ತಮ್ಮ ಬೆಂಗಾವಲು ವಾಹನದ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ‘ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನನ್ನ ಮೇಲೆ ದೈಹಿಕ ಹಾನಿ ಮಾಡಲು ಸಂಚು ರೂಪಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ದೆಹಲಿಗೆ ತೆರಳಲು ತಿರುವನಂತಪುರಂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ರಾಜ್ಯ ರಾಜಕೀಯದಲ್ಲಿ ಇದೀಗ ಬಿರುಗಾಳಿ ಎಬ್ಬಿಸಿದೆ.
ಈ ಕುರಿತು ಸೋಮವಾರ ಮಾತನಾಡಿರುವ ಗವರ್ನರ್ ಖಾನ್, ‘ಮುಖ್ಯಮಂತ್ರಿ ವಿಜಯನ್ ಅವರ ಪ್ರೇರಣೆಯಿಂದ ನನ್ನ ಮೇಲೆ ದೈಹಿಕ ಹಾನಿಯನ್ನುಂಟು ಮಾಡಲು ಸಂಘಟಿತ ಪ್ರಯತ್ನ ನಡೆಯುತ್ತಿದೆ. ಈ ಘಟನೆಯು ಆಕಸ್ಮಿಕವಲ್ಲ; ಬದಲಾಗಿ ಉದ್ದೇಶಪೂರ್ವಕವಾಗಿ ನನ್ನನ್ನು ಗುರಿಯಾಗಿಸಿಕೊಂಡು ನಡೆದ ಕೃತ್ಯ ಇದಾಗಿದೆ’ ಎಂದು ಅವರು ಹೇಳಿದ್ದಾರೆ.
ಸಿಪಿಐ (ಎಂ)ನ ವಿದ್ಯಾರ್ಥಿ ಘಟಕವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಸದಸ್ಯರು ಗೌವರ್ನರ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಂತರ ಖಾನ್ ಅವರು ಕೇರಳ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
‘ಮುಖ್ಯಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಪ್ರತಿಭಟನಾಕಾರ ಕಾರುಗಳನ್ನು ಅಲ್ಲಿಗೆ ಬಿಡಲು ಸಾಧ್ಯವೇ? ಪೊಲೀಸರು ಅದಕ್ಕೆ ಅವಕಾಶ ನೀಡುತ್ತಾರೆಯೇ? ನಾನು ಬರುವಾಗ ಪ್ರತಿಭಟನಾಕಾರರ ಕಾರುಗಳು ಅಲ್ಲಿ ನಿಂತಿದ್ದವು. ಘಟನೆ ನಂತರ ಪೊಲೀಸರು ಅವರು ತಳ್ಳಿದರು, ತಮ್ಮ ಕಾರುಗಳ ಮೂಲಕ ಅವರು ಓಡಿಹೋದರು’ ಎಂದು ಖಾನ್ ಹೇಳಿದರು.
‘ನನ್ನ ವಿರುದ್ಧ ಪಿತೂರಿ ಮಾಡುತ್ತಿರುವವರು ದೈಹಿಕವಾಗಿ ನೋಯಿಸಲು ಈ ಜನರನ್ನು ಕಳುಹಿಸುತ್ತಿದ್ದಾರೆ. ಗೂಂಡಾಗಳು ತಿರುವನಂತಪುರಂನ ರಸ್ತೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕೇರಳದಲ್ಲಿ ಪ್ರಜಾಪ್ರಭುತ್ವದ ಹದಗೆಟ್ಟಿದೆ. ರಾಜಕೀಯ ಭಿನ್ನಾಭಿಪ್ರಾಯಗಳು ದೈಹಿಕ ಹಿಂಸೆಗೆ ಕಾರಣವಾಗಬಾರದು’ ಎಂದು ಅವರು ಹೇಳಿದರು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಜತೆಗೆ, ನನ್ನ ವಾಹನದ ಎರಡೂ ಬದಿಗೆ ಹೊಡೆದರು. ನಾನು ನನ್ನ ಕಾರಿನಿಂದ ಇಳಿಯುತ್ತಿದ್ದಂತೆ ಅವರೇಕೆ ಓಡಿಹೋದರು? ಅವರೆಲ್ಲರೂ ಕಾರಿನಲ್ಲಿ ಕುಳಿತಿರುವ ಬಗ್ಗೆ ಪೊಲೀಸರಿಗೆ ಮೊದಲೇ ತಿಳಿದಿತ್ತು. ಮುಖ್ಯಮಂತ್ರಿಗಳೇ ಅವರಿಗೆ ನಿರ್ದೇಶನ ನೀಡುವಾಗ ಬಡ ಪೋಲೀಸರು ಏನು ಮಾಡುತ್ತಾರೆ’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ; ಎಲ್ಲ ಬಲಿಷ್ಠರು ‘ಜಾತಿ ಗಣತಿ’ ವಿರುದ್ಧ ಒಗ್ಗಟ್ಟಾಗಿದ್ದಾರೆ; ಡಿಕೆಶಿ ನಿಲುವು ವಿರೋಧಿಸಿದ ಖರ್ಗೆ