ಜಾರ್ಖಂಡ್ನಲ್ಲಿ ರಾಜಕೀಯ ಚಟುವಟಿಕೆಗಳು ಮುಂದುವರಿದಿದ್ದು, ಚಂಪೈ ಸೊರೆನ್ ಸರ್ಕಾರದಲ್ಲಿ ಈಗಿರುವ ಪಕ್ಷದ ಕೋಟಾದಿಂದ ಸಚಿವರಾಗಿರುವ 7 ಮಂದಿ ಸಚಿವರನ್ನು ತಕ್ಷಣ ತೆಗೆದು ಹಾಕಿ ಹೊಸಬರಿಗೆ ನೇಮಿಸಬೇಕು ಎಂಬ ಬೇಡಿಕೆಯೊಂದಿಗೆ 9 ಮಂದಿ ಕಾಂಗ್ರೆಸ್ ಶಾಸಕರು ದೆಹಲಿಗೆ ತೆರಳಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ.
ಶುಕ್ರವಾರ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದ ಬಳಿಕ 12 ಮಂದಿ ಭಿನ್ನಮತೀಯ ಶಾಸಕರ ಜತೆ ನಡೆಸಿದ ಸರಣಿ ಮಾತುಕತೆಗಳು ವಿಫಲವಾದ ಬೆನ್ನಲ್ಲೇ 9 ಮಂದಿ ಶಾಸಕರು ದೆಹಲಿ ಯಾತ್ರೆ ಕೈಗೊಂಡಿದ್ದಾರೆ. ಶನಿವಾರ ಕೂಡಾ ದೆಹಲಿಗೆ ಆಗಮಿಸುವ ಮುನ್ನ ಸರ್ಕ್ಯೂಟ್ ಹೌಸ್ ಮತ್ತು ನಗರದ ಹೋಟೆಲ್ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದಿದೆ.
ಮೈತ್ರಿಕೂಟದ ಮಧ್ಯಸ್ಥಿಕೆ ಪ್ರಯತ್ನಗಳ ಭಾಗವಾಗಿ ಮಿತ್ರಪಕ್ಷ JMMನ ದುಮ್ಕಾ ಶಾಸಕ ಮತ್ತು ಸಚಿವ ಬಸಂತ್ ಸೊರೆನ್ ಅವರು ಅಸಮಾಧಾನಗೊಂಡ ಕಾಂಗ್ರೆಸ್ ಶಾಸಕರನ್ನು ಹೋಟೆಲ್ನಲ್ಲಿ ಭೇಟಿಯಾಗಿ ಮನವೊಲಿಕಗೆ ಯತ್ನಿಸಿದ್ದು, ಯಾವುದೇ ಪ್ರಯೋಜನವಾಗಲಿಲ್ಲ.
ಜಾರ್ಖಾಂಡ್ ಆಡಳಿತಾರೂಢ ಮೈತ್ರಿಕೂಟದಲ್ಲಿ ಪ್ರಮುಖ ಪಕ್ಷವಾದ ಕಾಂಗ್ರೆಸ್ 17 ಶಾಸಕರನ್ನು ಹೊಂದಿದೆ. ಈ ಪೈಕಿ ನಾಲ್ವರು ಸಚಿವರನ್ನು ಹೊರತುಪಡಿಸಿ, ನಾಲ್ಕು ಮಂದಿ ಶಾಸಕರು ಇತರ ಕಾರಣಗಳಿಂದಾಗಿ ರಾಂಚಿಯಲ್ಲೇ ಉಳಿದುಕೊಂಡಿದ್ದಾರೆ. ಈ ಪೈಕಿ ಶಿಲ್ಪಿ ನೇಹಾ ಟಿರ್ಕೆ (ಮಂದರ್), ಪೂರ್ಣಿಮಾ ನೀರಜ್ ಸಿಂಗ್ (ಝಾರಿಯಾ) ಮತ್ತು ರಾಮಚಂದ್ರ ಸಿಂಗ್ (ಮನಿಕಾ) ಭಾನುವಾರ ದೆಹಲಿಗೆ ತಲುಪುವ ನಿರೀಕ್ಷೆ ಇದೆ. ಪೊರಿಯಾಹಾತ್ ಶಾಸಕ ಪ್ರದೀಪ್ ಯಾದವ್ ಕೂಡಾ 12 ಮಂದಿಯ ಬಣದಿಂದ ದೂರ ಉಳಿದಿದ್ದಾರೆ.
ಎಐಸಿಸಿಯು ಜಾರ್ಖಂಡ್ನಲ್ಲಿನ ಪ್ರಸ್ತುತ ಬಿಕ್ಕಟ್ಟಿನ ವೀಕ್ಷಕರಾಗಿ ಗಂಧವಾನಿಯ ಶಾಸಕ ಉಮಂಗ್ ಸಿಂಘಾರ್ ಅವರನ್ನು ನೇಮಿಸಿದೆ ಮತ್ತು ಇವರು ಇಂದು ದೆಹಲಿಗೆ ತೆರಳಿ ಇವರು ಅತೃಪ್ತ ಶಾಸಕರ ಜೊತೆ ಮಾತುಕತೆಯನ್ನು ನಡೆಸಲಿದ್ದಾರೆ. ಅತೃಪ್ತ ಶಾಸಕರು ಫೆಬ್ರವರಿ 23ರಿಂದ ಆರಂಭವಾಗುವ ರಾಜ್ಯ ಬಜೆಟ್ ಅಧಿವೇಶನದಿಂದ ದೂರ ಉಳಿಯಲು ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹಣಕಾಸು ಮಸೂದೆಯ ಸಮಯದಲ್ಲಿ ಮತದಾನದಿಂದ ದೂರವಿರಲು ಯೋಚಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಚಂಪೈ ಸೊರೆನ್ ಸರ್ಕಾರದ ಉಳಿದ ಅವಧಿಗೆ ನಾಲ್ವರು ಸಚಿವರನ್ನು ಮರುನಾಮಕರಣ ಮಾಡಿರುವುದರಿಂದ ಶಾಸಕರು ಅಸಮಾಧಾನಗೊಂಡಿದ್ದಾರೆ. ಜಾರ್ಖಂಡ್ನಲ್ಲಿನ ನೂತನ ಸರಕಾರದಲ್ಲಿ ಕಾಂಗ್ರೆಸ್ನಿಂದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರಲ್ಲಿ ಅಲಂಗೀರ್ ಆಲಂ, ರಾಮೇಶ್ವರ್ ಓರಾನ್, ಬನ್ನಾ ಗುಪ್ತಾ ಮತ್ತು ಬಾದಲ್ ಪತ್ರಲೇಖ್ ಸೇರಿದ್ದಾರೆ.
ಇದನ್ನು ಓದಿ: ‘ಅಕ್ಬರ್’, ‘ಸೀತಾ’ ಹೆಸರಿನ ಸಿಂಹಗಳನ್ನು ಒಂದೇ ಸ್ಥಳದಲ್ಲಿ ಬಿಟ್ಟಿದ್ದಕ್ಕೆ ಹೈಕೋರ್ಟ್ ಮೆಟ್ಟಿಲೇರಿದ ವಿಹೆಚ್ಪಿ: ವಿಲಕ್ಷಣ ಘಟನೆ