ಅರುಣ್ ಗೋಯೆಲ್ ರಾಜೀನಾಮೆ ಮತ್ತು ಅನುಪ್ ಚಂದ್ರ ಪಾಂಡೆ ಅವರ ನಿವೃತ್ತಿಯಿಂದ ತೆರವಾಗಿರುವ ಎರಡು ಚುನಾವಣಾ ಆಯುಕ್ತರ ಹುದ್ದೆಗಳನ್ನು ಈ ವಾರಾಂತ್ಯದಲ್ಲಿ ಭರ್ತಿ ಮಾಡಲು ಮೋದಿ ಸರ್ಕಾರ ಮುಂದಾಗಿದ್ದು, ಇದರ ವಿರುದ್ದ ಕಾಂಗ್ರೆಸ್ ನಾಯಕಿ ಜಯ ಠಾಕೂರ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಪಟ್ಟಂತೆ 2023ರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಜಾರಿಗೆ ತರಲಾಗಿರುವ ಕಾಯ್ದೆಯನ್ನು ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ಜಯ ಠಾಕೂರ್, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಯವರನ್ನು ಹೊರಗಿಡುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
#WATCH | Petitioner Jaya Thakur says, "I have filed a petition that they should be restrained and the appointment of all Election Officers should be done in a transparent manner. Also, a committee should be formed which should have the Prime Minister, LoP and Chief Justice, so… https://t.co/vVEB05seYr pic.twitter.com/ETLxGKdIZk
— ANI (@ANI) March 11, 2024
ಚುನಾವಣಾ ಆಯುಕ್ತರ ನೇಮಕಕ್ಕೆ ಸಂಬಂಧಪಟ್ಟಂತೆ ಕಾಯ್ದೆ ಜಾರಿಗೊಳಿಸುವ ಮೊದಲು, ಅಂದರೆ 2023ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಆದೇಶದಲ್ಲಿ ಚುನಾವಣಾ ಆಯುಕ್ತರನ್ನು ನೇಮಿಸುವ ಸಮಿತಿಯಲ್ಲಿ ಸಿಜೆಐ ಇರಬೇಕು ಎಂದು ಹೇಳಿತ್ತು. ಅದೇ ನಿಯಮವನ್ನು ಮತ್ತೆ ಜಾರಿಗೆ ತಂದು ಚುನಾವಣಾ ಆಯಕ್ತರ ನೇಮಕದಲ್ಲಿ ಪಾರದರ್ಶಕತೆ ಕಾಪಾಡುವಂತೆ ಜಯ ಠಾಕೂರ್ ಆಗ್ರಹಿಸಿದ್ದಾರೆ.
ಚುನಾವಣಾ ಆಯುಕ್ತರ ಆಯ್ಕೆಗೆ ಸಂಬಂಧಪಟ್ಟಂತೆ ಸಂಸತ್ ಕಾನೂನು ರಚಿಸುವವರೆಗೆ ಸಿಜೆಐ ಸಮಿತಿಯಲ್ಲಿ ಇರಲಿದ್ದಾರೆ ಎಂದು 2023ರಲ್ಲಿ ಸುಪ್ರೀಂ ಕೋರ್ಟ್ ಹೇಳಿತ್ತು. ಈ ಬೆನ್ನಲ್ಲೇ, ಅಂದರೆ ಕಳೆದ ಡಿಸೆಂಬರ್ನಲ್ಲಿ ಸರ್ಕಾರ ಹೊಸ ಕಾಯ್ದೆ ಜಾರಿಗೆ ತಂದಿತ್ತು. ಈ ಕಾಯ್ದೆಯಲ್ಲಿ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಹೊರಗಿಡಲಾಗಿದೆ.
ಸರ್ಕಾರ ಹೊಸ ಕಾಯ್ದೆಯ ವಿರುದ್ದ ಜಯ ಠಾಕೂರ್ ಈ ಹಿಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಸುಪ್ರೀಂ ಕೋರ್ಟ್ ಕಾಯ್ದೆಗೆ ತಡೆ ನೀಡಲು ನಿರಾಕರಿಸಿತ್ತು. ಕಾಯ್ದೆಯ ವಿರುದ್ದ ಸಲ್ಲಿಕೆಯಾಗಿರುವ ಹಲವು ಅರ್ಜಿಗಳು ಮುಂದಿನ ಏಪ್ರಿಲ್ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಹೊಸ ಕಾಯ್ದೆ ಪ್ರಕಾರ, ಪ್ರಧಾನಿ ನೇತೃತ್ವದ ಸಮಿತಿಯಲ್ಲಿ ಒಬ್ಬರು ಕೇಂದ್ರ ಸಚಿವರು ಮತ್ತು ಪ್ರತಿಪಕ್ಷದ ನಾಯಕರು ಇರಲಿದ್ದಾರೆ.
ಪ್ರಸ್ತುತ, ಪ್ರಧಾನಿ ಮೋದಿ ನೇತೃತ್ವದ ಸಮಿತಿಯಲ್ಲಿ ಲೋಕಸಭೆಯ ಕಾಂಗ್ರೆಸ್ ಅಧೀರ್ ರಂಜನ್ ಚೌಧರಿ ಮತ್ತು ಒಬ್ಬರು ಕೇಂದ್ರ ಸಚಿವರು ಇದ್ದಾರೆ.
ಇದನ್ನೂ ಓದಿ : ಹೊಸ ಚುನಾವಣಾ ಆಯುಕ್ತರ ನೇಮಕ: ಅನುಮಾನಗಳಿಗೆ ಕಾರಣವಾದ ಮೋದಿ ಸರ್ಕಾರದ ನಡೆ