ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಮೇಲೆ ಹಕ್ಕು ಸಾಧಿಸುವ ಚೀನಾ “ಸ್ಟ್ಯಾಂಡರ್ಡ್ ಮ್ಯಾಪ್” ಬಿಡುಗಡೆ ಮಾಡಿರುವುದು ”ತುಂಬಾ ಗಂಭೀರ”ವಾದ ವಿಚಾರವಾಗಿದೆ. ನೆರೆಯ ದೇಶವು ಈಗಾಗಲೇ ಲಡಾಖ್ನಲ್ಲಿ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ. ಈ ಸಮಸ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಸೋಮವಾರ, ಚೀನಾ, ”ಸ್ಟಾಂಡರ್ಡ್ ಮ್ಯಾಪ್ ಆಫ್ ಚೀನಾ” 2023ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ನ್ನು ತನ್ನ ಗಡಿಯೊಳಗಿನ ಪ್ರದೇಶಗಳೆಂದು ಹೇಳಿಕೊಂಡಿದೆ.
”ಲಡಾಕ್ನಲ್ಲಿ ಒಂದು ಇಂಚು ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ನಾನು ಈಗಷ್ಟೇ ಲಡಾಕ್ನಿಂದ ಹಿಂತಿರುಗಿದ್ದೇನೆ, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಇಡೀ ಲಡಾಖ್ಗೆ ತಿಳಿದಿದೆ. ಈ ನಕ್ಷೆಯ ವಿಷಯವು ತುಂಬಾ ಗಂಭೀರವಾಗಿದೆ ಆದರೆ ಅವರು ಈಗಾಗಲೇ ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಧಾನಿ ಅದರ ಬಗ್ಗೆಯೂ ಏನಾದರೂ ಹೇಳಬೇಕು” ಎಂದು ರಾಹುಲ್ ಹೇಳಿದ್ದಾರೆ.
ಕಳೆದ ವಾರ ಕಾರ್ಗಿಲ್ನಲ್ಲಿ ಭಾರತ-ಚೀನಾ ಗಡಿ ಸಮಸ್ಯೆಯನ್ನು ಪ್ರಸ್ತಾಪಿಸಿದ ರಾಹುಲ್, ಲಡಾಖ್ನಲ್ಲಿರುವ ಪ್ರತಿಯೊಬ್ಬರಿಗೂ ಚೀನಾ “ನಮ್ಮ ಭೂಮಿಯನ್ನು ಕಿತ್ತುಕೊಂಡಿದೆ” ಎಂದು ತಿಳಿದಿದೆ. ಒಂದು ಇಂಚು ಭೂಮಿಯನ್ನು ಆಕ್ರಮಿಸಿಕೊಂಡಿಲ್ಲ ಎಂಬ ಪ್ರಧಾನಿಯ ಪ್ರತಿಪಾದನೆ “ಸಂಪೂರ್ಣ ಸುಳ್ಳು” ಎಂದು ಪ್ರತಿಪಾದಿಸಿದ್ದರು.
ಈ ಭೂಪಟದ ಬಗ್ಗೆ ಭಾರತ ಚೀನಾಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶ ಸೇರಿಸಿ ಚೀನಾ ಮ್ಯಾಪ್ ರಿಲೀಸ್: ಮೋದಿ ಪ್ರತಿಕ್ರಿಯಿಸುವಂತೆ ರಾಹುಲ್ ಗಾಂಧಿ ಆಗ್ರಹ