಧ್ಯಪ್ರದೇಶದ ಮೊರೆನಾದ ಗುಲ್ಲಖೇರಾ ಗ್ರಾಮದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದ್ದು, ಕೇವಲ ಎರಡು ದಿನಗಳಲ್ಲಿ ಪ್ರಕರಣಗಳು 100 ರಿಂದ 250ಕ್ಕೆ ಏರಿದೆ. ಆದರೆ ಅಧಿಕಾರಿಗಳು ಡೆಂಗ್ಯೂ ನಿರ್ಮೂಲನೆಗೆ ಕ್ರಮಕೈಗೊಳ್ಳದೆ, ಜನರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗುಲ್ಲಖೇರಾ ಗ್ರಾಮದಲ್ಲಿ 500ರಿಂದ 600ರಷ್ಟು ಜನಸಂಖ್ಯೆಯಿದ್ದು, ಶೇ.50ರಷ್ಟು ಜನರು ಡೆಂಗ್ಯೂ ಸೋಂಕಿತರಾಗಿದ್ದಾರೆ. ರೋಗಿಗಳಲ್ಲಿ ಮೊದಲು ಕೈಕಾಲು ನೋವು, ನಂತರ ನೆಗಡಿ, ಜ್ವರ ಕಂಡು ಬರುತ್ತದೆ ಎಂದು ಗ್ರಾಮದ ಜನರು ಹೇಳುತ್ತಿದ್ದು, ಜ್ವರ ಮತ್ತು ಮೈಕೈ ನೋವಿಗೆ ಸಾಮಾನ್ಯವಾಗಿ ತೆಗೆದುಕೊಳ್ಳುವ ಮಾತ್ರೆಗಳಿಂದ ಯಾವುದೇ ಪ್ರಯೋಜನ ಕಂಡು ಬರುತ್ತಿಲ್ಲ ಎನ್ನಲಾಗಿದೆ. ಇದಲ್ಲದೆ ರೋಗಿಗಳಲ್ಲಿ ಪ್ಲೇಟ್ಲೆಟ್ಗಳ ಇಳಿಕೆ ಕಂಡು ಬರುತ್ತಿದೆ.
ಈ ಕುರಿತು ಸರಪಂಚ್ಗೆ ಮತ್ತು ಅಧಿಕಾರಿಗಳಿಗೆ ದೂರು ನಿಡಲು ಕರೆ ಮಾಡಿದಾಗ ಅವರು ಪೋನ್ ಕರೆ ಸ್ವೀಕರಿಸುತ್ತಿಲ್ಲ. ಯಾವುದೇ ವೈದ್ಯರ ಅಥವಾ ಅಧಿಕಾರಿಗಳ ತಂಡವು ಗ್ರಾಮಕ್ಕೆ ಬಂದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ದುಬಾರಿ ವೆಚ್ಚ ವಿಧಿಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗುಲ್ಲಖೇರಾ ಗ್ರಾಮದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಅಸ್ವಸ್ಥರಾಗಿದ್ದು, ಪ್ರತಿ ಕುಟುಂಬದಲ್ಲಿ ಶೇ.50ರಷ್ಟು ಜನರು ಅಸ್ವಸ್ಥರಾಗಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸಿಎಂಎಚ್ಒ ರಾಕೇಶ್ ಶರ್ಮಾ, ಗ್ರಾಮಕ್ಕೆ ತನಿಖಾ ತಂಡವನ್ನು ಕಳುಹಿಸುತ್ತಿದ್ದು, ಗ್ರಾಮದಲ್ಲಿ ಶಿಬಿರ ಸ್ಥಾಪಿಸಿ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿದ್ದಾರೆ.
ಇದನ್ನು ಓದಿ: 2010ರಿಂದ 16 ಪತ್ರಕರ್ತರ ಮೇಲೆ ಕಠೋರ UAPA ಕಾಯ್ದೆಯಡಿ ಕೇಸ್ ದಾಖಲು: ಹೆಚ್ಚಿನವರು ಮುಸ್ಲಿಂ ಸಮುದಾಯದವರು