ವಾಯುವ್ಯ ದೆಹಲಿಯ ಅಶೋಕ ವಿಹಾರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ನಡೆದ ಘರ್ಷಣೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಾಯಗೊಂಡ ಆಘಾತಕಾರಿ ಘಟನೆ ನಡೆದಿದೆ.
ಗುಂಪು ಘರ್ಷಣೆಯಲ್ಲಿ ಮೃತರನ್ನು ರಘು ಮತ್ತು ಭೂರಾ ಎಂದು ಗುರುತಿಸಲಾಗಿದೆ.
ರಘು ಮತ್ತು ಭೂರಾ ಮತ್ತು ಇನ್ನೋರ್ವ ವ್ಯಕ್ತಿ, ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರವಿಕಾಂತ್ ಅಲಿಯಾಸ್ ದಾಬ್ಲು ಎಂಬಾತನ ಮೇಲೆ ರಾತ್ರಿ 8 ಗಂಟೆ ಸುಮಾರಿಗೆ ಅಶೋಕ್ ವಿಹಾರ್ನ ಜೈಲರ್ ವಾಲಾ ಬಾಗ್ನಲ್ಲಿ ಹಲ್ಲೆ ನಡೆಸಿದ್ದಾರೆ. ರಘು ಮತ್ತು ಭೂರಾ ಅವರು ದಾಬ್ಲು ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ.
ಈ ಘಟನೆ ನಡೆದ ಸ್ವಲ್ಪ ಸಮಯದ ನಂತರ ದಾಬ್ಲು ಸಹಚರರು ಬಂದು ರಾಘು ಮತ್ತು ಭೂರಾ ಮೇಲೆ ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ಅವರ ಮೇಲೆ ಗುಂಡು ಹಾರಿಸಲಾಗಿದೆ. ಈ ವೇಳೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಸಹಚರರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಾಬ್ಲು ಅವರನ್ನು ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಘು, ಭೂರಾ ಮತ್ತು ದಾಬ್ಲು ವಾಯುವ್ಯ ದೆಹಲಿಯಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರು ಮತ್ತು ಹಣಕಾಸಿನ ವಿವಾದವನ್ನು ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ಹೇಳಿದ್ದಾರೆ.
ಈ ಕುರಿತು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನು ಓದಿ: ರಾಜಕೀಯವನ್ನು ಹೊರತುಪಡಿಸಿ ನನ್ನ ಎಲ್ಲಾ ವ್ಯವಹಾರಗಳು ನಷ್ಟದಲ್ಲಿದೆ: ಬಿಜೆಪಿ ಸಂಸದ