64ನೇ ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗರೆಲ್ಲರೂ ಸಂತಸದಿಂದ, ಪ್ರೀತಿಯಿಂದ, ಅಭಿಮಾನದಿಂದ ಕನ್ನಡ ರಾಜ್ಯೋತ್ಸವ ಆಚರಿಸಿ, ಕನ್ನಡ ಧ್ವಜ ಹಾರಿಸಿ ಸಂಭ್ರಮಪಡುತ್ತಿರುವಾಗ ಕರ್ನಾಟಕ ಸರ್ಕಾರ ಮಾತ್ರ ತನ್ನ ಎಡಬಿಡಂಗಿ ನಿಲುವಿನಿಂದ ಸಾಕಷ್ಟು ಟೀಕೆಗೆ ಗುರಿಯಾಗಿದೆ.
ನವೆಂಬರ್ 1 ರಂದು ಕನ್ನಡ ಧ್ವಜ ಹಾರಿಸುವಂತಿಲ್ಲ, ಬದಲಿಗೆ ರಾಷ್ಟ್ರಧ್ವಜ ಮಾತ್ರ ಹಾರಿಸಬೇಕೆಂಬ ಎರಡು ಸುತ್ತೋಲೆಗಳು ಕೊಪ್ಪಳ ಮತ್ತು ಸಿಂಧನೂರಿನಲ್ಲಿ ಹರಿದಾಡಿದ್ದು ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸಿವೆ. ಮೊದಲಿಗೆ ಕೊಪ್ಫಳ ಜಿಲ್ಲೆ ಕ್ಷೇತ್ರ ಶಿಕ್ಷಣಾಧಿಕಾರಿಗೂ ಸುತ್ತೋಲೆ ಹೊರಡಿಸಿದರೆ ನಂತರ ಸಿಂಧನೂರಿನ ತಹಶೀಲ್ದಾರ್ ಸುತ್ತೋಲೆ ಕಳಿಸಿ ಕನ್ನಡ ಧ್ವಜ ಹಾರಿಸದಂತೆ ಆದೇಶಿಸಿದ್ದಾರೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಹ ಕಳೆದ ಮೂರ್ನಾಲ್ಕು ವರ್ಷಗಳಿಂದ ಕನ್ನಡ ಧ್ವಜವನ್ನು ವಿರೋಧಿಸುತ್ತಾ ಬಂದಿದೆ. ಸಿ.ಟಿ ರವಿ ಸೇರಿದಂತೆ ಹಲವು ಬಿಜೆಪಿ ನಾಯಕರು ಕರ್ನಾಟಕಕ್ಕೆ ಪ್ರತ್ಯೇಕ ಕನ್ನಡ ಧ್ವಜ ಬೇಕಿಲ್ಲ ಎಂದು ಬಹಿರಂಗವಾಗಿ ಘೋಷಿಸಿದ್ದರು. ಆರ್ಎಸ್ಎಸ್ ಸಹ ಪ್ರಬಲವಾಗಿ ಕನ್ನಡ ಧ್ವಜದ ವಿರುದ್ಧ ಪ್ರಚಾರಾಂದೋಲನ ನಡೆಸಿತ್ತು. ಇಂತಹ ಸಂದರ್ಭದಲ್ಲಿ 6 ವರ್ಷಗಳ ನಂತರ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೇರಿದೆ. ಆಗಲೇ ಟಿಪ್ಪು ಜಯಂತಿ ರದ್ದು ಮಾಡುವುದಾಗಿ ಘೋಷಿಸಿದೆ. ಜೊತೆಗೆ ಕನ್ನಡ ಧ್ವಜವೂ ಬೇಡ ಎಂಬ ಹೇಳಿಕೆಗಳು ಸರ್ಕಾರದ ವತಿಯಿಂದ ಕೇಳಿಬಂದಿದ್ದವು.
ಸಾಲದೆಂಬಂತೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ತಾವು ಕೊಟ್ಟ ಜಾಹಿರಾತುಗಳಲ್ಲಿ ಕನ್ನಡ ಧ್ವಜ ಇರದಂತೆ ನೋಡಿಕೊಂಡಿದ್ದು ಕನ್ನಡಿಗರ ಕೋಪವನ್ನು ತೀವ್ರಗೊಳಿಸಿತ್ತು. ಹಾಗಾಗಿ ಪಕ್ಷಭೇಧ ಮರೆದು ಲಕ್ಷಾಂತರ ಕನ್ನಡಿಗರು ಸರ್ಕಾರ ಕನ್ನಡವಿರೋಧಿ ನೀತಿಯನ್ನು ತೀವ್ರವಾಗಿ ಪ್ರತಿಭಟಿಸಿದ್ದರು. ಸರ್ಕಾರಕ್ಕೆ ಸೆಡ್ಡು ಹೊಡೆದು ಲಕ್ಷಾಂತರ ಕಡೆಗಳಲ್ಲಿ ಕನ್ನಡ ಧ್ವಜ ಹಾರಿಸಿ ತಮ್ಮ ಸ್ವಾಭಿಮಾನವನ್ನು ಮೆರೆದಿದ್ದರು.
ಸಾಮಾಜಿಕ ಜಾಲತಾಣದಲ್ಲಂತೂ ಬಿಜೆಪಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯಾಗಿತ್ತು. ಇದೆಲ್ಲದರಿಂದ ಕೊನೆಗೂ ತನ್ನ ತಪ್ಪಿನ ಅರಿವಾದ ನಂತರ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದೆ. ಕನ್ನಡ ಧ್ವಜ ಹಾರಿಸುವುದಾಗಿ ಘೋಷಿಸಿದೆ ಮಾತ್ರವಲ್ಲ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರು ಕನ್ನಡ ಧ್ವಜ ಹಾರಿಸಿದ್ದಾರೆ. ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ರವರು ಸುತ್ತೋಲೆ ಹೊರಡಿಸಿದ ಕೊಪ್ಪಳದ ಶಿಕ್ಷಣಾಧಿಕಾರಿಯಿಂದ ವಿವರಣೆ ಕೇಳಿ ಕೊಡಬೇಕೆಂದು ಮತ್ತು ತಕ್ಷಣವೇ ಅಮಾನತಿನಲ್ಲಿ ಇಡಬೇಕೆಂದು ಸೂಚನೆ ನೀಡಿದ್ದೇನೆ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಅಂತೂ ದುರಂಹಕಾರಿ ಪ್ರದರ್ಶಿಸಿದ ರಾಜ್ಯಸರ್ಕಾರದ ವಿರುದ್ಧ ಗೆಲುವು ಸಾಧಿಸಿದ ಕನ್ನಡಾಭಿಮಾನಿಗಳು ಖುಷಿಪಟ್ಟಿದ್ದಾರೆ. ತಾವು ಏನು ಬೇಕಾದರೂ ಮಾಡಿ ತೀರುತ್ತೇವೆ ಎನ್ನುವ ಬಿಜೆಪಿಗೆ ಇದರಿಂದ ದೊಡ್ಡ ಸೋಲಾಗಿದೆ. ನಾಡಜನರನ್ನು ಎದುರು ಹಾಕಿಕೊಂಡರೆ ಏನಾಗುತ್ತದೆ ಎಂಬುದಕ್ಕೆ ಇದು ದೊಡ್ಡ ಪಾಠವಾಗಿದೆ.