ಸಾಮಾನ್ಯ ವರ್ಗದ ವಿದ್ಯಾರ್ಥಿಗಳು/ಆಕಾಂಕ್ಷಿಗಳಿಗೆ ಆರ್ಥಿಕ ದುರ್ಬಲ ವಿಭಾಗದ (ಇಡಬ್ಲ್ಯೂಎಸ್) ಅಡಿಯಲ್ಲಿ ಪ್ರಯೋಜನಗಳನ್ನು ಒದಗಿಸಿದ ಆರೋಪದ ಮೇಲೆ ಮಧ್ಯಪ್ರದೇಶ ಹೈಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
‘ಅಡ್ವೊಕೇಟ್ ಯೂನಿಯನ್ ಫಾರ್ ಡೆಮಾಕ್ರಸಿ ಅಂಡ್ ಸೋಶಿಯಲ್ ಜಸ್ಟಿಸ್’ ಎಂಬ ಸಂಘಟನೆಯೊಂದು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ರವಿ ವಿಜಯ್ ಮಳಿಮಠ್ ಮತ್ತು ನ್ಯಾಯಮೂರ್ತಿ ವಿಶಾಲ್ ಮಿಶ್ರಾ ಅವರ ದ್ವಿಪೀಠವು ಆರು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರಕ್ಕೆ ಆದೇಶಿಸಿದೆ.
ಎಲ್ಲ ವರ್ಗಗಳು ಮತ್ತು ಜಾತಿಗಳಲ್ಲಿ ಬಡವರು ಇದ್ದಾರೆ. ಆದರೂ ಇಡಬ್ಲ್ಯೂಎಸ್ ಪ್ರಯೋಜನಗಳನ್ನು ಸರ್ಕಾರದಿಂದ ‘ಸಾಮಾನ್ಯ ವರ್ಗದ ಜನರಿಗೆ ಮಾತ್ರ’ ನೀಡಲಾಗುತ್ತದೆ ಎಂದು ಸಂಸ್ಥೆ ಆರೋಪಿಸಿದೆ.
ಭಾರತ ಸರ್ಕಾರ ಹೊರಡಿಸಿದ ಇಡಬ್ಲ್ಯೂಎಸ್ ನೀತಿಯು ಸಂವಿಧಾನದ 15 (6) ಮತ್ತು 16 (6) ಕ್ಕೆ ಹೊಂದಿಕೆಯಾಗುವುದಿಲ್ಲ, ಇದನ್ನು ನ್ಯಾಯಾಲಯದ ಮುಂದೆ ಇಡಲಾಗಿದೆ ಎಂದು ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ರಾಮೇಶ್ವರ ಪ್ರಸಾದ್ ಸಿಂಗ್ ಹೇಳಿದರು. ‘ಜನವರಿ 17, 2019 ರಿಂದ ಐದು ಆಧಾರದ ಮೇಲೆ ಭಾರತ ಸರ್ಕಾರವು ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ ಎಂದು ನಾವು ವಾದಿಸಿದ್ದೇವೆ’ ಎಂದು ಪೀಠದ ಮುಂದೆ ವಾದ ಮಂಡಿಸಿದರು.
ಇತರ ಹಿಂದುಳಿದ ವರ್ಗಗಳು (ಒಬಿಸಿ), ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡವನ್ನು ಇಡಬ್ಲ್ಯೂಎಸ್ ನೀತಿಯ ಪ್ರಯೋಜನಗಳಿಂದ ಹೊರಗಿಡುವುದು ಆರ್ಟಿಕಲ್ 14ಕ್ಕೆ ವಿರುದ್ಧವಾಗಿದೆ ಎಂದು ವಾದಿಸಲಾಯಿತು.
‘ಇದಷ್ಟೇ ಅಲ್ಲ, ಇಡಬ್ಲ್ಯೂಎಸ್ ಮೀಸಲಾತಿ ವಿಶೇಷ ಮೀಸಲಾತಿಯಾಗಿದೆ; ಇದು ಲಂಬವಾಗಿ ಅನ್ವಯಿಸಲು ಅಸಾಂವಿಧಾನಿಕವಾಗಿದೆ. ಸರ್ಕಾರದ ನೀತಿಯು ಬಡವರನ್ನು ಜಾತಿ ಆಧಾರದ ಮೇಲೆ ತಾರತಮ್ಯ ಮಾಡುತ್ತದೆ. ಪ್ರತಿ ವರ್ಗದ ಬಡವರಿಗೆ ಇಡಬ್ಲ್ಯೂಎಸ್ ಮೀಸಲಾತಿ ಪ್ರಯೋಜನಗಳನ್ನು 103 ನೇ ಸಾಂವಿಧಾನಿಕ ತಿದ್ದುಪಡಿಯಲ್ಲಿ ಒದಗಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದರು’ ಎಂದು ಹೇಳಿದರು.
ಆರಂಭಿಕ ವಿಚಾರಣೆಯ ನಂತರ ನ್ಯಾಯಾಲಯವು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಇದನ್ನೂ ಓದಿ; ಎಲ್ಲಾ ಬೆಳೆಗಳಿಗೆ ಎಂಎಸ್ಪಿ ನೀಡುವುದು ‘ಕಾರ್ಯಸಾಧು’ವಲ್ಲ: ಕೃಷಿ ಅರ್ಥಶಾಸ್ತ್ರಜ್ಞ ಜೋಲ್