Homeಚಳವಳಿಮಾರ್ಕೋನಹಳ್ಳಿ ಅಣೆಕಟ್ಟಿನ ಡೆಡ್ ಸ್ಟೋರೇಜ್‍ಗೆ ಕೈಹಾಕಿದ ಚುಂಚನಗಿರಿ ಸ್ವಾಮಿ: ತೀವ್ರ ವಿರೋಧ

ಮಾರ್ಕೋನಹಳ್ಳಿ ಅಣೆಕಟ್ಟಿನ ಡೆಡ್ ಸ್ಟೋರೇಜ್‍ಗೆ ಕೈಹಾಕಿದ ಚುಂಚನಗಿರಿ ಸ್ವಾಮಿ: ತೀವ್ರ ವಿರೋಧ

ಡ್ಯಾಂನ ಡೆಡ್ ಸ್ಟೋರೇಜ್‍ಗೆ ಕೈ ಹಾಕುವುದರಿಂದ ಅಣೆಕಟ್ಟೆಗೆ ಹೊಡೆತ ಬೀಳಲಿದೆ. ಕುಣಿಗಲ್ ತಾಲೂಕಿನ ಅಮೃತೂರು, ಹುಲಿಯೂರು ದುರ್ಗ, ಎಡೆಯೂರು ಮತ್ತು ನಾಗಮಂಗಲದ ಸಾವಿರಾರು ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ

- Advertisement -
- Advertisement -

ತುಮಕೂರಿನ ಮಾರ್ಕೋನಹಳ್ಳಿ ಜಲಾಶಯ ಹೊಸದೊಂದು ವಿವಾದ ಹುಟ್ಟುಹಾಕಿದೆ. ಡ್ಯಾಂನ ಡೆಡ್ ಸ್ಟೋರೇಜ್‍ಗೆ ಕನ್ನ ಹಾಕಲು ಹೊರಟ ಕ್ರಮ ಕುಣಿಗಲ್ ಜನರನ್ನು ಕೆರಳುವಂತೆ ಮಾಡಿದೆ. ಡ್ಯಾಂನಿಂದ ನಾಗಮಂಗಲಕ್ಕೆ ಕುಡಿಯುವ ನೀರು ತೆಗೆದುಕೊಂಡು ಹೋಗಲು ಯಾರ ತಕರಾರು ಇಲ್ಲ. ಆದರೆ ರಾಷ್ಟ್ರೀಯ ಹಸಿರುಪೀಠದ ರೂಪಿಸಿರುವ ನಿಯಮಗಳನ್ನು ಗಾಳಿಗೆ ತೂರಿ ಅವೈಜ್ಞಾನಿಕವಾಗಿ ನೀರು ತೆಗೆದುಕೊಂಡು ಹೋಗಲು ಮುಂದಾಗಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ ಮಾತ್ರವಲ್ಲ ದೊಡ್ಡ ಹೋರಾಟಕ್ಕೆ ನಾಂದಿಯಾಗಲಿದೆ.

ತುಮಕೂರು ಜಿಲ್ಲೆಯ ಕುಣಿಗಲ್‍ನ ಮಾರ್ಕೋನಹಳ್ಳಿಯಲ್ಲಿರುವ ಯಾವುದೇ ನದಿಮೂಲಗಳಿಲ್ಲದ ಮಳೆಯನ್ನೇ ಆಶ್ರಯಿಸಿರುವ ಡ್ಯಾಂ ಇದು. ಈ ಡ್ಯಾಂ ನೀರಿನ ಸಂಗ್ರಹ ಸಾಮಥ್ರ್ಯ 2.4 ಟಿಎಂಸಿ ಅಡಿ. ಜಲಾಶಯದ ನೀರನ್ನು ಕುಣಿಗಲ್ ಮತ್ತು ನಾಗಮಂಗಲ ತಾಲೂಕಿನ ರೈತರು ಇಲ್ಲಿಯವರೆಗೂ ಸೌಹಾರ್ದಯುತವಾಗಿ ಬಳಸಿಕೊಂಡು ಬಂದಿದ್ದಾರೆ.

