ಸಿಕ್ಕಿಂನಲ್ಲಿ ಮೇಘಸ್ಫೋಟದಿಂದಾಗಿ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ 23 ಸೇನಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಯೋಧರ ಪತ್ತೆಗೆ ವ್ಯಾಪಕ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಸೇನೆಯ ಪೂರ್ವ ಕಮಾಂಡ್ನ ಹೇಳಿಕೆಯ ಪ್ರಕಾರ, ಲಾಚೆನ್ ಕಣಿವೆಯ ಉದ್ದಕ್ಕೂ ಕೆಲವು ಸಂಸ್ಥೆಗಳಿಗೆ ಕೂಡ ಹಾನಿಯಾಗಿದೆ. ಚುಂಗ್ತಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆ ಮಾಡಿರುವುದರಿಂದ ತೀಸ್ತಾ ನದಿಯಲ್ಲಿ ನೀರಿನ ಮಟ್ಟವು 15-20 ಅಡಿ ಎತ್ತರದವರೆಗೆ ಹಠಾತ್ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಸಿಂಗ್ಟಾಮ್ ಬಳಿಯ ಬರ್ದಂಗ್ನಲ್ಲಿ ನಿಲುಗಡೆ ಮಾಡಿದ್ದ ಸೇನಾ ವಾಹನ ಕೊಚ್ಚಿಕೊಂಡು ಹೋಗಿದೆ. ಘಟನೆಯಲ್ಲಿ 23 ಭಾರತೀಯ ಸೇನಾ ಸಿಬ್ಬಂದಿ ಕಾಣೆಯಾಗಿದ್ದಾರೆ ಮತ್ತು ಕೆಲವು ವಾಹನಗಳು ಮುಳುಗಿವೆ. ಸ್ಥಳದಲ್ಲಿ ಕೆಸರು ತಂಬಿಕೊಂಡಿದ್ದು, ಕೆಸರಿನ ಅಡಿಯಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ.
ಸಿಕ್ಕಿಂನಲ್ಲಿ ರಾತ್ರಿಯಿಡೀ ಭಾರೀ ಮಳೆಯಾಗಿದೆ. ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಬಳಿ ಮೇಘಸ್ಫೋಟವು ತೀಸ್ತಾ ನದಿಯಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಿದೆ. ತೀಸ್ತಾ ನದಿಯು ಬಾಂಗ್ಲಾದೇಶವನ್ನು ಪ್ರವೇಶಿಸುವ ಮೊದಲು ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳದ ಮೂಲಕ ಹರಿಯುತ್ತದೆ.
ಸಿಕ್ಕಿಂ ಆಡಳಿತವು ಸ್ಥಳೀಯ ನಿವಾಸಿಗಳಿಗೆ ಹೈ ಅಲರ್ಟ್ ನೀಡಿದೆ. ಸ್ಥಳೀಯ ನಿವಾಸಿಗಳು ರೆಕಾರ್ಡ್ ಮಾಡಿದ ವಿಡಿಯೋಗಳಲ್ಲಿ ರಸ್ತೆಗಳು ಕೊಚ್ಚಿಹೋಗಿವೆ ಮತ್ತು ಪ್ರವಾಹವನ್ನು ತೋರಿಸುತ್ತವೆ. ಸಾವು ನೋವಿನ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ ಸಾರ್ವಜನಿಕ ಆಸ್ತಿಗೆ ಗಮನಾರ್ಹವಾಗಿ ಹಾನಿಯಾಗಿದೆ. ಸಿಂಗ್ಟಮ್ನಲ್ಲಿ ಕೆಲವರು ನಾಪತ್ತೆಯಾಗಿದ್ದಾರೆ.
ಸಿಕ್ಕಿಂನ ಚುಂಗ್ಥಾಂಗ್ನಲ್ಲಿನ ಸರೋವರವು ಉಕ್ಕಿ ಹರಿದ ನಂತರ ತೀಸ್ತಾ ನದಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಗಜೋಲ್ಡೋಬಾ, ಡೊಮೊಹಾನಿ, ಮೆಖಲಿಗಂಜ್ ಮತ್ತು ಘಿಶ್ನಂತಹ ತಗ್ಗು ಪ್ರದೇಶಗಳ ಮೇಲೆ ಇದು ಪರಿಣಾಮ ಬೀರಬಹುದು. ದಯವಿಟ್ಟು ಜಾಗರೂಕರಾಗಿರಿ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನು ಓದಿ: ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ನಮಾಜ್: ಶಿಕ್ಷಕರನ್ನು ಥಳಿಸಿದ ಸಂಘ ಪರಿವಾರದ ಕಾರ್ಯಕರ್ತರು