ಮಧ್ಯಪ್ರದೇಶದ ಅಧಿಕಾರ ಉಳಿಸಿಕೊಳ್ಳುವಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯಶಸ್ವಿಯಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಣೆ ಮಾಡದೆ ಸಾಮೂಹಿಕ ನಾಯಕತ್ವ ತಂತ್ರಕ್ಕೆ ಮೊರೆ ಹೋದ ಹೈಕಮಾಂಡ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್, ಫಗ್ಗನ್ ಸಿಂಗ್ ಕುಲಸ್ತೆ, ಪ್ರಹ್ಲಾದ್ ಪಟೇಲ್ ಹಾಗೂ ಕೈಲಾಶ್ ವಿಜಯವರ್ಗಿಯಾ ಜತೆಗೆ ಏಳು ಲೋಕಸಭಾ ಸದಸ್ಯರನ್ನು ವಿಧಾನಸಭಾ ಕಣಕ್ಕಿಳಿಸಿತ್ತು. ಹೈಕಮಾಂಡ್ನ ಈ ಪ್ರಯೋಗ ಫಲಿಸಿದ್ದು, ಮುಖ್ಯಮಂತ್ರಿ ಹುದ್ದೆಗೆ ಹೊಸ ಆಯ್ಕೆಗಳು ತೆರೆದುಕೊಂಡಿದೆ. ಇದೀಗ ಶಿವರಾಜ್ ಸಿಂಗ್ ಚೌಹಾಣ್ ಅಧಿಕಾರಿದಲ್ಲಿ ಮುಂದುವರಿಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.
2003 ರಿಂದಲೂ ಮಧ್ಯಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ, 2018ರ ನಂತರ 15 ತಿಂಗಳ ಅವಧಿಯನ್ನು ಹೊರತುಪಡಿಸಿ ಮುಂದಿನ ಐದು ವರ್ಷಗಳವರೆಗೆ (2028ರ ವರೆಗೆ) ಅಧಿಕಾರ ಖಚಿತಪಡಿಸಿಕೊಂಡಿದೆ. 163 ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಚಂಡ ಬಹುಮತ ಸಾಧಿಸಿದೆ. ಇದೀಗ ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿ ಯಾರು ಎಂಬುದು ಎಲ್ಲರಿಗೂ ಇರುವ ಬಹುದೊಡ್ಡ ಪ್ರಶ್ನೆಯಾಗಿದೆ.
ಮುಂದಿನ ಅವಧಿಗೆ ಶಿವರಾಜ್ ಸಿಂಗ್ ಚೌಹಾಣ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸದ ಹೈಕಮಾಂಡ್ ತಂತ್ರ ಫಲಿಸಿದೆ. ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಸಾಮೂಹಿಕ ನಾಯಕತ್ವ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯ ಮೇಲೆ ಪ್ರಚಾರ ನಡೆಸಿದ ಬಿಜೆಪಿ, ತನ್ನ ಓಟ್ ಬ್ಯಾಂಕ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಾಜ್ಯದ 230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 163 ಸ್ಥಾನಗಳನ್ನು ಗಳಿಸಿದ್ದು, ಕಾಂಗ್ರೆಸ್ ಕೇವಲ 66ಕ್ಕೆ ಕುಸಿದಿದೆ.
ಮೂವರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸದರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ಚೌಹಾಣ್ ಅವರನ್ನು ಸೈಡ್ಲೈನ್ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಬಿಜೆಪಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದವರು ಎಂಬ ಹೆಗ್ಗಳಿಕೆಯೂ ಪಕ್ಷದ ಅಮೋಘ ಸಾಧನೆಗೆ ಬಲ ನೀಡಿದೆ ಎನ್ನಲಾಗಿದೆ. ಮುಂದಿನ ಲೋಕಸಭಾ ಚುನಾವಣೆವರೆಗೂ ಚೌಹಾಣ್ ಅವರೇ ಸಿಎಂ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೇಂದ್ರ ಸಚಿವರಾದ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ (ಇಬ್ಬರೂ ರಾಜ್ಯದ ಜನಸಂಖ್ಯೆಯ ಅರ್ಧದಷ್ಟು ಇರುವ ಇತರೆ ಹಿಂದುಳಿದ ವರ್ಗಗಳ ನಾಯಕರು), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಮತ್ತು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಹೆಸರುಗಳು ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿವೆ. ಆದರೆ, ಯಾರೂ ಕೂಡ ಬಹಿರಂಗವಾಗಿ ‘ಬಯಕೆ’ ವ್ಯಕ್ತಪಡಿಸಿಲ್ಲ.
