ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾಗೆ ಸುಪ್ರೀಂಕೋರ್ಟ್ ಕ್ರಿಮಿನಲ್ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ್ದು, ಉನ್ನತ ನ್ಯಾಯಾಲಯವನ್ನು ಟ್ವೀಟ್ ಮತ್ತು ಚಿತ್ರಗಳಲ್ಲಿ ಟೀಕಿಸಿದ್ದಕ್ಕಾಗಿ 6 ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ವ್ಯಂಗ್ಯಚಿತ್ರಕಾರ ರಚಿತಾ ತನೇಜಾ ಅವರಿಗೂ ಸಹ ನೋಟಿಸ್ ನೀಡಿದೆ.
ಟ್ವೀಟ್ ಮತ್ತು ಚಿತ್ರ ಬಿಡಿಸಿದ್ದ ಪ್ರತ್ಯೇಕ ಪ್ರಕರಣಗಳಲ್ಲಿ ಪ್ರತಿಕ್ರಿಯಿಸಲು ಇಬ್ಬರಿಗೂ ಆರು ವಾರಗಳ ಕಾಲಾವಕಾಶ ನೀಡಲಾಗಿದೆ. ಆದರೆ, ಇಬ್ಬರು ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡಿದೆ.
ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಮ್ರಾ ವಿರುದ್ಧ ಇಬ್ಬರು ಕಾನೂನು ವಿದ್ಯಾರ್ಥಿಗಳಾದ ನಿಶಾಂತ್ ಕಾಟ್ನೇಶ್ವರ್ಕರ್ ಮತ್ತು ಸ್ಕಂದ್ ಬಾಜ್ಪೈ ಮತ್ತು ವಕೀಲ ಅಭಿಜುದಾಯ ಮಿಶ್ರಾ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ಹೂಡಿದ್ದರು.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠ ಹೊರಡಿಸಿರುವ ನೋಟಿಸ್ನಲ್ಲಿ “ನ್ಯಾಯಾಂಗವನ್ನು ಟೀಕಿಸಿದ್ದಕ್ಕಾಗಿ” ಅವರ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ಕ್ರಮಗಳನ್ನು ಏಕೆ ತೆಗೆದುಕೊಳ್ಳಬಾರದು ಎಂದು ಪ್ರತಿಕ್ರಿಯೆ ನೀಡಿ ಎಂದು ಕೇಳಿದೆ.
ಇದನ್ನೂ ಓದಿ: ಕುನಾಲ್ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ; ಆದೇಶ ಕಾಯ್ದಿರಿಸಿದ ಸುಪ್ರೀಂ
ವಂಚನೆ ಮತ್ತು ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದನ್ನು ಟೀಕಿಸಿ ಕುನಾಲ್ ಕಮ್ರಾ ಟ್ವೀಟ್ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಂಟುಕ್ಕೂ ಹೆಚ್ಚು ವಕೀಲರು ಕಮ್ರಾ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ.
ಅರ್ನಾಬ್ ಗೋಸ್ವಾಮಿಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್ ತೀರ್ಪನ್ನು ವ್ಯಂಗ್ಯಚಿತ್ರಕಾರ ರಚಿತಾ ತನೇಜಾ ಕೂಡ ತಮ್ಮ ಟ್ವೀಟ್ಗಳಲ್ಲಿ ಕಾರ್ಟೂನ್ ಮಾಡಿ ಟೀಕಿಸಿದ್ದರು. ಈ ಟ್ವೀಟ್ಗಳಲ್ಲಿ ಉನ್ನತ ನ್ಯಾಯಾಲಯವನ್ನು ಉಲ್ಲೇಖಿಸಿದ ಇತರ ಚಿತ್ರಗಳೂ ಇದ್ದವು. ಕಾನೂನು ವಿದ್ಯಾರ್ಥಿಯ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಟಾರ್ನಿ ಜನರಲ್ ವಿಚಾರಣೆಗೆ ಅನುಮೋದನೆ ನೀಡಿದೆ.
ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್ ಅವರು ಕಮ್ರಾ ವಿರುದ್ಧ ಎಂಟು ಜನರಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅನುಮತಿ ನೀಡಿ, ಕಮ್ರಾ ತಮಾಷೆಯ ಗೆರೆಯನ್ನು ದಾಟಿದ್ದಾರೆ ಎಂದು ಈ ಹಿಂದೆ ಹೇಳಿದ್ದರು.
ಇದನ್ನೂ ಓದಿ: ಅಲಾವುದ್ದೀನ್ ಮತ್ತು ಅದ್ಭುತ ದೀಪದ ’ಜಿನ್’: ಕುನಾಲ್ ಕಮ್ರಾ ಟ್ವೀಟ್ ವೈರಲ್!