‘ಚೆ’ ಎಲ್ಲಾ ಸಂಸ್ಕೃತಿಯವರನ್ನು ಸೆಳೆದ ಕ್ರಾಂತಿಕಾರಿಯಾಗಿದ್ದಾರೆ. ಬಹುತ್ವವನ್ನು ಪ್ರತಿಪಾದಿಸುವ ಈ ನೆಲದಲ್ಲಿ ಬಹುಸಂಸ್ಕೃತಿಯನ್ನು ನಾಶ ಮಾಡಲು ಹೊರಟ್ಟಿದ್ದಾರೆ. ಅಂತವರ ಅಟಾಟೋಪಕ್ಕೆ ‘ಚೆ’ ಅಭಿಮಾನಿಗಳು ಉತ್ತರ ಕೊಡುತ್ತೇವೆ ಎಂದು ಚಿಂತಕ ಮತ್ತು ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಎಚ್ಚರಿಕೆ ನೀಡಿದ್ದಾರೆ. ಅವರು ಬೆಂಗಳೂರಿನ ಮಹಾರಾಣಿ ವಿಜ್ಞಾನ ಕಾಲೇಜಿನ ಸ್ಕೌಟ್ ಮತ್ತು ಗೈಡ್ ಸಭಾಂಗಣದಲ್ಲಿ ‘ಚೆ ಗೆವಾರ’ ಅವರ ಮಗಳು ಡಾ. ಅಲಿಡಾ ಗೆವಾರ ಮತ್ತು ಮೊಮ್ಮಗಳು ಎಸ್ತೆಫಾನಿಯಾ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
“ಚೇ ಗೆವೆರಾ ಅವರ ಮಗಳು ಮತ್ತು ಮೊಮ್ಮಗಳಿಗೆ ಕನ್ನಡದ ನೆಲದಲ್ಲಿ ನಾಗರಿಕ ಸನ್ಮಾನ ಮಾಡಿದ್ದು ಚಾರಿತ್ರಿಕ ಸಂದರ್ಭವಾಗಿದೆ. ಕರ್ನಾಟಕ ಹುಸಿ ಸಂಸ್ಕೃತಿಯ ಪರವಾಗಿಲ್ಲ, ಜನಸಂಸ್ಕೃತಿಯ ಪರವಾಗಿದೆ, ಸಂವೇದನೆಗೆ ಪೂರಕವಾಗಿದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿ” ಎಂದು ಬರಗೂರು ಹೇಳಿದರು.
ಹಿರಿಯ ವಿದ್ವಾಂಸರಾದ ಜಿ. ರಾಮಕೃಷ್ಣ ಅವರು ಮಾತನಾಡಿ, “ಯಾರದ್ದೊ ಶ್ರಮವನ್ನು ಇನ್ಯಾರೊ ಕಬಳಿಸುತ್ತಿದ್ದ ಸಂದರ್ಭದಲ್ಲಿ, ‘ಚೆ’ ತಲೆ ಮೇಲೆ ನಕ್ಷತ್ರ ಚಿಹ್ನೆಯ ಟೋಪಿ ಹಾಕಿದ ಭರವಸೆಯ ಆಶಾಕಿರಣವಾಗಿದ್ದ. ವಿಶ್ವದ ಯಾವುದೇ ಮೂಲೆಯಲ್ಲಿ ಅನ್ಯಾಯವಾಗುತ್ತಿದ್ದರೆ, ಅದರ ವಿರುದ್ಧ ದನಿ ಎತ್ತುವ ಮನುಜರು ನನ್ನ ಸಂಗಾತಿಗಳು ಎಂದು ಹೇಳಿದ್ದ” ಎಂದು ಹೇಳಿದರು.
