‘ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಎಲ್ಲ ವರ್ಗದ ಜನರಿಗೆ ನ್ಯಾಯ ಒದಗಿಸಬೇಕೆಂದು ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ಮೂಲಕ ದೊಡ್ಡ ಸಂದೇಶವನ್ನು ಕೊಡುತ್ತಿದ್ದಾರೆ. ಹಿಂದುಳಿದವರ ಹಿತ ರಕ್ಷಣೆಗೆ ನಮ್ಮ ಕಾಂಗ್ರೆಸ್ ಪಕ್ಷ ಬದ್ಧವಾಗಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
‘ಶೋಷಿತ ಸಮುದಾಯಗಳ ಮಹಾ ಒಕ್ಕೂಟ’ದಿಂದ ಚಿತ್ರದುರ್ಗದಲ್ಲಿ ನಡೆದ ‘ಶೋಷಿತ ಸಮುದಾಯಗಳ ರಾಜ್ಯ ಮಟ್ಟದ ಜಾಗೃತಿ ಸಮಾವೇಶ’ದಲ್ಲಿ ಮಾತನಾಡಿದ ಅವರು, ‘ಇದೊಂದು ಐತಿಹಾಸಿಕವಾದ ಕಾರ್ಯಕ್ರಮವಾಗಿದೆ; ಬದಲಾವಣೆ ಪರ್ವವಾಗಿ ಶೋಷಿತರ ಸಮಾವೇಶ ಹಮ್ಮಿಕೊಂಡಿರುವ ಎಲ್ಲ ಶಾಸಕರಿಗೆ, ಸಚಿವರಿಗೆ ಅಭಿನಂದನೆ’ ಎಂದು ಹೇಳಿದರು.
‘ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ; ಇದು ದೇಶದ ಇತಿಹಾಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಿಮಗೆ ನಮ್ಮೆಲ್ಲರ ಮೇಲೆ ನಂಬಿಕೆ ಬರುತ್ತದೆ. ಮರಕ್ಕೆ ಬೇರು ಹೇಗೆ ಮುಖ್ಯವೋ, ಮನುಷ್ಯರಿಗೆ ನಂಬಿಕೆಯೂ ಕೂಡ ಅಷ್ಟೆ ಮುಖ್ಯ. ನಾವು ಜಾಗೃತರಾಗಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಯಶಸ್ಸು ಎನ್ನುವುದು ಯಾರ ಆಸ್ತಿಯೂ ಅಲ್ಲ’ ಎಂದರು.
‘ಬಾಬಾ ಸಾಹೇಬರು ಕೊಟ್ಟಿರುವ ಸಂವಿಧಾನ ನಮಗೆ ರಕ್ಷಣೆ ನೀಡಿರುವ ಧರ್ಮಗ್ರಂಥ. ಯಶಸ್ಸು ಯಾರ ಸ್ವತ್ತೂ ಅಲ್ಲ. ಹೋರಾಟ ಮಾಡಿದರೆ ಮಾತ್ರ ಮನುಷ್ಯರಿಗೆ ಯಶಸ್ಸು ಸಾಧ್ಯ’ ಎಂದು ಹೇಳಿದರು.
‘ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿಗಳನ್ನು ಚುನಾವಣೆ ಮುಗಿದು ಐದು ತಿಂಗಳಲ್ಲಿ ಜಾರಿ ಮಾಡಿದೆ. ಐದು ಬೆರಳುಗಳಿಂದ ಕೈ ಮುಷ್ಠಿಯಾಯಿತು; ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿ ಅರಳಿದ ಕಮಲ ಉದುರಿಯಾಯಿತು, ತೆನೆಹೊತ್ತ ಮಹಿಳೆ ಎಸೆದು ಹೋದಳು’ ಎಂದು ವಿಪಕ್ಷಗಳಿಗೆ ತಿರುಗೇಟು ಕೊಟ್ಟರು.
ಇದನ್ನೂ ಓದಿ; ಸಾಮಾಜಿಕ ನ್ಯಾಯ ಕಲ್ಪಿಸಲು ದೇಶದಾದ್ಯಂತ ಜಾತಿ ಸಮೀಕ್ಷೆ ನಡೆಸಬೇಕು: ನಾಗರಾಜ್ ಯಾದವ್