Homeಮುಖಪುಟಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

ಮದ್ದೂರಿನ ಹೆಸರು ಅರ್ಜುನಪುರಿಯೇ? ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಲಾಲ್‌ಬಾಗ್ ಪುಷ್ಪೋದ್ಯಾನಕ್ಕೆ ಸಾವರ್ಕರ್ ಪುಷ್ಪ ಕಾಶಿ ಎಂದು ಹೆಸರಿಡಲು ಹೇಸುವವರಲ್ಲ...

- Advertisement -
- Advertisement -

ಊರುಗಳ ಹೆಸರು ತಿರುಚುವ ಹಿಂದಿನ ಬ್ರಾಹ್ಮಣ್ಯಶಾಹಿ ಹುನ್ನಾರ. ಭಾಗ -1

  • ನಿಖಿಲ್ ಕೋಲ್ಪೆ

    ಊರ ಹೆಸರುಗಳಿಗೆ ಒಂದು ಹಿನ್ನೆಲೆಯಿರುತ್ತದೆ. ಅದು ಐತಿಹಾಸಿಕ, ಭೌಗೋಳಿಕ, ಸಾಂಸ್ಕೃತಿಕ ಮತ್ತು ಭಾಷಾಸಂಬಂಧಿ ಅಂಶಗಳನ್ನು ಹೊಂದಿರಬಹುದು. ಜನರ ಬಾಯಿಯಲ್ಲಿ ಕಾಲಕ್ರಮೇಣ ಹಲವು ಬದಲಾವಣೆಗಳನ್ನು ಕಂಡಿರಬಹುದು. ಆದರೆ, ಏಕಾಏಕಿಯಾಗಿ ಮತೀಯ ಸ್ಥಳಪುರಾಣಗಳನ್ನು ಹುಟ್ಟುಹಾಕಿ, ಸಂಸ್ಕೃತಮಯ, ಧರ್ಮಸಂಬಂಧಿ ಹೆಸರುಗಳನ್ನು ಶೋಧಿಸುವ ಮೂಲಕ ಸೂಕ್ಷ್ಮವಾಗಿ ಸ್ಥಳೀಯ ಸಂಸ್ಕೃತಿಗಳ ಮೇಲೆ ನಡೆಸಲಾಗುತ್ತಿರುವ ಆಕ್ರಮಣ ಅಪಾಯಕಾರಿ.

ಕೆಲದಿನಗಳ ಹಿಂದೆ ವಾಟ್ಸಾಪ್ ಯುನಿವರ್ಸಿಟಿಯ ವಿಧ್ವಂಸಕ ವಿದ್ವಾಂಸರೊಬ್ಬರು ಮದ್ದೂರಿನ ಹೆಸರು ಅರ್ಜುನಪುರಿ ಎಂಬ ಭಯಾನಕ ಸಂಶೋಧನೆಯನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದರು. ಉತ್ತರದ ಅರ್ಜುನನೆಲ್ಲಿ! ದಕ್ಷಿಣದ ಮದ್ದೂರು ಎಲ್ಲಿ? ಈ ಹಿನ್ನೆಲೆಯಲ್ಲಿ ಊರಿನ ಹೆಸರುಗಳ ಹೆಸರಿನಲ್ಲಿ ನಡೆಸಲಾಗುವ ಸೂಕ್ಷ್ಮ ಸಾಂಸ್ಕೃತಿಕ ಆಕ್ರಮಣಗಳನ್ನು ಇಲ್ಲಿ ಆಳವಾಗಿ ಅಲ್ಲವಾದರೂ, ಸ್ಥೂಲವಾಗಿ ನೋಡೋಣ. ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯಗಳಿಂದ ತೆಗೆದುಹಾಕುವ ಕೋಮುವಾದಿ ಮನಸ್ಸುಗಳಲ್ಲಿ ಅಡಗಿರುವ ಪಿತೂರಿಗಳನ್ನು ಗುರುತಿಸಲು ಇದು ಸಹಕಾರಿಯಾಗಬಲ್ಲದು.

