”ಮಹಿಷ ದಸರಾ ವಿಷಯವಾಗಿ ಸಂಘರ್ಷ, ಹೊಡೆದಾಟಕ್ಕೆ ಸಿದ್ಧ ಎಂದು ಹೇಳಿಕೆ ನೀಡಿರುವ ಸಂಸದ ಪ್ರತಾಪ್ ಸಿಂಹ್ ಅವರನ್ನು ಬಂಧಿಸಬೇಕು” ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಜನರ ದಿಕ್ಕು ತಪ್ಪಿಸುತ್ತಿರುವ ಸಂಸದ ಪ್ರತಾಪಸಿಂಹ ದಲಿತ ವಿರೋಧಿಯಾಗಿದ್ದಾರೆ. ಈತ ಸಂಘರ್ಷ, ಹೊಡೆದಾಟಕ್ಕೆ ಸಿದ್ಧ ಎಂದು ಹೇಳಿದ್ದಾರೆ. ಆದರೂ ಪೊಲೀಸರು ಈತನನ್ನು ಏಕೆ ಬಂಧಿಸಿಲ್ಲ? ಪೊಲೀಸರು ಬಿಜೆಪಿ ಮನಸ್ಥಿತಿ ಬಿಟ್ಟು ಕೂಡಲೇ ಬಂಧಿಸಬೇಕು” ಎಂದು ಹೇಳಿದ್ದಾರೆ.
”ದಸರಾಗೆ ಅಡ್ಡಪಡಿಸಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಚಲೋ ಮಾಡುತ್ತಿದ್ದಾರೆ. ಮಹಿಷ ಪೂಜೆ ಮಾಡಬೇಡ ಎನ್ನಲು ಪ್ರತಾಪಸಿಂಹ ಯಾರು?” ಎಂದು ಪ್ರಶ್ನೆ ಮಾಡಿದ್ದಾರೆ.
”ಯಾರು ಯಾರಬೇಕಾದವರನ್ನ ಪೂಜಿಸಲು ಸಂವಿಧಾನ ಅವಕಾಶ ಕೊಟ್ಟಿದೆ. ಮಹಿಷಾಸುರ ಸರಿ ಇಲ್ಲದಿದ್ದರೆ ನಿಮ್ಮದೇ ಸರ್ಕಾರ ಇದ್ದಾಗ, ಪ್ರತಿಮೆ ತೆಗೆಸಬೇಕಿತ್ತು. ಮಹಿಷಾಸುರ ಭಯೋತ್ಪಾದಕನೇ?” ಎಂದು ಪ್ರಶ್ನಿಸಿದ್ದಾರೆ.
”ಚಾಮುಂಡಿ ಚಲೋದಲ್ಲಿ ಭಾಗವಹಿಸಲು ವಿವಿಧ ರಾಜ್ಯಗಳಿಂದ 400 ಆರ್ಎಸ್ಎಸ್ ಕಾರ್ಯಕರ್ತರು ಮೈಸೂರಿಗೆ ಬಂದಿದ್ದಾರೆ. ಕಲ್ಲು ಹೊಡೆಸುವುದು, ಹೆಣ ಉರುಳಿಸಿ ಕೆಟ್ಟ ಹೆಸರು ತರಲು ಮುಂದಾಗಿದ್ದಾರೆ. ಏನಾದರೂ ಸಮಸ್ಯೆಯಾದರೆ ಜಿಲ್ಲಾಡಳಿತ, ಪೊಲೀಸರು ಹೊಣೆ” ಎಂದು ಎಚ್ಚರಿಸಿದರು.
”ಚಾಮುಂಡಿ ಬೆಟ್ಟ ಚಲೋದಲ್ಲಿ ಬಿಜೆಪಿ ಮುಖಂಡರು ಭಾಗವಹಿಸದಂತೆ ಮನವಿ ಮಾಡಿದ ಲಕ್ಷ್ಮಣ್ ಅವರು, ಪೋಷಕರು ತಮ್ಮ ಮಕ್ಕಳನ್ನು ಚಲೋಗೆ ಕಳಹಿಸಬೇಡಿ ಎಂದು ಕೇಳಿದರು. ಸಂಘರ್ಷಕ್ಕೆ ಕರೆ ಕೊಟ್ಟಿರುವ ಪ್ರತಾಪಸಿಂಹ ದಲಿತ ವಿರೋಧಿ” ಎಂದು ಲಕ್ಷ್ಮಣ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಪ್ರಶ್ನೆಗೆ, ಸತ್ಯಕ್ಕೆ ಹೆದರಿದ ಭ್ರಷ್ಟ: ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