ಮಾರ್ಕೋನಹಳ್ಳಿ ಜಲಾಶಯದ ಒಟ್ಟು ಅಚ್ಚುಕಟ್ಟು ಪ್ರದೇಶ 5996 ಹೆಕ್ಟೇರ್. ಇದರಲ್ಲಿ ಕುಣಿಗಲ್ 4856 ಹೆಕ್ಟೇರ್ ಅಂದರೆ ಸರಿಸುಮಾರು 12 ಸಾವಿರ ಎಕರೆ ನೀರಾವರಿ ಹೊಂದಿದೆ. ನಾಗಮಂಗಲ ತಾಲೂಕಿನಲ್ಲಿ 1130 ಹೆಕ್ಟೇರ್ ಅಂದರೆ 3 ಸಾವಿರ ಎಕರೆ ಭೂಮಿ ನೀರಾವರಿಗೆ ಒಳಪಟ್ಟಿದೆ. ಉಭಯ ತಾಲೂಕಿನ ರೈತರು ನೀರಿಗಾಗಿ ಈ ಹಿಂದೆ ಎಂದೂ ತಕರಾರು ತೆಗೆದವರಲ್ಲ. ಜಗಳ ಆಡಿದವರಲ್ಲ. ಆದರೆ ಈಗ ಉಭಯ ತಾಲೂಕುಗಳ ನಡುವೆ ಸಣ್ಣ ಒಡಕು ಮೂಡಿದೆ. ಇದಕ್ಕೆ ಕಾರಣ ಮಾರ್ಕೋನಹಳ್ಳಿ ಜಲಾಶಯದಿಂದ ನಾಗಮಂಗಲದ ಚುಂಚನಗಿರಿ ಮತ್ತು 128 ಹಳ್ಳಿಗಳಿಗೆ ಕುಡಿಯುವ ನೀರು ತೆಗೆದುಕೊಂಡು ಹೋಗುವುದು. ಹೀಗೆ ನೀರು ತೆಗೆದು ಕೊಂಡು ಹೋಗುವುದು ವೈಜ್ಞಾನಿಕವಾಗಿದ್ದರೆ ಅದಕ್ಕೆ ಕುಣಿಗಲ್ ಜನ ವಿರೋಧಿಸುತ್ತಿರಲಿಲ್ಲ. ಜಲಾಶಯದ ಕೋಡಿ ಭಾಗದ ಮಿನಿ ಸೈಪಾನ್ ಇರುವ ಜಾಗದಲ್ಲಿ 80 ಜಾಕ್ವೆಲ್ ನಿರ್ಮಿಸಿ ಮೋಟರ್ ಕೂರಿಸಿ ನೀರು ಪಂಪ್ ಮಾಡಲು ಹೊರಟ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ 2012ರಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಗಳು ವಿಶೇಷ ಆಸಕ್ತಿ ವಹಿಸಿ ಮಾರ್ಕೋನಹಳ್ಳಿ ಡ್ಯಾಂನಿಂದ ನಾಗಮಂಗಲಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಗೆ ಅನುಮತಿ ದೊರಕುವಂತೆ ಮಾಡಿದರು. ನಂತರ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಮಗಾರಿಗೆ ಹಣ ಬಿಡುಗಡೆ ಮಾಡಿದರು. ಡ್ಯಾಂನಲ್ಲಿ ಜಾಕ್ವೆಲ್ ಮಾಡುವುದಕ್ಕೆ ವಿರೋಧ ವ್ಯಕ್ತವಾದ ನಂತರ ಅಧಿಕಾರಿಗಳು ಕಾಮಗಾರಿ ನಿಲ್ಲಿಸಿದರು. ಒಳಗೊಳಗೆ ನಾಗಮಂಗಲದ ಕಡೆಯಿಂದ ಪೈಪ್ ಕಾಮಗಾರಿ ಆರಂಭಿಸಿ ಶೇಕಡ 90ರಷ್ಟು ಕಾಮಗಾರಿ ಪೂರ್ಣಗೊಳಿಸಿದರು. ಪೈಪ್‍ಲೈನ್ ಕಾಮಗಾರಿ ಯಾರ ಗಮನಕ್ಕೆ ಬರದಂತೆ ಮಾಡಲಾಯಿತು. ಯಾವಾಗ ಡ್ಯಾಂನ ಕೋಡಿಯಲ್ಲಿ ನಿರ್ಮಿಸಲಾಗಿರುವ ಸೈಫನ್ ಬಳಿ 80 ಅಡಿ ಅಳಕ್ಕೆ ದೊಡ್ಡ ಗುಂಡಿ ತೋಡಿ ಮೋಟರ್ ಪಂಪ್ ಅಳವಡಿಸಲು ಮುಂದಾದರೋ ಕುಣಿಗಲ್ ಜನ ಅದನ್ನು ತಡೆದು ನಿಲ್ಲಿಸಿದ್ದಾರೆ.

