ರಾಜ್ಯದಲ್ಲಿ ಭುಗಿಲೆದ್ದಿರುವ ಹಿಜಾಬ್-ಕೇಸರಿ ಶಾಲು ಘರ್ಷಣೆ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ’ಹಿಜಾಬ್ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಸರಬರಾಜು ಮಾಡಿರುವುದು ಒಬ್ಬ ಮಂತ್ರಿಯ ಮಗ’ ಎಂದು ಆರೋಪಿಸಿದ್ದಾರೆ.
’ರಾತ್ರೋ ರಾತ್ರಿ ಅಷ್ಟು ಪೇಟ, ಶಾಲುಗಳು ಹೇಗೆ ಬಂದವು..? 50 ಲಕ್ಷ ಶಾಲ್ಗಳಿಗೆ ಸೂರತ್ನಿಂದ ಆರ್ಡರ್ ಮಾಡಿದ್ದಾರೆ. ನಮಗೆ ಎಲ್ಲಾ ಗೊತ್ತಿದೆ. ಹೇಗೆ, ಎಲ್ಲಿಂದ ಬರುತ್ತಿದೆ ಎಂಬ ಮಾಹಿತಿ ನಮಗಿದೆ’ ಎಂದು ಗಮಭೀರ ಆರೋಪ ಮಾಡಿದ್ದಾರೆ.
’ಶಿವಮೊಗ್ಗ ಜಿಲ್ಲೆಯ ಮಂತ್ರಿಯೊಬ್ಬರ ಮಗ ಮೂಟೆಗಟ್ಟಲೆ ಕೇಸರಿ ಶಾಲುಗಳನ್ನು ತರಿಸಿ ಹಂಚುವ ಕೆಲಸ ಮಾಡಿದ್ದಾರೆ. ಕೇಸರಿ ಪೇಟಾಗಳನ್ನು ಹಂಚಿದ್ದಾರೆ. ಎಲ್ಲಾ ಬಿಜೆಪಿ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಮಕ್ಕಳನ್ನು ಯಾಕೆ ಹಾಳು ಮಾಡುತ್ತಿದ್ದೀರಾ.. ಅವರ ವಿದ್ಯಾಭ್ಯಾಸ ಹಾಳಾಗುತ್ತಿದೆ. ಚುನಾವಣೆ ಬರುತ್ತಿದೆ ರಾಜಕಾರಣ ಆಗ ಮಾಡೋಣ. ಆದರೆ ಮಕ್ಕಳನ್ನು ಯಾಕೆ ಹಾಳು ಮಾಡುತ್ತಿದ್ದಿರಿ..?.’ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ತಮಿಳುನಾಡು, ಕೇರಳ, ಆಂಧ್ರದ ಮಾಧ್ಯಮಗಳಲ್ಲಿ ರಾಜ್ಯಕ್ಕೆ ಛೀಮಾರಿ
’ಈಗಲೇ ಈ ಮಕ್ಕಳಲ್ಲಿ ಜಾತಿ, ಧರ್ಮದ ವಿಷ ಬೀಜ ಬಿತ್ತುವ ಕೆಲಸ ಬೇಡ. ಧರ್ಮ ಯಾವುದಾದರೂ ಭಕ್ತಿ ಒಂದೆ. ದೇವನೊಬ್ಬ ನಾಮ ಹಲವು ಅನ್ನುವುದರಲ್ಲಿ ನಂಬಿಕೆ ಇಟ್ಟಿರುವವರು ನಾವು. ಹುಟ್ಟುವಾಗ ಯಾರು ಇದೇ ಧರ್ಮ, ಜಾತಿ ಬೇಕೆಂದು ಅರ್ಜಿ ಹಾಕಿರುವುದಿಲ್ಲ’ ಎಂದು ತಿಳಿಸಿದ್ದಾರೆ.
ಶಿವಮೊಗ್ಗ ಸರ್ಕಾರಿ ಕಾಲೇಜಿನಲ್ಲಿ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿರುವ ವಿಷಯಕ್ಕೆ ಪ್ರತಿಕ್ರಿಯಿಸಿರುವ ಅವರು, ರಾಷ್ಟ್ರಧ್ವಜ ಹಾರಿಸುವಲ್ಲಿ ಕೇಸರಿ ಧ್ವಜ ಹಾರಿಸಿದ್ದಾರೆ. ಕೇಸರಿ ಬಣ್ಣ ನಮ್ಮ ರಾಷ್ಟ್ರಧ್ವಜದಲ್ಲೇ ಇದೆಯಲ್ಲ ಎಂದಿದ್ದಾರೆ.
ಇತ್ತ, ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ದೀಕ್ಷಿತ್ ’ನ್ಯಾಯಾಂಗ ನಡವಳಿಕೆಯ ಮಾದರಿಯನ್ನು ನೋಡಿದರೆ, ವೈಯಕ್ತಿಕ ಕಾನೂನುಗಳು ಅಥವಾ ಸೆಮಿನಲ್ ಕಾನೂನುಗಳನ್ನು ಒಳಗೊಂಡಿರುವ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪೀಠಗಳನ್ನು ರಚಿಸಲಾಗಿದೆ ಆದ್ದರಿಂದ ಫಲಿತಾಂಶಗಳು ಹೆಚ್ಚು ಸ್ವೀಕಾರಾರ್ಹವಾಗಿರುತ್ತವೆ. ಪೀಠ ರಚನೆಗೆ ತನ್ನದೇ ಆದ ಸಮಯ ತೆಗೆದುಕೊಳ್ಳುತ್ತದೆ ಎಂಬ ಅನಿಸಿಕೆಗೆ ಒಳಗಾಗಬೇಡಿ. ಈ ಪ್ರಕರಣವನ್ನು ವಿಸ್ತೃತ ಪೀಠದಿಂದ ವಿಚಾರಣೆ ನಡೆಸಬೇಕೆಂದು ನಾನು ಒತ್ತಾಯಿಸುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: Hijab Live | ಹಿಜಾಬ್ ಅರ್ಜಿ ವಿಚಾರಣೆ ಲೈವ್ | ಪ್ರಕರಣವನ್ನು ವಿಸ್ತೃತ ಪೀಠದಿಂದ ವಿಚಾರಣೆ ನಡೆಸಬೇಕು: ನ್ಯಾಯಮೂರ್ತಿ