| ನೀಲಗಾರ |
ಬಿಜೆಪಿಗೆ ಉಪಚುನಾವಣೆಯಲ್ಲಿ ಬಹುಮತ ಪಡೆಯುವಷ್ಟು ಸೀಟುಗಳು ಬರುವ ಕುರಿತು ಅನುಮಾನ ಉಂಟಾಗುತ್ತಿದ್ದ ಹಾಗೇ, ‘ಈ ಸರ್ಕಾರ ಉರುಳಲು ಬಿಡುವುದಿಲ್ಲ’ ಎಂದು ಕುಮಾರಸ್ವಾಮಿಯವರು ಸ್ಪಷ್ಟಪಡಿಸಿಬಿಟ್ಟಿದ್ದಾರೆ. ಅಷ್ಟೇ ವೇಗವಾಗಿ ಯಡಿಯೂರಪ್ಪನವರು ಧನ್ಯವಾದಗಳನ್ನೂ ಅರ್ಪಿಸಿಬಿಟ್ಟಿದ್ದಾರೆ.
ಮೈತ್ರಿ ಸರ್ಕಾರ ರಚನೆಯಾಗಿಲ್ಲ ಎಂಬುದೊಂದು ಬಿಟ್ಟರೆ ಇದೀಗ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದೆ ಎಂಬುದರಲ್ಲಿ ಯಾವ ಸಂದೇಹವೂ ಉಳಿದಿಲ್ಲ. ದೋಸೆ ಮಗುಚಿದ ಹಾಗೆ ಜೆಡಿಎಸ್ ಬಹುಬೇಗ ಮೈತ್ರಿ ಬದಲಿಸಲು ಸಾಧ್ಯ ಎಂಬ ಬಗ್ಗೆ ಯಾರಿಗೇನೂ ಡೌಟು ಇಲ್ಲವಾದರೂ, ಇಷ್ಟು ಬೇಗ ಅದಕ್ಕೆ ಸಂದರ್ಭ ಒದಗಿ ಬಂದುಬಿಡುತ್ತದೆ ಎಂದುಕೊಂಡಿರಲಿಲ್ಲ. ಬಿಜೆಪಿಗೆ ಉಪಚುನಾವಣೆಯಲ್ಲಿ ಬಹುಮತ ಪಡೆಯುವಷ್ಟು ಸೀಟುಗಳು ಬರುವ ಕುರಿತು ಅನುಮಾನ ಉಂಟಾಗುತ್ತಿದ್ದ ಹಾಗೇ, ‘ಈ ಸರ್ಕಾರ ಉರುಳಲು ಬಿಡುವುದಿಲ್ಲ’ ಎಂದು ಕುಮಾರಸ್ವಾಮಿಯವರು ಸ್ಪಷ್ಟಪಡಿಸಿಬಿಟ್ಟಿದ್ದಾರೆ. ಅಷ್ಟೇ ವೇಗವಾಗಿ ಯಡಿಯೂರಪ್ಪನವರು ಧನ್ಯವಾದಗಳನ್ನೂ ಅರ್ಪಿಸಿಬಿಟ್ಟಿದ್ದಾರೆ.
ಮುಖ್ಯವಾಗಿ ನಾಲ್ಕು ಅಂಶಗಳು ಅದನ್ನು ಸಾಧ್ಯವಾಗಿಸುತ್ತಿವೆ.
1. ಡಿಕೆಶಿ ಫ್ಯಾಕ್ಟರ್: ಡಿಕೆ ಶಿವಕುಮಾರ್ರನ್ನು ಅಪ್ಪಿಕೊಳ್ಳುವ ಮೂಲಕ ಜಾತಿ ಸಮೀಕರಣದ ಅನುಕೂಲವನ್ನು ಗೌಡರ ಕುಟುಂಬ ಪಡೆದುಕೊಳ್ಳುತ್ತಿದೆಯಾದರೂ, ಡಿಕೆಶಿಗಾಗಿದ್ದು ತಮಗೂ ಮೆಸೇಜ್ ಎಂಬುದು ಅವರಿಗೆ ಗೊತ್ತಿದೆ. ಅದೇರೀತಿ ಚಿದಂಬರಂ ಮತ್ತಿತರರು ಜೈಲುಪಾಲಾಗಿ ಹೊರಬರದೇ ಇರುವುದು ಸಿಬಿಐನಲ್ಲೂ ಕೇಸುಗಳನ್ನು ಎದುರಿಸುತ್ತಿರುವ ಎಚ್ಡಿಕೆಗೆ ಆತಂಕ ಹುಟ್ಟಿಸಿದೆ.
2. ಉಪಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟುಗಳು ಬಂದರೂ, ಬಾರದೇ ಇದ್ದರೂ ಆಪರೇಷನ್ ಕಮಲದ ಮುಂದಿನ ಟಾರ್ಗೆಟ್ ಜೆಡಿಎಸ್ ಎಂಎಲ್ಎಗಳೇ ಆಗಿರುತ್ತಾರೆಂಬುದರಲ್ಲಿ ಅನುಮಾನವಿಲ್ಲ. ಈಗಾಗಲೇ ಜಿ.ಟಿ.ದೇವೇಗೌಡರು ಒಂದು ಕಾಲು ಹೊರಗಿಟ್ಟಿರುವುದನ್ನು ಘೋಷಿಸಿಯೂ ಆಗಿದೆ. ಹಾಗಾಗಿ ಜೆಡಿಎಸ್ಅನ್ನು ದುರ್ಬಲಗೊಳಿಸಿಕೊಳ್ಳುತ್ತಾ ಹೋಗುವುದಕ್ಕಿಂತ ಅಧಿಕಾರ ಹಂಚಿಕೆ ಅಥವಾ ಅಧಿಕಾರಸ್ಥರ ಸಖ್ಯದೊಂದಿಗೆ ಎಂಎಲ್ಎಗಳನ್ನು ಮತ್ತು ಪಕ್ಷವನ್ನು ಉಳಿಸಿಕೊಳ್ಳುವುದು ಜೆಡಿಎಸ್ಗೆ ಅನಿವಾರ್ಯ.