ಹಿಂದೆ ರಾಜರುಗಳು, ಸುಲ್ತಾನರು ತಾವು ಕಟ್ಟಿದ ನಗರಗಳಿಗೆ, ಕಟ್ಟಡಗಳಿಗೆ, ಸ್ಮಾರಕಗಳಿಗೆ ತಮಗೆ ಇಷ್ಟಬಂದ ಹೆಸರುಗಳನ್ನು ಇಟ್ಟಿದ್ದರು. ಪ್ರಜಾಪ್ರಭುತ್ವವಿಲ್ಲದ ರಾಜಪ್ರಭುತ್ವದಲ್ಲಿ ಅದು ಅಸಹಜವೇನಲ್ಲ. ಇದನ್ನೇ ಬ್ರಿಟಿಷರೂ ಮುಂದುವರಿಸಿದರು. ಜೊತೆಗೆ, ಅವರು ಮತ್ತು ಇತರ ವಿದೇಶೀಯರು ದೇಶೀಯ ಹೆಸರುಗಳನ್ನು ತಮ್ಮ ಉಚ್ಛಾರಣೆಗೆ ತಕ್ಕಂತೆ ಬದಲಾಯಿಸಿದರು. ನಾವು ನಮ್ಮ ಗುಲಾಮಿ ಬುದ್ದಿಗೆ ತಕ್ಕಂತೆ ಈ ಅಪಭ್ರಂಶಗೊಂಡ ಹೆಸರುಗಳನ್ನೇ ಹೆಮ್ಮೆಯಿಂದ ಉಚ್ಛರಿಸುತ್ತಾ ಖಾಯಂಗೊಳಿಸಿದೆವು. ಉದಾಹರಣೆಗೆ ಡೆಲ್ಲಿ, ಬಾಂಬೆ, ಮಡ್ರಾಸ್, ಬ್ಯಾಂಗಲೋರ್, ಕ್ಯಾಲಿಕಟ್ ಇತ್ಯಾದಿ ಹೆಸರುಗಳು.

ಇಂತಹಾ ಹೆಸರುಗಳನ್ನು ನಾವೀಗ ಒಂದು ಹಂತಕ್ಕೆ ಮೂಲ ಎನಿಸಬಲ್ಲ(?) ಹೆಸರುಗಳಿಗೆ ಬದಲಿಸಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ. ಅವು ಅಪಭ್ರಂಶಗೊಂಡ ನಮ್ಮದೇ ಹೆಸರುಗಳು. ಆದರೆ, ರಾಜರಿರಲಿ, ಸುಲ್ತಾನರಿರಲಿ, ಬ್ರಿಟಿಷರೇ ಇರಲಿ- ಅವರೇ ಕಟ್ಟಿದ ನಗರ ಮತ್ತು ನಿರ್ಮಾಣಗಳಿಗೆ ಇಟ್ಟ ಐತಿಹಾಸಿಕ ಹೆಸರುಗಳನ್ನು ಬದಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ. ಅವರೇನು ತಮ್ಮ ಹಣದಿಂದ ಕಟ್ಟಿಲ್ಲ; ಜನರ, ದೇಶದ ಹಣದಿಂದ ಕಟ್ಟಿದರು ಎಂದು ವಾದಿಸಬಹುದು. ಇದನ್ನು ಒಪ್ಪಬಹುದಾದರೆ, ಇದು ಮುಸ್ಲಿಂ ದೊರೆಗಳು ಮತ್ತು ಬ್ರಿಟಿಷರಿಗೆ ಮಾತ್ರ ಅನ್ವಯವಾಗಿ ಹಿಂದೂ ರಾಜರಿಗೆ ಅನ್ವಯವಾಗದಿರುವುದು ಹೇಗೆ? ಆಗ ಬರಬಹುದಾದ ಉತ್ತರವೆಂದರೆ, ಹಿಂದೂ ರಾಜರು ನಮ್ಮವರು; ಉಳಿದವರು ಹೊರಗಿನವರು ಎಂಬುದು. ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರು ಎಂದು ಸೂಕ್ಷ್ಮವಾಗಿ ಸೂಚಿಸಿ, ಪ್ರತ್ಯೇಕಿಸುವ ಹುನ್ನಾರವೇ ಈ ಹೆಸರಿನ ರಾಜಕೀಯದಲ್ಲಿ ಅಡಗಿರುವುದು. ಇಲ್ಲಿ ಹೇಳಲಾದ ‘ಹಿಂದೂ’ಗಳು ಯಾರೆಂಬುದನ್ನು ಮುಂದೆ ಪರಿಶೀಲಿಸೋಣ.

