| ಶುದ್ದೋದನ |
ಕರಾವಳಿಯ ಅವಳಿ ಜಿಲ್ಲೆಯಲ್ಲೀಗ ಪ್ರಳಯಾಂತಕ ಮಳೆ ಮತ್ತು ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಯದೇ ಸುದ್ದಿ-ಸದ್ದು. ನವೆಂಬರ್ 12ರಂದು ನಡೆಯಲಿರುವ ಕಾರ್ಪೊರೇಷನ್ ಕದನಾಂಗಣದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಾಮುಖಿ ನಿಂತು ಸೆಡ್ಡುಹೊಡೆಯುತ್ತಿವೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಚುನಾವಣೆಯಲ್ಲಿ ಧರ್ಮ ಸೂಕ್ಷ್ಮದ ದಾಳಗಳುರುಳಿಸಿ ದಿಗ್ವಿಜಯ ಸಾಧಿಸಿರುವ ಕೇಸರಿ ಕೋಟೆಯಲ್ಲೀಗ ಮೊದಲಿನ ಖದರು ಉಳಿದಿಲ್ಲ.
ಜನರ ಹತಾಶೆ, ಮಂಗಳೂರು ಮಹಾನಗರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಸೆಣಸಾಟ ನಡೆಯುವುದು ಖಾತ್ರಿಪಡಿಸಿದೆ! ಇತ್ತೀಚಿನ ವರ್ಷದಲ್ಲಿ ಕಾರ್ಪೊರೇಷನ್ ಏರಿಯಾದಲ್ಲಿ ಕೇಸರಿ ಪರಿವಾರದ ಕರಾಮತ್ತು ಜೋರಾಗಿದ್ದರೂ ಕಾಂಗ್ರೆಸ್ ತೀರ ದುರ್ಬಲವಾಗೇನೂ ಇಲ್ಲ. ವಾರ್ಡ್ಗಳ ಮೀಸಲಾತಿ ಬದಲಾಗಿರೋದ್ರಿಂದ ಹೊಸ ಮುಖಗಳು ಸ್ಪರ್ಧೆಗೆ ಇಳಿಯಬೇಕಾಗಿದೆ. ಇದು ಕಾಂಗ್ರೆಸ್ಗೆ ಆಡಳಿತ ವಿರೋಧಿ ಅಲೆ ದೊಡ್ಡಮಟ್ಟದಲ್ಲಿ ಬಾಧಿಸದಂತೆ ತಡೆಯಲಿದೆ. ಕಳೆದೈದು ವರ್ಷದ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕೆಲಸಗಳು ಸಾಕಷ್ಟು ಆಗಿವೆ. ಹಾಗಾಗಿ ಮತದಾರರಿಗೆ ಕಾಂಗ್ರೆಸ್ ಮೇಲೆ ಅಂಥ ತಿರಸ್ಕಾರವೇನಿದ್ದಂತೆ ಕಾಣಿಸುತ್ತಿಲ್ಲ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎರಡೂ ವಿಧಾನಸಭಾ ಕ್ಷೇತ್ರಗಳು ಬಿಜೆಪಿ ತೆಕ್ಕೆಯಲ್ಲಿದೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 38 ವಾರ್ಡುಗಳಿದ್ದರೆ, ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ 22 ವಾರ್ಡುಗಳು ಬರುತ್ತವೆ. ಇಲ್ಲೆಲ್ಲ ಬಿಜೆಪಿ ಪರಿವಾರದ ಬೇರುಗಳು ತೀರಾ ಆಳಕ್ಕೆ ಇಳಿದಿರುವುದರಿಂದ ಪಾಲಿಕೆ ಪಾರುಪತ್ಯ ವಶವಾಗಲಿದೆಯೆಂಬ ಲೆಕ್ಕಾಚಾರ ಸ್ಥಳೀಯ ಸಂಸದನೂ ರಾಜ್ಯ ಬಿಜೆಪಿ ಅಧ್ಯಕ್ಷನೂ ಆಗಿರುವ ನಳಿನ್ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್ ಮತ್ತು ಶಾಸಕ ಭರತ್ ಶೆಟ್ಟಿ ಬಳಗ ಹಾಕಿಕುಂತಿದೆ!