3. ಒಂದುವೇಳೆ ಬಿಜೆಪಿಗೆ ಬಹುಮತಕ್ಕೆ ಬೇಕಿರುವಷ್ಟು ಎಂಎಲ್ಎಗಳು ಗೆಲ್ಲದಿದ್ದರೆ ಯಡಿಯೂರಪ್ಪನವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಇಳಿಸಬಹುದಾದರೂ, ತಾವೇ ಸರ್ಕಾರ ರಚನೆ ಮಾಡುವುದು ಸಾಧ್ಯವಿಲ್ಲ. ಯಾರು ಒಪ್ಪಿದರೂ ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯ ಒಪ್ಪುವುದಿಲ್ಲವಾದ್ದರಿಂದ ಮತ್ತೆ ಚುನಾವಣೆಗೇ ಹೋಗಬೇಕು. ಅದಕ್ಕೆ ಬಿಜೆಪಿಗಿರುವ ಸಿದ್ಧತೆಯೂ ಜೆಡಿಎಸ್ಗಿಲ್ಲ.
4. ಫೀಲ್ಡ್ನಲ್ಲಿ ಜೆಡಿಎಸ್ಗೆ ಎದುರಾಳಿ ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ. ಒಂದುವೇಳೆ ಮೈತ್ರಿ ಮುಂದುವರೆದರೆ ದಕ್ಷಿಣ ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಕಾಂಗ್ರೆಸ್ ವರ್ಸಸ್ ಬಿಜೆಪಿ ಎಂದಾಗಿಬಿಟ್ಟರೆ ಜೆಡಿಎಸ್ ಅಪ್ರಸ್ತುತವಾಗಿಬಿಡುತ್ತದೆ.
ಇವೆಲ್ಲಾ ಕಾರಣಗಳಿಂದ ಜೆಡಿಎಸ್ ಮತ್ತು ಬಿಜೆಪಿಯ ನಡುವೆ ಮೈತ್ರಿ ಏರ್ಪಟ್ಟಿದೆ. ಇನ್ನು ಜಾತ್ಯತೀತತೆ, ಸಿದ್ಧಾಂತ ಎಂಬುದಕ್ಕೂ ಕುಮಾರಸ್ವಾಮಿಯವರಿಗೂ ಯಾವ ಸಂಬಂಧವೂ ಇಲ್ಲ. ಹೀಗಾಗಿ ಒಂದು ರೀತಿಯಲ್ಲಿ ಇದು ಸಹಜ ಬೆಳವಣಿಗೆಯಾಗಿದೆ. ಹರಿಯಾಣದಲ್ಲಿ ಬಿಜೆಪಿಯನ್ನು ಬಾಯಿಗೆಬಂದಂತೆ ಬಯ್ಯುತ್ತಿದ್ದ ಜೆಜೆಪಿ ಪಕ್ಷದ ಚೌತಾಲಾ ಅವರ ಜೊತೆಯೇ ಚುನಾವಣೋತ್ತರ ಮೈತ್ರಿಗೆ ಮುಂದಾದರು. ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿನಲ್ಲಿದ್ದ ಆತನ ತಂದೆ ಮತ್ತು ತಾತ ಪೆರೋಲ್ ಮೇಲೆ ಹೊರಬಂದು ಪ್ರಮಾಣವಚನ ಸಮಾರಂಭಕ್ಕೆ ಹಾಜರಾದರು. ಇದರ ಬಗ್ಗೆ ಬಿಜೆಪಿಗೂ ಯಾವ ನಾಚಿಕೆಯಿರಲಿಲ್ಲ. ಭ್ರಷ್ಟಾಚಾರದ ವಿರುದ್ಧ ಮೋದಿ ಮತ್ತು ಶಾ ಈಗಲೂ ವೀರಾವೇಶದ ಭಾಷಣಗಳನ್ನೂ ಮಾಡಬಹುದು. ಆದರೆ, ಇಂಥದ್ದಕ್ಕೇನೂ ಅಡ್ಡಿಯಾಗುವುದಿಲ್ಲ.
ಕರ್ನಾಟಕದಲ್ಲಿ ಗಣಿ ಕೇಸುಗಳಲ್ಲಿ ಜೈಲಿಗೆ ಹೋಗಿಬಂದ ಬಿಜೆಪಿ ಶಾಸಕರನ್ನು ಆಲಂಗಿಸಿಕೊಂಡ ಕಾಂಗ್ರೆಸ್ಸಿಗೂ ಯಾವ ನೈತಿಕತೆಯಿಲ್ಲ. ಈಗ ಅದೇ ಶಾಸಕರು ಮರಳಿ ಬಿಜೆಪಿಗೇ ಹೋಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಜೆಡಿಎಸ್ಗೆ ಬಿಜೆಪಿ ಜೊತೆ ಸೇರುವುದರಿಂದ ನೈತಿಕ ಪ್ರಶ್ನೆಗಳೇಳುವ ಸಾಧ್ಯತೆಯೇ ಇಲ್ಲ.
ಹಾಗಾಗಿ ಇನ್ನೊಂದು ನಿರ್ಲಜ್ಜ ಮೈತ್ರಿಯನ್ನು ನೋಡಲು ಕರ್ನಾಟಕವು ಸಿದ್ಧವಾಗಬೇಕು.