ಗುರುಗ್ರಾಮದಲ್ಲಿ ಜುನೈದ್–ನಾಸಿರ್ ಕೊಲೆ ಪ್ರಕರಣದ ಆರೋಪಿ ಬಜರಂಗದಳದ ಕಾರ್ಯಕರ್ತ, ಸ್ವಯಂ ಘೋಷಿತ ಗೋರಕ್ಷಕ ಮೋನು ಮಾನೇಸರ್ನನ್ನು ನಾಲ್ಕು ದಿನ ಪೊಲೀಸ್ ವಶಕ್ಕೆ ನೀಡಿ ಸ್ಥಳೀಯ ನ್ಯಾಯಾಲಯ ಶನಿವಾರ ಆದೇಶಿಸಿದೆ.
ಪಟೌದಿಯ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತರನ್ನುಮ್ ಖಾನ್ ಅವರೆದುರು ಮಾನೇಸರ್ಗೆ ಹಾಜರುಪಡಿಸಲಾಗಿತ್ತು. ಪಾತಕಿಗಳ ಗುಂಪಿನೊಂದಿಗೆ ಮಾನೇಸರ್ ನಂಟು ಹೊಂದಿದ್ದಾರೆಯೇ ಎಂಬ ಬಗ್ಗೆ ವಿಚಾರಣೆ ನಡೆಸಬೇಕಿದೆ. ಹೀಗಾಗಿ 7 ದಿನ ಆರೋಪಿಯನ್ನು ವಶಕ್ಕೆ ನೀಡಬೇಕು ಎಂದು ಗುರುಗ್ರಾಮ ಪೊಲೀಸರು ಮನವಿ ಮಾಡಿದ್ದರು. ಆದರೆ ಕೋರ್ಟ್ ನಾಲ್ಕು ದಿನ ಆತನಿಗೆ ವಶಕ್ಕೆ ನೀಡಿದೆ.
ಗುರುಗ್ರಾಮ್ ಮೂಲದ ಮೋಹಿತ್ ಯಾದವ್ ಎಂದೂ ಕರೆಯಲ್ಪಡುವ ಮೋನು ಮಾನೇಸರ್ ರಾಜಸ್ಥಾನದ ಭರತ್ಪುರ ಜಿಲ್ಲೆಯ ನಾಸಿರ್ ಮತ್ತು ಜುನೈದ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ. ಫೆಬ್ರವರಿ 15 ರಂದು ಹರಿಯಾಣದ ಭಿವಾನಿಯಲ್ಲಿ ಇಬ್ಬರು ಯುವಕರ ಮೃತದೇಹ ಪತ್ತೆಯಾಗಿತ್ತು.
ಈ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಮೋನು ಮಾನೇಸರ್ನನ್ನು ಪ್ರಮುಖ ಆರೋಪಿ ಎಂದು ಪಟ್ಟಿ ಮಾಡಿದ್ದರು. ಆದರೆ ಆತ ಹಲವಾರು ತಿಂಗಳುಗಳವರೆಗೆ ಬಂಧನದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
ಇದಲ್ಲದೆ ಮೋನು ಮಾನೇಸರ್ ಇತ್ತೀಚೆಗೆ ಹರಿಯಾಣದ ನುಹ್ನಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ. ಈತನ ಮೇಲೆ ನುಹ್ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪ ಇದೆ. ನುಹ್ನಲ್ಲಿ ನಡೆದ ಹಿಂಸಾಚಾರದ ಪರಿಣಾಮವಾಗಿ ಆರು ಮಂದಿ ಮೃತಪಟ್ಟಿದ್ದರು. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆ’ ವೇಳೆ ಹಿಂಸಾಚಾರ ಪ್ರಾರಂಭವಾಯಿತು, ಇದು ಗುರುಗ್ರಾಮ್ ಸೇರಿದಂತೆ ಸುತ್ತಮುತ್ತಲಿನ ಇತರ ಪ್ರದೇಶಗಳಿಗೆ ವ್ಯಾಪಿಸಿತ್ತು.
ಇದನ್ನು ಓದಿ: ಮಧ್ಯಪ್ರದೇಶ: ಒಂದೇ ಗ್ರಾಮದ 50ಶೇ. ಜನರಲ್ಲಿ ಕಾಣಿಸಿಕೊಂಡ ಡೆಂಗ್ಯೂ: ಅಧಿಕಾರಿಗಳ ನಿರ್ಲಕ್ಷ್ಯ ಆರೋಪ