ಇತ್ತೀಚೆಗೆ ಹೆಸರುಗಳನ್ನು ಕೋಮುವಾದಿ ಕಾರಣಗಳಿಗಾಗಿ ಬದಲಿಸುವ ಪರಿಪಾಠ ಹೆಚ್ಚಾಗುತ್ತಿದೆ. ಫಿರೋಜ್ ಶಾ ಕೋಟ್ಲಾ ಮೈದಾನವನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಬದಲಿಸಲಾಯಿತು. ಇದೇ ರೀತಿ ಹಲವಾರು ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲಾಯಿತು. ಇನ್ನೂ ಹಲವಾರು ನಗರ ಪಟ್ಟಣಗಳು ಪಟ್ಟಿಯಲ್ಲಿವೆ. ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯಗಳಿಂದ ತೆಗೆಯಲು ಹೊರಟವರು, ಆತ ನಿರ್ಮಿಸಿದ ಬೆಂಗಳೂರಿನ ಲಾಲ್‌ಬಾಗ್ ಪುಷ್ಪೋದ್ಯಾನಕ್ಕೆ ಸಾವರ್ಕರ್ ಪುಷ್ಪ ಕಾಶಿ ಎಂದು ಹೆಸರಿಡಲು ಹೇಸುವವರಲ್ಲ. ಇದರ ಹಿಂದೆ ಅಡಗಿರುವುದು ಸಾರಾಸಗಟು ಮುಸ್ಲಿಂ ದ್ವೇಷ. ಅವರು ಈ ದೇಶದವರಲ್ಲ; ಹೊರಗಿನವರು ಎಂಬ ಸೂಕ್ಷ್ಮ ಮನಶ್ಶಾಸ್ತ್ರೀಯ ಸೂಚನೆ (Psychological suggestion) ನೀಡಿ, ಜನರನ್ನು ಒಡೆಯುವ ತಂತ್ರದ ಭಾಗವಿದು. ಇಂತಹ ಪ್ರಯತ್ನಗಳು ಹುಟ್ಟು ಹಾಕುವ ವಿವಾದಗಳು ಕೂಡಾ ಕೋಮುವಾದೀಕರಣದಲ್ಲಿ ನೆರವಾಗುತ್ತದೆ.

ಅದರಲ್ಲೂ ಇವರು ಪ್ರತಿಪಾದಿಸುವ ‘ಹಿಂದೂ’ ಹೆಸರುಗಳು ಯಾವುವು? ಕೆಲಸಮಯದ ಹಿಂದೆ ಗುರ್ಗಾಂವ್ (ಗುರುಗಾಂವ್) ಹೆಸರನ್ನು ಗುರುಗ್ರಾಮ್ ಎಂದು ಬದಲಿಸಲಾಯಿತು. ಎರಡರ ನಡುವೆ ಇದ್ದಂತಹಾ ಮಹಾನ್ ವ್ಯತ್ಯಾಸ ಏನು? ಗಾಂವ್ ಎಂದರೆ ಹಿಂದಿ, ಹರ್ಯಾಣ್ವಿ ಮತ್ತು ಪಂಜಾಬಿಯಲ್ಲೂ ಗ್ರಾಮವೇ. ಹಾಗಿದ್ದರೂ, ಈ ಬದಲಾವಣೆಗೆ ಪ್ರೇರಣೆ ಎಂದರೆ ಗುರು ಗ್ರಾಮ್ ಎಂಬುದು ಸಂಸ್ಕೃತ! ‘ಹಿಂದೂ’ ಹೆಸರಿನಲ್ಲಿ ಅದೇ ಧರ್ಮ ಅನುಸರಿಸುವ ಬ್ರಾಹ್ಮಣೇತರರ ಸಂಸ್ಕೃತಿ ಭಾಷೆಗಳ ಮೇಲೆ ತಮ್ಮ ಸಂಸ್ಕೃತಿ, ಸಂಸ್ಕೃತವನ್ನು ಹೇರುವ ಯತ್ನವಿದು. ಇದು ದೇಶದಾದ್ಯಂತ ನಡೆಯುತ್ತಲೇ ಬಂದಿದೆ. ಈಗ ಹೆಚ್ಚಾಗಿದೆ ಅಷ್ಟೇ.

