ಟೆಲಿವಿಷನ್ ರೇಟಿಂಗ್ ಪಾಯಿಂಟ್ಗಳನ್ನು (TRP) ತಿರುಚಿರುವ ಆರೋಪ ಪ್ರಕರಣವನ್ನು ಕೇಂದ್ರ ತನಿಖಾ ದಳ ಕೈಗೆತ್ತಿಕೊಂಡಿದೆ. ಉತ್ತರ ಪ್ರದೇಶ ಸರ್ಕಾರದ ಶಿಫಾರಸಿನ ಮೇರೆಗೆ ಲಕ್ನೋ ಪೊಲೀಸರಿಂದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.
ಕಮಲ್ ಶರ್ಮಾ ಎಂಬ ವ್ಯಕ್ತಿ ನೀಡಿದ ದೂರಿನ ಮೇರೆಗೆ ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲಾಗಿದೆ. ಅಪರಿಚಿತ ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ನಕಲಿ ವಿಧಾನಗಳನ್ನು ಬಳಸಿಕೊಂಡು ಟಿಆರ್ಪಿಗಳನ್ನು ತಿರುಚಿರುವುದು ಈ ಆರೋಪಗಳಲ್ಲಿ ಸೇರಿದೆ.
ಈ ತಿಂಗಳ ಆರಂಭದಲ್ಲಿ ಮುಂಬೈ ಪೊಲೀಸರು ಈ ಹಗರಣವನ್ನು ಬೆಳಕಿಗೆ ತಂದಿದ್ದಾರೆ. ನಕಲಿ ರೇಟಿಂಗ್ ಹಗರಣದ ಆರಂಭಿಕ ತನಿಖೆಯಲ್ಲಿ ಹೊರಹೊಮ್ಮಿದ ದೊಡ್ಡ ಹೆಸರು ರಿಪಬ್ಲಿಕ್ ಟಿವಿ. ವೀಕ್ಷಕರು ಕಾರ್ಯಕ್ರಮ ವೀಕ್ಷಿಸದಿದ್ದರೂ ಸಹ ಚಾನೆಲ್ ಆನ್ನಲ್ಲಿ ಇರಿಸಿಕೊಳ್ಳಲು ಅವರಿಗೆ ಹಣ ನೀಡಲಾಗಿದೆ ಎಂದು ಹೇಳಲಾಗಿತ್ತು.
ಹಗರಣಕ್ಕೆ ಸಂಬಂಧಿಸಿದಂತೆ ಈವರೆಗೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಟಿವಿಗಳು ಜಾಹೀರಾತುಗಳನ್ನು ಪಡೆಯುವಲ್ಲಿ ಈ ರೇಟಿಂಗ್ಗಳು ಪ್ರಮುಖ ಪಾತ್ರ ವಹಿಸುತ್ತವೆ. ರೇಟಿಂಗ್ ಆಧಾರದಲ್ಲಿಯೇ ಜಾಹೀರಾತುದಾರರು ಜಾಹೀರಾತು ನೀಡುತ್ತಾರೆ.
ಇದನ್ನೂ ಓದಿ: TRP ಹಗರಣ: ಎಲ್ಲರಂತೆ ಹೈಕೋರ್ಟ್ಗೆ ಹೋಗಿ ಎಂದ ಸುಪ್ರೀಂ, ರಿಪಬ್ಲಿಕ್ ಅರ್ನಾಬ್ಗೆ ಮುಖಭಂಗ!
ARG ಔಟ್ಲಿಯರ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ವಿರುದ್ಧ ಮುಂಬೈ ಪೊಲೀಸರು ಸಲ್ಲಿಸಿದ್ದ ದಾಖಲಿಸಿದ್ದ ಎಫ್ಐಆರ್ ವಿರುದ್ಧ ಕಳೆದ ವಾರ ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ರಿಪಬ್ಲಿಕ್ ಟಿವಿ, ಅದರ ಹಿರಿಯ ಅಧಿಕಾರಿಗಳ ವಿರುದ್ಧ ಮತ್ತು ಇತರ ಎರಡು ಸ್ಥಳೀಯ ಪ್ರಾದೇಶಿಕ ಚಾನೆಲ್ಗಳ ವಿರುದ್ಧ ಮುಂಬೈ ಅಪರಾಧ ವಿಭಾಗವು ಈ ಹಿಂದೆ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿತ್ತು.
ಇನ್ನೂ ಈ ಪ್ರಕರಣದಲ್ಲಿ ಟಿಆರ್ಪಿ ತಿರುಚಿರುವ ಆರೋಪದ ನಡುವೆ ತನಿಖೆ ನಡೆಯುತ್ತಿರುವ ಕಾರಣ ಮೂರು ತಿಂಗಳವರೆಗೆ ಸುದ್ದಿ ಚಾನೆಲ್ಗಳಿಗೆ ಸಾಪ್ತಾಹಿಕ ರೇಟಿಂಗ್ ನೀಡದಿಲು ನಿರ್ಧರಿಸಲಾಗಿದೆ ಎಂದು ಟೆಲಿವಿಷನ್ ರೇಟಿಂಗ್ ಏಜೆನ್ಸಿ BARC (Broadcast Audience Research Council) ತಿಳಿಸಿದೆ.