‘‘ಇಂದು ‘ಚೆ’ ಎಂದರೇ ಇಡೀ ವಿಶ್ವ ಇವ ನಮ್ಮವ ಎನ್ನುತ್ತಿದೆ. ವಿಶ್ವಮಾನವ ಪರಿಕಲ್ಪನೆ ಹೊಂದಿದ್ದ ‘ಚೆ’ ಕ್ಯೂಬಾದ ಹವಾನದಲ್ಲಿ ‘ಪ್ರತಿಯೊಬ್ಬ ಕ್ರಾಂತಿಕಾರಿಯ ಕೆಲಸ ಕ್ರಾಂತಿ ಮಾಡುವುದೆ ಹೊರತು ಸಾಮ್ರಾಜ್ಯಶಾಹಿ ಎಂಬ ಹೆಣ ಬೀಳುತ್ತದೆ, ಅದನ್ನು ಹೊರೋಣ ಎಂದು ಕಾಯುವುದಲ್ಲ. ಗೆಲ್ಲುವವರೆಗೂ ಹೋರಾಡುತ್ತಿರಬೇಕು’ ಎಂಬ ಸಂದೇಶ ಕೊಟ್ಟಿದ್ದರು” ಎಂದು ಹೇಳಿದರು.
“ಅಮೆರಿಕದ ಸಿಎಎ ‘ಚೆ’ಯನ್ನು ಕೊಲೆ ಮಾಡಿದ್ದು ಇತಿಹಾಸದಲ್ಲಿ ಹಲವರು ರಂಜನೀಯವಾಗಿ ಚಿತ್ರಿಸಿದರೆ, ಕೆಲವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಭಾರತದಲ್ಲಿ ಮೂರನೇ ಬಾರಿಗೂ ಅಧಿಕಾರಕ್ಕೆ ಬರುತ್ತೇವೆ ಎಂದುಕೊಂಡಿರುವ ಮೋದಿಯನ್ನು ಮಹಾನಾಯಕ ಎಂದರೆ ಅಂತಹ ದೇಶ ಭ್ರಮಾತ್ಮಕವಾಗಿದೆ ಎಂದರ್ಥ. ಈ ವೇಳೆ ‘ಚೆ’ ಎಂಬ ಮಹಾನ್ ವ್ಯಕ್ತಿಯನ್ನು ಅನುಕರಿಸಲು ಎಲ್ಲರೂ ಸಾಮೂದಾಯಿಕವಾಗಿ ಪಾಲ್ಗೊಳ್ಳುವುದು ಒಂದೇ ದಾರಿ” ಎಂದು ವಿಧ್ವಾಂಸ ಜಿ. ರಾಮಕೃಷ್ಣ ಅವರು ಕರೆ ಕೊಟ್ಟಿದ್ದಾರೆ.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್ ಎಲ್ ಪುಷ್ಪ ಮಾತನಾಡಿ, “ಎಲ್ಲ ತಲೆಮಾರಿನ ಜನರು ‘ಚೆ’ಗೆ ಆಕರ್ಷಿತರಾಗಿದ್ದಾರೆ. ಭಾರತದ ಇಂದಿನ ಪರಿಸ್ಥಿತಿಯಲ್ಲಿ ‘ಚೆ’ ವ್ಯಕ್ತಿತ್ವ ಬಹುಮುಖ್ಯ. ಕಾವ್ಯ ಮತ್ತು ಕೋವಿಯನ್ನು ಪ್ರೀತಿಯಿಂದ ಜೊತೆಗಿರಿಸಿಕೊಂಡ ಚೇತನ ನಮ್ಮೊಳಗೂ ಮೂಡಲಿ” ಎಂದು ಆಶಿಸಿದರು.
ಅಪ್ಪನ ನೆನಪಿನ ಬುತ್ತಿ ತೆರೆದು ಹಾಡು ಹಾಡಿದ ಚೆ ಗೆವಾರ ಪುತ್ರಿ!