ಇನ್ನೊಂದು ಹಳೆಯ ಚಾಳಿ ಎಂದರೆ, ಒಂದು ಧಾರ್ಮಿಕ ಅಥವಾ ಮತೀಯವಾದ ಸ್ಥಳ ಪುರಾಣ ಎಂಬ ಕಟ್ಟುಕತೆಯನ್ನು ಕಟ್ಟಿ, ಊರಿನ ಒಂದು ದೇವಸ್ಥಾನಕ್ಕೆ ಊರಿನ ಹೆಸರಿನ ಜೊತೆ ಸಂಬಂಧ ಕಲ್ಪಿಸಿ, ಅದನ್ನು ಊರ ದೇವಸ್ಥಾನ ಎಂದು ನಂಬಿಸಿ ಲಾಭ ಮಾಡಿಕೊಳ್ಳುವುದು; ಶೂದ್ರ ದಲಿತರು ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿರುವ ಗ್ರಾಮೀಣ ದೇವತೆಗಳಿಗೆ ಪೌರಾಣಿಕ ಬಣ್ಣಹಚ್ಚಿ, ಅವರ ಗುಡಿದೇಗುಲಗಳ ಪಾರುಪತ್ಯ ವಹಿಸಿಕೊಳ್ಳುವುದು; ಆ ಗ್ರಾಮೀಣ ದೇವತೆಗಳಿಗೆ ಸಂಬಂಧಿಸಿದಂತೆ ಇರುವ ಗ್ರಾಮಗಳ ಹೆಸರುಗಳನ್ನು ಸಂಸ್ಕೃತಮಯ ಗೊಳಿಸಿ ಬದಲಿಸುವುದು. ಈ ಪುರಾಣಗಳನ್ನು ನೋಡಿದರೆ, ರಾಮ, ಲಕ್ಷ್ಮಣ, ಸೀತೆ, ಹನುಮಂತ, ಭೀಮಾರ್ಜುನರಾದಿ ಪಾಂಡವರು ‘ಭೇಟಿ’ ನೀಡದ ಊರುಗಳೇ ಭಾರತದಲ್ಲಿಲ್ಲ!

ಆ ದೇವಾಲಯದಿಂದ ಈ ಹೆಸರು ಬಂದಿದೆ; ಈ ದೇವರಿಂದ ಆ ಊರಿಗೆ ಈ ಹೆಸರು ಬಂದಿದೆ ಎಂದು ಹೇಳುವವರು ಒಂದು ತರ್ಕವನ್ನು ಮರೆತುಬಿಡುತ್ತಾರೆ. ಅದೆಂದರೆ, ಊರಿದ್ದರೆ ತಾನೇ ದೇವಾಲಯ! ಊರು ಮೊದಲು ಹುಟ್ಟುತ್ತದೋ, ದೇವಾಲಯವೊ?!