ಆದರೆ ರಾಜಕೀಯ ಸಮೀಕರಣದ ವಾಸ್ತವ ಅಷ್ಟು ಸರಳವಾಗಿಲ್ಲ. ಎತ್ತಿಂದೆತ್ತ ಕಳೆದು ಕೂಡಿಸಿ ತಾಳೆ ನೋಡಿದರೂ ಮೂರ್ನಾಲ್ಕು ಸೀಟುಗಳ ಅಂತರದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಗದ್ದುಗೆಯೇರಲಿದೆ ಎಂಬ ಅಂದಾಜು ಸಿಗುತ್ತದೆ. 1984ರಲ್ಲಿ ಮನಪಾ ಅಸ್ತಿತ್ವಕ್ಕೆ ಬಂದನಂತರ ಒಂದೇ ಒಂದು ಬಾರಿ (2007ರಲ್ಲಿ) ಮಾತ್ರ ಬಿಜೆಪಿ ಅಧಿಕಾರ ಪಡೆದಿತ್ತು. ಪಾಲಿಕೆ ಸರಹದ್ದಿನ ಶಾಸಕ-ಸಂಸದ ಸ್ಥಾನ ಕೈಲಿದ್ದರೂ ಬಿಜೆಪಿಗೆ ಪಾಲಿಕೆ ಆಡಳಿತ ದಕ್ಕಿಸಿಕೊಳ್ಳಲಾಗಿರಲಿಲ್ಲ. ಆಗೆಲ್ಲ ಕಾಂಗ್ರೆಸ್ನಲ್ಲಿ ಮಾಜಿ ಕೇಂದ್ರಮಂತ್ರಿ ಜನಾರ್ದನ ಪೂಜಾರಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ ಮತ್ತು ಎಐಸಿಸಿ ಮಾಜಿ ಜನರಲ್ ಸೆಕ್ರೆಟರಿ ಆಸ್ಕರ್ ಫರ್ನಾಂಡಿಸ್ರ ಮೇಲಾಟದ ಯಜಮಾನಿಕೆ ನಡೆಯುತಿತ್ತು. ತಂತಮ್ಮ ಹಿಂಬಾಲಕರಿಗೆ ಸೀಟು ಕೊಟ್ಟು ಗೆಲ್ಲಿಸಿಕೊಂಡು ಬರುತ್ತಿದ್ದರು. ಆದರೆ ಪೂಜಾರಿ ಮಾತೇ ಮೇಯರ್ ಆಯ್ಕೆಯಲ್ಲಿ ಅಂತಿಮ ಆಗುತ್ತಿತ್ತು.
ಮನಪಾದ ಮೂರು ದಶಕದ ಚುನಾವಣಾ ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್ನ ತ್ರಿಮೂರ್ತಿ ಹಳಬರು ಮೂಲೆಗುಂಪಾಗಿದ್ದಾರೆ. ಅವರ ಜಾಗದಲ್ಲಿ ಹೊಸ ಮೂರು ಮುಖಂಡರು ಬಂದು ಕೂತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನೂ ಎಮ್ಮೆಲ್ಸಿಯೂ ಆಗಿರುವ ಹರೀಶ್ಕುಮಾರ್, ಮಾಜಿ ಮಂತ್ರಿ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ಕಾಂಗ್ರೆಸ್ ಕಾರ್ಪೊರೇಟರ್ ಟಿಕೆಟ್ ಹಂಚಿಕೆ ಹಾಗೂ ರಣತಂತ್ರ ಹೆಣೆಯುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಮಾಜಿ ಮಂತ್ರಿ ರಮಾನಾಥ ರೈ ಮಾತು ಸಣ್ಣ ಪ್ರಮಾಣದಲ್ಲಿ ನಡೆಯುತ್ತಿದೆ. ತಂತಮ್ಮ ಕ್ಷೇತ್ರದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಮಾಜಿ ಶಾಸಕರಾದ ಜಿ.ಅರ್.ಲೋಬೋ ಮತ್ತು ಮೊಹಿಯುದ್ದೀನ್ ಬಾವಾ ಆಟ ಆಡುತ್ತಿದ್ದಾರೆ. ಮೊದಲು ಕಾಂಗ್ರೆಸ್ನಲ್ಲಿದ್ದ ಗುಂಪುಗಾರಿಕೆ ಈಗ ಬಿಜೆಪಿ ಪಾಳೆಯದಲ್ಲೂ ಶುರುವಾಗಿದೆ.
