ಪ್ಯಾಲೆಸ್ತೀನ್ ಸಶಸ್ತ್ರ ಗುಂಪು ಹಮಾಸ್ ಮತ್ತು ಇಸ್ರೇಲ್ ನಡುನಡುವೆ ನಡೆಯುತ್ತಿದ್ದು, ಇಸ್ರೇಲ್ನಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರ ಬರೆದಿದ್ದಾರೆ.
”ಈ ಯುದ್ದದಲ್ಲಿ ಸುಮಾರು 7000 ಕೇರಳ ರಾಜ್ಯದವರು ಸಿಲುಕಿದ್ದಾರೆ. ನಾಗರಿಕರನ್ನು ತೀವ್ರ ಸಂಕಷ್ಟಕ್ಕೆ ತಳ್ಳುತ್ತಿದ್ದು, ಅವರ ಕುಟುಂಬ ಸದಸ್ಯರು ತೀವ್ರ ಆತಂಕದಲ್ಲಿದ್ದಾರೆ” ಎಂದು ಅಕ್ಟೋಬರ್ 9 ರಂದು ಕೇಂದ್ರ ಸಚಿವ ಜೈಶಂಕರ್ ಅವರಿಗೆ ಬರೆದ ಪತ್ರದಲ್ಲಿ ವಿಜಯನ್ ತಿಳಿಸಿದ್ದಾರೆ.
”ಇಸ್ರೇಲ್ನಲ್ಲಿರುವ ನಮ್ಮ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಿರುವ ಎಲ್ಲ ರೀತಿಯ ಪ್ರಯತ್ನಗಳಾಗಬೇಕು. ಹಾಗಾಗಿ ವಿದೇಶಾಂಗ ವ್ಯವಹಾರಗಳ ಸಚಿವರು ಮಧ್ಯಪ್ರವೇಶಿಸುವಂತೆ ನಾನು ನಿಮ್ಮಲ್ಲಿ ಕೋರುತ್ತೇನೆ” ಎಂದು ಕೇರಳ ಮುಖ್ಯಮಂತ್ರಿ ಬರೆದಿದ್ದಾರೆ.
ಶನಿವಾರ ನಡೆದ ಸಂಘರ್ಷದಲ್ಲಿ ಇಸ್ರೇಲ್ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ.
ಸೋಮವಾರ, ಸಿಪಿಐ-ಎಂ ಕೇರಳ ಸೆಕ್ರೆಟರಿಯೇಟ್ ಹೇಳಿಕೆಯಲ್ಲಿ ಕೇಂದ್ರ ಸರ್ಕಾರವು ಇಸ್ರೇಲ್ನಲ್ಲಿ ಸಿಲುಕಿರುವ ಕೇರಳೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
”ಈ ಸಮಸ್ಯೆಗಳನ್ನು ಪ್ರಜಾಪ್ರಭುತ್ವ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದು ಮತ್ತು ಪರಿಹರಿಸುವುದು ಅವಶ್ಯಕ. ಅದಕ್ಕಾಗಿ ಪರಿಸ್ಥಿತಿಗಳನ್ನು ಸೃಷ್ಟಿಸಲು ಮಧ್ಯಪ್ರವೇಶಿಸಬೇಕು” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
”ದ್ವಿಪಕ್ಷೀಯ ಪರಿಹಾರದ ಕುರಿತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ನಿರ್ಣಯವನ್ನು ತುರ್ತಾಗಿ ಜಾರಿಗೆ ತರಬೇಕು ಮತ್ತು ಪ್ಯಾಲೆಸ್ತೀನ್ ಜನರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸಬೇಕು” ಎಂದು ಸಿಪಿಐ-ಎಂ ಹೇಳಿಕೆ ತಿಳಿಸಿದೆ.
”ಅಮಾಯಕರ ಜೀವಗಳನ್ನು ಬಲಿತೆಗೆದುಕೊಳ್ಳುವ ಘರ್ಷಣೆಯನ್ನು ಕೊನೆಗಾಣಿಸಿ ಶಾಂತಿ ಕಾಪಾಡುವ ಪ್ರಯತ್ನಗಳು ನಡೆಯಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ: ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