ಕೌಶಲ್ಯ ಅಭಿವೃದ್ದಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷ (ಟಿಡಿಪಿ)ದ ಮುಖ್ಯಸ್ಥ ಚಂದ್ರಬಾಬು ನಾಯ್ದು ಅವರಿಗೆ ಆಂಧ್ರ ಪ್ರದೇಶದ ಹೈಕೋರ್ಟ್ ಸೋಮವಾರ ಜಾಮೀನು ಮಂಜೂರು ಮಾಡಿದೆ.
ಕಣ್ಣು ಶಸ್ತ್ರ ಚಿಕಿತ್ಸೆಗಾಗಿ ಚಂದ್ರಬಾಬು ನಾಯ್ದು ಅವರಿಗೆ ಈ ಹಿಂದೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅದನ್ನು ಪರಿವರ್ತಿಸಿ ಪೂರ್ಣ ಪ್ರಮಾಣದ ಜಾಮೀನು ಮಂಜೂರು ಮಾಡಲಾಗಿದೆ. ಇದರಿಂದ ಈ ಹಿಂದೆ ನ್ಯಾಯಾಲಯ ಆದೇಶಿಸಿದಂತೆ ನವೆಂಬರ್ 28ರಂದು ಚಂದ್ರಬಾಬು ನಾಯ್ಡು ಜೈಲಿಗೆ ಹಿಂದಿರುಗುವ ಅಗತ್ಯವಿಲ್ಲ.
ನಾಯ್ಡು ಅವರಿಗೆ ಎಲ್ಲಾ ರೀತಿಯ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೂ ನ್ಯಾಯಾಲಯ ಅವಕಾಶ ನೀಡಿದೆ. ತೆಲಂಗಾಣ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ಆದೇಶ ಬಂದಿದೆ. ನವೆಂಬರ್ 30ರಂದು ತೆಲಂಗಾಣದಲ್ಲಿ ಮತದಾನ ನಡೆಯಲಿದೆ.
ನ್ಯಾಯಾಲಯದಿಂದ ಅನುಮತಿ ದೊರೆತಿರುವ ಹಿನ್ನೆಲೆ ನಾಯ್ಡು ಅವರು ತಮ್ಮ ಟಿಡಿಪಿ ಪಕ್ಷದ ಮುಂದಿನ ರಾಜಕೀಯ ಚಟುವಟಿಕೆಗಳ ಕುರಿತು ಹೇಳಿಕೆ ನೀಡುವ ಸಾಧ್ಯತೆ ಇದೆ. ಟಿಡಿಪಿ ಕಾರ್ಯಕರ್ತರು, ಅಭಿಮಾನಿಗಳು ನಾಯ್ಡು ಅವರ ಮಾತಿಗಾಗಿ ಕಾಯುತ್ತಿದ್ದಾರೆ.
ಪಕ್ಷದ ಮುಖ್ಯಸ್ಥ ನಾಯ್ಡು ಅವರು ಜೈಲಿನಲ್ಲಿದ್ದ ಕಾರಣ ಟಿಡಿಪಿ ಪಕ್ಷ ತೆಲಂಗಾಣ ಚುನಾವಣೆಯಿಂದ ದೂರ ಉಳಿಯುವುದಾಗಿ ಹೇಳಿತ್ತು. ಈಗ ಜಾಮೀನು ದೊರೆತ ಹಿನ್ನೆಲೆ ಚುನಾವಣಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಆದರೆ, ಮತದಾನಕ್ಕೆ ಇನ್ನು ಕೇವಲ 9 ದಿನಗಳಿ ಬಾಕಿ ಇರುವ ಹಿನ್ನೆಲೆ ಟಿಡಿಪಿಯ ಮುಂದಿನ ನಡೆ ಏನು ಎಂಬ ಬಗ್ಗೆ ಕತೂಹಲ ಮೂಡಿದೆ.
ಕೌಶಲ್ಯ ಅಭಿವೃದ್ದಿ ನಿಗಮದ ಸುಮಾರು 371 ಕೋಟಿ ರೂಪಾಯಿ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಚಂದ್ರಬಾಬು ನಾಯ್ಡು ಮೇಲಿದೆ. ಇದು ಒಂದು ಪ್ರಕರಣ ಮಾತ್ರವಲ್ಲದೆ ಔಟರ್ ರಿಂಗ್ ರೋಡ್ , ಫೈಬರ್ ನೆಟ್ ಇತ್ಯಾದಿ ಪ್ರಕರಣಗಳು ನಾಯ್ಡು ಮೇಲಿವೆ.
ಇದನ್ನೂ ಓದಿ : ದ್ವೇಷ ಭಾಷಣ ಪ್ರಕರಣಗಳಿಗೆ ಸಂಬಂಧಿಸಿ ಸುಪ್ರೀಂ ನಿರ್ದೇಶನವನ್ನು ಪಾಲಿಸಲಾಗಿದೆ: ಕೇಂದ್ರ ಸರಕಾರ