ಕುಣಿಗಲ್ ಜನ ಹೇಳುವ ಮಾತು ಒಂದೇ. ನಾವು ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಡ್ಯಾಂನಲ್ಲೇ ಜಾಕ್ವೆಲ್ ನಿರ್ಮಿಸುವುದು ಎಷ್ಟು ಸರಿ. ಮಾರ್ಕೋನಹಳ್ಳಿ ಡ್ಯಾಂಗೆ ಯಾವುದೇ ನೀರಿನ ಅಲಾಟ್ಮೆಂಟ್ ಇಲ್ಲ. ನಾಗಮಂಗಲಕ್ಕೆ ಎನ್.ಬಿ.ಸಿ ಮತ್ತು ಎಸ್.ಬಿ.ಸಿ (ನಾಗಮಂಗಲ ಬ್ಯಾಂಕ್ ಕೆನಾಲ್, ಶ್ರವಣಬೆಳಗೊಳ ಬ್ಯಾಂಕ್ ಕೆನಾಲ್) ಎರಡೂ ಕಡೆಯಿಂದಲೂ ಕುಡಿಯುವ ನೀರು ಬರುತ್ತದೆ. ಎರಡು ಕೆನಾಲ್‍ಗಳಿಂದ ಬರುವ ಹೇಮಾವತಿಯ ನೀರನ್ನು ನಾಗಮಂಗಲದ ಹಲವು ಕೆರೆಗಳಿಗೆ ತುಂಬಿಸಿಕೊಳ್ಳಲಾಗುತ್ತಿದೆ. ಹೀಗಿದ್ದರೂ ನಾಗಮಂಗಲಕ್ಕೆ ಡ್ಯಾಂನಿಂದ ಡೆಡ್ ಸ್ಟೋರೇಜ್ ಇರುವ 140 ಎಂಸಿಎಫ್‍ಟಿನಲ್ಲಿ ನೀರು ತೆಗೆದುಕೊಂಡು ಹೋಗುವ ಉದ್ದೇಶವೇನು ಎಂದು ಪ್ರಶ್ನಿಸಿದ್ದಾರೆ.

ಆದಿಚುಂಚನಗಿರಿ ಶ್ರೀಗಳ ಚಿತಾವಣೆ?

ಆದಿಚುಂಚನಗಿರಿಯಲ್ಲಿ ವಿಶ್ವವಿದ್ಯಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ನೀರು ಬೇಕು. ಹಾಗಾಗಿ ಮಾರ್ಕೋನಹಳ್ಳಿ ಡ್ಯಾಂ ನೀರನ್ನು ಬಳಸಿಕೊಳ್ಳಲು ತೀರ್ಮಾನಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ನೀರಿನ ಕೊರತೆ ಆಗಬಾರದೆಂಬ ದೂರದೃಷ್ಟಿ ಶ್ರೀಗಳದ್ದು. ಆ ಕಾರಣಕ್ಕಾಗಿಯೇ ಎಲ್ಲರನ್ನು ಕತ್ತಲಲ್ಲಿಟ್ಟು ಕಾಮಗಾರಿ ಪೂರ್ಣ ಮಾಡಲಾಗಿದೆ. ಎಲ್ಲ ಪಕ್ಷಗಳ ನಾಯಕರು ಒಳಗೊಳಗೆ ಈ ಕಾಮಗಾರಿ ಪೂರ್ಣಗೊಳ್ಳಲು ಸಹಕರಿಸಿದ್ದಾರೆ ಎಂಬ ಆರೋಪವಿದೆ.