ಗುರು ಕಲ್ಲಡ್ಕ ಭಟ್ಟರಿಗೇ ಸೆಡ್ಡು ಹೊಡೆದು ರಾಜ್ಯ ಬಿಜೆಪಿ ಅಧ್ಯಕ್ಷತೆ ಪಡೆದಿರುವ ನಳಿನ್ಕುಮಾರ್ ಆ ಪಕ್ಷದ ಪಾಲಿಕೆ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಶ್ನಾತೀತ ನಾಯಕಾಗ್ರೇಸ! ಈ ನಳಿನ್ ಗ್ಯಾಂಗಲ್ಲಿ ಶಾಸಕ ಭರತ್ ಶೆಟ್ಟಿ, ವೇದವ್ಯಾಸ ಕಾಮತ್ ಮತ್ತು ವಿನಾಯಕ ಬಾಳಿಗಾ ಎಂಬ ಆರ್ಟಿಐ ಕಾರ್ಯಕರ್ತನ ಮರ್ಡರ್ ಕೇಸ್ ಆಪಾದಿತ ನರೇಶ್ ಶೆಣೈ ಇದ್ದಾರೆ. ಸಮಾನಾಂತರವಾಗಿ ಕಲ್ಲಡ್ಕ ಭಟ್ಟರ ಬೆಟಾಲಿಯನ್ ನಿಂತಿದೆ. ರಾಜ್ಯ ಬಿಜೆಪಿಯ ಸೂತ್ರಧಾರ ಬಿ.ಎಲ್.ಸಂತೋಷ್ ಮತ್ತು ಕಲ್ಲಡ್ಕ ಭಟ್ಟರ ಸಂಬಂಧ ಅಷ್ಟಕಷ್ಟೇ. ಸಂತೋಷನ ಕೀಲುಗೊಂಬೆ ನಳಿನ್. ಹೀಗಾಗಿ ನಳಿನ್ ಹೇಳಿದವರಿಗೇ ಪಾಲಿಕೆಗೆ ಸ್ಪರ್ಧಿಸುವ ಬಿಜೆಪಿ ಟಿಕೆಟ್ ಗ್ಯಾರಂಟಿ. ಭಟ್ಟರೇನೂ ಖಾಲಿ ಕೈಲಿ ಕೂರುವುದಿಲ್ಲ. ಕೆಲವು ಸೀಟುಗಳಾದರೂ ತಮ್ಮ ಶಿಷ್ಯಸಂಕುಲಕ್ಕೆ ಕೊಡಿಸುತ್ತಾರೆ. ಈ ಶೀತಲ ಸಮರ ಬಿಜೆಪಿಗೆ ದೊಡ್ಡ ಹಾನಿ ಮಾಡಲಿದೆ.
ಚುನಾವಣೆ ಗೆಲ್ಲಲು ಜನಹಿತ ಕಾರ್ಯಕ್ರಮಗಳ್ಯಾವುದೂ ಇಲ್ಲದ ಕೇಸರಿ ಪಡೆ ಬಗ್ಗೆ ಮಂಗಳೂರಲ್ಲಿ ಒಂದು ಜೋಕ್ ಚಾಲ್ತಿಯಲ್ಲಿದೆ. ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಬಿಜೆಪಿಯನ್ನ ಬಚಾವ್ ಮಾಡಿದ “ಭಾವಿ-ಭಾರತರತ್ನ” ಸಾವರ್ಕರ್ ಪ್ರತಿಮೆ ಮಂಗಳೂರಿನ ನೆಹರು ಮೈದಾನದಲ್ಲಿ ಸ್ಥಾಪಿಸುತ್ತೇವೆಂದು ಹೇಳಿ ಮತದಾರರ ಮಂಗ ಮಾಡಲು ನಳಿನ್ ತಂಡ ತಯಾರಿ ನಡೆಸಿದೆಯಂತೆ! ಮತ್ತೊಂದೆಡೆ ಮಂಗಳೂರಿನ ಓಎನ್ಜಿಸಿ-ಸೆಜ್ನ ಉತ್ತರ ಭಾರತೀಯ ಕಾರ್ಮಿಕ ನಡುವೆ ಬಾಂಗ್ಲಾ ಉಗ್ರರು ನುಸುಳಿದ್ದಾರೆಂಬ ಧರ್ಮಾಂಧ ಎನ್ಆರ್ಸಿ ಕಾರ್ಪೊರೇಷನ್ ಇಲೆಕ್ಷನ್ ಈಶ್ಯೂ ಮಾಡಲು ಬಿಜೆಪಿ ಚಿಂತಕರ ಚಾವಡಿ ಯೋಜಿಸುತ್ತಿದೆ. ಒಟ್ಟಿನಲ್ಲಿ ಮಂಗಳೂರು ಪಾಲಿಕೆ ಪೀಠಕ್ಕಾಗಿ ಬಿಜೆಪಿ “ಧರ್ಮ” ತಡಕಾಡುತ್ತಿದೆ.
ಸುಳ್ಳು ಸುದ್ದಿ ಹಾರಾಡೋ ಸೋಂಬೇರಿಗಳಿಗೆ ಸಹಾಯ ಬೇರೆ ಕೇಡು