ಕೆಲವರ್ಷಗಳಿಂದ ಇನ್ನೊಂದು ಚಾಳಿ ಬೆಳೆದುಬಂದಿದೆ. ಊರಿನ ಹಳೆಯ ಹೆಸರುಗಳನ್ನು ಕಡೆಗಣಿಸಿ ಶ್ರೀರಾಮ ನಗರ, ಅಯೋಧ್ಯಾ ನಗರ, ದ್ವಾರಕಾ ನಗರ ಎಂದು ಅನಧಿಕೃತವಾಗಿ ಹೆಸರಿಡುವುದು. ಗತಿಸಿದ ಪ್ರಸಿದ್ಧ ವ್ಯಕ್ತಿಗಳು ಅಥವಾ ಯಾವುದೇ ಜಾತ್ಯತೀತವಾದ ಹೆಸರಿಡುವುದು ದಶಕಗಳಿಂದ ನಡೆದುಕೊಂಡುಬಂದಿದೆ. ಉದಾಹರಣೆಗೆ ಕುವೆಂಪು ನಗರ, ವಿವೇಕಾನಂದ ನಗರ, ಶಾಂತಿ ನಗರ ಇತ್ಯಾದಿ. ಇವುಗಳಲ್ಲಿ ಜಾತಿ ಧರ್ಮಗಳ ಹಂಗಿಲ್ಲ. ಆದರೆ, ಇದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮುಸ್ಲಿಮರಾಗಲೀ, ಕ್ರೈಸ್ತರಾಗಲೀ, ದಲಿತರಾಗಲೀ ತಮ್ಮ ಬಾಹುಳ್ಯದ ಪ್ರದೇಶಗಳಿಗೆ ಟಿಪ್ಪುನಗರ, ಹಿದಾಯತ್ ನಗರ, ಸೆಬಾಸ್ಟಿಯನ್ ನಗರ, ಅಂಬೇಡ್ಕರ್ ನಗರ, ಭೀಮ ನಗರ ಎಂದು ಹೆಸರಿಟ್ಟರೆ, ಅದು ಕೋಮುವಾದಿ ಅನಿಸಿಕೊಳ್ಳುವುದು ವಿಪರ್ಯಾಸ. ಇವು ಕೂಡಾ ಅಷ್ಟೇ ಜಾತ್ಯತೀತ ಹೆಸರುಗಳು!

ಯಾವುದೇ ಊರಿನ ಹೆಸರು ಬದಲಿಸಬೇಕೆಂದರೆ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಿರ್ಣಯವಾಗಿ ಸರಕಾರಿ ಪ್ರಕಟಣೆ ಹೊರಡಬೇಕು. ಆದರೆ, ಈಗ ಮನ ಬಂದಂತೆ ಹೆಸರಿನ ಫಲಕಗಳನ್ನು ಹಾಕಲಾಗುತ್ತಿದೆ. ಹತ್ತಿರ ಹತ್ತಿರವೇ ಮೂರ್ನಾಲ್ಕು ಒಂದೇ ಹೆಸರಿನ ‘ನಗರ’ಗಳು ಕಾಣಸಿಗುತ್ತವೆ. ಅಂಚೆಯವರು ಕೂಡಾ ಪತ್ರದಲ್ಲಿ ಊರಿನ ಮೂಲ ಹೆಸರು ಬರೆಯದೇ ಇದ್ದರೆ, ಯಾವ ಊರಿನ ‘ನಗರ’ವಿದು ಎಂದು ತಲೆ ಕೆರೆದುಕೊಳ್ಳಬೇಕಾದ ಪರಿಸ್ಥಿತಿ!