100 ಎಂಸಿಎಫ್‍ಟಿ ನೀರು ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿದೆ. ಅದೂ ಡ್ಯಾಂನ ಡೆಡ್ ಸ್ಟೋರೇಜ್ ನೀರಿನಿಂದ. ಚುಂಚನಗಿರಿ ಸ್ವಾಮಿಗಳನ್ನು ಯಾರೂ ಎದುರು ಹಾಕಿಕೊಳ್ಳಲು ಮುಂದಾಗುತ್ತಿಲ್ಲ. ಆದರೆ ಅಕ್ಟೋಬರ್ 30 ರಂದು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಕುಣಿಗಲ್ ಬಂದ್‍ಗೆ ಬೆಂಬಲ ನೀಡಿದ್ದಾರೆ. ಕಾಮಗಾರಿ ಪೂರ್ಣವಾಗುವವರೆ ಸುಮ್ಮನಿದ್ದು ಈ ದಿಢೀರ್ ಎದ್ದು ಕೂತರೆ ಏನೂ ಆಗುವುದಿಲ್ಲ. ಗ್ರಾಮ ಪಂಚಾಯತ್ ಚುನಾವಣೆ ಎದುರಾಗಿರುವುದರಿಂದ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಜಕೀಯ ಪಕ್ಷಗಳು ಬಂದ್‍ಗೆ ಸಮ್ಮತಿಸಿವೆ ಎಂದು ಹೇಳಲಾಗುತ್ತಿದೆ. ಆದರೆ ಬಂದ್‍ಗೆ ರಾಜ್ಯ ರೈತಸಂಘ, ತಾಲೂಕಿನ ವಿವಿಧ ಸಂಘ ಸಂಸ್ಥೆಗಳು ಕೂಡ ಬೆಂಬಲಿಸಿವೆ.

ಡ್ಯಾಂನ ಡೆಡ್ ಸ್ಟೋರೇಜ್‍ಗೆ ಕೈ ಹಾಕುವುದರಿಂದ ಅಣೆಕಟ್ಟೆಗೆ ಹೊಡೆತ ಬೀಳಲಿದೆ. ಕುಣಿಗಲ್ ತಾಲೂಕಿನ ಅಮೃತೂರು, ಹುಲಿಯೂರು ದುರ್ಗ, ಎಡೆಯೂರು ಮತ್ತು ನಾಗಮಂಗಲದ ಸಾವಿರಾರು ಕುಟುಂಬಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಆದಿಚುಂಚನಗಿರಿ ಶ್ರೀಗಳು ಸ್ವಾರ್ಥಕ್ಕಾಗಿ ನೀರು ತೆಗೆದುಕೊಂಡು ಹೋಗುತ್ತಿರುವುದು ಸಾವಿರಾರು ರೈತ ಕುಟುಂಬಗಳು ಬೀದಿಗೆ ಬೀಳಲಿವೆ. ಆದರೆ ಸ್ವಾಮಿಗಳನ್ನು ಎದುರುಹಾಕಿಕೊಳ್ಳಲು ರಾಜಕಾರಣಿಗಳು ಸಿದ್ದರಿಲ್ಲ. ಬದಲಿಗೆ ಜನರೇ ಬೀದಿಗೆ ಇಳಿದಿದ್ದಾರೆ. ಈ ಹೋರಾಟ ಎಲ್ಲಿಗೆ ಹೋಗಿ ತಲುಪುತ್ತದೆ ಕಾದು ನೋಡಬೇಕಿದೆ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯಾರಿಗೂ ಹೆದರುವುದಿಲ್ಲ, 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಅಭ್ಯರ್ಥಿಗಳ ನಿರ್ಧಾರ: ಕಾಂಗ್ರೆಸ್

0
ಗಾಂಧಿ ಕುಟುಂಬದ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ಪ್ರತಿಷ್ಠಿತ ಅಮೇಠಿ ಮತ್ತು ರಾಯ್‌ಬರೇಲಿ ಕ್ಷೇತ್ರಗಳ ಲೋಕಸಭಾ ಅಭ್ಯರ್ಥಿಗಳ ಬಗ್ಗೆ ಇದ್ದ ಕುತೂಹಲಕ್ಕೆ ಅಂತ್ಯ ಹಾಡಲು ಕಾಂಗ್ರೆಸ್ ಸಜ್ಜಾಗಿದ್ದು, ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ)...