ರಾಜ್ಯ ಬಿಜೆಪಿಯ ಒಂದು ಬಣವು ಚೌಹಾಣ್ ಅವರೇ ಮುಂದಿನ ಲೋಕಸಭಾ ಚುನಾವಣೆಯವರೆಗೂ ಮುಖ್ಯಮಂತ್ರಿಯಾಗಿ ಉಳಿಯಬಹುದು ಎಂದು ನಂಬಿದ್ದಾರೆ. ಆದರೆ, ಅದು ಆರು ತಿಂಗಳಿಗಿಂತ ಕಡಿಮೆ ಅವಧಿಯದ್ದಾಗಿದೆ. ಈ ಬಗ್ಗೆ ಖಾಸಗಿ ವಾಹಿನಿಯೊಂದಿಗೆ ಮಾತನಾಡಿರುವ ಚೌಹಾಣ್, ‘ನಾವ್ಯಾರೂ ನಮ್ಮ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ನಾವೆಲ್ಲಾ ದೊಡ್ಡ ಕಾರ್ಯತಂತ್ರದ ಭಾಗವಾಗಿದ್ದೇವೆ. ನಾವು ಪಕ್ಷದ ಕಾರ್ಯಕರ್ತರು, ವರಿಷ್ಠರು ಏನು ನಿರ್ಧಾರ ಮಾಡುತ್ತಾರೋ ಅದಕ್ಕೆ ಬದ್ದರಾಗಿದ್ದೇವೆ’ ಎಂದಿದ್ದಾರೆ.
ರಾಷ್ಟ್ರೀಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ವಿಜಯವರ್ಗಿಯಾ ಮಾಲ್ವಾ-ನಿಮಾರ್ ಪ್ರದೇಶದಿಂದ ಬಂದವರು. ಅಲ್ಲಿನ 66 ಸ್ಥಾನಗಳಲ್ಲಿ ಬಿಜೆಪಿ 47 ಸ್ಥಾನಗಳನ್ನು ಗೆದ್ದಿದೆ. ಇವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಿಕಟವರ್ತಿಯಾಗಿದ್ದು, ಪಶ್ಚಿಮ ಬಂಗಾಳದ ಅತ್ಯಾಚಾರ ಪ್ರಕರಣವೊಂದಲ್ಲಿ ಇವರ ಹೆಸರು ಕೇಳಿಬಂದಿದೆ.
ಸಿಂಧಿಯಾಯಾಗೆ ಒಲಿಯುತ್ತಾ ಪಟ್ಟ?
ಕಾಂಗ್ರೆಸ್ನಲ್ಲಿದ್ದ ಜ್ಯೋತಿರಾದಿತ್ಯ ಸಿಂಧಿಯಾ, ಕಮಲ್ ನಾಥ್ ವಿರುದ್ಧ ಬಂಡಾಯ ಸಾರಿ ಬಿಜೆಪಿ ಸೇರಿದ್ದರು. ಈ ಚುನಾವಣೆಯಲ್ಲಿ ಸಿಂಧಿಯಾ ಅವರು ಗ್ವಾಲಿಯರ್-ಚಂಬಲ್ ಪ್ರದೇಶದಲ್ಲಿ ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನಲಾಗಿದೆ. 2018 ರಲ್ಲಿ 7 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈಗ 18 ಸ್ಥಾನಗಳನ್ನು ಇಲ್ಲಿ ತನ್ನದಾಗಿಸಿಕೊಂಡಿದೆ. ಜೊತೆಗೆ, ಮಾಲ್ವಾ ಮತ್ತು ವಿಂಧ್ಯಾ ಪ್ರದೇಶದ ಕೆಲವು ಪ್ರದೇಶಗಳಲ್ಲೂ ಇವರ ಪ್ರಭಾವ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಇದೀಗ ಇವರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲ ಪ್ರತಿಸ್ಪರ್ಧಿಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತಿರದಲ್ಲಿರುವ ಸಿಂಧಿಯಾ, ಅವರ ಬಂಡಾಯವೇ ಕಾಂಗ್ರೆಸ್ ಸರ್ಕಾರ ಪತನಕ್ಕೆ ಕಾರಣವಾಯಿತು. ಇದು ರಾಜ್ಯದಲ್ಲಿ ಬಿಜೆಪಿಯ ಪುನರಾಗಮನಕ್ಕೆ ದಾರಿ ಮಾಡಿಕೊಟ್ಟಿತು.
ಆದರೆ, ಈ ಮಾಜಿ ಕಾಂಗ್ರೆಸ್ ನಾಯಕನಿಗೆ ಬಿಜೆಪಿಯಲ್ಲಿ ಕೇವಲ ಮೂರೂವರೆ ವರ್ಷ ಮಾತ್ರ ಅನುಭವವಿದೆ. ಆದ್ದರಿಂದ, ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರಿಂದ ಪಕ್ಷದ ಹಿರಿಯ ನಾಯಕರು ತಿರುಗಿಬೀಳಬಹುದು. ಮುಖ್ಯವಾಗಿ, ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಇಂತಹ ಗೊಂದಲಗಳನ್ನು ಮೈಮೇಲೆ ಎಳೆದುಕೊಳ್ಳಲು ಹೈಕಮಾಂಡ್ ತಯಾರಿಲ್ಲ ಎನ್ನಲಾಗುತ್ತಿದೆ. ಇನ್ನು ಕೇಂದ್ರ ಕೃಷಿ ಸಚಿವ ಮತ್ತು ಪಕ್ಷದ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಮುಖ್ಯಸ್ಥರಾಗಿರುವ ನರೇಂದ್ರ ಸಿಂಗ್ ತೋಮರ್ ಕೂಡ ಸಿಎಂ ಸ್ಥಾನದ ಪ್ರಬಲ ಸ್ಪರ್ಧಿಯಾಗಿದ್ದಾರೆ.
ಇದನ್ನೂ ಓದಿ; ಚುನಾವಣೆ ಸೋಲು; ಎಂಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡ್ತಾರಾ ಕಮಲ್ ನಾಥ್?
Why one should resign if party not able to get majority