ಯಾರು ಯಾವ ಊರಿನ ಹೆಸರನ್ನು ಏನೆಂದು ಬೇಕಾದರೂ ಬದಲಿಸಲಿ, ಸಾಮಾನ್ಯ ಜನರು ಮಾತ್ರ ಹಳೆಯ ಹೆಸರುಗಳನ್ನೇ ಬಳಸುತ್ತಾರೆ. ಉದಾಹರಣೆಗೆ ಮಂಗಳೂರು ವಿಶ್ವದಾಖಲೆ ಎನಿಸಬಹುದಾದಷ್ಟು ಹೆಸರುಗಳನ್ನು ಹೊಂದಿದೆ. ಮಂಗಳಾದೇವಿ ದೇವಸ್ಥಾನ ಇರುವುದರಿಂದ ಮಂಗಳೂರು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ, ನಂಬಲಾಗುತ್ತಿದೆ. ಇದು ಎಷ್ಟು ನಿಜವಿರಬಹುದು? ಏಕೆಂದರೆ, ಬಹುಸಂಖ್ಯಾತರಾಗಿರುವ ತುಳುವರು ಅದನ್ನು ಕುಡಲ ಅಥವಾ ಕುಡ್ಲ ಎಂದು ಇಂದಿಗೂ ಕರೆಯುತ್ತಾರೆ. ಅದೇ ರೀತಿ ಗೌಡ ಸಾರಸ್ವತ ಕೊಂಕಣಿಗರು ಕೊಡಿಯಾಲ, ಕ್ರೈಸ್ತರು ಮಂಗ್ಲೂರು, ಬ್ಯಾರಿ ಭಾಷೆ ಮಾತಾಡುವ ಮುಸ್ಲಿಮರು ಮೈಕಾಲ, ಮಲಯಾಳಿಗಳು ಮಂಗಳಾಪುರಂ ಎಂದು ಇಂದಿಗೂ ಕರೆಯುತ್ತಾರೆ. ಬ್ರಿಟಿಷರು ಇದನ್ನು ಮ್ಯಾಂಗಲೋರ್ ಮಾಡಿದರು. ಇಂಗ್ಲಿಷ್ ಕಲಿತವರೂ ಹಾಗೆಯೇ ಕರೆಯುತ್ತಿದ್ದರು, ಹಾಗೆಯೇ ಕರೆಯುತ್ತಿದ್ದಾರೆ. ಪೋರ್ಚುಗೀಸರು ಮಂಜರೂನ್ ಎಂದರು. ಹಾಗಾದರೆ, ಹೆಸರಿಗೂ, ಭಾಷೆಗೂ, ಸಂಸ್ಕೃತಿಗೂ, ಮಣ್ಣಿಗೂ ಸಂಬಂಧವಿದೆ ಎಂದಾಯಿತು. ಏಕಾಏಕಿ ಊರುಗಳ ಹೆಸರುಗಳನ್ನು ಬದಲಿಸಲು ಅವುಗಳೇನು ಬಣ್ಣ ಬದಲಿಸುವ ಗೋಸುಂಬೆಗಳೆ?

ಇಲ್ಲಿ ಇನ್ನೊಂದು ಗಂಭೀರ ವಿಷಯವನ್ನು ಗಮನಿಸಬೇಕು. ತನ್ನ ಬಹು ಹೆಸರುಗಳ ಮೂಲಕವೇ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಗಳನ್ನು ಸಾಕಿಕೊಂಡುಬಂದ ಊರು ತಾನೆಂದು ಸೂಚಿಸುವ ಮಂಗಳೂರೇ ಇಂದು ಏಕಭಾಷೆ, ಏಕ ಸಂಸ್ಕೃತಿ, ಏಕಧರ್ಮವನ್ನು ಪ್ರತಿಪಾದಿಸುವ ಆದರೆ ಮಾನವರೆಲ್ಲರೂ ಏಕ ಜಾತಿ ಎಂದು ಎಂದೆಂದಿಗೂ ಒಪ್ಪದ ವಿಭಜನಕಾರಿ ಕೋಮುವಾದಿಗಳ ಪ್ರಯೋಗಶಾಲೆಯಾಗಿರುವುದು ದುರಂತ! ಇದೇ ಕರಾವಳಿಯನ್ನು ಹಿನ್ನೆಲೆಯಲ್ಲಿ ಇಟ್ಟುಕೊಂಡು ಇನ್ನಷ್ಟು ವಿಷಯಗಳನ್ನು ಮುಂದಿನ ಭಾಗದಲ್ಲಿ ನೋಡೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...