“ನನ್ನಪ್ಪ ತುಂಬಾ ಒಳ್ಳೆಯ ಕವಿಯಾಗಿದ್ದರು, ಹಲವು ಪುಸ್ತಕಗಳನ್ನು, ಕವಿತೆಗಳನ್ನು ಓದುತ್ತಿದ್ದರು. ಆದರೆ ಅವರು ತಮ್ಮ ಕವಿತೆಗಳನ್ನು ತಾವೆ ಓದುತ್ತಿರಲಿಲ್ಲ. ಯಾಕೆಂದರೆ ಅವರೊಳಗೊಬ್ಬ ವಿಮರ್ಶಕನಿದ್ದ” ಎಂದು 7ನೇ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡಿರುವ ಅಲಿಡಾ, ತಮ್ಮ ನೆನಪುಗಳ ಬುತ್ತಿಯನ್ನು ತೆರೆದಿಟ್ಟರು.
“ಅಸ್ತಮಾ ಇದ್ದ ಕಾರಣ ವೈದ್ಯರು ದಿನಕ್ಕೆ ಒಂದೇ ಸಿಗಾರ್ ಸೇದುವಂತೆ ಅಪ್ಪನಿಗೆ ಸೂಚಿಸಿದ್ದರು. ಆದರೆ, ಅಪ್ಪನಿಗೆ ತಂಬಾಕು ತೋಟದ ಕಾರ್ಮಿಕರು ದೊಡ್ಡ ಗಾತ್ರದ ಸಿಗಾರ್ ಮಾಡಿಕೊಟ್ಟಿದ್ದರು. ಅದನ್ನು ಸೇದಿ ವೈದ್ಯರಿಗೆ ಒಂದೇ ಸಿಗಾರ್ ಸೇದಿದೆ ಎಂದು ಫೋನ್ ಮಾಡಿ ಹೇಳುತ್ತಿದ್ದರು” ಎಂದು ಅಪ್ಪ ಅದೆಷ್ಟು ಉಡಾಫೆತನ ತೋರುತ್ತಿದ್ದರೆಂಬುದನ್ನು ಅವರು ವಿವರಿಸಿದರು.
“ಕೊರೋನಾ ಸೋಂಕು ನಿಯಂತ್ರಿಸಲು ಕ್ಯೂಬಾ ತನ್ನದೆ ಆದ ವ್ಯಾಕ್ಸಿನ್ ಕಂಡು ಹಿಡಿದಿತ್ತು. ಆದರೆ ಅಮೇರಿಕಾ ಪೇಟೆಂಟ್ ಕಾರಣಕ್ಕೆ ಸಿರಿಂಜ್ ಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ಮೂಗಿನ ಮೂಲಕ ಹಾಕುವ ವ್ಯಾಕ್ಸಿನ್ ಅನ್ನು ಕಂಡುಕೊಂಡೆವು. ನಾವು ಯಾವಾಗಲೂ ಪರ್ಯಾಯವನ್ನು ಹುಡುಕುತ್ತೇವೆ” ಎಂದು ತಮ್ಮ ದೇಶದ ಸ್ವಾಭಿಮಾನದ ಬಗ್ಗೆ ಅಭಿಮಾನದಿಂದ ನುಡಿದರು. ಭಾಷಣದ ಕೊನೆಯಲ್ಲಿ ಅಲಿಡಾ ಹಾಡನ್ನು ಕೂಡಾ ಹಾಡಿದರು.
ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಹಿರಿಯ ಲೇಖಕಿ ಡಾ. ವಿಜಯಾ, ಕೇರಳದ ಮಾಜಿ ಸಚಿವ ಎಂ.ಎ. ಬೇಬಿ, ಸಿಪಿಐ ಮುಖಂಡ ಸಿದ್ದನಗೌಡ ಪಾಟೀಲ್, ದಲಿತ ಹಕ್ಕುಗಳ ಮುಖಂಡ ಮಾವಳ್ಳಿ ಶಂಕರ್, ಜನವಾದಿ ಮಹಿಳಾ ಸಂಘಟನೆ ನಾಯಕಿ ವಿಮಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.